IT ಯಿಂದ ED ದಾಟಿ CBI ವರೆಗಿನ ಪ್ರಕರಣಗಳು: ಡಿಕೆಶಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ!
ಬೆಂಗಳೂರು, ಮೇ 26: ರಾಜಕೀಯ ಜೀವನದಲ್ಲಿ ಒಮ್ಮೆಯಾದರೂ ಸಿಎಂ ಪಟ್ಟ ಅಲಂಕರಿಸಬೇಕೆಂಬ ಕನಸು ಕಾಣುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೇಂದ್ರ ತನಿಖಾ ಸಂಸ್ಥೆಗಳು ಎಣೆದಿರುವ ಬಲೆಯಲ್ಲಿ ಸಿಲುಕಿದ್ದಾರೆ. ಐಟಿಯಿಂದ ಆರಂಭಗೊಂಡ ತನಿಖೆ ಸಿಬಿಐ, ಇಡಿ ಕೂಡ ಪ್ರತ್ಯೇಕ ಕೇಸು ದಾಖಲಿಸಿ ಡಿ.ಕೆ. ಶಿವಕುಮಾರ್ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿವೆ. ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆಗೆ ಈ ಪ್ರಕರಣಗಳು ಡಿಕೆಶಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಯಿದೆ. ಈ ಕುರಿತ ಸಮಗ್ರ ವಿವರ ಇಲ್ಲಿದೆ.
ದೆಹಲಿಯ ಎರಡು ಪ್ಲಾಟ್ ನಲ್ಲಿ ಸಿಕ್ಕಿದ 8.5 ಕೋಟಿ ರೂ. ಬೇನಾಮಿ ಹಣದ ಕೇಸಿನಲ್ಲಿ ಜಾರಿ ನಿರ್ದೇಶನಾಲಯ ಡಿ.ಕೆ. ಶಿವಕುಮಾರ್ ಮತ್ತು ಅವರ ಅಪ್ತರ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಡಿ.ಕೆ. ಶಿವಕುಮಾರ್ ಅವರನ್ನು ಮೊದಲ ಅರೋಪಿಯನ್ನಾಗಿ ಮಾಡಲಾಗಿದೆ. ಐಟಿ ಅಧಿಕಾರಿಗಳು ದಾಖಲಿಸಿದ್ದ ಖಾಸಗಿ ದೂರು ಅನ್ವಯ ಇಡಿ ಅಧಿಕಾರಿಗಳು ಡಿಕೆಶಿ ಕೇಸಿಗೆ ಎಂಟ್ರಿ ಕೊಟ್ಟಿದ್ದರು. ಇಡಿ ಅಧಿಕಾರಿಗಳು ನೀಡಿದ ವರದಿ ಆಧಾರದ ಮೇಲೆ ಸಿಬಿಐ ಕೂಡ ಡಿ.ಕೆ. ಶಿವಕುಮಾರ್ ಅವರ ಮೇಲೆ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದೆ. ಇಡಿ ಹಾಗೂ ಸಿಬಿಐ ದಾಖಲಿಸಿರುವ ಪ್ರಕರಣಗಳು ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯಕ್ಕೆ ಮುಗ್ಗುಲ ಮುಳ್ಳಾಗಿ ಪರಿಣಮಿಸಿದರೂ ಅಚ್ಚರಿ ಪಡಬೇಕಿಲ್ಲ.
2017 ರಲ್ಲಿ ಗುಜರಾತ್ ವಿಧಾನಸಭೆಯಿಂದ ರಾಜ್ಯ ಸಭೆ ಚುನಾವಣೆ ಎದುರಾಗಿದ್ದ ಸಮಯ. ಕಾಂಗ್ರೆಸ್ನಿಂದ ಪ್ರತಿನಿಧಿಸಿದ್ದ ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಅವರನ್ನು ನೇಮಕ ಮಾಡುವ ಜಿದ್ದಿಗೆ ಬಿದ್ದಿದ್ದ ಕಾಂಗ್ರೆಸ್ ಗುಜರಾತ್ ನ 44 ಕಾಂಗ್ರೆಸ್ ಶಾಸಕರನ್ನು ರಕ್ಷಿಸುವ ಹೊಣೆಯನ್ನು ಡಿಕೆ ಸಹೋದರರಿಗೆ ವಹಿಸಲಾಗಿತ್ತು. ಗುಜರಾತ್ ನ 44 ಕಾಂಗ್ರೆಸ್ ಶಾಸಕರನ್ನು ಬಿಡದಿ ಹೊರ ವಲಯದ ಈಗಲ್ ಟನ್ ರೆಸಾರ್ಟ್ ನಲ್ಲಿಟ್ಟು ಡಿಕೆ ಸಹೋದರರು ಕಾವಲು ಕಾದಿದ್ದರು. ಆ. 1 ರಂದು ಶಾಸಕರನ್ನು ಈಗಲ್ ಟನ್ ರೆಸಾರ್ಟ್ ನಲ್ಲಿ ಇಟ್ಟು ಕಾದಿದ್ದರು.
