ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವಂತೆ ಸಿಎಂ ಯಡಿಯೂರಪ್ಪರಿಗೆ ಒತ್ತಾಯ
ಬೆಂಗಳೂರು, ಡಿ.16: ರೈತರಿಗಾಗಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಅದರಿಂದಾಗಿ ಯಡಿಯೂರಪ್ಪ ತಮ್ಮ ಬಹು ಮಹತ್ವಾಕಾಂಕ್ಷೆಯ ಕೃಷಿ ಬಜೆಟ್ನ್ನು ಮತ್ತೆ ಮಂಡಿಸುವ ಸಾಧ್ಯತೆಗಳಿವೆ. ದೇಶದಲ್ಲೆ ಪ್ರಥಮ ಬಾರಿಗೆ 2011ರಲ್ಲಿ ಕೃಷಿ ಕ್ಷೇತ್ರಕ್ಕೆ ಪ್ರತ್ಯೇಕ ಬಜೆಟ್ ಮಂಡನೆ ಮಾಡುವ ಮೂಲಕ ಯಡಿಯೂರಪ್ಪ ದೇಶದ ಗಮನ ಸೆಳೆದಿದ್ದರು. ಈಗ ಮತ್ತೆ ಬಿಜೆಪಿ ಸರ್ಕಾರ ಬಂದಿದ್ದು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಹಣಕಾಸು ಸಚಿವರೂ ಆಗಿರುವ ಸಿಎಂ ಯಡಿಯೂರಪ್ಪ ಕೃಷಿ ವಲಯಕ್ಕೆ ಪ್ರತ್ಯೇಕ ಬಜೆಟ್ ಮಂಡಿಸುವುದು ಬಹುತೇಕ ಖಚಿತವಾಗಿದೆ.
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ರಾಜ್ಯವೊಂದರ ಚುಕ್ಕಾಣಿ ಹಿಡಿಯುಂತೆ ಮಾಡಿದ್ದು ಸಿಎಂ ಬಿ.ಎಸ್. ಯಡಿಯೂರಪ್ಪ. 2008ರಲ್ಲಿ ರೈತರ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ 2011ರಲ್ಲಿ ಕೃಷಿಗೆ ಪ್ರತ್ಯೇಕ ಬಜೆಟ್ ಮಂಡನೆ ಮಾಡಿದ್ದರು. ನಂತರ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೂ, ಮುಂದೆ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ ಹಾಗೂ ಜಗದೀಶ್ ಶೆಟ್ಟರ್ ಕೂಡ ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡಿದ್ದರು. 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸಿಎಂ ಸಿದ್ದರಾಮಯ್ಯ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸದೇ ಸಾಮಾನ್ಯ ಬಜೆಟ್ನಲ್ಲಿಯೆ ಕೃಷಿ ವಲಯವನ್ನು ಸೇರಿಸಿದ್ದರು.
ಕರ್ನಾಟಕ ಬಜೆಟ್ 2019 : ಯಡಿಯೂರಪ್ಪ ಹೇಳಿದ್ದೇನು?
