ನಿತ್ಯಾನಂದನ ಸುತ್ತಿದ ಪ್ರಕರಣದ ಸಿಂಹಾವಲೋಕನ
ಬೆಂಗಳೂರು, ಸೆ. 8: ಅದು 2010ರ ಮಾರ್ಚ್ 2. ಬೆಳಗ್ಗೆ ಸುದ್ದಿ ವಾಹಿನಿ ಆನ್ ಮಾಡಿದವರಿಗೆ ಅಂದಿನ ಮಾಡರ್ನ್ ಸ್ವಾಮೀಜಿ ಖ್ಯಾತಿಯ ಬಿಡದಿ ನಿತ್ಯಾನಂದನ ರಾಸಲೀಲೆ ವಿಡಿಯೋ ಪ್ರಸಾರವಾಗುತ್ತಿದುದು ಬೇಡವೆಂದರೂ ಕಣ್ಣಿಗೆ ಬಿತ್ತು. ಏಕಕಾಲಕ್ಕೆ ಕರ್ನಾಟಕ ಮತ್ತು ತಮಿಳುನಾಡಲ್ಲಿ ಕೋಲಾಹಲ ಸೃಷ್ಟಿಯಾಯಿತು.
ಬಿಡದಿ ಸ್ವಾಮೀಜಿ ನಿತ್ಯಾನಂದನ ಸಿಡಿ ಪ್ರವರ ಆರಂಭವಾಗಿ ನಾಲ್ಕು ವರ್ಷಗಳೇ ಉರುಳಿದ್ದು ಇದೀಗ ಪುರುಷತ್ವ ಪರೀಕ್ಷೆವರೆಗೆ ಬಂದು ನಿಂತಿದೆ. ಅನೇಕ ವಿವಾದಗಳು, ಬಂಧನ , ಬಿಡುಗಡೆ, ಜಾಮೀನು, ಮನವಿ, ಮೇಲ್ಮನವಿ, ಚಾನಲ್ಗಳ ಪ್ಯಾನಲ್ ಡಿಸ್ಕಷನ್, ಹೈಕೋರ್ಟ್ ಮತ್ತು ಸುಪ್ರಿಂ ಕೋರ್ಟ್ ಘಟನಾವಳಿಗಳು.. ಎಲ್ಲವೂ ಸದ್ಯಕ್ಕೆ ಅಂತ್ಯವಾಗುವ ಲಕ್ಷಣ ಕಾಣುತ್ತಿಲ್ಲ.(ಪುರುಷತ್ವ ಪರೀಕ್ಷೆ ಎಂದರೇನು? ಏಕೆ ಮಾಡ್ಬೇಕು?)
ದಕ್ಷಿಣ ಭಾರತದ ನಟಿ ಜತೆ ಸ್ವಾಮಿ ನಿತ್ಯಾನಂದ ರಾಸಲೀಲೆಯಲ್ಲಿ ತೊಡಗಿರುವಂತೆ ಕಂಡುಬರುತ್ತಿದ್ದ ವಿಡಿಯೋ ಮುಂದೆ ದೊಡ್ಡದೊಂದು ಹಗರಣದ ಸರಮಾಲೆಯಾಗುತ್ತದೆ ಎಂದು ಅಂದು ಯಾರು ಅಂದುಕೊಂಡಿರಲಿಲ್ಲ. ನಿತ್ಯಾನಂದ ಸ್ವಾಮೀಜಿ ಕಾರು ಚಾಲಕ ಲೆನಿನ್ ತಾನೇ ವಿಡಿಯೋ ಮಾಡಿದ್ದು ಎಂದು ಹೇಳಿಕೊಂಡಿದ್ದರು.
