ಯಾವಾಗ ನೋಡಿದರೂ ರಿಪೇರಿ... ಮಂಗಳೂರಿಗೆ ಹೋಗುವುದಾದರೂ ಹೇಗೆ?
ಬೆಂಗಳೂರು, ಆಗಸ್ಟ್ 24: ಮಂಗಳೂರು ಮತ್ತು ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಓಡಾಡಿದ್ದೀರಾ? ಇತ್ತ ಶಿರಾಡಿ ಘಾಟ್, ಅತ್ತ ಚಾರ್ಮಾಡಿ ಘಾಟ್, ಇನ್ನೊಂದೆಡೆ ಮಡಿಕೇರಿಯ ಮೂಲಕ ಸಾಗುವ ಹಾದಿ. ಪ್ರಾಕೃತಿಕ ಸೌಂದರ್ಯವನ್ನು ಆಸ್ವಾದಿಸುವವರು ತಮ್ಮನ್ನು ತಾವು ನಿಸರ್ಗದ ಮಡಿಲಲ್ಲಿ ಕಳೆದುಹೋಗುವಂತೆ ಅದ್ಭುತ ಅನುಭವ ನೀಡುವ ದಾರಿಗಳಿವು.
ಆದರೆ, ಈ ಅನುಭವ ದಕ್ಕಿಸಿಕೊಳ್ಳುವುದು ಎಲ್ಲವು ಸರಿಯಿದ್ದಾಗ ಮಾತ್ರ ಸಾಧ್ಯ. ಒಂದೋ ಪ್ರಕೃತಿಯ ಮುನಿಸು ಈ ಮಾರ್ಗಗಳಿಗೆಲ್ಲ ತಡೆಯೊಡ್ಡಿರುತ್ತದೆ, ಇಲ್ಲವೇ ಕುಂಟುತ್ತಾ ಸಾಗುವ ದುರಸ್ತಿಕಾರ್ಯ ಈ ದಾರಿಗಳನ್ನು ಬಂದ್ ಮಾಡಿರುತ್ತವೆ.
ರೇವಣ್ಣ ಹೇಳಿದಷ್ಟು ಶಿರಾಡಿ ಘಾಟ್ ರಸ್ತೆ ಹದಗೆಟ್ಟಿಲ್ಲ: ಡಿವಿಎಸ್ ಪತ್ರ
ಬೆಂಗಳೂರು ಮತ್ತು ಮಂಗಳೂರು ನಡುವೆ ಓಡಾಡುವುದು ಹೇಗೆ ಎಂಬ ಸಂಕಟದ ಸ್ಥಿತಿಯಲ್ಲಿ ಈಗ ಮಂಗಳೂರಿಗರಿದ್ದಾರೆ. ಮೂರು ಪ್ರಮುಖ ರಸ್ತೆಗಳಿದ್ದರೂ ಎಲ್ಲಿಂದಲೂ ಸಾಗುವುದು ಸಾಧ್ಯವಾಗುತ್ತಿಲ್ಲ.
ಶಿರಾಡಿ ಮತ್ತೆ ಬಂದ್
ಮಡಿಕೇರಿಯಲ್ಲಿ ಪ್ರವಾಹದಿಂದ ರಸ್ತೆಗಳ ಸ್ಥಿತಿ ಅಧೋಗತಿಗೆ ಇಳಿದಿದ್ದರೆ, ಇತ್ತೀಚೆಗಷ್ಟೇ ಕಾಂಕ್ರೀಟ್ ಹೊಳಪು ಕಂಡು ಬೀಗಿದ ಶಿರಾಡಿ, ಭೂಕುಸಿತದಿಂದ ಮತ್ತೆ 'ಶಸ್ತ್ರಚಿಕಿತ್ಸೆ'ಗಾಗಿ ಐಸಿಯು ಸೇರಿದೆ.
ಇನ್ನು ಇರುವ ಮಾರ್ಗ ಚಾರ್ಮಾಡಿ. ಅಲ್ಲಿಯೂ ಸಂಕಷ್ಟ, ತಾಪತ್ರಯಗಳು ಕಡಿಮೆಯಿಲ್ಲ. ಟ್ರಾಫಿಕ್ ಜಾಮ್ನಿಂದ ಗಂಟೆಗಟ್ಟಲೆ ಕಾದು ನಿಲ್ಲಬೇಕಾದ ಪರಿಸ್ಥಿತಿ ಪ್ರಯಾಣಿಕರದ್ದು.
