ಗದಗಿನ ಜನ ಜಾನುವಾರುಗಳಿಗೆ ನೀರು ಮೇವಿಗೆ ಡಿಸಿ ಆದೇಶ
ಗದಗ, ಮಾರ್ಚ್ 18 : ಭೀಕರ ಬರಗಾಲದಿಂದಾಗಿ ನೀರು ಮೇವಿಲ್ಲದೆ ಕಂಗೆಟ್ಟಿರುವ ಜಾನುವಾರುಗಳಿಗೆ ಮೇವು ಮತ್ತು ಜನರಿಗೆ ಕುಡಿಯುವ ನೀರು ಕೂಡಲೆ ಒದಗಿಸಬೇಕೆಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಗದಗ ಜಿಲ್ಲೆಯ ಹುಲಕೋಟಿಯ ಕೆ.ಎಚ್.ಪಾಟೀಲ ಸಮುದಾಯ ಭವನದಲ್ಲಿ ಶನಿವಾರ ನಡೆದ ಹೋಬಳಿ ಮಟ್ಟದ ಜನಸ್ಪಂದನ ಸಭೆಯಲ್ಲಿ ಜಿಲ್ಲಾಧಿಕಾರಿ ಮನೋಜ್ ಜೈನ್ ಅವರು ಅಧಿಕಾರಿಗಳಿಗೆ ಆದೇಶ ನೀಡಿದರು.
ಹುಲಕೋಟಿ, ಅಂತೂರ-ಬೆಂತೂರ, ಅಸುಂಡಿ, ಬೆಳಧಡಿ, ಹತಿ೯, ಚಿಂಚಲಿ, ಯಲಿಶಿರೂರ, ಸೊರಟೂರು, ನಾಗಾವಿ, ಕುತ೯ಕೋಟಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯನ್ನು ಹೊಂದಿರುವ ಈ ಹೋಬಳಿಯಯಲ್ಲಿ ಜನತೆಗೆ ಕುಡಿಯುವ ನೀರಿನ ಪೂರೈಕೆ, ಜಾನುವಾರುಗಳಿಗೆ ಮೇವು ಒದಗಿಸಬೇಕೆಂದು ಅವರು ಹೇಳಿದರು.
ಕುಡಿಯುವ ನೀರು : ಈಗಾಗಲೇ ಇರುವ ಕೊಳವೆ ಬಾವಿಗಳ ಪುನಶ್ಚೇತನಕ್ಕೆ, ಉತ್ತಮವಾಗಿ ನೀರು ದೊರೆಯುವ ಖಾಸಗಿ ಕೊಳವೆ ಬಾವಿಗಳಿಂದ ನೀರು ಪಡೆಯಲು ಆದ್ಯತೆ ನೀಡಲು ಜಿಲ್ಲಾದಿಕಾರಿ ಸೂಚನೆ ನೀಡಿದರು.
ಗ್ರಾಮ ಪಂಚಾಯ್ತಿಗಳಿಂದ ಬಂದಿರುವ 14ನೇ ಹಣಕಾಸು ಆಯೋಗದ ಅನುದಾನ ಹಾಗೂ ಜಿಲ್ಲಾ ಟಾಸ್ಕ್ ಫೋರ್ಸ್ ಅನುದಾನ ಒಟ್ಟುಗೂಡಿಸಿ ಶಾಶ್ವತ ಕುಡಿಯುವ ನೀರಿನ ಪೂರೈಕೆ ಕಾಮಗಾರಿಗೆ ಪ್ರಾಮುಖ್ಯತೆ ನೀಡಿ, ಖಾಸಗಿ ಕೊಳವೆ ಬಾವಿಗಳ ಮಾಲಿಕರು ನೀರು ಕೊಡುವಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಮನವೊಲಿಸಬೇಕು ಎಂದು ಮನವಿ ಮಾಡಿದರು.
ಮೇವು ಗೋಶಾಲೆ : ಜಾನುವಾರುಗಳ ಸಂಖ್ಯೆಯನ್ನು ಅನುಸರಿಸಿ ಮೇವು ಲಭ್ಯತೆ ಖಚಿತ ಪಡಿಸಿಕೊಳ್ಳಿ, ಗೋಶಾಲೆಗೆ ಗ್ರಾ.ಪಂ. ಯೋಜನಾಧಿಕಾರಿಗಳು ಕಡ್ಡಾಯವಾಗಿ, ನಿಯಮಿತವಾಗಿ ಭೇಟಿ ನೀಡಬೇಕು. ಮೇವು ಲಭ್ಯತೆ, ನೀರು ಹಾಗೂ ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯ ಪ್ರತಿಯೊಂದು ಗ್ರಾ.ಪಂ.ಗೆ ಬರ ಸಮಸ್ಯೆ ಕುರಿತಂತೆ ನೋಡಲ್ ಅಧಿಕಾರಿಗಳು ಕಡ್ಡಾಯವಾಗಿ ಭೇಟಿ ನೀಡಿ ಸಮಸ್ಯೆಗಳ ಕುರಿತು ತಹಶಿಲ್ದಾರರ ಹಾಗೂ ತಾಲೂಕು ನೋಡಲ್ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಮನೋಜ್ ಜೈನ್ ತಿಳಿಸಿದರು.
ಉದ್ಯೋಗ ಖಾತ್ರಿ : ಉದ್ಯೋಗ ಖಾತ್ರಿಗೆ ನೋಂದಣಿ ಮಾಡಿಕೊಂಡು ಕಾರ್ಡು ನೀಡುವುದು, ಉದ್ಯೋಗ ಕೇಳಿದವರಿಗೆ ಉದ್ಯೋಗ ಒದಗಿಸುವದು ಗ್ರಾಮ ಪಂಚಾಯ್ತಿ ಪಿಡಿಓ ಗಳ ಜವಾಬ್ದಾರಿ. ಕೂಲಿ ಹಣ ನಿಗದಿತ ಅವಧಿಯೊಳಗೆ ನೀಡಿ ಈ ಕುರಿತು ಏನೇ ದೂರು ಬಂದರೂ ಪಿಡಿಓಗಳನ್ನು ಹೊಣೆ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯ್ತಿ ಸಿಇಓ ಮಂಜುನಾಥ ಚವ್ಹಾಣ ಎಚ್ಚರಿಕೆ ನೀಡಿದರು.