ಡಿಕೆಶಿ ಮತ್ತು ಆಪ್ತರ ಮೇಲೆ ಐಟಿ ದಾಳಿ ಶಾಕ್ :
ರೆಸಾರ್ಟ್ ನಲ್ಲಿ 44 ಗುಜರಾತ್ ಶಾಸಕರನ್ನು ಇಟ್ಟು ಕಾವಲು ಕಾಯುತ್ತಿದ್ದ ಡಿ.ಕೆ. ಶಿವಕುಮಾರ್ ಮತ್ತು ಅವರ ಅಪ್ತರ ಮನೆಗಳ ಮೇಲೆ ಐಟಿ ಅಧಿಕಾರಿಗಳು 2017 ಆಗಸ್ಟ್ ನಲ್ಲಿ ದಾಳಿ ಮಾಡಿದ್ದರು. ಡಿಕೆ ಶಿವಕುಮಾರ್ ಅಪ್ತರು, ಈಗಲ್ ಟನ್ ರೆಸಾರ್ಟ್ ಸೇರಿದಂತೆ ನಾನಾ ಕಡೆ ಐಟಿ ಅಧಿಕಾರಿಗಳು ಶೋಧ ನಡೆಸಿ ಕೋಟ್ಯಂತರ ರೂಪಾಯಿ ತೆರಿಗೆ ವಂಚಿತ ಹಣವನ್ನು ಪತ್ತೆ ಮಾಡಿದ್ದರು. ಜಲ ಸಂಪನ್ಮೂಲ ಸಚಿವರಾಗಿದ್ದ ಡಿಕೆಶಿ ಮನೆ ಸೇರಿ, ದೆಹಲಿಯ ಅಪಾರ್ಟ್ಮೆಂಟ್ ಸೇರಿದಂತೆ 60 ಕಡೆ ಐಟಿ ದಾಳಿ ನಡೆದಿತ್ತು. ಡಿಕೆ ಶಿವಕುಮಾರ್ ನೊಂದಿಗೆ ವಹಿವಾಟು ಪಾಲುದಾರ ಸುನೀಲ್ ಶರ್ಮಾ, ಸಚಿನ್ ನಾರಾಯಣ್ ಮತ್ತಿತರ ಮನೆಗಳು ಹಾಗೂ ಕಚೇರಿಗಳು ದಾಳಿಗೆ ಒಳಗಾಗಿದ್ದವು.
8.5 ಕೋಟಿ ರೂ. ಬೇನಾಮಿ ಹಣ ಪತ್ತೆ:
ಐಟಿ ದಾಳಿಯಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದ್ದು ಎನ್ನಲಾದ ಎರಡು ಪ್ಲಾಟ್ ನಲ್ಲಿ 8.5 ಕೋಟಿ ರೂ. ಅಕ್ರಮ ಹಣ ಪತ್ತೆಯಾಗಿತ್ತು. ಐಟಿ ದಾಳಿಯಲ್ಲಿ ಪತ್ತೆಯಾದ ಸುಮಾರು 300 ಕೋಟಿ ರೂ. ತೆರಿಗೆ ವಂಚನೆ ಪ್ರಕರಣ ಸಂಬಂಧ ಐಟಿ ಅಧಿಕಾರಿಗಳು ಬೆಂಗಳೂರಿನ ಆರ್ಥಿಕ ಅಪರಾಧ ನ್ಯಾಯಾಲಯದಲ್ಲಿ 2018 ರಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಆಪ್ತರು ಜಾಮೀನು ಪಡೆದಿದ್ದರು. ಆದರೆ, ದೆಹಲಿಯಲ್ಲಿ ಡಿಕೆಶಿಗೆ ಸೇರಿದ್ದ ಪ್ಲಾಟ್ ನಲ್ಲಿ ಸಿಕ್ಕಿದ್ದ 8.5 ಕೋಟಿ ರೂ. ಬೇನಾಮಿ ಹಣದ ಮೂಲದ ಬಗ್ಗೆ ತನಿಖೆ ನಡೆಸುವ ಹೊಣೆಯನ್ನು ಇಡಿಗೆ ವಹಿಸಲಾಗಿತ್ತು. ಈ ವೇಳೆ ಇಡಿ ಅಧಿಕಾರಿಗಳು ಡಿಕೆ ಕೇಸಿನಲ್ಲಿ ಎಂಟ್ರಿ ಕೊಟ್ಟಿದ್ದರು.
