ರಾಜಕಾರಣವೇ ಬೇರೆ, ಮನುಷ್ಯತ್ವ ಬೇರೆ ಎಂದು ತೋರಿಸಿದ ಜೊಲ್ಲೆ-ಖಾದರ್ ಮುಖಾಮುಖಿ
ಬೆಂಗಳೂರು, ಫೆ: 05: ನಮ್ಮ ನಾಡಿನ ರಾಜಕಾರಣದ ವಿಶೇಷತೆಯೆ ಅದು. ರಾಜಕೀಯ ಭಿನ್ನಾಭಿಪ್ರಾಯದ ವಿಚಾರ ಬಂದಾಗ ಮಾತ್ರ ನಮ್ಮ ನಾಡಿನ ರಾಜಕಾರಣಿಗಳು ಆರೋಪ-ಪ್ರತ್ಯಾರೋಪ ಮಾಡುತ್ತಾರೆ. ಜೊತೆಗೆ ರಾಜಕೀಯ ರಣರಂಗದಲ್ಲಿ ಬಂದು ಸೆಣಸಿ ಎಂದು ಆಹ್ವಾನವನ್ನೂ ಕೊಡುತ್ತಾರೆ. ಆದರೆ ರಾಜಕೀಯ ಹೊರತು ಪಡಿಸಿದರೆ ಸಹೋದರತ್ವ ಭಾವನೆ ನಾಡಿನ ಬಹುತೇಕ ರಾಜಕಾರಣಿಗಳಲ್ಲಿದೆ. ಇದು ಮತ್ತೊಮ್ಮೆ ಕಾಣಿಸಿಕೊಂಡಿದ್ದು ಸಿದ್ದಗಂಗಾ, ಸುತ್ತೂರು ಹಾಗೂ ಆದಿಚುಂಚನಗಿರಿ ಮಠಗಳಿಗೆ ಆಹಾರ ಧಾನ್ಯಪೂರೈಕೆ ಸ್ಥಗಿತಗೊಳಿಸಿದ್ದ ರಾಜ್ಯ ಬಿಜೆಪಿ ಸರ್ಕಾರದ ವಿವಾದಿತ ನಿರ್ಧಾರದ ಬಳಿಕ.
ರಾಜ್ಯ ಸರ್ಕಾರದ ನಿರ್ಧಾರಕ್ಕೆ ನಿನ್ನೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಾರ್ವಜನಿಕ ವಿರೋಧದ ಬಳಿಕ ಆಹಾರ ಧಾನ್ಯ ಪೂರೈಕೆ ಸ್ಥಗಿತಗೊಳಿಸಿದ್ದು ಹಿಂದಿನ ಮೈತ್ರಿ ಸರ್ಕಾರದ ನಿರ್ಧಾರ ಎಂದು ರಾಜ್ಯ ಬಿಜೆಪಿ ಸರ್ಕಾರ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿತ್ತು.
ಸಿದ್ದಗಂಗಾ ಮಠದ ಆಹಾರಕ್ಕೆ ಕತ್ತರಿ; ದಾಖಲೆಗಳು ಬಿಚ್ಚಿಟ್ಟ ಲೆಕ್ಕ
ಆದರೆ ಬಿಜೆಪಿ ಸರ್ಕಾರವೇ ಮಠಗಳಿಗೆ ಆಹಾರ ಧಾನ್ಯ ಪೂರೈಕೆಗೆ ಆದೇಶ ಮಾಡಿದೆ ಎಂದು ಆರೋಪಿಸಿದ್ದ ಮಾಜಿ ಆಹಾರ ಸಚಿವ ಯು.ಟಿ. ಖಾದರ್ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಕೊನೆಗೆ ಸಾರ್ವಜನಿಕ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಸಂಜೆ ವೇಳೆಗೆ ಹಿಂದಿನ ಯೋಜನೆ ಮುಂದುವರೆಸಲು, ಮಠಗಳಿಗೆ ಉಚಿತವಾಗಿ ಆಹಾರ ಧಾನ್ಯ ಪೂರೈಕೆ ಮಾಡುವುದುದಾಗಿ ಸ್ಪಷ್ಟಪಡಿಸಿತ್ತು. ಯೋಜನೆ ಮುಂದುವರೆಯಲಿದೆ ಎಂದು ಹೇಳಿಕೆ ಕೊಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿವಾದಕ್ಕೆ ತೆರೆ ಎಳೆದಿದ್ದರು.
