ಈಶಾನ್ಯ ಶಿಕ್ಷಕರ ಕ್ಷೇತ್ರ ಕೈವಶ, ಮಟ್ಟೂರರಿಗೆ ಗೆಲುವು
ಗುಲ್ಬರ್ಗ, ಜೂ.25 : ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಬಿಜೆಪಿಯ ಶಶೀಲ್ ನಮೋಶಿಯವರ ಕನಸು ಭಗ್ನಗೊಂಡಿದೆ. ಮಂಗಳವಾರ ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ್ ಅವರು 2089 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.
ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರವೂ ಸೇರಿತ್ತು. ಜೂ.20ರ ಶುಕ್ರವಾರ ನಡೆದ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಶರಣಪ್ಪ ಮಟ್ಟೂರ್ ಅವರು ಜಯಗಳಿಸಿದ್ದಾರೆ. [ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಮೇಲುಗೈ]
ಈಶಾನ್ಯ ಶಿಕ್ಷಕರು ಕ್ಷೇತ್ರದಲ್ಲಿ ಒಟ್ಟು 31,809 ಮತದಾರರಿದ್ದರು. ಚುನಾವಣೆಯ ದಿನ ಒಟ್ಟು 19,183 ಮತಗಳು ಚಲಾವಣೆಯಾಗಿದ್ದವು. ಇವುಗಳಲ್ಲಿ ಕಾಂಗ್ರೆಸ್ ನ ಶರಣಪ್ಪ ಮಟ್ಟೂರ್ ಅವರು 9022 ಮತಗಳನ್ನು ಪಡೆದು ಜಯಗಳಿಸಿದರೆ, ಬಿಜೆಪಿಯ ಶಶೀಲ್ ನಮೋಶಿ 6,933 ಮತಗಳನ್ನು ಪಡೆದು ದ್ವಿತೀಯ ಸ್ಥಾನಗಳಿಸಿದರು. ಕ್ಷೇತ್ರದಲ್ಲಿ ಹ್ಯಾಟ್ರಿಕ್ ಜಯ ಸಾಧಿಸುವ ನಮೋಶಿ ಅವರ ಕನಸು ಇದರಿಂದ ಭಗ್ನಗೊಂಡಿದೆ.
ಜಯ ಸಾಧಿಸಿದ ಶರಣಪ್ಪ ಮಟ್ಟೂರ್
ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ್ ಜಯಗಳಿಸಿದ್ದಾರೆ. ಎರಡು ಬಾರಿ ಕ್ಷೇತ್ರದಲ್ಲಿ ಜಯಗಳಿಸಿದ್ದ ಬಿಜೆಪಿಯ ಶಶೀಲ್ ನಮೋಶಿ ಅವರನ್ನು ಶರಣಪ್ಪ ಅವರು ಸೋಲಿಸಿದ್ದಾರೆ.
ಯಾರು ಎಷ್ಟು ಮತ ಪಡೆದರು
ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಜಯಗಳಿಸಿದ ಕಾಂಗ್ರೆಸ್ ನ ಶರಣಪ್ಪ ಮಟ್ಟೂರ್ ಅವರು 9022 ಮತಗಳನ್ನು ಪಡೆದರೆ, ಬಿಜೆಪಿಯ ಶಶೀಲ್ ನಮೋಶಿ ಅವರು 6,933 ಮತಗಳನ್ನು ಪಡೆದು ದ್ವಿತೀಯ ಸ್ಥಾನಗಳಿಸಿದರು. ಜೆಡಿಎಸ್ ನ ಎಂ.ಬಿ. ಅಂಬಲಗಿ ಅವರು 953 ಮತಗಳನ್ನು ಪಡೆದು ತೃತೀಯ ಸ್ಥಾನ ಪಡೆದರು. ಉಳಿದಂತೆ ಡಾ.ಎಂ.ಆರ್. ರಂಗನಾಥ 19, ಲಿಂಗರಾಜ್ ಬಿರಾದಾರ್ 766 ಮತ್ತು ಸುಭಾಷಚಂದ್ರ ಭೋಸ್ ಎಲ್.ಪಿ. 46 ಮತಗಳನ್ನು ಪಡೆದಿದ್ದಾರೆ.
19,183 ಮತಗಳು ಚಲಾವಣೆ
ಈಶಾನ್ಯ ಶಿಕ್ಷಕರು ಕ್ಷೇತ್ರದಲ್ಲಿ ಒಟ್ಟು 31,809 ಮತದಾರರಿದ್ದರು. ಜೂ.20ರಂದು ನಡೆದ ಚುನಾವಣೆಯಲ್ಲಿ ಒಟ್ಟು 19,183 ಮತಗಳು ಚಲಾವಣೆಯಾಗಿದ್ದವು. ಇವುಗಳಲ್ಲಿ ಒಟ್ಟು 17,748 ಮತಗಳು ಕ್ರಮಬದ್ದವಾಗಿದ್ದವು, 1,403 ಮತಗಳು ತಿರಸ್ಕೃತವಾಗಿದ್ದು, 32 ನೋಟಾ ಮತಗಳು ಚಲಾವಣೆಯಾಗಿವೆ ಎಂದು ಗುಲ್ಬರ್ಗಾ ವಿಭಾಗದ ಪ್ರಾದೇಶಿಕ ಆಯುಕ್ತ ಮತ್ತು ಚುನಾವಣಾಧಿಕಾರಿ ಡಾ.ಆಮ್ಲನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.
ಶಶಿಲ್ ನಮೋಶಿ ಹ್ಯಾಟ್ರಿಕ್ ಕನಸು ಭಗ್ನ
ವಿಧಾನ ಪರಿಷತ್ ಸದಸ್ಯರಾಗಿದ್ದ ಶಶೀಲ್ ನಮೋಶಿ ಅವರು 2013ರ ವಿಧಾನಸಭೆ ಚುನಾವಣೆಯಲ್ಲಿ ಗುಲ್ಬರ್ಗಾ ಉತ್ತರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿತ್ತು. ಇದರಿಂದ ಕೋಪಗೊಂಡು ಜೆಡಿಎಸ್ ಸೇರಿ ಅದೇ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ಬಿಜೆಪಿಗೆ ಮರಳಿದ್ದರು. ಪಕ್ಷ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಅವರಿಗೆ ಟಿಕೆಟ್ ನೀಡಿತ್ತು.
ಹಿರಿಯ ವಕೀಲರಿಗೆ ಗೆಲುವಿನ ಭಾಗ್ಯ
ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶರಣಪ್ಪ ಮಟ್ಟೂರ್ ಅವರು ಕರ್ನಾಟಕ ಹೈಕೋರ್ಟ್ ನಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗುಲ್ಬರ್ಗ, ಬೀದರ್, ಬಳ್ಳಾರಿ, ರಾಯಚೂರು, ಯಾದಗಿರಿ, ಕೊಪ್ಪಳ ಮತ್ತು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕು ಈಶಾನ್ಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ.