ಆಡಳಿತ ಮಾಡಲಲ್ಲ, ಆಡಳಿತ ಕಲಿಯಲು ರಾಮಚಂದ್ರಾಪುರ ಮಠಕ್ಕೆ ಬನ್ನಿ
ಹೊಸನಗರ, ಅ 8: ಏಳಿ, ಎಚ್ಚರಗೊಳ್ಳಿ, ನಮ್ಮ ರಕ್ಷಣೆಗೋಸ್ಕರ ನಾವು ನಿಮ್ಮನ್ನು ಕರೆಯುತ್ತಿದ್ದೆವೆ ಎಂದು ತಪ್ಪು ತಿಳಿಯಬೇಡಿ, ನಮ್ಮ ರಕ್ಷಣೆಯನ್ನು ನಾವು, ಭಕ್ತರು ಸೇರಿ ಮಾಡಿಕೊಳ್ಳುತ್ತೇವೆ, ಒಂದು ವೇಳೆ ಅನಾಹುತ ಸಂಭವಿಸಿದರೆ, ನಿಮ್ಮ ಮಠಗಳ ಮೇಲಿನ ಆಕ್ರಮಣಕ್ಕೆ ದ್ವಾರ ತೆರೆದುಕೊಳ್ಳುತ್ತದೆ.
ನಾವೆಲ್ಲ ಮಠಾಧೀಶರೂ ಒಟ್ಟಾದರೆ, ಯಾರೂ ಏನು ಮಾಡಲಾರರು, ಎಲ್ಲಾ ಮಠಗಳು ಎಚ್ಚರಗೊಳ್ಳಿ ಎಂದು ಮಠಗಳಿಗೆ ರಾಘವೇಶ್ವರ ಶ್ರೀಗಳು ಕರೆ ನೀಡಿದರು.
ಆಡಳಿತಮಾಡಲಲ್ಲ, ಆಡಳಿತ ಕಲಿಯಲು ರಾಮಚಂದ್ರಾಪುರಮಠಕ್ಕೆ ಬನ್ನಿ. ನಮ್ಮ ಮಠದಲ್ಲಿ ದಕ್ಷ, ಸಜ್ಜನ ಆಡಳಿತಗಾರರಿದ್ದು, ನೆಲದ ಕಾನೂನಿನ ಉಲ್ಲಂಘನೆಯಾಗಿಲ್ಲ, ಧರ್ಮದ ಹಾದಿಯನ್ನೂ ಮಠ ಬಿಟ್ಟಿಲ್ಲ. (ರಾಘವೇಶ್ವರ ಶ್ರೀಗಳ ಸಂದರ್ಶನ)
ಮಠ ಸ್ಥಾಪನೆ ಮಾಡಿದ್ದು ಶಂಕರಾಚಾರ್ಯರು, ಭಕ್ತರು ಕಟ್ಟಿ ಬೆಳೆಸಿದ್ದಾರೆ, ಬೇರೆಯವರಿಗೆ ಇದನ್ನು ಮುಟ್ಟುವ ಹಕ್ಕಿಲ್ಲ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.
ಹೊಸನಗರ ರಾಮಚಂದ್ರಾಪುರ ಮಠದ ಆವರಣದಲ್ಲಿ ಶನಿವಾರ (ಅ 8) ನಡೆದ ಶಪಥಪರ್ವ ಸಮಾವೇಶದಲ್ಲಿ ಸಂದೇಶ ನೀಡಿದ ಶ್ರೀಗಳು, ಎಷ್ಟೇ ಆಕ್ರಮಣ ಮಾಡಿದರೂ ನಮ್ಮಿಂದ ಶಿಷ್ಯವೃಂದ ಹಾಗೂ ನಮ್ಮ ಮುಖದ ನಗು ಕಸಿದುಕೊಳ್ಳಲು ಸಾಧ್ಯವಿಲ್ಲ. ಶಿಷ್ಯರಿಗಾಗಿ ಗುರುಗಳು ತಪಸ್ಸನ್ನಾಚರಿಸುವುದು ಸಾಮಾನ್ಯ, ಆದರೆ ಇಂದು ಗುರುಗಳಿಗಾಗಿ ಶಿಷ್ಯರು ಮೌನ ಹಾಗೂ ಉಪವಾಸದ ಮೂಲಕ ತಪಸ್ಸನ್ನಾಚರಿಸಿದ್ದಾರೆ.