ಡಿಕೆ ಜೈಲಿಗೆ ಕಳುಹಿಸಿದ ED ಕೇಸ್ :
ದೆಹಲಿಯ ಎರಡು ಪ್ಲಾಟ್ ನಲ್ಲಿ ಸಿಕ್ಕಿದ್ದ 8.5 ಕೋಟಿ ರೂ.ಹಣದ ಮೂಲದ ಬಗ್ಗೆ ಡಿ.ಕೆ. ಶಿವಕುಮಾರ್ ದಾಖಲೆಗಳನ್ನು ಹಾಜರು ಪಡಿಸುವಲ್ಲಿ ವಿಫಲರಾಗಿದ್ದರು. ಈ ಎರಡು ಪ್ಲಾಟ್ ಉಸ್ತುವಾರಿ ನೋಡಿಕೊಂಡಿದ್ದ ಆಂಜನೇಯ ಹನುಮಂತಯ್ಯ ಎಂಬಾತ ಐಟಿ ವಿಚಾರಣೆಯಲ್ಲಿ ಫ್ಲಾಟ್ ಒಡೆತನ ಮತ್ತು ಹಣ ಡಿ ಕೆ. ಶಿವಕುಮಾರ್ ಅವರ ಸೂಚನೆ ಮೇರೆಗೆ ಇಟ್ಟಿದ್ದಾಗಿ ಹೇಳಿಕೆ ನೀಡಿದ್ದರು. ಡಿ.ಕೆ. ಶಿವಕುಮಾರ್ ಈ ಅಕ್ರಮ ಹಣದ ಮೂಲದ ಬಗ್ಗೆ ಸ್ಪಷ್ಟ ವಿವರ ನೀಡದ ಹಿನ್ನೆಲೆಯಲ್ಲಿ ಈ ಹಣದ ಮೂಲದ ಬಗ್ಗೆ ತನಿಖೆ ನಡೆಸುವಂತೆ ಇಡಿ ಅಧಿಕಾರಿಗಳಿಗೆ ವಹಿಸಿದ್ದರು. ಇಡಿ ಅಧಿಕಾರಿಗಳು 2019 ರಲ್ಲಿ ಹಣದ ಬೇನಾಮಿ ವಹಿವಾಟಿನ ಬಗ್ಗೆ ಪ್ರತ್ಯೇಕ ಕೇಸು ದಾಖಲಿಸಿ ಡಿ.ಕೆ. ಶಿವಕುಮಾರ್ ಗೆ ಸಮನ್ಸ್ ಜಾರಿ ಮಾಡಿದ್ದರು. ಇಡಿ ನೋಟಿಸ್ ರದ್ದು ಕೋರಿ ಡಿ.ಕೆ. ಶಿವಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದರು. ಡಿಕೆಗೆ ಕೋರ್ಟ್ ನಲ್ಲಿ ಹಿನ್ನೆಡೆಯಾಗಿತ್ತು. ಈ ಹಿನ್ನೆಲೆಯಲ್ಲಿ 2019 ಆ. 30 ರಂದು ಡಿ.ಕೆ ಶಿವಕುಮಾರ್ ಇಡಿ ವಿಚಾರಣೆಗೆ ಒಳಗಾಗಿದ್ದರು. ವಿಚಾರಣೆಗೆ ಸಹಕಾರ ನೀಡಲಿಲ್ಲ ಎಂಬ ಅರೋಪದಡಿ ಶಿವಕುಮಾರ್ ಅವರನ್ನು ಬಂಧಿಸಿ ತಿಹಾರ್ ಜೈಲಿಗೆ ರವಾನಿಸಲಾಗಿತ್ತು. ಜಾಮೀನು ಬಳಿಕ ಡಿ.ಕೆ. ಶಿವಕುಮಾರ್ ಜೈಲಿನಿಂದ ಬಿಡುಗಡೆಯಾಗಿದ್ದರು.
