ಅಭ್ಯರ್ಥಿಗಳ ಘೋಷಣೆಗೆ ತಡೆ, ಏನಿದು ಅಮಿತ್ ಶಾ ಲೆಕ್ಕಾಚಾರ?
Recommended Video
ಬೆಂಗಳೂರು, ಜನವರಿ 02 : '2018ರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡುವಂತಿಲ್ಲ' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ನೀಡಿದ್ದಾರೆ. ಇದರಿಂದ ರಾಜ್ಯ ನಾಯಕರಿಗೆ ಹಿನ್ನಡೆ ಉಂಟಾಗಿದೆ.
ಭಾನುವಾರ ಬೆಂಗಳೂರಿಗೆ ಆಗಮಿಸಿದ್ದ ಅಮಿತ್ ಶಾ, 'ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಸಂದರ್ಭದಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡುವಂತಿಲ್ಲ. ಟಿಕೆಟ್ ನೀಡುವ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ' ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಬೀದರ್ ರಾಜಕೀಯ : 3 ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆ!
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪರಿವರ್ತನಾ ಯಾತ್ರೆ ಸಂದರ್ಭದಲ್ಲಿಅಭ್ಯರ್ಥಿಗಳನ್ನು ಘೋಷಿಸುವುದನ್ನು ಮೊದಲು ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದರು. ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದರು.
ಅಮಿತ್ ಶಾ ತಿಳಿಸುವ ಅಭ್ಯರ್ಥಿಗಳೇ ಅಂತಿಮ
ಪಕ್ಷದ ಪರಿವರ್ತನಾ ಯಾತ್ರೆ ಜನವರಿ 28ರಂದು ಅಂತ್ಯಗೊಳ್ಳಲಿದೆ. ಬಳಿಕ ಎರಡು ಸಮೀಕ್ಷೆಗಳನ್ನು ನಡೆಸಲಾಗುತ್ತದೆ. ಬಳಿಕ ರಾಷ್ಟ್ರೀಯ ನಾಯಕರು ಅಭ್ಯರ್ಥಿಗಳು ಯಾರು? ಎಂದು ತೀರ್ಮಾನವನ್ನು ತೆಗೆದುಕೊಳ್ಳಲಿದ್ದಾರೆ. ಈಗ ಯಡಿಯೂರಪ್ಪ ಘೋಷಣೆ ಮಾಡಿರುವ ಅಭ್ಯರ್ಥಿಗಳಿಗೆ ಟಿಕೆಟ್ ಸಿಗಲಿದೆಯೇ? ಎಂಬುದು ಸದ್ಯ ಎದ್ದಿರುವ ಪ್ರಶ್ನೆ.
ಬೆಂಗಳೂರಿಗೆ ಬಂದು ಬಿಜೆಪಿ ನಾಯಕರಿಗೆ ಬಿಸಿಮುಟ್ಟಿಸಿದರೆ ಅಮಿತ್ ಶಾ?!
ಯಾತ್ರೆಯಲ್ಲಿ ಅಭ್ಯರ್ಥಿ ಘೋಷಣೆ
ನವೆಬರ್ 2ರಿಂದ ಪರಿವರ್ತನಾ ಯಾತ್ರೆ ಕೈಗೊಂಡಿರುವ ಬಿ.ಎಸ್.ಯಡಿಯೂರಪ್ಪ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ಇದು ಪಕ್ಷದಲ್ಲಿ ಕೆಲವು ನಾಯಕರು ಅಸಮಾಧಾನಗೊಳ್ಳುವಂತೆ ಮಾಡಿದೆ. ಆದರೆ, ಈಗ ಅಮಿತ್ ಶಾ ಅಭ್ಯರ್ಥಿಗಳನ್ನು ಘೋಷಿಸಿದಂತೆ ಸೂಚಿಸಿದ್ದಾರೆ.
