ಕೊರೊನಾ 2ನೇ ಅಲೆ: ಅಲರ್ಟ್ ಆಗಿರಬೇಕಾದ ಸಮಯದಲ್ಲಿ ಬಿಎಸ್ವೈ ಸರಕಾರದ ಎಡವಟ್ಟು
ವಿಶ್ವದ ಜನಸಂಖ್ಯೆಯಲ್ಲಿ ಅಮೆರಿಕಾ ಮೂರನೇ ಸ್ಥಾನದಲ್ಲಿದ್ದರೆ, ಕೊರೊನಾ ಸಕ್ರಿಯ ಪ್ರಕರಣ ಮತ್ತು ಸಾವಿನ ಸಂಖ್ಯೆಯಲ್ಲಿ ಆ ದೇಶ ಮೊದಲ ಸ್ಥಾನದಲ್ಲಿದೆ. ವಿಶ್ವದ ಮುಂದುವರಿದ ರಾಷ್ಟ್ರ ಎನ್ನುವ ಹೆಗ್ಗಳಿಕೆ ಜೊತೆಗೆ, ಆಧುನಿಕ ತಂತ್ರಜ್ಞಾನವನ್ನು ಆ ದೇಶ ಹೊಂದಿದ್ದರೂ, ಕೊರೊನಾ ನಿರ್ವಹಣೆಯಲ್ಲಿ ಯಾಕೆ ಈ ಹಿನ್ನಡೆ ಎಂದರೆ ಆಡಳಿತ ಯಂತ್ರದ ಗಂಭೀರ ವೈಫಲ್ಯ.
ಕೊರೊನಾ ಉಸ್ತುವಾರಿ ಕಮಿಟಿ ಮತ್ತು ಅಮೆರಿಕಾದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಸಂವಹನದ ಕೊರೆತೆಯಿಂದಾಗಿ ವಿಶ್ವದ ದೊಡ್ಡಣ್ಣನ ದೇಶದಲ್ಲಿ ಕೊರೊನಾ ಮಾರಣಾಂತಿಕವಾಗಿ ತಲೆನೋವಾಗಿ ಕೂತಿದೆ. ಇದೇ ರೀತಿಯ ಪರಿಸ್ಥಿತಿ ಕರ್ನಾಟಕದಲ್ಲೂ ಮುಂದಿನ ದಿನದಲ್ಲಿ ಬರಬಹುದಾ ಎನ್ನುವ ಗಂಭೀರ ಪ್ರಶ್ನೆ ಎದುರಾಗಿರುವುದು ಸಚಿವರ ಖಾತೆ ಹಂಚಿಕೆಯ ನಂತರ.
2ನೇ ಹಂತದಲ್ಲಿ 2ಕೋಟಿ ಜನರಿಗೆ ಕೊರೊನಾ ಲಸಿಕೆ: ಸುಧಾಕರ್
ಖಾತೆ ಹಂಚಿಕೆಯ ವಿಚಾರದಲ್ಲಿ ತಮ್ಮ ಸಂಪುಟದ ಸಹದ್ಯೋಗಿ ಪಡೆಯುತ್ತಿರುವ ಜನಪ್ರಿಯತೆ, ತಮ್ಮದೇ ಸಮುದಾಯದ ಸಚಿವ ಬೆಳೆಯುತ್ತಿರುವ ರೀತಿಯಿಂದಾಗಿ, ಕೆಲವು ಸಚಿವರ ಖಾತೆಯನ್ನು ಕಿತ್ತು ಬೇರೆಯವರಿಗೆ ಹಂಚಿರಬಹುದು. ರಾಜಕೀಯದಲ್ಲಿ ಇದೆಲ್ಲಾ ಸಾಮಾನ್ಯ. ಆದರೆ..
ಬಿಎಸ್ವೈ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಸಮರ್ಥ ಸಚಿವರಿಗೆ ಯಾಕೀ ಹಿನ್ನಡೆ?
