ಬೆಂಗಳೂರು ಆರೋಗ್ಯ ಸೇವೆಗಳಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ: ಮುಖ್ಯಮಂತ್ರಿ ಬೊಮ್ಮಾಯಿ
ಬೆಂಗಳೂರು, ಸೆ. 12: ಕೊರೊನಾ ವೈರಸ್ ಮೂರನೇ ಅಲೆಯ ಆತಂಕದ ಮಧ್ಯೆ ರಾಜ್ಯ ಸರ್ಕಾರವ ಜನರ ಆರೋಗ್ಯ ಕಾಪಾಡಲು ಮಹತ್ವದ ಕೆಲಸ ಮಾಡಿದೆ. ವಿಧಾನಸೌಧದ ಪೂರ್ವಭಾಗದ ಮೆಟ್ಟಿಲಗಳ ಮೇಲೆ ನಡೆದ ಕಾರ್ಯಕ್ರಮದಲ್ಲಿ 120 ಅಂಬುಲೆನ್ಸ್ಗಳನ್ನು ತುರ್ತು ಆರೋಗ್ಯ ಸೇವೆಗೆ ರಾಜ್ಯ ಸರ್ಕಾರ ಒದಗಿಸಿದೆ. 108 ಆರೋಗ್ಯ ಕವಚ ತುರ್ತು ವೈದ್ಯಕೀಯ ಸೇವೆಗೆ ಹೊಸ ಆಂಬ್ಯುಲೆನ್ಸ್ಗಳನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿ ಮಹತ್ವದ ಘೋಷಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡಿದ್ದಾರೆ.
"ಬೆಂಗಳೂರು ಆರೋಗ್ಯ ಸೇವೆಗಳಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಲಾಗುವುದು. ಬೆಂಗಳೂರಿನಲ್ಲಿ ಆರೋಗ್ಯ ಸೇವೆಗಳು ಸಂಪೂರ್ಣವಾಗಿ ಒಂದು ಪ್ರಾಧಿಕಾರದಡಿಗೆ ಬರಬೇಕು. ಬರುವ ದಿನಗಳಲ್ಲಿ ಇದನ್ನು ಕಾರ್ಯಗತಗೊಳಿಸಲಾಗುವುದು" ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ.
"ಆರೋಗ್ಯಕ್ಕೆ ಜೀವನಾಡಿ ಆಂಬ್ಯುಲೆನ್ಸ್ , ಆರೋಗ್ಯ ಯಾವಾಗ ಕೆಡುತ್ತದೆ ಎಂದು ತಿಳಿಯೋದು ಕಷ್ಟ. ಆರೋಗ್ಯ ಕೈಕೊಟ್ಟ ಸಂದರ್ಭದಲ್ಲಿ ಆಂಬ್ಯುಲೆನ್ಸ್ ಪ್ರಮುಖ ಪಾತ್ರ ವಹಿಸುತ್ತದೆ. ಇವು ಕೇವಲ ರೋಗಿಗಳ ಸಾಗಾಣಿಕೆಯ ವಾಹನವಾಗದೆ ತುರ್ತು ಚಿಕಿತ್ಸೆ ಕೊಟ್ಟು, ಕರೆ ಮಾಡಿದ ಕೆಲವೇ ನಿಮಿಷದಲ್ಲಿ ತಲುಪಿ, ರೋಗಿಗಳನ್ನು ಆಸ್ಪತ್ರೆಗೆ ಸೇರಿಸುವ ವಾಹನಗಳಾಗಬೇಕು. 108 ಆಂಬ್ಯುಲೆನ್ಸ್ ಗ್ರಾಮೀಣ ಭಾಗಗಳಲ್ಲಿ ಬಹಳ ಉಪಯುಕ್ತವಾಗಿದೆ" ಎಂದು ಇದೇ ವೇಳೆ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.
ಸಮರ್ಥವಾಗಿ ಕೋವಿಡ್ ಎದುರಿಸಿದ್ದೇವೆ!
108 ಆರೋಗ್ಯ ಸಮಸ್ಯೆಗಳಿಗೆ ಆಂಬ್ಯುಲೆನ್ಸ್ ವರದಾನವಾಗಿದೆ. ಈ ಸೇವೆಯು ವಿಸ್ತರಣೆಯಾಗಬೇಕು. ಆರೋಗ್ಯ ಕ್ಷೇತ್ರದಲ್ಲಿ ಸಮಸ್ಯೆ ನಿವಾರಣೆಗೆ ಜನಕಾಳಜಿಯಿಂದ ಶ್ರಮಿಸುತ್ತಿದ್ದಾರೆ. ಕೋವಿಡ್ ನಮ್ಮ ಕಣ್ಣು ತೆರೆಸಿದೆ. ಆರೋಗ್ಯ ಮೂಲಭೂತ ಸೌಕರ್ಯಗಳನ್ನು ನೀಡಲು ನಾವು 70 ವರ್ಷ ಕಾಳಜಿ ಮಾಡಿಲ್ಲ. ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಹಾಸಿಗೆಗಳು ಇಲ್ಲ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ 10 ಸಾವಿರ ರೋಗಿಗಳಿಗೆ ಒಂದು ಬೆಡ್ ಇರುವ ವ್ಯವಸ್ಥೆ ಇದೆ. ರೋಗಿಗಳು ಮತ್ತು ವೈದ್ಯರ ಅನುಪಾತ ಹೆಚ್ಚಾಗಬೇಕು. ಪ್ರಾದೇಶಿಕ ಅಸಮಾನತೆ ಇದೆ. ಕೋವಿಡ್ 1 ಮತ್ತು 2 ನೇ ಅಲೆಯನ್ನು ಯಶಸ್ವಿಯಾಗಿ ಎದುರಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ಇವೆರಲ್ಲರೂ ಹಗಲಿರುಳು ಕೆಲಸ ಮಾಡಿದ್ದಾರೆ!