ಕೆಜೆಪಿ/ಬಿಜೆಪಿ ಗೊಂದಲ
ಯಡಿಯೂರಪ್ಪ ಅಭ್ಯರ್ಥಿ ಘೋಷಣೆಗೆ ಕಾರಣವಾಗಿರುವುದು ಬಿಜೆಪಿ/ಕೆಜೆಪಿ ಗೊಂದಲ. ಕಳೆದ ಚುಣಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿದವರು ಈ ಬಾರಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದವರು ಈ ಬಾರಿ ಟಿಕೆಟ್ ಕೇಳುತ್ತಿದ್ದಾರೆ. ಆದ್ದರಿಂದ, ಕೆಲವು ಕ್ಷೇತ್ರಗಳಲ್ಲಿ ಗೊಂದಲ ಉಂಟಾಗಿದೆ.
ಎಲ್ಲೆಲ್ಲಿ ಅಭ್ಯರ್ಥಿಗಳ ಘೋಷಣೆ
ತುಮಕೂರು ಜಿಲ್ಲೆಯ ತುರುವೇಕರೆ ಕ್ಷೇತ್ರದಲ್ಲಿ ಮಸಾಲೆ ಜಯರಾಮ್, ತಿಪಟೂರಿನಲ್ಲಿ ಮಾಜಿ ಶಾಸಕ ಬಿ.ಸಿ.ನಾಗೇಶ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಬೀದರ್ ಜಿಲ್ಲೆಯ ಭಾಲ್ಕಿ, ಬೀದರ್, ಔರಾದ್, ದಾವಣಗೆರೆಯ ಹೊನ್ನಾಳಿಯಲ್ಲಿ ಎಂ.ಪಿ.ರೇಣುಕಾಚಾರ್ಯ ಪಕ್ಷದ ಅಭ್ಯರ್ಥಿಗಳು ಎಂದು ಯಡಿಯೂರಪ್ಪ ಪರಿವರ್ತನಾ ಯಾತ್ರೆಯಲ್ಲಿ ಘೋಷಣೆ ಮಾಡಿದ್ದಾರೆ.
ಯಡಿಯೂರಪ್ಪ ಹೇಳುವುದೇನು?
ಶಿವಮೊಗ್ಗದಲ್ಲಿ ಡಿಸೆಂಬರ್ 29ರಂದು ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, 'ಎಲ್ಲಿ ಗೊಂದಲವಿಲ್ಲವೋ ಅಲ್ಲಿ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದೇನೆ. ಆದರೆ, ಎರಡು ಸಮೀಕ್ಷೆಗಳು ನಡೆದ ಬಳಿಕ ರಾಷ್ಟ್ರೀಯ ನಾಯಕರು ಸೂಚಿಸುವ ಅಭ್ಯರ್ಥಿಯೇ ಅಂತಿಮ' ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್, ಜೆಡಿಸ್ ಪಕ್ಷಗಳಿಗೆ ಲಾಭ?
ಒಂದು ವೇಳೆ ಬಿಜೆಪಿ ಆಕಾಂಕ್ಷಿಗಳಿಗೆ ಟಿಕೆಟ್ ಸಿಗದಿದ್ದರೆ ಅವರು ಕಾಂಗ್ರೆಸ್ ಅಥವ ಜೆಡಿಎಸ್ಗೆ ಸೇರುವ ಸಾಧ್ಯತೆ ಇದೆ. ಇಲ್ಲವೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ. ಆಗ ಕ್ಷೇತ್ರದಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗಲಿದೆ ಎಂಬುದು ರಾಷ್ಟ್ರೀಯ ನಾಯಕರ ಲೆಕ್ಕಾಚಾರವಾಗಿದೆ.
ಅಮಿತ್ ಶಾ ಲೆಕ್ಕಾಚಾರ
ರಾಷ್ಟ್ರೀಯ ನಾಯಕರ ನಿರೀಕ್ಷೆಯಂತೆ ಎಲ್ಲರೂ ಕೆಲಸ ಮಾಡಬೇಕು. ನಾವು ಸೂಚನೆಗಳನ್ನು ನೀಡುತ್ತೇವೆ. ಅದನ್ನು ನೀವು ಪಾಲಿಸಿ ಎಂದು ಅಮಿತ್ ಶಾ ರಾಜ್ಯ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಅಮಿತ್ ಶಾ ಸೂತ್ರ ಏನು? ಎಂಬುದು ಇನ್ನೂ ಬಹಿರಂಗವಾಗಿಲ್ಲ.