ಆರೋಗ್ಯ ತುರ್ತು ಪರಿಸ್ಥಿತಿ ಬರಬಹುದಾಂತಹ ಸಂದರ್ಭದಲ್ಲೂ ರಾಜಕೀಯ ಮಾಡಲು ಹೊರಟರೆ ಅದು ಜನಪರ ಕಾಳಜಿ ಮತ್ತು ಮಾನವೀಯತೆಗೆ ವಿರುದ್ದವಾದ ನಡೆಯಾಗಬಹುದು. ಕೊರೊನಾ ಲಸಿಕೆ ವಿತರಣೆಯ ಈ ಕಾಲಘಟ್ಟದಲ್ಲಿ ರಾಜ್ಯ ಸರಕಾರ ಅಲರ್ಟ್ ಆಗಿರಬೇಕಾದ ಸಮಯವಿದು. ಆದರೆ, ಎಡವಟ್ಟು ಮಾಡಿಕೊಳ್ಳಲು ಮುಂದಾದಂತಿದೆ.
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ, ಸಚಿವ ಸ್ಥಾನದ ಆಕಾಂಕ್ಷಿಗಳು ತುಂಬಾ ಇದ್ದಿದ್ದರಿಂದ, ಇದ್ದ ಹಲವು ಖಾತೆಗಳನ್ನು ಬೇರ್ಪಡಿಸಿ ಹೊಸ ಖಾತೆಯನ್ನು ಸೃಷ್ಟಿಸಿದ್ದರು. ಅದರಲ್ಲಿ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯೂ ಒಂದು. ಈ ಇಲಾಖೆಯಡಿಯಲ್ಲಿದ್ದ ವೈದ್ಯಕೀಯ ಶಿಕ್ಷಣ ಇಲಾಖೆ ಬೇರ್ಪಡೆಯಾಗಿ ಹೊಸ ಖಾತೆಯ ಉದಯವಾಗಿತ್ತು. ಡಾ. ಮಾಲಕ ರೆಡ್ಡಿ ಈ ಖಾತೆಯ ಮಂತ್ರಿಯಾಗಿದ್ದರು. ಈ ಖಾತೆ ಆರಂಭವಾದ ನಂತರ, ಸಮಸ್ಯೆಗಳು ಹೆಚ್ಚಾಯಿತೇ ವಿನಃ, ಸಾರ್ವಜನಿಕರ ತೆರಿಗೆ ಹಣ ಅನಾವಶ್ಯಕವಾಗಿ ಪೋಲಾಗಲಾರಂಭಿಸಿತೇ ಹೊರತು ಒಳಿತಾದ ಉದಾಹರಣೆ ಕಮ್ಮಿ.
ಶ್ರೀರಾಮುಲುಗೆ ಬೇರೆ ಖಾತೆ ನೀಡಿ, ಆ ಖಾತೆಯನ್ನು ಡಾ.ಸುಧಾಕರ್ ನೀಡಿದ್ದು
ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಖಾತೆಯನ್ನು ಬೇರೆ ಬೇರೆ ಸಚಿವರಿಗೆ ನೀಡಿದರೆ, ಆಗುವ ತೊಂದರೆ ಏನು ಎನ್ನುವುದನ್ನು ರಾಜ್ಯದ ಜನತೆ ಈಗಾಗಲೇ ನೋಡಿದ್ದಾಗಿದೆ. ಇದನ್ನೆಲ್ಲಾ ಅರಿತೇ ಮುಖ್ಯಮಂತ್ರಿಗಳು ಆರೋಗ್ಯ ಸಚಿವರಾಗಿದ್ದ ಶ್ರೀರಾಮುಲು ಅವರಿಗೆ ಬೇರೆ ಖಾತೆ ನೀಡಿ, ಆ ಖಾತೆಯನ್ನು ಡಾ.ಸುಧಾಕರ್ ಅವರಿಗೆ ನೀಡಿದ್ದು. ಅದಾದ ನಂತರವೇ ಕೊರೊನಾ ನಿರ್ವಹಣೆ ಒಂದು ಹಂತಕ್ಕೆ ಸರಿದಾರಿಗೆ ಬಂದಿದ್ದು.
