ಈ ಏಳು ಜನ ಗೆದ್ದರೆ ಅಸೆಂಬ್ಲಿಗೆ ಮತ್ತೆ ಮರು ಚುನಾವಣೆ
ನಾಮಪತ್ರ ಹಿಂದಕ್ಕೆ ಪಡೆಯುವ ದಿನಾಂಕ ಮುಗಿಯುತ್ತಿದ್ದಂತೆ ಲೋಕಸಭಾ ಚುನಾವಣೆಗೆ ವೇದಿಕೆ ಸಜ್ಜಾಗಿದೆ ಮತ್ತು ಕ್ಷೇತ್ರದ ಅಭ್ಯರ್ಥಿ ಯಾರು ಎನ್ನುವ ಹಲವು ಊಹಾಪೋಹ, ಕುತೂಹಲಗಳಿಗೂ ತೆರೆ ಬಿದ್ದಿದೆ.
ವಿಧಾನ ಪರಿಷತ್ತಿನ ಇಬ್ಬರು ಸದಸ್ಯರು ಸೇರಿದಂತೆ ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು ಒಂಬತ್ತು ಮಂದಿ ಹಾಲಿ ಶಾಸಕರು ಕಣದಲ್ಲಿದ್ದಾರೆ. ಡಿ ವಿ ಸದಾನಂದ ಗೌಡ ಮತ್ತು ಸಿ ಎಚ್ ವಿಜಯಶಂಕರ್ ವಿಧಾನ ಪರಿಷತ್ ಸದಸ್ಯರು. ಸದಾನಂದ ಗೌಡ ಮತ್ತು ವಿಜಯಶಂಕರ್ ಬಿಜೆಪಿ ಟಿಕೆಟಿನಿಂದ ಕ್ರಮವಾಗಿ ಬೆಂಗಳೂರು ಉತ್ತರ ಮತ್ತು ಹಾಸನ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. [ಮೋದಿ ಭಾಷಣ ಕನ್ನಡದಲ್ಲಿ ಆಲಿಸಿರಿ]
ಸದಾನಂದ ಗೌಡರ ಪರಿಷತ್ ಸದಸ್ಯತ್ವದ ಅವಧಿ ಇದೇ ಜೂನ್ 30ಕ್ಕೆ ಮತ್ತು ವಿಜಯಶಂಕರ್ ಅವರ ವಿಧಾನ ಪರಿಷತ್ ಅವಧಿ ಜೂನ್ 14, 2016ರಂದು ಮುಕ್ತಾಯವಾಗಲಿದೆ. ಇವರಿಬ್ಬರಲ್ಲದೇ ಏಳು ಮಂದಿ ಚುನಾಯಿತ ಶಾಸಕರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ವಿವಿಧ ಪಕ್ಷಗಳಿಂದ ಆಖಾಡಕ್ಕೆ ಇಳಿದಿರುವ ಈ ಏಳು ಅಭ್ಯರ್ಥಿಗಳಲ್ಲಿ ಯಾರೊಬ್ಬರೂ ಗೆದ್ದರೂ, ರಾಜ್ಯ ಮತ್ತೊಂದು ಮರು ಅಸೆಂಬ್ಲಿ ಚುನಾವಣೆಗೆ ಸಾಕ್ಷಿಯಾಗಬೇಕಿದೆ. ಕಣದಲ್ಲಿರುವ ಏಳು ಮಂದಿ ಹಾಲಿ ಶಾಸಕರಾರು? ಸ್ಲೈಡಿನಲ್ಲಿ ನೋಡಿ..
ಎ ಮಂಜು
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆ ಅರಕಲಗೂಡು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟಿನಿಂದ ಗೆದ್ದಿರುವ ಎ ಮಂಜು ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಹಾಸನದಲ್ಲಿ ಜೆಡಿಎಸ್ ನಿಂದ ಮಾಜಿ ಪ್ರಧಾನಿ ದೇವೇಗೌಡ, ಕಾಂಗ್ರೆಸ್ಸಿನಿಂದ ಎ ಮಂಜು ಮತ್ತು ಬಿಜೆಪಿಯಿಂದ ಸಿ ಎಚ್ ವಿಜಯಶಂಕರ್ ಸ್ಪರ್ಧಿಸುತ್ತಿದ್ದಾರೆ. ಮಂಜು ಈ ಕ್ಷೇತ್ರದಿಂದ ಜಯಗಳಿಸಿದರೆ ಅರಕಲಗೂಡು ಅಸೆಂಬ್ಲಿ ಕ್ಷೇತ್ರಕ್ಕೆ ಮರುಚುನಾವಣೆ ನಡೆಯಬೇಕಿದೆ. ಹಾಗೇ, ವಿಜಯಶಂಕರ್ ಗೆದ್ದರೆ ಪರಿಷತ್ತಿನ ಒಂದು ಸ್ಥಾನ ಖಾಲಿಯಾಗಲಿದೆ. (photo courtesy : www.arkalgudmanju.com)
ಬಿ ಶ್ರೀರಾಮುಲು
BSR ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಬಳ್ಳಾರಿ ಅಸೆಂಬ್ಲಿ ಕ್ಷೇತ್ರದಿಂದ ಗೆದ್ದಿದ್ದ ಶ್ರೀರಾಮುಲು ಈಗ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಬಿಜೆಪಿಯಿಂದ ಹೊರಬಂದು ಹೊಸ ಪಕ್ಷ ಸ್ಥಾಪಿಸಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ರಾಮುಲು ಕಳೆದ ವಿಧಾನಸಭಾ ಚುನಾವಣೆಯಲ್ಲಿ 33,294 ಮತಗಳ ಅಂತರದಿಂದ ಗೆದ್ದಿದ್ದರು. ಬಳ್ಳಾರಿಯಲ್ಲಿ ಕಾಂಗ್ರೆಸ್ ನಿಂದ ಎನ್ ವೈ ಹನುಮಂತಪ್ಪ, ಬಿಜೆಪಿಯಿಂದ ರಾಮುಲು, ಜೆಡಿಎಸ್ ನಿಂದ ಆರ್ ರವೀಂದ್ರ ಕುಮಾರ್ ಕಣದಲ್ಲಿದ್ದಾರೆ.
