ಹಿರಿಯ ಸಂಶೋಧಕ ಚಿದಾನಂದ ಮೂರ್ತಿ ನಿಧನ
ಬೆಂಗಳೂರು, ಜನವರಿ 11: ಹಿರಿಯ ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ(88) ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಚಿದಾನಂದಮೂರ್ತಿ ಆಸ್ಪತ್ರೆಯಲ್ಲಿ ಕೊನಯುಸಿರೆಳೆದಿದ್ದಾರೆ. ಪಾರ್ಥಿವ ಶರೀರವನ್ನು 7 ಗಂಟೆಗೆ ಅವರ ನಿವಾಸಕ್ಕೆ ತರಲಾಗುವುದು ಎಂದು ತಿಳಿದುಬಂದಿದೆ.
ನಾಡಿನ ಹಿರಿಯ ಸಾಹಿತಿ, ಇತಿಹಾಸಜ್ಞ, ಹೋರಾಟಗಾರ, ವಿಶೇಷವಾಗಿ ಹಂಪೆಯ ಜೊತೆ ಬಹಳ ಆಪ್ತತೆ ಬೆಳೆಸಿಕೊಂಡಿದ್ದ, ಕನ್ನಡ ನಾಡಿನ ನೆಲ-ಜಲ-ಭಾಷೆ-ಸಂಸ್ಕೃತಿಯ ಕಾವಲುಗಾರನ ರೀತಿ ತನ್ನ ಜೀವನವನ್ನೇ ಮುಡುಪಾಗಿಟ್ಟ ಶ್ರೀ ಎಂ ಚಿದಾನಂದಮೂರ್ತಿಗಳು ಇನ್ನಿಲ್ಲ ಎಂಬ ಸುದ್ದಿ ಕೇಳಿ ಆಘಾತವಾಗಿದೆ.
ಅವರ ಆತ್ಮಕ್ಕೆ ಸದ್ಗತಿ ದೊರಕಲಿ. ಎಂದು ಸಚಿವ ಸುರೇಶ್ ಕುಮಾರ್ ಚಿದಾನಂದಮೂರ್ತಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಚಿದಾನಂದ ಮೂರ್ತಿಯವರು (ಮೇ 10, 1931), ಓರ್ವ ಕನ್ನಡದ ಲೇಖಕ, ವಿದ್ವಾಂಸ, ಸಂಶೋದಕ ಹಾಗು ಇತಿಹಾಸಜ್ಞ. ಕನ್ನಡ ಭಾಷೆ ಹಾಗೂ ಕರ್ನಾಟಕದ ಇತಿಹಾಸದ ಕ್ಷೇತ್ರದಲ್ಲಿ ಪ್ರಸಿದ್ಧಿಯಾಗಿದ್ದಾರೆ. ಇವರು ಹಂಪಿಯ ಸ್ಮಾರಕಗಳನ್ನು ಉಳಿಸಲು ಹಾಗು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ಗಳಿಸಲು ಮಾಡಿದ್ದ ಚಳವಳಿಗೆ ಪ್ರಸಿದ್ಧರಾಗಿದ್ದರು.
ಆರಂಭದ ಕೆಲವು ವರ್ಷ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದ ಚಿದಾನಂದಮೂರ್ತಿಗಳು 1957ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿನಲ್ಲಿ ಅಧ್ಯಾಪಕರಾದರು.
1960ರ ಹೊತ್ತಿಗೆ ಮೈಸೂರಿನ ಮಾನಸಗಂಗೋತ್ರಿಯ ಸ್ನಾತಕೋತ್ತರ ಕನ್ನಡ ವಿಭಾಗದ ಅಧ್ಯಾಪಕರಾದರು.