ಇಂತಹ ಶಿಷ್ಯರು ಎಷ್ಟು ದುರ್ಲಭವೋ, ಇಂತಹ ಸರ್ಕಾರಗಳೂ ಕೂಡ ಅಷ್ಟೇ ದುರ್ಲಭ. ಯುದ್ಧ ಸುಲಭ ಆದರೆ ಸಹನೆ ಕಷ್ಟ, ಗುರುಗಳಿಗೆ ಸಹನೆ ಸಹಜ ಹಾಗೂ ಗುರುಗಳ ಸಹನೆಗೆ ಮಿತಿ ಇಲ್ಲ, ಆದರೆ ಶಿಷ್ಯರ ಸಹನೆಗೆ ಮಿತಿ ಇದೆ. ಈ ಕುರಿತು ಸರ್ಕಾರ ಎಚ್ಚರ ವಹಿಸಬೇಕು ಎಂಬ ಸಂದೇಶವನ್ನು ಸರ್ಕಾರಕ್ಕೆ ರಾಘವೇಶ್ವರ ಶ್ರೀಗಳು ನೀಡಿದರು.
ಶಾರೀರಿಕವಾಗಿ, ಬೌದ್ಧಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಒಂದು ಮಠವನ್ನು ನಾಶಪಡಿಸಲು ವರ್ಷಗಳಿಂದ ಪ್ರಯತ್ನ ನಡೆದಿದೆ. ಪುಸ್ತಕದಲ್ಲಿರುವ ಎಲ್ಲಾ ಕಾನೂನುಗಳು ರಾಮಚಂದ್ರಾಪುರ ಮಠವನ್ನು ಪೀಡಿಸಲಿಕ್ಕೆ ಇದೆಯಾ ಎಂದು ಪ್ರಶ್ನಿಸಿದ ಶ್ರೀಗಳು, ಮಠದ ಮೇಲೆ ಯಾವುದೇ ಕ್ರಮಕ್ಕೆ ಮುಂದಾಗುವ ಮುನ್ನ ಸರಿಯಾದ ಕಾರಣ ನೀಡಿ ಮುಂದುವರಿಯಿರಿ ಎಂದು ಆಗ್ರಹಿಸಿದ್ದಾರೆ.
ನಾವು ನ್ಯಾಯಲಯಗಳನ್ನು ಹಾಗೂ ಸರ್ಕಾರವನ್ನೂ ಆಗ್ರಹಿಸುವುದು ಇಷ್ಟೇ, ಕಾನೂನಿನ ಪ್ರಕಾರ ಹೋಗಿ, ಧಾರ್ಮಿಕ ಶ್ರದ್ಧಾ ಕೇಂದ್ರದ ಮೇಲೆ ಅನ್ಯಾಯ ಮಾಡಬೇಡಿ. ಇದುವರೆಗೂ ನಾವು ಯಾವ ಸರಕಾರಕ್ಕೂ ವಿರುದ್ಧವಾಗಿ ಹೋದವರಲ್ಲ.
ಯಾವುದೇ ಒಂದು ಪಕ್ಷ ಬೆಂಬಲಿಸಿ ನಿಂತಿಲ್ಲ. ಎಲ್ಲಿಯೂ ಚುನಾವಣಾ ರಾಜಕೀಯ ಮಾಡಿಲ್ಲ, ನಮ್ಮ ಶಿಷ್ಯರನ್ನು ನಿಮ್ಮ ರಾಜಕೀಯಕ್ಕೆ ಬಳಸಿಲ್ಲ ಹಾಗಿದ್ದರೂ ನಮ್ಮ ಮೇಲೆ ನಿಮ್ಮ ವಿರೋಧವೇಕೆ ಎಂದು ಪ್ರಶ್ನಿಸಿದ ಶ್ರೀಗಳು, ಯಾವ ಹಗರಣವೂ ಇಲ್ಲದ, ಅವ್ಯವಹಾರ ಒಲ್ಲದ ಮಠದ ಮೇಲೆ ನಿಮ್ಮ ಆಕ್ರಮಣ ಸರಿಯೇ, ಜನರಿಗೆ ಉತ್ತರ ಕೊಡಿ ಎಂದು ಶ್ರೀಗಳು ಸರಕಾರವನ್ನು ಒತ್ತಾಯಿಸಿದ್ದಾರೆ. (ಕಾವೇರಿ ವಿಚಾರದಲ್ಲಿ ರಾಘವೇಶ್ವರ ಶ್ರೀಗಳ ನಿಲುವು)
ಗೋಕರ್ಣ ಹೋಗಿ ನೋಡಿ. ಹಿಂದೆ ಬಂದಿದ್ದ ಈಗ ಬರುತ್ತಿರುವ ಭಕ್ತರನ್ನು ಕೇಳಿ. ಮೊದಲು ಲೂಟಿ ಇತ್ತು, ಈಗ ಪ್ರೀತಿ ಇದೆ. ಅಲ್ಲಿ ಕೊಳಕಿತ್ತು. ಈಗ ಸ್ವಚ್ಚತೆ ಇದೆ. ಆಗ ಹಸಿವಿತ್ತು.