ಬಿ ಎಸ್ ಯಡಿಯೂರಪ್ಪ
ಮಾಜಿ ಸಿಎಂ ಯಡಿಯೂರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಹದಿನೈದು ಸಾವಿರ ಮತಗಳ ಅಂತರದಿಂದ ಗೆದ್ದಿದ್ದ ಬಿಎಸ್ವೈ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶಿವಮೂಗ್ಗ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇಲ್ಲಿ ಜೆಡಿಎಸ್ ನಿಂದ ಗೀತಾ ಶಿವರಾಜ್ ಕುಮಾರ್, ಕಾಂಗ್ರೆಸ್ಸಿನಿಂದ ಮಂಜುನಾಥ ಬಂಡಾರಿ, ಬಿಜೆಪಿಯಿಂದ ಯಡಿಯೂರಪ್ಪ ಕಣದಲ್ಲಿದ್ದಾರೆ.
ಎಸ್ ಎಸ್ ಮಲ್ಲಿಕಾರ್ಜುನ
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಮಲ್ಲಿಕಾರ್ಜುನ, ಈ ಬಾರಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 57,280 ಮತಗಳ ಭಾರೀ ಅಂತರದಿಂದ ಗೆದ್ದಿರುವ ಮಲ್ಲಿಕಾರ್ಜುನ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಜಿ ಎಂ ಸಿದ್ದೇಶ್ವರ್, ಜೆಡಿಎಸ್ ನಿಂದ ಮಹಿಮಾ ಪಟೇಲ್ ಸ್ಪರ್ಧೆಯೊಡ್ಡಲಿದ್ದಾರೆ. (photo courtesy : http://ssmallikarjun.com)
ಪ್ರಕಾಶ್ ಹುಕ್ಕೇರಿ
ಚಿಕ್ಕೋಡಿ ಸದಲಗಾದ ಶಾಸಕರೂ ಆಗಿರುವ ಪ್ರಕಾಶ್ ಹುಕ್ಕೇರಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ರಮೇಶ್ ಕತ್ತಿ, ಜೆಡಿಎಸ್ ನಿಂದ ಶ್ರೀಮಂತಪ್ಪ ಬಾಳಾ ಸಾಹೇಬ್ ಪಾಟೀಲ್ ಮತ್ತು ಕಾಂಗ್ರೆಸ್ಸಿನಿಂದ ಪ್ರಕಾಶ್ ಬಾಬಣ್ಣ ಹುಕ್ಕೇರಿ ಕಣದಲ್ಲಿದ್ದಾರೆ.
ಎಚ್ ಡಿ ಕುಮಾರಸ್ವಾಮಿ
ರಾಮನಗರ ಕ್ಷೇತ್ರದ ಶಾಸಕ ಎಚ್ ಡಿ ಕುಮಾರಸ್ವಾಮಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಿ ಎನ್ ಬಚ್ಚೇಗೌಡ, ಕಾಂಗ್ರೆಸ್ಸಿನಿಂದ ವೀರಪ್ಪ ಮೊಯ್ಲಿ ಮತ್ತು ಜೆಡಿಎಸ್ ನಿಂದ ಕುಮಾರಸ್ವಾಮಿ ಸ್ಪರ್ಧೆಯಲ್ಲಿದ್ದಾರೆ.
ವಿನಯ್ ಕುಲ್ಕರ್ಣಿ
ಧಾರವಾಡ ಕ್ಷೇತ್ರದ ಹಾಲಿ ಶಾಸಕರಾಗಿರುವ ವಿನಯ್ ಕುಲ್ಕರ್ಣಿ, ಈ ಬಾರಿಯ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸುತ್ತಿದ್ದಾರೆ. ಧಾರವಾಡ ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರಹ್ಲಾದ್ ಜೋಷಿ, ಜೆಡಿಎಸ್ ನಿಂದ ಹನುಮಂತಪ್ಪ ಬಂಕಾಪುರ, ಕಾಂಗ್ರೆಸ್ಸಿನಿಂದ ವಿನಯ್ ಕುಲ್ಕರ್ಣಿ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಪ್ರಮೋದ್ ಮುತಾಲಿಕ್ ಕಣದಲ್ಲಿದ್ದಾರೆ. (photo courtesy: facebook)