ಪ್ರತ್ಯೇಕ ನಾಡಧ್ವಜದ ವಿನ್ಯಾಸ ಅಂತಿಮಗೊಳಿಸಿದ ಸಮಿತಿ
ಬೆಂಗಳೂರು, ಜನವರಿ 31 : ಪ್ರತ್ಯೇಕ ನಾಡಧ್ವಜದ ವಿಚಾರ ಮತ್ತೆ ಚಾಲ್ತಿಗೆ ಬಂದಿದೆ. ಸರ್ಕಾರ ರಚನೆ ಮಾಡಿರುವ 9 ಸದಸ್ಯರ ಸಮಿತಿ ನಾಡಧ್ವಜದ ವಿನ್ಯಾಸವನ್ನು ಅಂತಿಮಗೊಳಿಸಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಕೆ ಮಾಡಲಿದೆ.
ಕರ್ನಾಟಕ ಸರ್ಕಾರ ಜೂನ್ ತಿಂಗಳಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿತ್ತು. ಸರಣಿ ಸಭೆಗಳ ಬಳಿಕ ಸಮಿತಿ ನಾಡಧ್ವಜದ ವಿನ್ಯಾಸ ಅಂತಿಮಗೊಳಿಸಿದೆ.
ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ : ವಾದ ಪ್ರತಿವಾದ ವಿವಾದ
ಈ ಸಮಿತಿಯ ವರದಿಯ ಅನ್ವಯ ಸರ್ಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ. ಸಮಿತಿ ಶೀಘ್ರದಲ್ಲಿಯೇ ಕರ್ನಾಟಕ ಸರ್ಕಾರಕ್ಕೆ ಧ್ವಜದ ವಿನ್ಯಾಸ ಮತ್ತು ಧ್ವಜಕ್ಕೆ ಕಾನೂನಿನ ಮಾನ್ಯತೆ ನೀಡುವ ಕುರಿತು ವರದಿಯನ್ನು ಸಲ್ಲಿಸಲಿದೆ.
ರಾಷ್ಟ್ರಾದ್ಯಂತ ಚರ್ಚೆಗೆ ಗ್ರಾಸವಾದ ಕರ್ನಾಟಕದ 'ಪ್ರತ್ಯೇಕ ಧ್ವಜ'
ಕೆಂಪು, ಹಳದಿ ವರ್ಣದ ಧ್ವಜ ಈಗಾಗಲೇ ಕನ್ನಡ ಧ್ವಜವಾಗಿ ಬಳಕೆಯಾಗುತ್ತಿದೆ. ಈಗ ರಾಜ್ಯಕ್ಕೆ ಪ್ರತ್ಯೇಕ ಧ್ವಜ ರೂಪಿಸಿ ಕಾನೂನಿನ ಮಾನ್ಯತೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕುರಿತು ವರದಿ ನೀಡಲು 9 ಸದಸ್ಯರ ಸಮಿತಿ ರಚನೆ ಮಾಡಿದೆ.
ಕರ್ನಾಟಕ ಸರ್ಕಾರದ ಈ ಪ್ರಸ್ತಾವನೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ರಾಜ್ಯಕ್ಕೆ ಪ್ರತ್ಯೇಕ ಧ್ವಜ ಮಾಡುವ ಪ್ರಸ್ತಾವನೆಗೆ ಸಂವಿಧಾನದ ಮಾನ್ಯತೆಯೇ ಇಲ್ಲ ಎಂದು ಚರ್ಚೆಗಳು ನಡೆಯುತ್ತಿವೆ.