ಬಾಗಲಕೋಟೆಯಲ್ಲಿ ಬಿದರಿಗೆ ಗೆಲುವಿನ ವಿಶ್ವಾಸ
ಬಾಗಲಕೋಟೆ, ಮಾ. 22 : ಬಾಗಲಕೋಟೆ ಜಿಲ್ಲೆಯಲ್ಲಿನ ಚುನಾವಣಾ ಕಣ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಪಕ್ಷೇತರರಾಗಿ ಜನಶಕ್ತಿ ಪಕ್ಷದ ಸಂಸ್ಥಾಪಕ ಮತ್ತು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಸ್ಪರ್ಧಿಸಿರುವುದು ಗೆಲುವು ಯಾರಿಗೆ ಎಂಬ ಕುತೂಹಲವನ್ನು ಹುಟ್ಟು ಹಾಕಿದೆ.
ಬಾಗಲಕೋಟೆಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಈಗಾಗಲೇ ಶಂಕರ ಬಿದರಿ ನಾಮಪತ್ರ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಚುನಾವಣಾ ಕಚೇರಿಯನ್ನು ಆರಂಭಿಸಿ ಕ್ಷೇತ್ರದ ತುಂಬಾ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಹೊರತು ಪಡಿಸಿ ಉಳಿದ ಪಕ್ಷಗಳು ತಮ್ಮ ಗೆಲುವಿಗಾಗಿ ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ರಾಜ್ಯ, ದೇಶದ ರಾಜಕೀಯ ವ್ಯವಸ್ಥೆ ಅಧೋಗತಿಗೆ ಇಳಿದಿದೆ. ಸಮಾಜ ಒಡೆದು ಆಳುವಲ್ಲಿ ಎರಡು ಪ್ರಮುಖ ರಾಜಕೀಯ ಪಕ್ಷ ನಿರತವಾಗಿದ್ದು, ವ್ಯವಸ್ಥೆ ಸರಿಪಡಿಸಲು ರಾಜಕೀಯಕ್ಕೆ ಧುಮುಕಿದ್ದೇನೆ ಹೊರತು ಲಾಭ ಪಡೆಯಲು ಅಲ್ಲ ಎಂದು ಶಂಕರ ಬಿದರಿ ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಚಿತ್ರಗಳಲ್ಲಿ ಶಂಕರ ಬಿದರಿ ಪ್ರಚಾರ
ವಿಭಿನ್ನ ಪ್ರಚಾರ
ನಾನು ಮತ ನೀಡುವಂತೆ ಹಣ, ಹೆಂಡದ ಆಮಿಷ ಒಡ್ಡುವುದಿಲ್ಲ. ನಾನು ಪ್ರಾಮಾಣಿಕನಿದ್ದೇನೆ ನನ್ನ ಸಾಮರ್ಥ್ಯ ನೋಡಿ ನನಗೆ ಮತ ಹಾಕಿ, ಜನರ ಕಷ್ಟು ಸುಖಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಸಹಾಯ ಮಾಡುತ್ತೇನೆ ಎಂದು ಶಂಕರ ಬಿದರಿ ಮತ ಕೇಳುತ್ತಿದ್ದಾರೆ.
ಉದ್ಯೋಗ ಮಾಗದರ್ಶಿ ಆರಂಭಿಸುವೆ
ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ನನ್ನ ಮಕ್ಕಳಂತೆ ಐಪಿಎಸ್ ಹಾಗೂ ಐಎಎಸ್ ಆಗಬೇಕು ಎನ್ನುವುದು ನನ್ನ ಅಭಿಲಾಷೆ. ಆದ್ದರಿಂದ ಚುನಾವಣೆಯಲ್ಲಿ ಸೋಲಲಿ, ಗೆಲ್ಲಲಿ. ಅಗಷ್ಟ್ 15 ರಂದು ಬಾಗಲಕೋಟೆ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳಲ್ಲಿ ಉದ್ಯೋಗ ಮಾರ್ಗದರ್ಶಿ ಕೇಂದ್ರ ಪ್ರಾರಂಭಿಸುತ್ತೇನೆ ಎಂದು ಬಿದರಿ ಘೋಷಿಸಿದ್ದಾರೆ.
ಅಬ್ಬರದ ಪ್ರಚಾರ
ಬಿಎಡ್ ಕಾಲೇಜುಗಳು, ಬಾರ್ ಅಸೋಸಿಯೇಷನ್ ಗಳು, ವಿವಿಧ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವ ಶಂಕರ ಬಿದರಿ ಅವರು ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಪ್ರಾಮಾಣಿಕನಾದ ನನಗೆ ಮತ ನೀಡಬೇಕೆಂದು ಜನರಿಗೆ ಮನವಿ ಮಾಡುತ್ತಿದ್ದಾರೆ.
ಎದುರಾಳಿಗಳು
2009ರ ಚುನಾವಣೆಯಲ್ಲಿ 413,272 ಮತಗಳನ್ನು ಪಡೆದು ಜಯಗಳಿಸಿರುವ ಬಿಜೆಪಿಯ ಪಿಸಿ ಗದ್ದಿಗೌಡರ್ ಈ ಬಾರಿಯು ಬಿಜೆಪಿ ಅಭ್ಯರ್ಥಿ. ಇನ್ನು ಕಾಂಗ್ರೆಸ್ ಪಕ್ಷದಿಂದ ಅಜಯ್ ಸರನಾಯಕ್ ಕಣಕ್ಕೆ ಇಳಿದಿದ್ದಾರೆ. ಆದರೆ, ಜೆಡಿಎಸ್ ಇನ್ನೂ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ. ಬಾಗಲಕೋಟೆ ಲೋಕಸಭಾ ವ್ಯಾಪ್ತಿಯಲ್ಲಿ ಮುಧೋಳ, ತೆರೆದಾಳ, ಜಮಖಂಡಿ, ಬೀಳಗಿ, ಬಾದಾಮಿ, ಬಾಗಲಕೋಟೆ, ಹುನಗುಂದ, ನರಗುಂದ ಕ್ಷೇತ್ರಗಳು ಒಳಪಡುತ್ತವೆ.
ಉಳಿದ ಪಕ್ಷಗಳ ಬೆಂಬಲ
ಜನಶಕ್ತಿ ಪಕ್ಷ ನೋಂದಣಿಯಾಗದ ಕಾರಣ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ. ಜೆಡಿಎಸ್, ಎನ್ಸಿಪಿ ಸೇರಿದಂತೆ ಅನೇಕ ಪಕ್ಷಗಳ ಬೆಂಬಲ ಕೋರಿದ್ದು, ಕೆಲವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎಂದು ಹೇಳುತ್ತಿರುವ ಶಂಕರ ಬಿದರಿ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ಬಿದರಿ ಅವರಿಗೆ ಬೆಂಬಲ ನೀಡುತ್ತದೆಯೇ ಎಂದು ಕಾದು ನೋಡಬೇಕು. (ಚಿತ್ರಕೃಪೆ : ಶಂಕರ ಬಿದರಿ ಫೇಸ್ ಬುಕ್]