ಅಪ್ಪ-ಮಗನ ಆಟಕ್ಕೆ ಹೈರಾಣಾದ ಶಿಡ್ಲಘಟ್ಟ ಜೆಡಿಎಸ್ ಕಾರ್ಯಕರ್ತರು
Recommended Video
ನಾಮಪತ್ರ ಸಲ್ಲಿಕೆ ದಿನ ಮುಗಿದರೂ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲ ಮುಗಿದಿಲ್ಲ. ಇದಕ್ಕೆ ಕಾರಣ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಕುಮಾರಸ್ವಾಮಿ.
ಹೌದು, ಕುಮಾರಸ್ವಾಮಿ ಮತ್ತು ದೇವೇಗೌಡ ಅವರು ಶಿಡ್ಲಘಟ್ಟದ ಇಬ್ಬರು ಆಕಾಂಕ್ಷಿಗಳಿಗೆ ಬರೋಬ್ಬರಿ ನಾಲ್ಕು ಬಾರಿ ಬಿ-ಫಾರಂ, ಸಿ-ಫಾರಂಗಳನ್ನು ವಿತರಿಸಿ ಕಾರ್ಯಕರ್ತರನ್ನು ಗೊಂದಲಕ್ಕೆ ತಳ್ಳಿದ್ದಾರೆ. ಅಂತಿಮವಾಗಿ ಜೆಡಿಎಸ್ ಅಭ್ಯರ್ಥಿ ಬಿ.ಎನ್.ರವಿಕುಮಾರ್ ಎಂದು ಹೇಳಲಾಗಿದೆಯಾದರೂ ಕ್ಷೇತ್ರದಲ್ಲಿ ಗಂಟೆಗೊಂದರಂತೆ ಹರಡುತ್ತಿರುವ ಗಾಳಿ ಸುದ್ದಿಗಳು ಜೆಡಿಎಸ್ ಕಾರ್ಯಕರ್ತರಲ್ಲಿ ಅಭ್ಯರ್ಥಿಗಳ ಬಗ್ಗೆ ಗೊಂದಲ ಮೂಡಿಸಿವೆ.
ಅತಂತ್ರ ವಿಧಾನಸಭೆಯಾದರೆ ಜೆಡಿಎಸ್ ಬೆಂಬಲ ಬಿಜೆಪಿಗೋ, ಕಾಂಗ್ರೆಸ್ ಗೋ?
ಹೌದು ಮೊದಲಿಗೆ ಜೆಡಿಎಸ್ ಪ್ರಕಟಿಸಿದ 126 ಅಭ್ಯರ್ಥಿಗಳ ಪಟ್ಟಿಯಲ್ಲಿ ಶಿಡ್ಲಘಟ್ಟ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯೆಂದು ರಾಜಣ್ಣ ಹೆಸರು ಘೋಷಿಸಲಾಗಿತ್ತು. ತನಗೆ ಟಿಕೆಟ್ ದೊರಕದ್ದಕ್ಕೆ ಆಕಾಂಕ್ಷಿ ಬಿ.ಎನ್.ರವಿಕುಮಾರ್ ಬಂಡಾಯ ಎದ್ದಿದ್ದರು, ದೇವೇಗೌಡರ ಭಾವಚಿತ್ರ ಹಿಡಿದು ಚುನಾವನೆಯಲ್ಲಿ ಗೆದ್ದು ಬರುವುದಾಗಿ ವರಿಷ್ಠರಿಗೆ ಸವಾಲು ಹಾಕಿದ್ದರು.
ರಾಜಣ್ಣಗೆ ಬಿ-ಫಾರಂ
ಬಂಡಾಯದ ಬಿಸಿ ತಗುಲಿ ಕೊನೆಗೆ ದೇವೇಗೌಡ ಅವರ ಸಮ್ಮುಖದಲ್ಲಿ ರಾಜಣ್ಣ, ರವಿಕುಮಾರ್ ಅವರಿಗೆ ಸಂಧಾನ ಮಾಡುವ ಪ್ರಯತ್ನವೂ ವಿಫಲವೇ ಆಯಿತು. ಆದರೆ ನಾಮಪತ್ರ ಸಲ್ಲಿಕೆ ದಿನಾಂಕ ಹತ್ತಿರ ಬಂದಂತೆ ರಾಜಣ್ಣ ಅವರಿಗೆ ಜೆಡಿಎಸ್ನ ಬಿ-ಫಾರಂ ನೀಡಲಾಯಿತು.