ಬಿಜೆಪಿ ಸರ್ಕಾರದಲ್ಲಿ ಕೃಷಿಗೆ ಪ್ರತ್ಯೇಕ ಬಜೆಟ್
ಸಿಎಂ ಬಿ.ಎಸ್. ಯಡಿಯೂರಪ್ಪ ಮೊದಲ ಸಲ 2011 ಫೆಬ್ರುವರಿ 24ರಂದು 40 ಪುಟಗಳ ಕೃಷಿ ಬಜೆಟ್ ಮಂಡನೆ ಮಾಡಿದ್ದರು. ಕೃಷಿ ಬಜೆಟ್ ಓದಿದ ಬಳಿಕ 87 ಪುಟಗಳ ಸಾಮಾನ್ಯ ಬಜೆಟ್ ಮಂಡನೆ ಮಾಡಿದ್ದರು. ಆಗ ಪ್ರತ್ಯೇಕ ಕೃಷಿ ಬಜೆಟ್ಗೆ ಟೀಕೆ ಮಾಡಿದ್ದ ವಿಪಕ್ಷಗಳ ನಾಯಕರು, ಇದು ಕೃಷಿ ಬಜೆಟ್ ಅಲ್ಲ, ಕೃಷಿ ವಲಯದ ವಿವರಗಳನ್ನು ಪ್ರತ್ಯೇಕ ಪುಸ್ತಕದಲ್ಲಿ ಬರೆದಿದ್ದಾರೆ ಅಷ್ಟೇ, ಇದು ಗಿಮಿಕ್ ಎಂದಿದ್ದರು. ವಿಪಕ್ಷಗಳ ಟೀಕೆಯೆ ಮಧ್ಯೆಯೆ ರೈತರಿಗೆ ಹಲವು ಹೊಸ ಯೋಜನೆಗಳನ್ನು ಯಡಿಯೂರಪ್ಪ ಜಾರಿಗೆ ತಂದಿದ್ದರು. ಶೇ. 1ರ ಬಡ್ಡಿ ದರದಲ್ಲಿ ರೈತರಿಗೆ ಕೃಷಿ ಸಾಲ, 2011-2020ರ ದಶಕವನ್ನು ನೀರಾವರಿ ದಶಕವೆಂದು ಘೋಷಣೆ, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಡಿಪ್ಲೋಮಾ ಕೋರ್ಸ್ ಆರಂಭ, ಸಾವಯವ ಮಿಶನ್ ಸ್ಥಾಪನೆ ಸೇರಿದಂತೆ ಹಲವು ಯೋಜನೆ ಘೋಷಣೆ ಮಾಡಿದ್ದರು. ಒಟ್ಟು 17,857 ಕೋಟಿ ರೂ.ಗಳ ಕೃಷಿ ಬಜೆಟ್ನ್ನ ಯಡಿಯೂರಪ್ಪ ಮಂಡಿಸಿದ್ದರು. 2011ರ ಸಾಮಾನ್ಯ ಬಜೆಟ್ನ ಒಟ್ಟು ಗಾತ್ರ ಒಟ್ಟು 85,319 ಕೋಟಿ ರೂ.ಗಳಷ್ಟಾಗಿತ್ತು.
ಕೃಷಿ ಬಜೆಟ್ ಮಂಡಿಸಿದ್ದ ಶೆಟ್ಟರ್, ಡಿವಿಎಸ್
ಡಿನೊಟಿಫೀಕೇಶನ್ ಆರೋಪಗಳಿಂದ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕವೂ ನಂತರದ ಬಿಜೆಪಿ ಆಡಳಿತದಲ್ಲಿ ಮತ್ತೆರಡು ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡಲಾಗಿತ್ತು. 2012-13ನೇ ಸಾಲಿನಲ್ಲಿ ಮುಖ್ಯಮಂತ್ರಿಯಾಗಿದ್ದ ಡಿ.ವಿ. ಸದಾನಂದಗೌಡ ಅವರು ಯಡಿಯೂರಪ್ಪ ಮಾದರಿಯಲ್ಲೇ ಕೃಷಿ ಬಜೆಟ್ ಮಂಡನೆ ಮಾಡಿದ್ದರು. 2012ರ ಮಾರ್ಚ್ 21ರಂದು ಮಂಡನೆ ಮಾಡಿದ್ದ ಕೃಷಿ ಬಜೆಟ್ನಲ್ಲಿ ಒಟ್ಟು 19,660 ಕೋಟಿ ರೂ.ಗಳಿಗೆ ಕೃಷಿ ಬಜೆಟ್ ಗಾತ್ರ ಹೆಚ್ಚಿಸಿದ್ದರು. ಆ ವರ್ಷ ಸಾಮಾನ್ಯ ಬಜೆಟ್ ಗಾತ್ರ 1,03,369 ಕೋಟಿ ರೂ.ಗಳಿಗೆ ಏರಿಕೆ ಆಗಿತ್ತು. ಬಿಜೆಪಿ ಆಡಳಿತ ಕೊನೆಯಲ್ಲಿ 2013-14ನೇ ಸಾಲಿನಲ್ಲಿ ಚುನಾವಣಾ ವರ್ಷದ ಬಜೆಟ್ ಮಂಡಿಸಿದ್ದ ಜಗದೀಶ್ ಶೆಟ್ಟರ್ ಕೂಡ ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡಿದ್ದರು. 2013 ಫೆಬ್ರುವರಿ 8ರಂದು ಒಟ್ಟು 22,310 ಕೋಟಿ ರೂ.ಗಳ ಕೃಷಿ ಬಜೆಟ್ ಮಂಡನೆ ಮಾಡಿದ್ದರು. ಅದರ ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ. 13.5ರಷ್ಟು ಹೆಚ್ಚು ಹಣವನ್ನ ಶೆಟ್ಟರ್ ಮೀಸಿಲಿರಿಸಿದ್ದರು. ಯಡಿಯೂರಪ್ಪ ಆರಂಭಿಸಿದ್ದ ಕೃಷಿ ಬಜೆಟ್ ಬಿಜೆಪಿ ಸರ್ಕಾರದಲ್ಲಿ 3 ಬಾರಿ ಮಂಡನೆ ಮಾಡಲಾಗಿತ್ತು.