ಶಿರಾಡಿ ಘಾಟ್ ಬಂದ್: ಕೈಕೊಟ್ಟ ಸಚಿವ ರೇವಣ್ಣನವರ ವಾಸ್ತುಶಾಸ್ರ!
ಬಸ್ಗಳೂ ಇಲ್ಲ, ರೈಲೂ ಇಲ್ಲ
ಇಲ್ಲಿ ಕೆಂಪು ಸಾರಿಗೆ ಬಸ್ ಹೊರತುಪಡಿಸಿ ಉಳಿದ ಬಸ್ಗಳ ಓಡಾಟಕ್ಕೆ ನಿರ್ಬಂಧ ಇರುವ ಕಾರಣ ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಗರ ಪರಿಸ್ಥಿತಿ ಹೇಳತೀರದು. ಹಾಗೋ ಹೀಗೋ ಒದ್ದಾಡಿಕೊಂಡು ಊರು ಸೇರಿದರೂ, ಮರಳಿ ಬರುವುದು ಇನ್ನೊಂದು ದುಸ್ಸಾಹಸ.
ಈ ಸಮಸ್ಯೆ ಇಂದು ನಿನ್ನೆಯದ್ದೇನಲ್ಲ. ಮಳೆಗಾಲದಲ್ಲಿ ಪದೇ ಪದೇ ಗುಡ್ಡ ಜರಿದು ಘಾಟ್ಗಳು ಬಂದ್ ಆಗುತ್ತಿವೆ. ಅದರ ದುರಸ್ತಿಗಾಗಿ ಬೇಸಿಗೆಯಿಡೀ ಮತ್ತೆ ಬಂದ್ ಮಾಡಲಾಗುತ್ತದೆ. ರಿಪೇರಿ ಮುಗಿಯಿತು ಎಂದು ನಿಟ್ಟುಸಿರುಬಿಡುವಷ್ಟರಲ್ಲಿ ಮತ್ತೊಂದು ಮಳೆಗಾಲದ ಆಟ ಶುರುವಾಗುತ್ತದೆ. ಕರಾವಳಿಗರ ಸಂಚಾರ ಸಂಕಟ ಮುಗಿಯುವುದೇ ಇಲ್ಲ.
ಶಿರಾಡಿ ಘಾಟ್ ರಸ್ತೆ : 45ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿತ
ಕನೆಕ್ಟ್ ಅಸ್ ಟು ಮಂಗಳೂರು
ಮಂಗಳೂರಿನ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಈ ಸಮಸ್ಯೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟು ವರ್ಷಗಳಾದರೂ ಸರ್ಕಾರಗಳು ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಿಲ್ಲ ಎನ್ನುವುದು ಅವರ ಆರೋಪ.
ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಗರು 'ಕನೆಕ್ಟ್ ಅಸ್ ಟು ಮಂಗಳೂರು' ಎಂಬ ಹ್ಯಾಷ್ಟ್ಯಾಗ್ ಬಳಸಿ ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿ ಟ್ವೀಟ್ ಮಾಡಿದ್ದಾರೆ.
|
ಓಡಾಡುವುದು ಹೇಗೆ?
ಮಂಗಳೂರಿನ ಲಕ್ಷಾಂತರ ಮಂದಿಯಂತೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೆ, ಎಲ್ಲದಕ್ಕಿಂತ ಮುಖ್ಯವಾಗಿ ಮಂಗಳೂರು-ಬೆಂಗಳೂರು ನಡುವೆ ಸೂಕ್ತವಾಗಿ ಸಾರಿಗೆ ವ್ಯವಸ್ಥೆ ಇಲ್ಲ. ಕೆಲವೊಮ್ಮೆ ಮಳೆ, ಕೆಲವೊಮ್ಮೆ ರಿಪೇರಿ! ನಾವು ಓಡಾಡುವುದು ಹೇಗೆ? ತುರ್ತು ಪರಿಸ್ಥಿತಿಯಲ್ಲಿ ನಾವು ಏನು ಮಾಡುವುದು? ಎಂದು ಅಕ್ಷತಾ ಭಟ್ ಪ್ರಶ್ನಿಸಿದ್ದಾರೆ.