ಕೆಸಿ ವ್ಯಾಲಿ, ಪೈಪ್ ದುಡ್ಡು ಹೊಡೆಯೋ ಯೋಜನೆ: ಜೆಡಿಎಸ್ ಅಭ್ಯರ್ಥಿ ಬಚ್ಚೇಗೌಡ ಸಂದರ್ಶನ
ಮತ್ತೆ ಸಿ-ಫಾರಂ ರದ್ದು ಮಾಡಿದ ಎಚ್ಡಿಡಿ
ಆದರೆ ಅದರ ಮರುದಿನವೇ ಅಂದರೆ ಏಪ್ರಿಲ್ 23ರಂದು ರವಿಕುಮಾರ್ ಅವರಿಗೆ ದೇವೇಗೌಡ ಅವರು ಸಿ-ಫಾರಂ ವಿತರಿಸಿ ಶಿಢ್ಲಘಟ್ಟದ ಅಧಿಕೃತ ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿದರು. ಆದರೆ ನಂತರ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಕುಮಾರಸ್ವಾಮಿ ಅವರು ಮತ್ತೆ ದೇವೇಗೌಡ ಅವರ ಮೇಲೆ ಒತ್ತಡ ಹೇರಿ ರವಿಕುಮಾರ್ ಅವರಿಗೆ ನೀಡಲಾಗಿದ್ದ ಸಿ-ಫಾರಂ ರದ್ದು ಮಾಡುವಂತೆ ಮಾಡಿದರು.
ರವಿಕುಮಾರ್ ಅಧಿಕೃತ ಅಭ್ಯರ್ಥಿ
ಅಲ್ಲಿಗೆ ಮತ್ತೆ ರಾಜಣ್ಣ ಅವರೇ ಶಿಡ್ಲಘಟ್ಟ ಜೆಡಿಎಸ್ ಅಭ್ಯರ್ಥಿ ಆದರು. ಆದರೆ ಇಲ್ಲಿಗೆ ಕತೆ ಮುಗಿಯಲಿಲ್ಲ, ನಿನ್ನೆ (ಏಪ್ರಿಲ್ 24) ನಾಮಪತ್ರ ಸಲ್ಲಿಸುವ ಕೊನೆಯ ದಿನ ರವಿಕುಮಾರ್ ಅವರಿಗೆ ಮತ್ತೆ ಸಿ-ಫಾರಂ ನೀಡಿ ಅವರನ್ನೇ ಅಧಿಕೃತ ಜೆಡಿಎಸ್ ಅಭ್ಯರ್ಥಿಯನ್ನಾಗಿ ಮಾಡಲಾಯಿತು.
ವಿಪರೀತ ಗೊಂದಲ ಸೃಷ್ಠಿಸಿದ ಅಭ್ಯರ್ಥಿ ಆಯ್ಕೆ
ಈಗ ಪ್ರಸ್ತುತ ಜೆಡಿಎಸ್ ಅಭ್ಯರ್ಥಿ ಎಂದು ರಾಜಣ್ಣ ಹಾಗೂ ರವಿಕುಮಾರ್ ಇಬ್ಬರ ನಾಮಪತ್ರಗಳೂ ಸಲ್ಲಿಕೆಯಾಗಿದ್ದು, ಅಂತಿಮವಾಗಿ ರವಿಕುಮಾರ್ ಅವರೇ ಜೆಡಿಎಸ್ ಕಣದಲ್ಲಿ ಉಳಿಯುವ ಸಾಧ್ಯತೆ ಇದೆ. ಆದರೆ ಈ ಬಿ-ಫಾರಂ, ಸಿ-ಫಾರಂ ಆಟ ಜೆಡಿಎಸ್ ಕಾರ್ಯಕರ್ತರಲ್ಲಿ ವಿಪರೀತವಾದ ಗೊಂದಲ ಸೃಷ್ಠಿಸಿದೆ.
ಇನ್ನೂ ನಿವಾರಣೆ ಆಗಿಲ್ಲ ಗೊಂದಲ
ಸಾಮಾಜಿಕ ಜಾಲತಾಣದಲ್ಲಂತೂ ರವಿಕುಮಾರ್ ಅವರೇ ಜೆಡಿಎಸ್ ಅಭ್ಯರ್ಥಿಯೆಂದು ಕೆಲವರು, ಇನ್ನು ಕೆಲವರು ರಾಜಣ್ಣ ಅವರೇ ಜೆಡಿಎಸ್ ಅಭ್ಯರ್ಥಿಯೆಂದು ಪೋಸ್ಟ್ಗಳನ್ನು ಹಾಕಿ ಮತದಾರರನ್ನು ಇನ್ನಷ್ಟು ಕನ್ಫ್ಯೂಸ್ ಮಾಡುತ್ತಿದ್ದಾರೆ. ಒಟ್ಟಾರೆ ಅಪ್ಪ-ಮಗನ ಆಟಕ್ಕೆ ಶಿಡ್ಲಘಟ್ಟ ಜೆಡಿಎಸ್ ಕಾರ್ಯಕರ್ತರಂತೂ ಹೈರಾಣಾಗಿದ್ದಾರೆ. ಅಧಿಕೃತ ಜೆಡಿಎಸ್ ಅಭ್ಯರ್ಥಿ ಯಾರೆಂಬ ಗೊಂದಲ ಇನ್ನೂ ನಿವಾರಣೆ ಆಗಿಲ್ಲ.