ಮಕ್ಕಳಿಗಾಗಿ ವಿಶೇಷ ಬಜೆಟ್: ಮುಂದಿನ ವರ್ಷದಿಂದ ಜಾರಿ ಸಾಧ್ಯತೆ
ಸಿಎಂಗೆ ಪತ್ರ ಬರೆದ ಪ್ರಾಣೇಶ್
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್, ಪ್ರಸಕ್ತ ಸಾಲಿನಲ್ಲಿ ಮತ್ತೆ ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ರೈತರು ಕಷ್ಟಪಟ್ಟು ಬೆಳೆಯುವ ಬೆಳಗಳಿಗೆ ಸೂಕ್ತ ಬೆಲೆ ಸಿಗುವಂತಾಗಬೇಕು. 2011-12ನೇ ಸಾಲಿನಂತೆಯೆ 2020-21ನೇ ಸಾಲಿಗೂ ಪ್ರತ್ಯೇಕ ಬಜೆಟ್ ಮಂಡನೆ ಮಾಡಬೇಕು. ದೇಶದ ಜಿ.ಡಿ.ಪಿ.ಗೆ ರೈತರ ಕೊಡುಗೆ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ರೈತರ ಏಳಿಗೆಗಾಗಿ, ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಮತ್ತೊಮ್ಮೆ ಕೃಷಿ ಬಜೆಟ್ ಮಂಡನೆಗೆ ಮುಂದಾಗಬೇಕು. ಆ ಮೂಲಕ ರೈತರ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಆದರೆ ಬೇರೆ ವಲಯಗಳಿಗೆ ಆದ್ಯತೆ
2011ರಲ್ಲಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ್ದರೂ ಬಿ.ಎಸ್. ಯಡಿಯೂರಪ್ಪ ಅವರು ಉನ್ನತ ಶಿಕ್ಷಣ, ಇಂಧನ, ನಗರಾಭಿವೃದ್ಧಿ ಇಲಾಖೆಗಳಿಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದರು ಎಂದು ಆರ್ಥಿಕ ತಜ್ಙರು ವಿಶ್ಲೇಶಣೆ ಮಾಡಿದ್ದರು. 2012ರಲ್ಲಿ ಬಜೆಟ್ ಮಂಡಿಸಿದ್ದ ಆಗಿನ ಸಿಎಂ ಡಿ.ವಿ. ಸದಾನಂದಗೌಡ ಕೃಷಿ, ಮೀನುಗಾರಿಕೆ, ನೀರಾವರಿ, ಹೈನುಗಾರಿಕೆ ವಯಲಗಳಿಗೆ ಆದ್ಯತೆ ಕೊಟ್ಟಿದ್ದರು. ಸದಾನಂದಗೌಡರು ಬಜೆಟ್ ಮಂಡನೆ ಮಾಡುವಾದ ಯಡಿಯೂರಪ್ಪ ಅವರು ಕೃಷಿ ವಲಯಕ್ಕೆ ಆದ್ಯತೆ ಕೊಡಲು ಸೂಚಿಸಿದ್ದರು ಎಂಬ ಮಾಹಿತಿ ಕೇಳಿ ಬಂದಿತ್ತು. ನಂತರ 2013ರಲ್ಲಿ ಚುನಾವಣೆ ವರ್ಷದ ಬಜೆಟ್ ಮಂಡಿಸಿದ್ದ ಜಗದೀಶ್ ಶೆಟ್ಟರ್ ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ ಕೊಟ್ಟಿದ್ದರು ಎಂದು ಆರ್ಥಿಕ ತಜ್ಙರು ವಿಶ್ಲೇಷಣೆ ಮಾಡಿದ್ದಾರೆ.