ನಿನ್ನೆ ಇಡೀ ದಿನ ಹಾಲಿ ಆಹಾರ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಮಾಜಿ ಆಹಾರ ಸಚಿವ ಯು.ಟಿ. ಖಾದರ್ ಆರೋಪ, ಪ್ರತ್ಯಾರೋಪಗಳನ್ನು ಮಾಡಿಕೊಂಡಿದ್ದರು. ಆದರೆ ಇಂದು ವಿಧಾನಸೌಧದಲ್ಲಿ ಇಬ್ಬರೂ ಮುಖಾಮುಖಿಯಾದಾಗ ಕಂಡುಬಂದಿದ್ದೆ ಬೇರೆ ಚಿತ್ರಣ.
ಆರೋಪ-ಪ್ರತ್ಯಾರೋಪಗಳ ಬಳಿಕ ಮುಖಾಮುಖಿಯಾದ ಖಾದರ್-ಜೊಲ್ಲೆ
ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಮಾಜಿ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್, ಹಿಂದೆ ನಮ್ಮ ಸರ್ಕಾರವಿದ್ದಾಗ ಮಠಗಳಿಗೆ ಆಹಾರ ಧಾನ್ಯ ಪೂರೈಕೆಯ 'ಅನ್ನ ದಾಸೋಹ' ಯೋಜನೆ ಜಾರಿಗೆ ತಂದಿದ್ದೇವು. ಆದರೆ ಈಗ ಆಹಾರ ಧಾನ್ಯ ಪೂರೈಕೆಯನ್ನು ರಾಜ್ಯ ಬಿಜೆಪಿ ಸರ್ಕಾರ ನಿಲ್ಲಿಸಿದೆ ಎಂದು ಆರೋಪಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವೆ ಶಶಿಕಲಾ ಜಿಲ್ಲೆ ಹಿಂದಿನ ಮೈತ್ರಿ ಸರ್ಕಾರದಲ್ಲಿ ಯೋಜನೆ ನಿಲ್ಲಿಸಲಾಗಿದೆ ಎಂದು ಸ್ಪಷ್ಟನೆ ಕೊಟ್ಟಿದ್ದರು. ಸಚಿವೆ ಜೊಲ್ಲೆ ಹೇಳಿಕೆ ವಿರೋಧಿಸಿದ್ದ ಮಾಜಿ ಸಚಿವ ಯು.ಟಿ. ಖಾದರ್ ಬಿಜೆಪಿ ಸರ್ಕಾರದ್ದೆ ಕೆಲಸ ಎಂಬುದಕ್ಕೆ ದಾಖಲೆ ಬಿಡುಗಡೆ ಮಾಡಿದ್ದರು.
ಹೀಗೆ ನಿನ್ನೆ ಇಡೀ ದಿನ ಜಟಾಪಟಿ ಮಾಡಿಕೊಂಡಿದ್ದ ಇಬ್ಬರೂ, ಇಂದು ವಿಧಾನಸೌಧದಲ್ಲಿ ಮುಖಾಮುಖಿಯಾಗಿದ್ದಾರೆ.
ನೀವು ಸುದ್ದಿಗೋಷ್ಠಿ ಮಾಡಿದ್ದು ಒಳ್ಳೆಯದೇ ಆಯ್ತು ಎಂದ ಜೊಲ್ಲೆ
ವಿಧಾನಸೌಧದ ಕಾರಿಡಾರ್ನಲ್ಲಿ ಇಂದು ಶಶಿಕಲಾ ಜೊಲ್ಲೆ ಹಾಗೂ ಯು.ಟಿ. ಖಾದರ್ ಮುಖಾಮುಖಿಯಾಗಿದ್ದಾರೆ. ಇಬ್ಬರೂ ಜನಪ್ರತಿನಿಧಿಗಳು ಒಬ್ಬರಿಗೊಬ್ಬರು ನಮಸ್ಕಾರ ಹೇಳಿಕೊಂಡಿದ್ದಾರೆ. ಬಳಿಕ ನಿನ್ನೆ ನೀವು ಸುದ್ದಿಗೋಷ್ಠಿ ಮಾಡಿದ್ದು ಒಳ್ಳೇಯದೆ ಆಯಿತು. ನನ್ನ ಗಮನಕ್ಕೆ ವಿಷಯ ಬಂದಿತ್ತು. ಬರಿ ಅಕ್ಕಿಯನ್ನು ಸರಬರಾಜು ಮಾಡಲು ಯೋಜನೆ ಸಿದ್ಧಪಡಿಸಿದ್ದರು, ನಾನು ಗೋದಿಯನ್ನೂ ಸೇರಿಸಲು ಸೂಚಿಸಿದ್ದೇನೆ ಎಂದು ಶಶಿಕಲಾ ಜೊಲ್ಲೆ ಅವರು ಯು.ಟಿ. ಖಾದರ್ ಅವರಿಗೆ ಧನ್ಯವಾದ ಹೇಳಿದ್ದಾರೆ.