ಅಂದು ಪ್ಲೇ ಆಗಲು ಆರಂಭಿಸಿದ ಸಿಡಿ ಇಂದಿಗೂ ಹೊಸ ಹೊಸ ಕಾರ್ಯಕ್ರಮ ಬಿತ್ತರಿಸುತ್ತಲೇ ಇದೆ. 'ನಿತ್ಯಾನಂದ ಸಿಡಿ ಲೀಲೆ' ನಡೆದುಬಂದ ದಾರಿಯ ಒಂದು ಸಣ್ಣ ಝಲಕ್ ನಿಮಗಾಗಿ.......
2010ರ ಮಾರ್ಚ್ 2
ತಮಿಳು ನಾಡಿನ ಹೆಸರುವಾಸಿ ಚಾನಲ್ ಸನ್ ಟಿವಿ ನಿತ್ಯಾನಂದನ ರಾಸಲೀಲೆ ವಿಡಿಯೋವನ್ನು ಸಾರ್ವಜನಿಕರ ಮುಂದೆ ಮೊದಲು ತಂದಿತು. ನಂತರ ಕರ್ನಾಟಕದ ಸುದ್ದಿ ವಾಹಿನಿಗಳಿಗೂ ಇದು ಆಹಾರವಾಯಿತು.
ಚಾಲಾಕಿ ಡ್ರೈವರ್ ಲೆನಿನ್ ಕುರುಪ್ಪನ್
ನಿತ್ಯಾನಂದ ಸ್ವಾಮೀಜಿ ಮಾಜಿ ಕಾರು ಚಾಲಕ ಲೆನಿನ್ ತಾನೇ ವಿಡಿಯೋ ಮಾಡಿದ್ದಾಗಿ ಹೇಳಿಕೊಂಡರು. ಅಲ್ಲದೇ ಇದನ್ನು ಯು ಟ್ಯುಬ್ಗೂ ಅಪ್ ಲೋಡ್ ಮಾಡಿದ್ದೇನೆ. ನನಗೆ ನಿತ್ಯಾನಂದ ಜೀವ ಬೆದರಿಕೆ ಹಾಕಿದ್ದರು ಎಂದು ಗಂಭೀರ ಆರೋಪ ಮಾಡಿದರು.
ರಾಸಲೀಲೆಯಲ್ಲಿದ್ದ ನಟಿ ಯಾರು?
ಮೊದಲಿಗೆ ಯಾವ ಸುದ್ದಿ ವಾಹಿನಿಯವರು ರಾಸಲೀಲೆಯಲ್ಲಿ ಭಾಗವಹಿಸಿದ್ದ ನಟಿ ಯಾರು ಎಂಬುದನ್ನು ಬಹಿರಂಗ ಪಡಿಸಿರಲಿಲ್ಲ. 'ರ'ಕಾರದಿಂದ ಹೆಸರು ಆರಂಭವಾಗುವ ನಟಿ ಎಂದಷ್ಟೇ ಹೇಳಿ ಜನರಕಲ್ಲಿ ಕುತೂಹಲದ ಕಾವು ಮತ್ತಷ್ಟು ಏರುವಂತೆ ಮಾಡಿದ್ದವು.
ಆರೋಪ ತಳ್ಳಿಹಾಕಿದ ನಿತ್ಯಾನಂದ
ಇತ್ತ ಮಾಧ್ಯಮಗಳು ವರದಿ ಮಾಡುತ್ತಿದ್ದರೆ ನಿತ್ಯಾನಂದ ಸ್ವಾಮೀಜಿ ನಾಪತ್ತೆಯಾಗಿದ್ದ. ನಿತ್ಯಾನಂದ ಶಿಷ್ಯರು ಆರೋಪಗಳು ಸುಳ್ಳು ಎಂದು ಪ್ರತಿವಾದ ಶುರುವಿಟ್ಟುಕೊಂಡರು. ಅಂತೂ ಕೊನೆಗೆ ಮಾಧ್ಯಮದೆದುರು ಪ್ರತ್ಯಕ್ಷನಾದ ನಿತ್ಯಾನಂದ ಇದೆಲ್ಲಾ ಬರಿ ಸುಳ್ಳು ಎಂದಷ್ಟೇ ಹೇಳಿದ.