ಕೊರೊನಾ ವೈರಸ್ ಎರಡೂ ಅಲೆಗಳನ್ನು ಸಮರ್ಥವಾಗಿ ಎದುರಿಸಿರುವುದು ಸುಲಭವೇನಲ್ಲ. ಎರಡೂ ಸಂಕಷ್ಟಗಳನ್ನು ಎದುರಿಸಿ ಸಮರ್ಥವಾಗಿ ನಿರ್ವಹಿಸಲಾಗುತ್ತಿದೆ. ಇದಕ್ಕಾಗಿ ಪೊಲೀಸ್, ವೈದ್ಯರು, ಪೌರಕಾರ್ಮಿಕರು ಹಗಲಿರುಳು ಕೆಲಸ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ಲಾಘಿಸಿದರು.
ವೈದ್ಯರು ದೇವರ ಪ್ರತಿನಿಧಿಗಳು. 108 ಕ್ಕೆ ಜಿ.ಪಿ.ಎಸ್ ಅಳವಡಿಸಿ. ಲ್ಯಾನ್ ವ್ಯವಸ್ಥೆ ಕಲ್ಪಿಸಿದಲ್ಲಿ , ಸುಲಭವಾಗಿ ಸಂಪರ್ಕ ಸಾಧಿಸಲು ಅನುಕೂಲವಾಗುತ್ತದೆ. ಜೀವ ಉಳಿಸುವ ಎಲ್ಲಾ ಪರಿಕರಗಳನ್ನು ವಾಹನದಲ್ಲಿ ವ್ಯವಸ್ಥೆ ಮಾಡಬೇಕು ಎಂದರು.
ಮತ್ತೊಂದು ಮಹತ್ವದ ಭರವಸೆ ಕೊಟ್ಟ ಸಿಎಂ!
ಮುಂದಿನ ದಿನಗಳಲ್ಲಿ ಆರೋಗ್ಯ ಮೂಲಸೌಕರ್ಯಗಳು ಹೆಚ್ಚಲಿವೆ. ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಕ್ರಮ ಕೈಗೊಳ್ಳಲು ಅಧಿಕಾಗಳಿಗೆ ಸೂಚಿಸಲಾಗಿದೆ. ವಿಶೇಷವಾಗಿ ಯಾಗದಿರಿ, ರಾಯಚೂರು, ಕಲಬುರಗಿ ಜಿಲ್ಲೆಗಳಲ್ಲಿ ಹೆಚ್ಚಿದೆ. ಇದೊಂದು ಪಿಡುಗು.ವಿಶ್ವದಲ್ಲಿ ಅತಿ ಹೆಚ್ಚು ಪೌಷ್ಟಿಕ ಆಹಾರದ ಕೊರತೆಯಿಂದ ಮಕ್ಕಳಿಗೆ ಅಂಧತ್ವ ಭಾರತ ದೇಶದಲ್ಲಿ ಉಂಟಾಗುತ್ತಿದೆ. ಕಟ್ಟ ಕಡೆಯ ವ್ಯಕ್ತಿಗೆ ಆರೋಗ್ಯ ಸಮಸ್ಯೆ ನಿವಾರಿಸಲು ಪ್ರಯತ್ನ ಮಾಡಬೇಕು. ಆರೋಗ್ಯ ಸೇವೆಗಳಲ್ಲಿ ಆಮೂಲಾಗ್ರ ಬದಲಾವಣೆ ತರಬೇಕು. ಸಮುದಾಯದ ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದರು.
Recommended Video
ಆರೋಗ್ಯ ಸೇವೆಯಲ್ಲಿ ಬೇಜವಾಬ್ದಾರಿ ಬೇಡ!
ಆರೋಗ್ಯ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಬೇಕು, ಇದರಲ್ಲಿ ಆಲಸ್ಯ ಬೇಜವಾಬ್ದಾರಿ ಇರಬಾರದು. ವೈದ್ಯಕೀಯ ಕೆಲಸ ದೇವರು ಮೆಚ್ಚುವ ಕೆಲಸ. ಕರ್ನಾಟಕ ಆರೋಗ್ಯ ಕರ್ನಾಟಕವಾಗಲಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಆಶಿಸಿದ್ದಾರೆ.
ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಸಹಕಾರ ಸಚಿವ ಎಸ್. ಟಿ. ಸೋಮಶೇಖರ್, ನಗಾರಭಿವೃದ್ಧಿ ಸಚಿವ ಬಿ. ಎ. ಬಸವರಾಜ, ಸಚಿವರಾದ ಬಿ. ಶ್ರೀರಾಮುಲು, ಮುನಿರತ್ನ, ಬಿ.ಡಿ.ಎ. ಅಧ್ಯಕ್ಷ ಎಸ್.ಆರ್. ವಿಶ್ವನಾಥ್, ಸಂಸದ ಪಿ.ಸಿ. ಮೋಹನ್ ಮತ್ತಿತರರು ಭಾಗವಹಿಸಿದ್ದರು.