ಮಾತು ತಪ್ಪದ ಡಿಕೆಶಿ: ಮೆಜಿಸ್ಟಿಕ್ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಭರ್ಜರಿ ಶಕ್ತಿ ಪ್ರದರ್ಶನ
ರಾಜಧಾನಿಯಿಂದ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸುವ ವ್ಯವಸ್ಥೆಯನ್ನು ರಾಜ್ಯ ಸರಕಾರ ಸರಿಯಾಗಿ ನಿಭಾಯಿಸದೇ ವಿರೋಧ ಪಕ್ಷ ಕಾಂಗ್ರೆಸ್ಸಿಗೆ ಪ್ರಬಲ ಅಸ್ತ್ರವನ್ನು ತಾನಾಗಿಯೇ ಉಡುಗೊರೆ ನೀಡಿದೆ.
ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಬಳಸಿಕೊಳ್ಳುತ್ತಿರುವ ರಾಜ್ಯ ಕಾಂಗ್ರೆಸ್ ಮುಖಂಡರು, ರಾಜಧಾನಿಯ ಕೇಂದ್ರ ಬಸ್ ನಿಲ್ದಾಣದಲ್ಲಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಲದೇ ಬೀಡುಬಿಟ್ಟಿದ್ದಾರೆ.
ಸ್ವಂತ ಊರಿಗೆ ತೆರಳಲು ಬಸ್ ನಿಲ್ದಾಣದ ಕಡೆ ಕಾರ್ಮಿಕರ ದಾಂಗುಡಿ
ಶನಿವಾರ (ಮೇ 2) ಡಿ.ಕೆ.ಶಿವಕುಮಾರ್, ಸಲೀಂ ಅಹಮದ್ ಮುಂತಾದ ಮುಖಂಡರು ಮಾತ್ರ ಮೆಜಿಸ್ಟಿಕ್ ಬಸ್ ನಿಲ್ದಾಣದಲ್ಲಿದ್ದರೆ, ಭಾನುವಾರ, ರಾಜ್ಯ ಕಾಂಗ್ರೆಸ್ಸಿನ ಘಟಾನುಗಟಿ ನಾಯಕರು, ಸರಕಾರದ ವಿರುದ್ದದ ಹೋರಾಟಕ್ಕೆ ಕೈಜೋಡಿಸಿದ್ದಾರೆ.
ಕೆಎಸ್ಆರ್ಟಿಸಿ ಬಸ್ನಲ್ಲಿ ಸಂಚಾರ ನಡೆಸುವ ಕಾರ್ಮಿಕರಿಗೆ ಸೂಚನೆಗಳು
ಡಿಕೆಶಿ, ಸಿದ್ದರಾಮಯ್ಯ, ಎಚ್.ಕೆ.ಪಾಟೀಲ್, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಸಲೀಂ ಅಹಮದ್ ಆದಿಯಾಗಿ, ಪ್ರಮುಖ ಮುಖಂಡರು, ಕಾರ್ಮಿಕರ ಯೋಗಕ್ಷೇಮ ವಿಚಾರಿಸುವ ಹೆಸರಿನಲ್ಲಿ, ಬಸ್ ನಿಲ್ದಾಣದಲ್ಲಿ, ಪಕ್ಷದ ಪರ ಹೋರಾಟಕ್ಕೆ ನಿಂತಿದ್ದಾರೆ.
ಸರಕಾರ ಯೋಜನಾಬದ್ದವಾಗಿ ಕೆಲಸ ಮಾಡಿಲ್ಲ ಎನ್ನುವುದು ಸ್ಪಷ್ಟ
ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸುವ ವಿಚಾರದಲ್ಲಿ ಯಡಿಯೂರಪ್ಪ ಸರಕಾರ ಯೋಜನಾಬದ್ದವಾಗಿ ಕೆಲಸ ಮಾಡಿಲ್ಲ ಎನ್ನುವುದು ಇಲ್ಲಿ ಅತ್ಯಂತ ಸ್ಪಷ್ಟ. ಮೊದಲು, ದುಪ್ಪಟ್ಟು ಬಸ್ ದರ ನಿಗದಿ ಪಡಿಸಿ, ಆಮೇಲೆ ಪ್ರತಿಭಟನೆ ವ್ಯಕ್ತವಾದ ನಂತರ, ಅದನ್ನು ಇಳಿಸಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನರು ಮೆಜಿಸ್ಟಿಕ್ ಕಡೆ ಬಂದಿದ್ದರಿಂದ, ವಲಸೆ ಕಾರ್ಮಿಕರ ಪಾಡು ಹೇಳತೀರದಾಗಿತ್ತು.
