ಶಿರಾಡಿ ಘಾಟ್ ಬಂದ್: ವಾಹನ ಸಂಚಾರ ನಿರ್ಬಂಧ
ಸಕಲೇಶಪುರ, ಜನವರಿ 20 : ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿಘಾಟ್ 2ನೇ ಹಂತದ ಕಾಂಕ್ರೀಟ್ ಕಾಮಗಾರಿಗಾಗಿ ಶನಿವಾರ ಮುಂಜಾನೆಯಿಂದ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
80 ಕೋಟಿ ರೂ.ಗೆ ಟೆಂಡರ್ ಪಡೆದಿರುವ ಮಂಳೂರು ಮೂಲದ ಓಷಿಯನ್ ಕಂಪನಿ ಈಗಾಗಲೇ ಮರಳು ಹೊರತುಪಡಿಸಿ ಶೇ.55 ಜಲ್ಲಿ, ಇತರೆ ಯಂತ್ರೋಪಕರಣಗಳನ್ನು ಶೇಖರಿಸಿದ್ದು, ಮೇ ಅಂತ್ಯದೊಳಗೆ ಪೂರ್ಣಗೊಳಿಸುವ ಭರವಸೆಯೊಂದಿಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಮಂಗಳೂರು-ಬೆಂಗಳೂರು ಮಧ್ಯೆ ವಾಹನ ಸಂಚಾರಕ್ಕೆ 7ರ ಬದಲಿ ಮಾರ್ಗ ಸೂಚಿಸಲಾಗಿದೆ.
ಜ.20ರಿಂದ ಶಿರಾಡಿ ಘಾಟ್ ಬಂದ್, ಪರ್ಯಾಯ ಮಾರ್ಗಗಳು
ಬದಲಿ ಮಾರ್ಗಗಳು: ಲಘು ಹಾಗೂ ಭಾರಿ ವಾಹನಗಳಿಗಾಗಿ ಎರಡು ವಿಧದ ರಸ್ತೆಗಳನ್ನು ಸೂಚಿಸಿದ್ದು, ಲಘುವಾಹನಗಳಾದ ಕಾರು, ಜೀಪು ಮುಂತಾದ ವಾಹನಗಳು ಹಾಸನ, ಬೇಲೂರು ರಾಜ್ಯ ಹೆದ್ದಾರಿ 57, ಮೂಡಿಗೆರೆ ಚಾರ್ಮಡಿ ಘಾಟ್-ಬೆಳ್ತಂಗಡಿ ಉಜಿರೆ, ಬಿಸಿ ರಸ್ತೆ ರಾಷ್ಟ್ರೀಯ ಹೆದ್ದಾರಿ 234 ರ ಮೂಲಕ ಮಂಗಳೂರು ತಲುಪಬಹುದಾಗಿದೆ.
ಹಾಸನ, ಸಕಲೇಶಪುರ, ಆನೆಮಹಲ್, ಹಾನುಬಾಳ್ ಮಾರ್ಗ ರಾಜ್ಯ ಹೆದ್ದಾರಿ 27ರ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಾಸನ, ಮೂಡಿಗೆರೆ, ಚಾರ್ಮಡಿಘಾಟ್, ಬೆಳ್ತಂಗಡಿ, ಉಜಿರೆ, ಬಿಸಿ ರಸ್ತೆ, ಮಂಗಳೂರು, ಬೆಂಗಳೂರು, ಹಾಸನ, ಮೂಡಿಗೆರೆ, ಕೊಟ್ಟಿಗೆಹಾರ ಮೂಲಕ ಮಂಗಳೂರು, ಕುದುರೆಮುಖ, ಮಾಲ್ ಘಾಟ್, ಕಾರ್ಕಳ ಉಡುಪಿ, ಮಂಗಳೂರು ತಲುಪಬಹುದಾಗಿದೆ.
ಮಂಗಳೂರು, ಬಿಸಿ ರೋಡ್, ಮಾಣಿ, ಪುತ್ತೂರು, ಹುಣಸೂರು, ಮೈಸೂರು ಮೂಲಕ, ಬೆಂಗಳೂರು ತಲುಪಬಹುದು. ಬೆಂಗಳೂರು, ಶಿವಮೊಗ್ಗ, ಆಯನೂರು, ಹೊಸನಗರ, ಮಾಸ್ತಿಕಟ್ಟೆ ಬಾಳೆ ಬರೆಘಾಟ್ ಮೂಲಕ ಮಂಗಳೂರು ತಲುಪಬಹುದಾಗಿದೆ.