ಇಡಿ ಉರುಳು ಜತೆಗೆ ಸಿಬಿಐ ಉರುಳು ಬಾಕಿ:
8.5 ಕೋಟಿ. ರೂ. ಬೇನಾಮಿ ವಹಿವಾಟಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಇಡಿ ಅಧಿಕಾರಿಗಳು, ಡಿ.ಕೆ ಶಿವಕುಮಾರ್ ಅಕ್ರಮ ಆಸ್ತಿ ಮೂಲದ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ ವರದಿ ನೀಡಿತ್ತು. ರಾಜ್ಯದಲ್ಲಿ 2020 ರಲ್ಲಿ ಉಪ ಚುನಾವಣೆ ಪರ್ವ ಶುರುವಾಗಿತ್ತು. ಡಿ.ಕೆ. ಶಿವಕುಮಾರ್ ಅವರ ನಿವಾಸ ಸೇರಿದಂತೆ ಹದಿನಾಲ್ಕು ಕಡೆ ದಾಳಿ ಮಾಡಿದ್ದ ಸಿಬಿಐ ಅಧಿಕಾರಿಗಳು ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದರು. ಡಿ.ಕೆ ಶಿವಕುಮಾರ್ ಅಕ್ರಮ ಅಸ್ತಿ ಗಳಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಪ್ರತ್ಯೇಕ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಡಿಕೆಶಿ ಮೇಲಿನ ದಾಳಿ ಬಗ್ಗೆ ಪ್ರಕಟಣೆ ನೀಡಿದ್ದ ಸಿಬಿಐ, ಡಿ.ಕೆ ಶಿವಕುಮಾರ್ 75 ಕೋಟಿ ರೂ. ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಡಿ.ಕೆ ಸುರೇಶ್ ಅವರ ನಿವಾಸ ಕಚೇರಿ ಮೇಲೂ ದಾಳಿ ಮಾಡಿತ್ತು. ಈ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಸಿಬಿಐ ವಿಚಾರಣೆ ಒಳಪಡಿಸಿತ್ತು. ಈ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಅತಿ ಶೀಘ್ರದಲ್ಲಿಯೇ ಈ ಕೇಸಿನಲ್ಲೂ ತನಿಖಾ ವರದಿಯನ್ನು ಸಿಬಿಐ ನ್ಯಾಯಲಯಕ್ಕೆ ಸಲ್ಲಿಸಲಿದೆ. ಐಟಿಯಿಂದ ಮೊದಲಗೊಂಡ ದಾಳಿ ಸಿಬಿಐ ಕೇಸಿನಲ್ಲಿ ಅಂತ್ಯವಾಗಿದೆ. ಐಟಿ, ಇಡಿ, ಸಿಬಿಐ ತನಿಖೆ ಎದುರಿಸಿರುವ ಡಿ.ಕೆ. ಶಿವಕುಮಾರ್ ಮೂರು ಕೇಸಿನಲ್ಲಿ ಮುಕ್ತಿ ಪಡೆದ ಬಳಿಕವೇ ಸಿಎಂ ಆಗುವ ಹಾದಿ ಸುಗಮವಾಗಲಿದೆ!
ಸಿಬಿಐ ಕೇಸಲ್ಲಿ ಶೀಘ್ರದಲ್ಲಿ ಬೀಳುತ್ತೆ:
ಡಿ.ಕೆ. ಶಿವಕುಮಾರ್ ಅವರ ದೆಹಲಿ ಪ್ಲಾಟ್ ನಲ್ಲಿ ಬೇನಾಮಿ ಹಣ 8.5 ಕೋಟಿ ರೂ. ಪತ್ತೆಯಾದ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಡಿ.ಕೆ. ಶಿವಕುಮಾರ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಡಿ.ಕೆ. ಶಿವಕುಮಾರ್, ಅವರ ಬ್ಯುಸಿನೆಸ್ ಪಾಲುದಾರ ಸುನೀಲ್ ಕುಮಾರ್ ಶರ್ಮಾ, ಸಚಿನ್ ನಾರಾಯಣ್ ಸೇರಿದಂತೆ ಹಲವರ ವಿರುದ್ಧ ದೋಷಾರೋಪ ಹೊರಿಸಲಾಗಿದೆ. 75 ಕೋಟಿ ರೂ. ಅಕ್ರಮ ಆಸ್ತಿ ಡಿ.ಕೆ. ಶಿವಕುಮಾರ್ ಹೊಂದಿರುವ ಅರೋಪ ಹೊರಿಸಲಾಗಿತ್ತು. ಈ ಕುರಿತು ಡಿ.ಕೆ. ಶಿವಕುಮಾರ್ ಅವರು ವಿಚಾರಣೆ ವೇಳೆ ಅದೆಷ್ಟು ಸಮರ್ಥ ದಾಖಲೆಗಳನ್ನು ನೀಡಿದ್ದಾರೋ ಗೊತ್ತಿಲ್ಲ. ಅದರಲ್ಲೂ ದೋಷಾರೋಪ ಪಟ್ಟಿ ಸಲ್ಲಿಕೆಯಾದ ಬಳಿಕ ಸತ್ಯ ಹೊರ ಬರಲಿದೆ. ಒಂದು ವೇಳೆ ಸಿಬಿಐ ಕೇಸಿನಲ್ಲಿ ದೋಷಾರೋಪ ಪಟ್ಟಿ ಬಿದ್ದಿದ್ದೇ ಅದಲ್ಲಿ, ಡಿ.ಕೆ. ಶಿವಕುಮಾರ್ 2023 ಕರ್ನಾಟಕ ವಿಧಾನ ಸಭೆ ಚುನಾವಣೆ ಹೊಸ್ತಿಲಲ್ಲಿ ಕೋರ್ಟ್ ಕಚೇರಿ ಅಲೆಯಬೇಕಾದೀತು!