|
ಸುಲಭ ಮಾರ್ಗವೇ ಬಂದ್
ಮಂಗಳೂರಿಗೆ ಬಸ್ನಲ್ಲಿ ಸುಲಭವಾಗಿ ಹೋಗುವ ಮಾರ್ಗವೆಂದರೆ ಶಿರಾಡಿ ಘಾಟ್. ಆದರೆ, ಅದು ವರ್ಷದ ಬಹುತೇಕ ಅರ್ಧ ಅವಧಿ ನವೀಕರಣ ಅಥವಾ ದುರಸ್ತಿಗೆ ಮುಚ್ಚಿರುತ್ತದೆ. ಈ ವರ್ಷ ನವೀಕರಣಕ್ಕಾಗಿ ಆರು ತಿಂಗಳಿಗೂ ಹೆಚ್ಚು ಕಾಲ ಮುಚ್ಚಲಾಗಿತ್ತು. ಮತ್ತೀಗ ರಿಪೇರಿಗಾಗಿ ಮುಚ್ಚಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ಮಾರ್ಗ ಹಾನಿ
ಬೆಂಗಳೂರಿನಿಂದ ಮಂಗಳೂರಿಗೆ ಇರುವ ಪರ್ಯಾಯ ಮಾರ್ಗವೆಂದರೆ ಮಡಿಕೇರಿ. ಪ್ರವಾಹದ ದುರಂತದಿಂದ ಅಲ್ಲಿನ ರಸ್ತೆಯ ಪರಿಸ್ಥಿತಿ ಏನಾಗಿದೆ ಎನ್ನುವುದು ನಮಗೆಲ್ಲ ಗೊತ್ತಿದೆ. ಅಲ್ಲಿನ ಜನರು ಎಲ್ಲವನ್ನೂ ಕಳೆದುಕೊಳ್ಳವಂತಾಗಿರುವುದು ದುರದೃಷ್ಟಕರ.
ವಿಮಾನಗಳೂ ದುಬಾರಿ
ಮಂಗಳೂರಿಗೆ ಇರುವ ಇನ್ನೂ ಒಂದು ಪರ್ಯಾಯ ಮಾರ್ಗವೆಂದರೆ ಚಾರ್ಮಾಡಿ ಘಾಟ್. ಅಲ್ಲಿ ಈಗ ಸಾರಿಗೆ ಬಸ್ಗಳು ಮತ್ತು ಸಣ್ಣ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಬೇರೆ ಬಸ್ಗಳು ಆ ಮಾರ್ಗದಲ್ಲಿ ಓಡಾಡುವಂತಿಲ್ಲ. ವಿಮಾನಯಾನ ಸಂಸ್ಥೆಗಳು ಮನಬಂದಂತೆ ಬೆಲೆ ಏರಿಕೆ ಮಾಡಿವೆ. ಸಾಮಾನ್ಯ ಜನರು ಅದನ್ನು ಭರಿಸುವುದು ಸಾಧ್ಯವೇ ಇಲ್ಲ ಎಂದು ಅಕ್ಷತಾ ಟ್ವೀಟ್ ಮಾಡಿದ್ದಾರೆ.
ರಸ್ತೆ ಸರಿಪಡಿಸಿ
ಹೀಗಾಗಿ ಮಂಗಳೂರಿಗೆ ತೆರಳುವುದು ಬಹುತೇಕ ಅಸಾಧ್ಯವಾಗಿದೆ. ಈ ಸಮಸ್ಯೆಗೆ ನಮಗೆ ಶಾಶ್ವತ ಪರಿಹಾರ ಬೇಕು. ಎರಡು ನಗರಗಳ ನಡುವೆ ಸೂಕ್ತ ಹಾಗೂ ವಿಶ್ವಾಸಾರ್ಹ ಸಂಪರ್ಕವನ್ನು ಕಲ್ಪಿಸಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಕೋರುತ್ತೇವೆ ಎಂದು ಟ್ವಿಟ್ಟಿಗರು ಹೇಳಿದ್ದಾರೆ.