ಈಗ ಊಟ ಹಾಕಲಾಗುತ್ತಿದೆ ಇದು ತಪ್ಪಾ? ಬ್ಲಾಕ್ಮೇಲ್ ಮಾಡುವ, ನಕಲಿ ಸಿಡಿ ತಯಾರಿಸುವ ವ್ಯಕ್ತಿಗಳು ಸಾಕ್ಷಿ ಸಮೇತ ಸಿಕ್ಕಿ ಬಿದ್ದಿದ್ದರೂ ಅದು ತಪ್ಪು ಎನ್ನುವುದನ್ನು ನ್ಯಾಯಾಲಯವೂ ಒಪ್ಪಿದ್ದರೂ ಸರಕಾರವೇ ಅವರನ್ನು ರಕ್ಷಿಸುವುದಕ್ಕೆ ಹೋಗುತ್ತದೆ ಎಂದು ಶ್ರೀಗಳು ಬೇಸರ ವ್ಯಕ್ತ ಪಡಿಸಿದರು.
ಇವತ್ತು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು, ಇದೇ ಜಾಗದಲ್ಲಿ ಹೀಗೆಯೇ ಇಷ್ಟೇ ಸಂಖ್ಯೆಯ ಸಂತರನ್ನು ಸೇರಿಸಬಲ್ಲೆವು ನಾವು, ಅದು ಇದಕ್ಕಿಂತ ನೂರ್ಪಟ್ಟು ಪರಿಣಾಮ ಬೀರಬಲ್ಲದು. ಇಂದಿಗೇ ಈ ಎಲ್ಲಾ ಆಕ್ರಮಣಗಳನ್ನು ನಿಲ್ಲಿಸಿ. ಇಲ್ಲದಿದ್ದರೆ ತೀವ್ರ ಪರಿಣಾಮವನ್ನು ಎದುರಿಸಬೇಕಾದೀತು.
ಇಷ್ಟು ದಿನ ನಮ್ಮ ಮೇಲೆ ಆಕ್ರಮಣವಾದಾಗ ನಾವು ಸಹಿಸಿದ್ದೆವು, ಆದರೆ ಮಠದ ಮೇಲೆ ಆಕ್ರಮಣವನ್ನು ಸಹಿಸಲು ಸಾಧ್ಯವಿಲ್ಲ, ಕಾನೂನಿನ ಉಲ್ಲಂಘನೆಯಾಗಿಲ್ಲದಿದ್ದರೂ ಇಂದು ಮೂಲ ಮಠ, ಪ್ರಧಾನ ಮಠ, ಆಡಳಿತ ಕೇಂದ್ರ , ಪೀಠಾಧಿಪತಿಗಳು ಇವೆಲ್ಲವೂ ಪೀಡನೆಗೆ ಒಳಗಾಗಿದೆ. ಮಠದ ರಕ್ಷಣೆಗಾಗಿ ಯಾವುದೇ ತ್ಯಾಗಕ್ಕೂ ಸಿದ್ದರಿದ್ದು, ಪ್ರಾಣಾರ್ಪಣೆಗೂ ಸಿದ್ಧ ಎಂದು ಶ್ರೀಗಳು ಹೇಳಿದರು.