ಕೃತಿಗಳು: ವೀರಶೈವ ಧರ್ಮ,ವಾಗರ್ಥ,ವಕಾನ ಸಾಹಿತ್ಯ ,ಸಂಶೋಧನಾ ತರಂಗ ಸರಸ,ಪಾಂಡಿತ್ಯ ರಸ,ಲಿಂಗಾಯತ ಅಧ್ಯಯನಗಳು,ಕರ್ನಾಟಕ ಸಂಸ್ಕ್ರತಿ,ಹೊಸತು ಹೊಸತು,ಕವಿರಾಜಮಾರ್ಗಕ್ಕೆ ಹಿಂದಿನ ಕನ್ನಡ ಸಾಹಿತ್ಯ,ಕರ್ನಾಟಕ-ನೇಪಾಳ ಪ್ರಸಾರಾಂಗ.
|
ಚಿದಾನಂದಮೂರ್ತಿ ನಿಧನಕ್ಕೆ ಯಡಿಯೂರಪ್ಪ ಸಂತಾಪ
ಘನ ವಿದ್ವಾಂಸರು, ಅಪ್ರತಿಮ ಸಂಶೋಧಕರು, ಇತಿಹಾಸ ತಜ್ಞರು, ನಾಡು ನುಡಿಯ ಅಸ್ಮಿತೆಗೆ ಸದಾ ಹೋರಾಡಿದವರು ಶ್ರೀ ಚಿದಾನಂದ ಮೂರ್ತಿಯವರು. ಅವರ ನಿಧನದ ಸುದ್ದಿಯಿಂದ ಆಘಾತವಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ. ಕುಟುಂಬ ಮತ್ತು ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಎಚ್ಡಿ ಕುಮಾರಸ್ವಾಮಿ ಸಂತಾಪ
ಹಿರಿಯ ಸಂಶೋಧಕ,ಕನ್ನಡ ಗರುಡ ಡಾ. ಚಿದಾನಂದ ಮೂರ್ತಿ ಅವರ ನಿಧನದಿಂದ ನಾಡು ಅಪರೂಪದ ವಿದ್ವಾಂಸರನ್ನು ಕಳೆದುಕೊಂಡಿದೆ.ಕನ್ನಡ ಶಕ್ತಿ ಕೇಂದ್ರ ಸ್ಥಾಪಿಸಿದ್ದ 'ಚಿಮೂ'ಎಂದೇ ಖ್ಯಾತರಾಗಿದ್ದ ಹಿರಿಯ ಜೀವ ನಾಡುನುಡಿಜಲಕ್ಕಾಗಿ ಅಹರ್ನಿಶಿ ಶ್ರಮಿಸಿದ್ದರು. ಮೃತರ ಕುಟುಂಬ ಸದಸ್ಯರಿಗೆ,ಅವರ ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ
ಚಿದಾನಂದಮೂರ್ತಿ ನಿಧನಕ್ಕೆ ಶ್ರೀರಾಮುಲು ಸಂತಾಪ
ಇತಿಹಾಸ ತಜ್ಞ, ಅಪ್ರತಿಮ ಸಂಶೋಧಕ, ಭಾಷಾಶಾಸ್ತ್ರಜ್ಞ ಹಾಗೂ ಸಾಹಿತಿಗಳಾದ ಶ್ರೀ. ಚಿದಾನಂದ ಮೂರ್ತಿ (ಚೀ.ಮೂ) ಅವರ ನಿಧನದಿಂದಾಗಿ ಕನ್ನಡ ನಾಡು ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಅವರ ಕುಟುಂಬ ವರ್ಗದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಚಿದಾನಂದಮೂರ್ತಿಯವರದ್ದು ನೇರನುಡಿ ವ್ಯಕ್ತಿತ್ವ
ಹಿರಿಯ ಸಾಹಿತಿ,ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ನಿಧನದ ಸುದ್ದಿ ತಿಳಿದು ದು:ಖವಾಯಿತು. ಅವರ ಸಂಶೋಧನೆ ಮತ್ತು ಸಾಹಿತ್ಯದ ಜೊತೆಯಲ್ಲಿ ಅವರ ನೇರ ನಡೆ-ನುಡಿ, ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ಮೀರಿದ ಸ್ನೇಹ ಶೀಲ ಗುಣವನ್ನೂ ನಾಡು ಸದಾ ಸ್ಮರಿಸುತ್ತದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು.