ಕೊನೆಗೂ ಈಡೇರಲಿಲ್ಲ ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಆಸೆ!
ಬೆಂಗಳೂರು, ಫೆ. 26: ತಾವು ಅಂದುಕೊಂಡಂತೆಯೆ ಘಟಾನುಘಟಿ ನಾಯಕರಿಗೆ ಸೆಡ್ಡು ಹೊಡೆದು ಹೊಸಕೋಟೆಯಲ್ಲಿ ಶಾಸಕ ಶರತ್ ಬಚ್ಚೇಗೌಡ ಅವರು ಉಪ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದರು. ಉಪ ಚುನಾವಣೆ ಪ್ರಚಾರದಲ್ಲಿ ಇಡೀ ಬಿಜೆಪಿ ಸರ್ಕಾರವೇ ಸಚಿವ ಎಂ.ಟಿ.ಬಿ. ನಾಗರಾಜು ಅವರ ಬೆಂಬಲಕ್ಕಿದ್ದರೂ, ಯುವ ಶಕ್ತಿಯೊಂದಿಗೆ ಏಕಾಂಗಿಯಾಗಿ ಚುನಾವಣೆಯಲ್ಲಿ ಹೋರಾಡಿದ ಶರತ್ ಎದುರು ಬಿಜೆಪಿ ಸೋತಿತ್ತು.
ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಶರತ್ ಬಚ್ಚೇಗೌಡ ಅವರು ಭರ್ಜರಿ ಜಯಗಳಿಸಿದ್ದರು. ಆ ಬಳಿಕ ಎಲ್ಲೆಡೆಯಂತೆ ಅವರೂ ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಶರತ್ ಬಚ್ಚೇಗೌಡ ಅವರು ಬಿಜೆಪಿ ಸೇರಲು ಬೆಂಗಳೂರಿನ ಬಿಜೆಪಿಯಲ್ಲಿನ ಕೆಲ ಒಕ್ಕಲಿಗ ಸಮುದಾಯದ ಹಿರಿಯ ನಾಯಕರು ಅಡ್ಡಿಯಾದರು ಎನ್ನಲಾಗಿದೆ. ಅದು ಬೇರೆ ವಿಚಾರ.
ಹೀಗಾಗಿ ಭರ್ಜರಿ ಗೆಲವಿನ ಬಳಿಕವೂ ಬಿಜೆಪಿ ಸೇರುವುದು ಅಸಾಧ್ಯ ಎಂದುಕೊಂಡು ಶರತ್ ಬಚ್ಚೇಗೌಡ ಅವರು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಬಾಗಿಲನ್ನು ತಟ್ಟಿದ್ದರು. ಕೊನೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಚಿವ ಕೃಷ್ಣ ಭೈರೇಗೌಡ ಅವರ ಆಹ್ವಾನದಂತೆ ಕಾಂಗ್ರೆಸ್ ಪಕ್ಷ ಸೇರಲು ಮುಂದಾಗಿದ್ದರು. ಆದರೆ ಕಾಂಗ್ರೆಸ್ ಪಕ್ಷ ಸೇರುವ ಅವರ ಆಸೆ ಈಡೇರಲಿಲ್ಲ.
ಈಡೇರದ ಶರತ್ ಬಚ್ಚೇಗೌಡ ಆಸೆ
ಇಂದು (ಫೆ. 25) ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದಲ್ಲಿ ಶಾಸಕ ಶರತ್ ಬಚ್ಚೇಗೌಡ ಅವರು ಕಾಂಗ್ರೆಸ್ ಸಹ ಸದಸ್ಯತ್ವ ಪಡೆದುಕೊಂಡಿದ್ದಾರೆ. ಆ ಮೂಲಕ ಅಧಿಕೃತವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ಬಾಹ್ಯ ಬೆಂಬಲವನ್ನು ಶರತ್ ಬಚ್ಚೇಗೌಡ ಕೊಟ್ಟಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ತಮ್ಮ ಬಾಹ್ಯ ಬೆಂಬಲದ ಪತ್ರವನ್ನು ಶರತ್ ನೀಡಿದ್ದಾರೆ. ಆದರೆ ಕಾಂಗ್ರೆಸ್ ಸದಸ್ಯನಾಗಿ ಪಕ್ಷ ಸೇರುವುದು ಅವರಿಗೆ ಸಾಧ್ಯವಾಗಿಲ್ಲ. ಅದಕ್ಕೆ ಕಾರಣವೂ ಇದೆ. ಅದನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ಸೇರಲು ಇರುವ ಅಡ್ಡಿ!
ಶಾಸಕ ಶರತ್ ಬಚ್ಚೇಗೌಡ ಅವರ ಬಾಹ್ಯ ಬೆಂಬಲದ ಪತ್ರ ಸ್ವೀಕರಿಸಿದ ಬಳಿಕ ಸಿದ್ದರಾಮಯ್ಯ ಅವರು, ಶರತ್ ಪಕ್ಷ ಸೇರ್ಪಡೆಗೆ ಇರುವ ಅಡ್ಡಿಯನ್ನು ವಿವರಿಸಿದರು. ನಮ್ಮ ಸಂವಿಧಾನದಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡಲು ಅವಕಾಶವಿದೆ. ಆದರೆ ಚುನಾವಣೆಯಲ್ಲಿ ಗೆದ್ದ ಮೇಲೆ ಅವರು ಬೇರೆ ಯಾವುದೇ ಪಕ್ಷಕ್ಕೆ ಸೇರಲು ಆಗುವುದಿಲ್ಲ. ಅದಕ್ಕೆ ಪಕ್ಷಾಂತರ ಕಾಯ್ದೆ ಅಡ್ಡಿ ಬರುತ್ತದೆ. ಹೀಗಾಗಿ ಸ್ವತಂತ್ರ ಶಾಸಕರಾಗಿಯೇ ಉಳಿದ ಅವಧಿಯನ್ನು ಶಾಸಕ ಶರತ್ ಬಚ್ಚೇಗೌಡ ಅವರು ಮುಗಿಸಬೇಕು ಎಂದರು.