ಕಾರ್ಮಿಕರು ಹೈರಾಣವಾಗಿ ಹೋಗಿದ್ದರು
ಇದರ ಮುಂದುವರಿದ ಭಾಗವಾಗಿ ಭಾನುವಾರ, ಸರಕಾರ ನಿರೀಕ್ಷಿಸದ ಮಟ್ಟದಲ್ಲಿ ಜನ ಆಗಮಿಸಿದ್ದರಿಂದ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು, ಪೊಲೀಸರು ಪರದಾಡುವಂತಾಯಿತು. ಊಟ ತಿಂಡಿ, ನೀರಿನ ವ್ಯವಸ್ಥೆಯಿಲ್ಲದೇ ಕಾರ್ಮಿಕರು ಹೈರಾಣವಾಗಿ ಹೋಗಿದ್ದರು. ಆ ವೇಳೆ, ಕಾಂಗ್ರೆಸ್ ಮುಖಂಡರ ರಂಗ ಪ್ರವೇಶವಾಯಿತು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಒಂದು ಕೋಟಿಯ ಚೆಕ್
ಶನಿವಾರವೇ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸರಕಾರಕ್ಕೆ, ದುಡ್ಡು ಬೇಕಿದ್ದರೆ ಕೇಳಿ, ಭಿಕ್ಷೆ ಎತ್ತಿಯಾದರೂ ಕೊಡುತ್ತೇನೆ ಎಂದಿದ್ದರು. ಅದರಂತೇ, ಹಿರಿಯ ಮುಖಂಡರ ಜೊತೆ ಆಗಮಿಸಿದ ಡಿಕೆಶಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಒಂದು ಕೋಟಿಯ ಚೆಕ್ ಅನ್ನು ಕಳುಹಿಸಿಕೊಟ್ಟರು. "ಇನ್ನೂ ಬೇಕಾದರೂ ಕೇಳಿ, ಕೊಡುತ್ತೇವೆ" ಎಂದು ಹೇಳಿದ್ದು, ರಾಜ್ಯ ಬೊಕ್ಕಸ ಬರಿದಾಗಿರುವ ಲಕ್ಷಣವೇ ಎನ್ನುವಂತಿತ್ತು.
ಡಿಕೆಶಿ ಮತ್ತು ಸಿದ್ದರಾಮಯ್ಯ, ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡಿದರು
ಬಸ್ಸಿನೊಳಗೆ ಹೋಗಿ, ಡಿಕೆಶಿ ಮತ್ತು ಸಿದ್ದರಾಮಯ್ಯ, ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡಿದರು. "ಊಟದ ವ್ಯವಸ್ಥೆಯನ್ನೂ ಮಾಡಿದ್ದೇವೆ, ನೀವೇನೂ ಚಿಂತಿಸಬೇಡಿ, ನಾವಿದ್ದೇವೆ" ಎಂದರು. ಕಾರ್ಮಿಕರು ಹೋಗುವ ಬಸ್ಸುಗಳನ್ನು ಪರಿಶೀಲಿಸಿದರು.
ಸಿಕ್ಕ ಅವಕಾಶವನ್ನು ಡಿಕೆಶಿ ಎಂಡ್ ಟೀಮ್ ಭರ್ಜರಿಯಾಗಿ ಬಳಸಿಕೊಂಡಿತು
ಕಾರ್ಮಿಕರ ಪಡುತ್ತಿರುವ ತೊಂದರೆಯನ್ನು ನೋಡಿ, ಮುಖ್ಯಮಂತ್ರಿ ಯಡಿಯೂರಪ್ಪ, ಮೂರು ದಿನಗಳ ಉಚಿತ ಪ್ರಯಾಣ ವ್ಯವಸ್ಥೆಯನ್ನು ಘೋಷಿಸಿದರು. ಅತ್ತ, ಕೆಪಿಸಿಸಿ ನೀಡಿದ ಒಂದು ಕೋಟಿ ರೂಪಾಯಿ ಚೆಕ್ ಅನ್ನು ಕೆಎಸ್ಆರ್ ಟಿಸಿ ಸ್ವೀಕರಿಸಿಲ್ಲ ಎನ್ನುವ ಮಾಹಿತಿಯಿದೆ. ಒಟ್ಟಿನಲ್ಲಿ, ಕೊರೊನಾದ ಈ ಸಂಕಷ್ಟದಲ್ಲೂ ಈ ವಿದ್ಯಮಾನಗಳನ್ನು ನೋಡಿದರೆ, ಸರಿಯಾಗಿ ಪ್ರಯಾಣದ ವ್ಯವಸ್ಥೆ ಮಾಡದೇ ಸರಕಾರ ಪೇಚಿಗೆ ಸಿಲುಕಿದರೆ, ಸಿಕ್ಕ ಅವಕಾಶವನ್ನು ಡಿಕೆಶಿ ಎಂಡ್ ಟೀಮ್ ಭರ್ಜರಿಯಾಗಿ ಬಳಸಿಕೊಂಡಿತು.