ಬಿದರಿ ಯಾವ ಪಕ್ಷ ಸೇರ್ತಾರೆ?, ಜ.23ಕ್ಕೆ ನಿರ್ಧಾರ
ಕಳೆದ ಒಂದು ವರ್ಷದ ಅವಧಿಯಲ್ಲಿ ಎರಡು ಪಕ್ಷಗಳನ್ನು ತೊರೆದು ಸೂಕ್ತ ಪಕ್ಷದ ಹುಡುಕಾಟದಲ್ಲಿರುವ ಶಂಕರ ಬಿದರಿ ಜ.23ರಂದು ತಮ್ಮ ಮುಂದಿನ ನಿರ್ಧಾರ ಪ್ರಕಟಿಸಲಿದ್ದಾರೆ. ಸುಭಾಷ್ಚಂದ್ರ ಬೋಸ್ ಅವರ ಜನ್ಮದಿನವಾದ 23ರಂದು ನನ್ನ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ. ಇನ್ನು ವಿಳಂಬ ಮಾಡುವುದಿಲ್ಲ ಎಂದು ಬಿದರಿ ಅವರು ತಿಳಿಸಿದ್ದಾರೆ. [ಬಿಜೆಪಿಯತ್ತ ಶಂಕರ ಬಿದರಿ]
ಆದರೆ, ಬಿದರಿ ಯಾವ ಪಕ್ಷ ಸೇರುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ರಾಷ್ಟ್ರೀಯ ಪಕ್ಷಕ್ಕೆ ಸೇರುತ್ತೇನೆ ಎಂದು ಬಿದರಿ ಹೇಳಿದ್ದರು. ಆದ್ದರಿಂದ ಅವರು, ಬಿಜೆಪಿಗೆ ಸೇರುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಮಾಜಿ ಸಚಿವ ಗೋವಿಂದ ಕಾರಜೋಳ ಅವರ ಜೊತೆ ಚರ್ಚೆ ನಡೆಸಿರುವ ಶಂಕರ ಬಿದರಿ, ಬಿಜೆಪಿ ಸೇರುವ ಸಾಧ್ಯತೆ ಇದೆ. [ಬಿದರಿ ಕೈ ತಪ್ಪಿದ ರಾಜ್ಯಾಧ್ಯಕ್ಷ ಸ್ಥಾನ]
ತಾವು ಪಕ್ಷ ಸೇರಿದರೆ ಲೋಕಸಭೆ ಚುನಾವಣೆ ಟಿಕೆಟ್ ನೀಡಬೇಕು ಎಂಬ ಷರತ್ತನ್ನು ಶಂಕರ ಬಿದರಿ ಮುಂದಿಡದೆ ಪಕ್ಷ ಸೇರಲಿದ್ದಾರೆ ಎಂದು ತಿಳಿದು ಬಂದಿದೆ. ಅಂತೂ ಜ.23ರಂದು ಶಂಕರ ಬಿದರು ತಮ್ಮ ಮುಂದಿನ ರಾಜಕೀಯ ನಡೆಯನ್ನು ಬಹಿರಂಗ ಪಡಿಸಲಿದ್ದಾರೆ.
ರಾಜಕಾರಣಕ್ಕೆ ಬಂದ ಕೆಲವು ತಿಂಗಳುಗಳಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷಗಳನ್ನು ತೊರೆದಿದ್ದ ಶಂಕರ ಬಿದರಿ ಮುಂದೆ ಯಾವ ಪಕ್ಷ ಸೇರುತ್ತಾರೆ ಎಂಬ ಕುತೂಹಲವಿತ್ತು. ಆಮ್ ಆದ್ಮಿ ಪಕ್ಷ ಮತ್ತು ಬಿಎಸ್ ಪಿ ಪಕ್ಷಗಳು ಅವರಿಗೆ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದರು.
ಕರ್ನಾಟಕದಲ್ಲಿ ಹೆಚ್ಚು ಪ್ರಭಾವ ಹೊಂದಿರುವ ರಾಷ್ಟ್ರೀಯ ಪಕ್ಷ ಸೇರುವುದಾಗಿ ಹೇಳಿದ್ದ ಶಂಕರ ಬಿದರಿ ಇಷ್ಟು ದಿನ ಆಲೋಚನೆ ಮಾಡಿ ಅಂತಿಮ ನಿರ್ಧಾರ ಪ್ರಕಟಿಸಲು ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಶಂಕರ ಬಿದರಿ ಯಾವ ಪಕ್ಷ ಸೇರುತ್ತಾರೆ ಎಂದು ತಿಳಿಯಲು ಜ.23ತನಕ ಕಾಯಬೇಕಾಗಿದೆ.