|
ಕ್ರಿಯೆ ಬೇಕು, ಭರವಸೆಗಳಲ್ಲ
ನಮಗೆ ಕ್ರಿಯೆ ಬೇಕು, ಸುಳ್ಳು ಭರವಸೆಗಳಲ್ಲ... ಅನೇಕ ರಾಜಕಾರಣಿಗಳು ಬಂದು ಹೋದರು. ಆದರೆ, ಪ್ರತಿ ವರ್ಷ ಶಿರಾಡಿ ಘಾಟ್ ರಸ್ತೆಗೆ ಪರಿಹಾರ ದೊರೆಯುತ್ತಿಲ್ಲ. ಬಂಟ್ವಾಳದಂತಹ ನಮ್ಮ ಊರುಗಳಿಗೆ ತಲುಪಲು ಉತ್ತಮ ರಸ್ತೆಗಳಿಗಾಗಿ ಶಾಶ್ವತ ಒದಗಿಸಲು ಇದು ಸೂಕ್ತ ಸಮಯ ಎಂದು ಗೌತಮ್ ಬಾಳಿಗಾ ಟ್ವೀಟ್ ಮಾಡಿದ್ದಾರೆ.
|
ಶಿರಾಡಿ ಘಾಟ್ ರಿಪೇರಿ ಆಗ್ತಾ ಇದೆ!
ಜೀವನದಲ್ಲಿ ಬದಲಾವಣೆಯೊಂದೇ ಶಾಶ್ವತ ಸಂಗತಿ ಎಂಬ ಮಾತಿದೆ. ಆದರೆ, ನಾವು 25 ವರ್ಷದ ಹಿಂದೆ ಚಿಕ್ಕವರಾಗಿದ್ದಾಗ ಕೇಳುತ್ತಿದ್ದ ಸುದ್ದಿ ಇಂದಿಗೂ ಬದಲಾಗಿಲ್ಲ. ಅದು 'ಶಿರಾಡಿ ಘಾಟ್ ರಿಪೇರಿ ಆಗ್ತಾ ಇದೆ'
|
ಅಶ್ವಿನ್ ಕಿಣಿ
ಮಂಗಳೂರು-ಬೆಂಗಳೂರು ನಡುವೆ ಓಡಾಟ ನಡೆಸುವಾಗಲೆಲ್ಲ ಮುಂದಿನ ಕ್ಷಣದಲ್ಲಿ ಏನಾಗಬಹುದು ಎಂಬ ಆತಂಕ ಕಾಡುತ್ತಲೇ ಇರುತ್ತದೆ. ಆದ್ಯತೆಯೊಂದಿಗೆ ಶಿರಾಡಿ ಘಾಟ್ ದುರಸ್ತಿ ಮಾಡಿ ಎಂದು ಅಶ್ವಿನ್ ಕಿಣಿ ಹೇಳಿದ್ದಾರೆ.
|
ಶಾಶ್ವತ ಪರಿಹಾರ ಸಿಗಲಿದೆಯೇ?
ಬೆಂಗಳೂರಿನಲ್ಲಿ ಕರಾವಳಿಯಿಂದ ಬಂದ ಅನೇಕರು ಕೆಲಸ ಮಾಡುತ್ತಿದ್ದಾರೆ. ಆದರೆ, ಕೆಟ್ಟ ರಸ್ತೆ ಸೌಕರ್ಯದ ಕಾರಣ ಅವರೆಲ್ಲರೂ ಊರಿಗೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ರೈಲ್ವೆ, ಶಿರಾಡಿ ಘಾಟ್ ಬಂದ್ ಆಗಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆಯೇ? ಎಂದು ಮಂಗಳೂರು ಹುಡುಗಿ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
|
ವಾಸ್ತವವೇ ಬೇರೆ
ಬೆಂಗಳೂರು-ಕರಾವಳಿ ರಸ್ತೆ ಸಂಪರ್ಕ, ವರದಿಯಾಗಿರುವುದಕ್ಕಿಂತ ವಾಸ್ತವ ವಿಭಿನ್ನವಾಗಿದೆ. ನನಗೆ ಬಂದಿರುವ ಮಾಹಿತಿಗಳ ಪ್ರಕಾರ ಶಿರಾಡಿ ಘಾಟ್ಅನ್ನು ಒಂದು ವಾರದಲ್ಲಿ ದುರಸ್ತಿ ಮಾಡಬಹುದು. ಈ ಬಗ್ಗೆ ಗಮನ ಹರಿಸುವಂತೆ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರಿಗೆ ಮನವಿ ಮಾಡಿದ್ದೇನೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.