ಇದಕ್ಕೂ ಮೊದಲು ಪ್ರಧಾನ ಮಠದಲ್ಲಿರುವ ಶ್ರೀರಾಮದೇವರಿಗೆ ಪ್ರಾರ್ಥನೆ ಸಲ್ಲಿಸಿ, ಮಠದ ರಕ್ಷಣೆಯ ಶಪಥವನ್ನು ಬೋಧಿಸುವ ಮೂಲಕ ಶಪಥಪರ್ವ ಸಮಾವೇಶಕ್ಕೆ ಶ್ರೀಗಳು ಚಾಲನೆ ನೀಡಿದರು. ಶ್ರೀಮಠಕ್ಕೆ 21 ಬಾರಿ ಆದಿತ್ಯ ಹೃದಯವನ್ನು ಪಠಿಸುತ್ತಾ ಭಕ್ತರೊಂದಿಗೆ ಶ್ರೀಗಳು ಪ್ರದಕ್ಷಿಣೆಹಾಕಿ, ಭಕ್ತರ ಜೊತೆ ಉಪವಾಸ ಕೈಗೊಂಡರು.
ಹೊಸನಗರದಿಂದ ರಾಮಚಂದ್ರಾಪುರಮಠದ ವರೆಗೆ ಬೆಳಗ್ಗೆ ಮೌನ ಪಾದಯಾತ್ರೆ ನಡೆಯಿತು. ಸುಮಾರು 3 ಕಿಲೋಮೀಟರ್ ಉದ್ದಕ್ಕೆ ಈ ಜಾಥಾ ವ್ಯಾಪಿಸಿದ್ದು ಜನತೆ ಮಠದ ಮೇಲೆ ಇಟ್ಟಿರುವ ಶ್ರದ್ಧೆಗೆ ಸಾಕ್ಷಿಯಾಯಿತು.
ಮಂಗಳೂರು, ಬೆಂಗಳೂರು, ಸಾಗರ, ಹೊಸನಗರ, ಹೊನ್ನಾವರ, ಕುಮಟ, ಮುಂಬೈ ಸೇರಿದಂತೆ ರಾಜ್ಯ ಹೊರ ರಾಜ್ಯದ, ಎಲ್ಲಾ ಜಾತಿಮತಕ್ಕೆ ಸೇರಿದ ಸುಮಾರು 30 ಸಾವಿರ ಮಠದ ಶಿಷ್ಯರು ಹಾಗೂ ಅಭಿಮಾನಿಗಳು ಶಪಥಪರ್ವ ಸಮಾವೇಶದಲ್ಲಿ ಭಾಗಿಯಾಗಿದ್ದರು. (ರಾಮಚಂದ್ರಾಪುರ ಮಠದ ಮೇಲೆ ಸರಕಾರದ ಕಣ್ಣು)
ಮಂಗಳೂರಿನ ರಾಜಶೇಖರಾನಂದ ಸ್ವಾಮೀಜಿ, ಕಾಶಿ ಕಪಿಲಾಶ್ರಮದ ರಾಮಚಂದ್ರ ಸ್ವಾಮೀಜಿ ಹಾಗೂ ಗುಲ್ಬರ್ಗಾದ ಪಾಂಡುರಂಗ ಮಹರಾಜ್ ಹಾಗೂ ಅನೇಕ ಜನಪ್ರತಿನಿಧಿಗಳು ಶಪಥಪರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇಷ್ಟೇ ಅಲ್ಲದೇ, ಬೇರೆ ಬೇರೆ ಸ್ಥಳದಲ್ಲಿ ಹಾಗೂ ವಿದೇಶದಲ್ಲಿ ನೆಲಸಿರುವ ಮಠದ ಸುಮಾರು ಐದು ಲಕ್ಷ ಭಕ್ತರು ಇದೇ ಸಮಯದಲ್ಲಿ ಮೌನ ಹಾಗೂ ಉಪವಾಸ ಕೈಗೊಳ್ಳುವ ಮೂಲಕ ಅಲ್ಲಿಂದಲೇ ತಮ್ಮ ಧ್ವನಿಯನ್ನು ಸೇರಿಸಿ ಮಠದೊಂಡಿಗೆ ನಾವಿದ್ದೇವೆ ಎಂದರು.