ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರರಾವ್ ಸ್ವಯಂ ನಿವೃತ್ತಿ ಘೋಷಣೆ ಮಾಡಿದ್ದು ಯಾಕೆ?
ಬೆಂಗಳೂರು, ಸೆ. 17: ಕರ್ನಾಟಕ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರರಾವ್ ನಿವೃತ್ತಿಗೂ ಮೂರು ವರ್ಷ ಇರುವ ಮೊದಲೇ ಸ್ವಯಂ ನಿವೃತ್ತಿ ಪಡೆಯಲು ಮುಂದಾಗಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದ ಭಾಸ್ಕರರಾವ್ ಸದ್ಯ ರೈಲ್ವೇ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂರು ವರ್ಷ ಸೇವೆ ಇರುವ ಮೊದಲೇ ಸ್ವಯಂ ನಿವೃತ್ತಿ ಬಯಸಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಅರ್ಜಿ ಸಲ್ಲಿಸಿದ್ದಾರೆ. ಭಾಸ್ಕರರಾವ್ ರಾಜಕೀಯಕ್ಕೆ ಎಂಟ್ರಿ ಕೊಡಲು ಚಿಂತನೆ ನಡೆಸಿದ್ದಾರೆ ಎಂಬ ಚರ್ಚೆ ಶುರುವಾಗಿದೆ.
ಮೂಲತಃ ಬೆಂಗಳೂರಿನವರೇ ಆಗಿರುವ ಭಾಸ್ಕರರಾವ್ ಅವರ ಪೋನ್ ಟ್ಯಾಪ್ ಪ್ರಕರಣ ರಾಜ್ಯದಲ್ಲಿ ದೊಡ್ಡ ಸದ್ದು ಮಾಡಿತ್ತು. ಬಹುಕೋಟಿ ವಂಚನೆ ಪ್ರಕರಣ ಆರೋಪಿ ಜತೆ ಭಾಸ್ಕರರಾವ್ ಮಾತನಾಡಿದ್ದಾರೆ ಎನ್ನಲಾದ ಅಡಿಯೋ ಸ್ಫೋಟಗೊಂಡಿತ್ತು. ಈ ವೇಳೆ ರಾಜಕಾರಣಿಗಳ ಹಾಗೂ ಮಠದ ಸ್ವಾಮೀಜಿಗಳ ಪೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಮತ್ತೊಬ್ಬ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅಡಿಯೋ ಬಿಡುಗಡೆ ಮಾಡಿಸಿದ್ದರು ಎಂದು ಭಾಸ್ಕರರಾವ್ ಆರೋಪಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ವಹಿಸಲಾಗಿತ್ತು.
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹುದ್ದೆ ಅಲಂಕರಿಸಿದ್ದ ಇಬ್ಬರು ಐಪಿಎಸ್ ಅಧಿಕಾರಿಗಳ ಮುಸುಕಿನ ಗುದ್ದಾಟ ತಾರಕಕ್ಕೇರಿತ್ತು. ಪ್ರಕರಣ ಕುರಿತು ತನಿಖೆ ನಡೆಸಿದ್ದ ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ಇತ್ತೀಚೆಗೆ ಬಿ ವರದಿ ಸಲ್ಲಿಸಿದ್ದರು. ಅಡಿಯೋ ಬಿಡುಗಡೆ, ಪೋನ್ ಟ್ಯಾಪಿಂಗ್ ಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂದು ಸಿಬಿಐ ವರದಿಯಲ್ಲಿ ಉಲ್ಲೇಖಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಭಾಸ್ಕರರಾವ್ ತಕರಾರು ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪೋನ್ ಟ್ಯಾಪಿಂಗ್ ಮತ್ತು ಅಡಿಯೋ ಲೀಕ್ ಕುರಿತು ಸಿಬಿಐ ಸಮರ್ಥ ತನಿಖೆ ನಡೆಸಿಲ್ಲ ಎಂದು ಆರೋಪಿಸಿದ್ದರು.
ಇದೀಗ ಭಾಸ್ಕರರಾವ್ ದಿಢೀರ್ ಸ್ವಯಂ ನಿವೃತ್ತಿ ಕೋರಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರಿಗೆ ಮನವಿ ನೀಡಿದ್ದಾರೆ. ಅರ್ಜಿಯನ್ನು ಇನ್ನೂ ಸರ್ಕಾರ ಪರಿಗಣಿಸಿಲ್ಲ. ಒಂದು ವೇಳೆ ಸ್ವಯಂ ನಿವೃತ್ತಿ ಅರ್ಜಿ ಅಂಗೀಕರಿಸಿದರೆ, ಮೂರು ವರ್ಷ ಸೇವೆ ಇರುವ ಮೊದಲೇ ಐಪಿಎಸ್ ಹುದ್ದೆಯಿಂ ಭಾಸ್ಕರರಾವ್ ನಿರ್ಗಮಿಸಲಿದ್ದಾರೆ.
ಸ್ವಯಂ ನಿವೃತ್ತಿಗೆ ಕಾರಣ ಏನು ?
ಭಾಸ್ಕರರಾವ್ ಅವರನ್ನು ಸರ್ಕಾರ ಸರಿಯಾಗಿ ನಡೆಸಿಕೊಂಡಿಲ್ಲ. ಇದರಿಂದ ಬೇಸರಗೊಂಡು ಐಪಿಎಸ್ ಹುದ್ದೆಯಿಂದ ಸ್ವಯಂ ನಿವೃತ್ತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಬೆಂಗಳೂರಿನವರೇ ಆದ ಭಾಸ್ಕರರಾವ್ ಅವರು ವರ್ಚಸ್ಸು ಹೊಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆಯೂ ಭಾಸ್ಕರರಾವ್ ಸ್ವಯಂ ನಿವೃತ್ತಿ ಪಡೆದು ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ಸ್ವಯಂ ನಿವೃತ್ತಿ ಪಡೆಯುತ್ತಿರುವುದು ರಾಜಕೀಯ ಎಂಟ್ರಿಗಾ? ರಾಜಕೀಯಕ್ಕೆ ಎಂಟ್ರಿಯಾಗುವುದಾರೆ ಯಾವ ಪಕ್ಷ ಸೇರುತ್ತಾರೆ ಎಂಬುದಕ್ಕೆ ಕಾಲವೇ ಉತ್ತರ ನೀಡಲಿದೆ.
Recommended Video
ಸ್ವಯಂ ನಿವೃತ್ತಿ ಕುರಿತು ಸುದ್ದಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಭಾಸ್ಕರರಾವ್, ಸ್ವಯಂ ನಿವೃತ್ತಿ ಕೋರಿ ಅರ್ಜಿ ಸಲ್ಲಿಸಿರುವುದು ನಿಜ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಉಳಿದಂತೆ ರಾಜಕೀಯ ಎಂಟ್ರಿ, ಸರ್ಕಾರ ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಆರೋಪ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಪೋನ್ ಟ್ಯಾಪ್ ಪ್ರಕರಣದಲ್ಲಿ ಭಾಸ್ಕರರಾವ್ ಅವರನ್ನು ನಡೆಸಿಕೊಂಡ ರೀತಿಯಿಂದ ಬೇಸತ್ತು ಐಪಿಎಸ್ ಹುದ್ದೆಯಿಂದ ನಿರ್ಗಮಿಸಲು ಮುಂದಾಗಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.