'ಡಿಸಿಎಂ ಮಾಡಿ, ಜೊತೆಗೆ ಜಲಸಂಪನ್ಮೂಲ ಖಾತೆ ಕೊಡಿ'
ನಾನು ಹೊಸಬಳು. ನೀವು ಮಾರ್ಗದರ್ಶನ ಮಾಡಿ ಎಂದು ಶಶಿಕಲಾ ಜೊಲ್ಲೆ ಅವರು ಯು.ಟಿ. ಖಾದರ್ ಅವರನ್ನು ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಾವಿಬ್ಬರೂ ಅಣ್ಣ ತಂಗಿ ಇದ್ದಂತೆ ಎಂದ ಯು.ಟಿ. ಖಾದರ್
ನಾನು ಹೊಸಬಳು, ನೀವು ಮಾರ್ಗದರ್ಶನ ಮಾಡಬೇಕು ಎಂದು ಶಶಿಕಲಾ ಜೊಲ್ಲೆ ಅವರು ಹೇಳುತ್ತಿದ್ದಂತೆಯೆ ಸಚಿವ ಯು.ಟಿ. ಖಾದರ್ ಭಾವುಕರಾಗಿದ್ದಾರೆ. ನಾನು ಹಿಂದೆ ಇದ್ದ ಖಾತೆಯಲ್ಲೇ ನೀವಿದ್ದೀರಿ. ನನಗೆ ಹಂಚಿಕೆ ಆಗಿದ್ದ ಸರ್ಕಾರಿ ಬಂಗೆಲೆಯಲ್ಲಿಯೇ ಈಗ ನೀವಿರೋದು. ಹಾಗಾಗಿ ನಾವಿಬ್ಬರೂ ಅಣ್ಣ ತಂಗಿ ಇದ್ದಂತೆ ಎಂದು ಶಶಿಕಲಾ ಜೊಲ್ಲೆ ಅವರಿಗೆ ಖಾದರ್ ಸಮಾಧಾನ ಹೇಳಿದ್ದಾರೆ. ಇಬ್ಬರೂ ರಾಜಕಾರಣಿಗಳು ರಾಜಕಾರಣ ಮರೆತು ಅಣ್ಣ-ತಂಗಿಯಂತೆ ನಾಡಿನ ಅಭಿವೃದ್ಧಿ ವಿಚಾರ ಮಾತನಾಡಿದ್ದಕ್ಕೆ ವಿಧಾನಸೌಧ ಸಾಕ್ಷಿಯಾಗಿದೆ.
ಕರ್ನಾಟಕದ ರಾಜಕಾರಣ ಯಾವಾಗಲೂ ವಿಶೇಷವೇ
ಹಿಂದೇ ಅನೇಕ ಸಂದರ್ಭಗಳಲ್ಲಿ ನಾಡಿನ ರಾಜಕಾರಣಿಗಳ ಪ್ರಬುದ್ಧ ನಡುವಳಿಕೆ ದೇಶದ ಜನರ ಗಮನವನ್ನು ಸೆಳೆದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಕಾಲಿಕವಾಗಿ ಪುತ್ರವಿಯೋಗವಾದಾಗ, ಇಡೀ ನಾಡಿನ ರಾಜಕೀಯ ನಾಯಕರು ಪಕ್ಷಬೇಧ ಮರೆತು ಸಿದ್ದರಾಮಯ್ಯ ಅವರಿಗೆ ಸಮಾಧಾನ ಹೇಳಿದ್ದರು. ಇತ್ತೀಚೆಗೆ ಸಿದ್ದರಾಮಯ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಾಗಲೂ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಎಲ್ಲ ಪಕ್ಷಗಳ ನಾಯಕರೂ ಆಸ್ಪತ್ರಗೆ ತೆರಲಿ ಆರೋಗ್ಯ ವಿಚಾರಿಸಿದ್ದರು.
ಸೀಟ್ ಬ್ಲಾಕಿಂಗ್ ಅವ್ಯಾಹತ: ಬಯಲಾಯ್ತು 1100 ಕೋಟಿ ರೂ. ಭ್ರಷ್ಟಾಚಾರ
ರಾಜಕೀಯ ಹೊರತು ಪಡಿಸಿ ಬೇರೆ ಸಂಕಷ್ಟಗಳನ್ನು ಎದುರಿಸುವಾಗ ಇಡೀ ನಾಡಿನ ರಾಜಕಾರಿಣಗಳು ಒಬ್ಬರಿಗೊಬ್ಬರು ಸಹಾಯದ ಹಸ್ತ ಚಾಚುತ್ತಾರೆ. ಇಂತಹ ಸಾಮರಸ್ಯ ಕನ್ನಡ ನಾಡನ್ನು ಬಿಟ್ಟರೆ ಬೇರೆಡೆ ಕಂಡುಬಂದಿರುವುದು ಅಪರೂಪ!