ಉಳುವಾ ಯೋಗಿಯ ನೋಡಿಲ್ಲಿ
ಪ್ರತ್ಯೇಕ ಬಜೆಟ್ ಮಂಡಿಸಿದ್ದ ದಿನ ರೇಸ್ಕೋರ್ಸ್ ರಸ್ತೆಯ ನಿವಾಸದಿಂದ ಸುಮಾರು 5 ಸಾವಿರ ರೈತರೊಂದಿಗೆ ಚಾಲುಕ್ಯ ವೃತ್ತದವರೆಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಮೆರವಣಿಗೆ ಮಾಡಿದ್ದರು. ರಾಷ್ಟ್ರಕವಿ ಕುವೆಂಪು ರಚಿಸಿದ್ದ ರೈತಗೀತೆ "ಉಳುವಾ ಯೋಗಿಯ ನೋಡಿಲ್ಲ" ಹಾಡಿನೊಂದಿಗೆ ರೈತರು ಭಾಗವಹಿಸಿದ್ದರು. ನಂತರ ಕೈಯಲ್ಲಿ ಕೆಂಪುಬಣ್ಣದ ಸೂಟ್ಕೇಸ್ ಹಿಡಿದುಕೊಂಡು ವಿಧಾನಸೌಧ ಪ್ರವೇಶಿಸಿದ್ದರು. ಕೃಷಿ ಬಜೆಟ್ ಮಂಡನೆಗೂ ಮುನ್ನ ಸಂಪುಟ ಸಭೆಯಲ್ಲಿ 'ಕೃಷಿ ಬಜೆಟ್'ಗೆ ಒಪ್ಪಿಗೆ ಪಡೆದುಕೊಮಡಿದ್ದರು. ಇದೀಗ ಮತ್ತೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಮತ್ತೆ ಕೃಷಿ ಬಜೆಟ್ ಮಾಡುತ್ತಾರೆ ಎಂಬ ಮಾಹಿತಿಯೂ ಇದೆ. ಹಾಗಾಗಿ ನಾಡಿನ ರೈತರು ಹೊಸ ಆಶಾಭಾವನೆ ಇಟ್ಟುಕೊಂಡಿದ್ದಾರೆ. ಬೆಳಗಾವಿಯಲ್ಲಿ ಬಜೆಟ್ ಅಧಿವೇಶನ ನಡೆಯುವ ಸಾಧ್ಯತೆಗಳಿದ್ದು, ಸುವರ್ಣಸೌಧದಲ್ಲಿ ಕೃಷಿ ಬಜೆಟ್ ಮಂಡನೆ ಆಗಲಿದೆ ಎಂಬ ನಿರೀಕ್ಷೆಯಲ್ಲಿ ನಾಡಿನ ರೈತರಿದ್ದಾರೆ.