ನಿತ್ಯಾ ಬಂಧನ
ಆರೋಪ-ಪ್ರತ್ಯಾರೋಪಗಳು ನಡೆಯುತ್ತಿರುವಂತೆ ಕರ್ನಾಟಕ ಮತ್ತು ಹಿಮಾಚಲ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಅರ್ಕಿಯಲ್ಲಿ ಏಪ್ರಿಲ್ 22, 2010ರಲ್ಲಿ ನಿತ್ಯಾನಂದನನ್ನು ಬಂಧಿಸಿ ಕರೆತರುತ್ತಾರೆ. ಒಂದು ತಿಂಗಳಿಂದ ತಲೆ ಮರೆಸಿಕೊಂಡಿದ್ದ ಸ್ವಾಮೀಜಿ ಪೊಲೀಸರ ವಶಕ್ಕೆ ಸಿಕ್ಕಿಬೀಳುತ್ತಾರೆ.
ಮಂಪರು ಪರೀಕ್ಷೆ-ಜಾಮೀನು ಅರ್ಜಿ ವಜಾ
ಸತ್ಯಾಸತ್ಯತೆ ಬಯಲಿಗೆಳೆಯಲು ಮುಂದಾದ ಪೊಲೀಸರು ನಿತ್ಯಾನಂದನಿಗೆ ಮಂಪರು ಪರೀಕ್ಷೆ ನಡೆಸುತ್ತಾರೆ. ಅತ್ತ ನಿತ್ಯಾನಂದ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸುತ್ತಾರೆ. ಆದರೆ ನ್ಯಾಯಾಲಯ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸುತ್ತಲೇ ಇರುತ್ತದೆ.
ಜೈಲಿನಿಂದ ಹೊರಬಂದ ಬಿಡದಿ ಸ್ವಾಮಿ
54 ದಿನಗಳ ಕಾಲ ಜೈಲಿನಲ್ಲಿದ್ದ ನಿತ್ಯಾನಂದ ಜಾಮೀನಿನ ಮೇಲೆ ಜೂನ್ 11, 2010ರಂದು ಬಿಡುಗಡೆಯಾಗಿ ಹೊರಬರುತ್ತಾನೆ. ಷರತ್ತುಬದ್ಧ ಜಾಮೀನಿನ ಮೂಲಕ ಬಿಡುಗಡೆ ಮಾಡಲಾಗುತ್ತದೆ.
ನಿತ್ಯಾ ಬಂಧನಕ್ಕೆ ಡಿವಿಎಸ್ ಆದೇಶ
ಬಿಡದಿ ಆಶ್ರಮ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ನಿತ್ಯಾ ಶಿಷ್ಯರ ಉಪಟಳ ಹೆಚ್ಚಿದೆ ಇನ್ನು ಮುಂತಾದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಜೂನ್ 11, 2012ರಂದು ನಿತ್ಯಾನಂದ ಬಂಧನಕ್ಕೆ ಆದೇಶ ನೀಡುತ್ತಾರೆ.
ಪುರುಷತ್ವ ಪರೀಕ್ಷೆಗೆ ಆದೇಶ
ನಿತ್ಯಾನಂದ ತಾನು ಪುರುಷನೇ ಅಲ್ಲ ಹಾಗಾಗಿ ಈ ಆರೋಪಗಳಿಂದ ಮುಕ್ತ ಮಾಡಬೇಕು ಎಂದು ವಾದಿಸಸುತ್ತಾನೆ. ಆದರೆ ಇದನ್ನು ಒಪ್ಪದ ನ್ಯಾಯಾಲಯ ಅಂತಿಮವಾಗಿ ಜೂನ್ 16, 2014 ರಂದು ಪುರುಷತ್ವ ಪರೀಕ್ಷೆ ನಡೆಯಲೆಬೇಕು ಎಂದು ಆದೇಶ ನೀಡುತ್ತದೆ.