ಆದರಿಂದ ನಮ್ಮ ಪಕ್ಷಕ್ಕೆ ಬಾಹ್ಯ ಬೆಂಬಲ ಕೊಟ್ಟಿದ್ದಾರೆ. ಮುಂದೆ ಶಾಸಕಾಂಗ ಸಭೆಗೆ ಬೆಂಬಲ ನೀಡುತ್ತಾರೆ. ನಾನು ಅವರ ಬೆಂಬಲ ಸ್ವೀಕರಿಸಿದ್ದೇನೆ. ಶರತ್ ಕಾಂಗ್ರೆಸ್, ಬಿಜೆಪಿ ವಿರುದ್ಧವೇ ಗೆದ್ದು ಬಂದಿದ್ದಾರೆ. ಆದರೆ ಮುಂದೆ ಒಬ್ಬರೇ ಹೋರಾಟ ಮಾಡುವುದು ಸಾಧ್ಯವಿಲ್ಲ. ನಮ್ಮ ಬೆಂಬಲವಿದ್ದರೆ ಹೋರಾಟಕ್ಕೆ ಮತ್ತಷ್ಟು ಬಲ ಬರಲಿದೆ. ಹಾಗಾಗಿ ನಾವು ಎಲ್ಲ ರಾಜಕೀಯ ಬೆಂಬಲವನ್ನು ಶರತ್ ಬಚ್ಚೇಗೌಡ ಅವರಿಗೆ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಾಹ್ಯ ಬೆಂಬಲ ನೀಡಿದ್ದೇನೆ
ಕಾಂಗ್ರೆಸ್ ಪಕ್ಷದ ಸಹ ಸದಸ್ಯತ್ವ ಪಡೆದುಕೊಂಡ ಬಾಹ್ಯ ಬೆಂಬಲ ಕೊಟ್ಟ ಬಳಿಕ ಶಾಸಕ ಶರತ್ ಬಚ್ಚೇಗೌಡ ಅವರು, ಈಗ ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡಿದ್ದೇನೆ. ಮುಂದೆಯೂ ನಾನು ಸ್ವಾತಂತ್ರ್ಯ ಅಭ್ಯರ್ಥಿಯಾಗಿರುತ್ತೇನೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬೆಂಬಲ ಸ್ವೀಕಾರ ಮಾಡಿದ್ದಾರೆ. ಒಬ್ಬಂಟಿಯಾಗಿ ಹೋರಾಟ ಮಾಡುವ ಬದಲು, ಪಕ್ಷದ ಬೆಂಬಲ ಪಡೆದಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ಈ ನಿರ್ಧಾರ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಲು ಕಾನೂನು ತೊಡಕುಗಳಿವೆ. ಹೀಗಾಗಿ ಹಾಗಾಗಿ ನಾನು ಕಾಂಗ್ರೆಸ್ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡಿದ್ದೇನೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದ್ದಾರೆ.
Recommended Video
ಇವತ್ತು ಗಾಳಕ್ಕೆ ಬಿದ್ದೀರಿ!
ನಾನು ಕಳೆದ 30 ವರ್ಷಗಳಿಂದ ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಗಾಳಿ ಹಾಕುತ್ತಿದ್ದೆ. ಆದರೆ ಗಾಳಕ್ಕೆ ಯಾರೂ ಬಿದ್ದಿರಲಿಲ್ಲ. ಆದರೆ ಇವತ್ತು ನೀವೆಲ್ಲರೂ ಗಾಳಕ್ಕೆ ಬಿದ್ದಿದ್ದೀರ. ನಮ್ಮ ಬೆಂಬಲವನ್ನು ನೀವು ಕೋರಿದ್ದೀರ. ನಾವು ಕೂಡ ನಿಮಗೆ ಅಧಿಕೃತ ಬೆಂಬಲ ಕೊಡುತ್ತೇವೆ. ಇದು ಪಕ್ಷದ ಕಾರ್ಯಕ್ರಮವಲ್ಲ. ಇದು ಶಾಸಕಾಂಗ ಪಕ್ಷದ ಕಾರ್ಯಕ್ರಮ. ಕ್ಷೇತ್ರದ ಅಭಿವೃದ್ಧಿಗೆ ನೀವೆಲ್ಲರೂ ದುಡಿಯಬೇಕು. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಜನರ ಬಾಗಿಲನ್ನು ಸರ್ಕಾರ ಬಡಿಯುತ್ತಿದೆ. ಇದಕ್ಕೆ ಮುಕ್ತಿ ಕೊಡಬೇಕಾದ್ರೆ ನಾವು ಹೋರಾಡಬೇಕು ಎಂದು ಹೊಸಕೋಟೆ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇದೇ ಸಂದರ್ಭದಲ್ಲಿ ಕರೆ ನೀಡಿದರು.