ಕೊರೊನಾ ನಿರ್ವಹಣೆ
ಈ ಎರಡು ಖಾತೆಗಳು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದರೆ, ಆರೋಗ್ಯ ಇಲಾಖೆ ಏನೇ ಕೆಲಸ ಕಾರ್ಯಗಳನ್ನು ಹಮ್ಮಿಕೊಂಡರೂ, ಮೂಲ ಸೌಕರ್ಯಯದ ಜವಾಬ್ದಾರಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಂಬಂಧ ಪಟ್ಟದ್ದು. ಹಾಗಾಗಿ, ಇವೆರಡೂ ಇಲಾಖೆಗಳು ಒಂದೇ ನಾಣ್ಯದ ಎರಡೂ ಮುಖ ಇದ್ದಂತೆ. ಸಚಿವರುಗಳ ನಡುವೆ ಸಂವಹನದ ಕೊರತೆ ಇಲ್ಲದೇ ಇದ್ದ ಪಕ್ಷದಲ್ಲಿ ಮಾತ್ರ, ಎರಡೂ ಇಲಾಖೆಗೆ ಬೇರೆ ಬೇರೆ ಸಚಿವರನ್ನು ನೇಮಿಸಬಹುದು. ಆದರೆ, ಇಲ್ಲಿನ ಪರಿಸ್ಥಿತಿ ಹಾಗಿಲ್ಲ ಎನ್ನುವುದಕ್ಕೆ ಕೊರೊನಾ ನಿರ್ವಹಣೆಯೇ ಇತಿಹಾಸವಾಗಿದೆ.
ಲಸಿಕೆ ವಿತರಣೆ
ಕೊರೊನಾ ಟಾಸ್ಕ್ ಫೋರ್ಸ್ ಕಮಿಟಿ, ಎರಡನೇ ಹಂತದ ಅಲೆ ಫೆಬ್ರವರಿಯಲ್ಲಿ ಆರಂಭವಾಗಬಹುದು ಎನ್ನುವ ಗಂಭೀರ ಎಚ್ಚರಿಕೆಯನ್ನು ಈಗಾಗಲೇ ನೀಡಿದೆ. ಇದರ ಜೊತೆಗೆ, ಈಗ ಲಸಿಕೆ ವಿತರಣೆಯಾಗುತ್ತಿರುವುದು ವಾರಿಯರ್ಸ್ ಅವರಿಗೆ ಮಾತ್ರ. ಜನಸಾಮಾನ್ಯರಿಗೆ ಈ ಲಸಿಕೆ ನೀಡುವ ಅಭಿಯಾನ ಇನ್ನೂ ಆರಂಭಾಗಬೇಕಷ್ಟೇ. ಸರಕಾರ ತುಂಬಾ ಅಚ್ಚುಕಟ್ಟಿನಿಂದ ಇದನ್ನೆಲ್ಲಾ ನಿರ್ವಹಿಸ ಬೇಕಾದ ಸಮಯವಿದು.
Recommended Video
ಅಲರ್ಟ್ ಆಗಿರಬೇಕಾದ ಸಮಯದಲ್ಲಿ ಬಿಎಸ್ವೈ ಸರಕಾರದ ಎಡವಟ್ಟು
ಇಂತಹ ಸಮಯದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಗೆ ಬೇರೆ ಬೇರೆ ಸಚಿವರುಗಳನ್ನು ನೇಮಿಸಿದರೆ, ಇದು ಬಹುದೊಡ್ಡ ಸಮಸ್ಯೆಯ ಆಗರವಾಗಲಿದೆ ಎನ್ನುವುದು ಅತ್ಯಂತ ಸ್ಪಷ್ಟ. ಪ್ರಧಾನಿಯವರಿಂದಲೇ ಶಹಬ್ಬಾಸ್ ಪಡೆದುಕೊಂಡ ಡಾ.ಸುಧಾಕರ್ ಅವರಿಗೇ ಎರಡೂ ಖಾತೆಯನ್ನು ಕೊಡಬೇಕೆಂದೇನೂ ಇಲ್ಲ. ಜೆ.ಸಿ.ಮಾಧುಸ್ವಾಮಿಗೂ ಎರಡೂ ಖಾತೆಯನ್ನು ಕೊಡಬಹುದು, ಅಥವಾ ಮತ್ತಿನ್ಯಾರಾದರೂ ಸಚಿವರಿಗೂ ಯಡಿಯೂರಪ್ಪನವರು ಕೊಡಬಹುದು. ಆದರೆ, ಒಂದೊಂದು ಖಾತೆಗೆ ಒಬ್ಬೊಬ್ಬರನ್ನು ನೇಮಿಸಿ, ಕೊರೊನಾ ನಿರ್ವಹಣೆಯಿಂದಾಗಿ ಜನಸಾಮಾನ್ಯರ ಬದುಕು ನರಕಸದೃಶವಾಗದಿರಲಿ.