ಹಿರಿಯರಿಗೆ ಸಿಗದ ಡಿಸಿಎಂ ಹುದ್ದೆ: ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ?
Recommended Video
ಬೆಂಗಳೂರು, ಆಗಸ್ಟ್ 27: ಮೊದಲ ಹಂತದ ಸಚಿವ ಸಂಪುಟ ರಚನೆಯಾಗಿ ಮೂರು ದಿನಗಳ ಬಳಿಕ ಖಾತೆ ಹಂಚಿಕೆಯಾದ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮಗೆ ಸ್ವಲ್ಪ ನಿರಾಳತೆ ಸಿಗಲಿದೆ ಎಂದು ಭಾವಿಸಿದ್ದರು. ಆದರೆ, ಖಾತೆ ಹಂಚಿಕೆ ಇನ್ನಷ್ಟು ಬಿಕ್ಕಟ್ಟು ಸೃಷ್ಟಿಸಿದೆ. ಸಚಿವ ಸ್ಥಾನ ಸಿಗದೆ ಅನೇಕರು ಬೇಸರ ವ್ಯಕ್ತಪಡಿಸಿದ್ದರು. ಈಗ ಹಂಚಿಕೆಯಾಗಿರುವ ಖಾತೆ ಬಗ್ಗೆ ಅಸಮಾಧಾನ ಸ್ಫೋಟಗೊಂಡಿದೆ. ಮುಖ್ಯವಾಗಿ ಪ್ರಮುಖ ನಾಯಕರೇ ಸಿಡಿದೆದ್ದಿದ್ದಾರೆ. ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಉಪ ಮುಖ್ಯಮಂತ್ರಿ ಹುದ್ದೆಗೆ ಆಕಾಂಕ್ಷಿಗಳಾಗಿದ್ದವರ ಪಟ್ಟಿ ದೊಡ್ಡದಿತ್ತು, ಹಿರಿಯ ನಾಯಕರು ಡಿಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರು. ಆದರೆ, ಹೈಕಮಾಂಡ್ ಈ ಎಲ್ಲ ಪ್ರಬಲ ಆಕಾಂಕ್ಷಿಗಳನ್ನು ಕಡೆಗಣಿಸಿ ಬೇರೆಯವರಿಗೆ ಆದ್ಯತೆ ನೀಡಿದೆ.
ಖಾತೆ ಹಂಚಿಕೆ ಫೈನಲ್, ಇಲ್ಲಿದೆ ಅಧಿಕೃತ ಪಟ್ಟಿ
ಸಾಕಷ್ಟು ಲೆಕ್ಕಾಚಾರ ಹಾಕಿರುವ ಹೈಕಮಾಂಡ್, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಮತ್ತು ಡಾ. ಅಶ್ವತ್ಥನಾರಾಯಣ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಹಿರಿಯರಿಗೆ ಆಘಾತ ನೀಡಿದೆ.
ಉಪಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದ ಕೆಎಸ್ ಈಶ್ವರಪ್ಪ, ಆರ್. ಅಶೋಕ್, ಜಗದೀಶ್ ಶೆಟ್ಟರ್ ಮತ್ತು ಬಿ ಶ್ರೀರಾಮುಲು ಪಕ್ಷದ ವಿರುದ್ಧ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಸಿಗದೆ ಮತ್ತು ಪ್ರಮುಖ ಖಾತೆ ಸಿಗದೆ ಸಿಟಿ ರವಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಅಶೋಕ್ ಅಸಮಾಧಾನ
ಒಮ್ಮೆ ಉಪಮುಖ್ಯಮಂತ್ರಿಯಾಗಿ ಮತ್ತು ಗೃಹ ಸಚಿವರಾಗಿ ಕೂಡ ಕಾರ್ಯನಿರ್ವಹಿಸಿರುವ ಆರ್. ಅಶೋಕ್, ಅದೇ ಹುದ್ದೆಗಳು ತಮಗೆ ಸಿಗಲಿವೆ ಎಂಬ ನಿರೀಕ್ಷೆ ಹೊಂದಿದ್ದರು. ಆದರೆ, ಅವರ ಊಹೆ ತಲೆಕೆಳಗಾಗಿದೆ. ಅವರಿಗೆ ಕಂದಾಯ ಖಾತೆ ನೀಡಲಾಗಿದೆ. ನಗರಾಭಿವೃದ್ಧಿ ಖಾತೆಯನ್ನೂ ಅವರು ನಿರೀಕ್ಷಿಸಿದ್ದರು. ಅದು ಕೂಡ ಅವರಿಗೆ ಸಿಗಲಿಲ್ಲ. ತಮ್ಮ ಬದಲು ಬೆಂಗಳೂರಿನ ಮತ್ತೊಬ್ಬ ಒಕ್ಕಲಿಗ ಶಾಸಕ ಅಶ್ವತ್ಥ ನಾರಾಯಣ ಅವರಿಗೆ ಮಣೆ ಹಾಕಿರುವುದು ಅವರಲ್ಲಿ ಬೇಸರ ಉಂಟುಮಾಡಿದೆ. ಅವರು ತಮಗೆ ನೀಡಿದ್ದ ಸರ್ಕಾರಿ ಕಾರನ್ನು ಕೂಡ ವಾಪಸ್ ಕಳಿಸಿದ್ದಾರೆ ಎಂದು ಟೆಲಿವಿಷನ್ ಮಾಧ್ಯಮಗಳು ವರದಿಮಾಡಿವೆ.
ಈಶ್ವರಪ್ಪ ಮುನಿಸು
ಈ ಹಿಂದೆ ಬಿಜೆಪಿ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಒತ್ತಡ ಹೇರಿ ಉಪಮುಖ್ಯಮಂತ್ರಿ ಹುದ್ದೆಯನ್ನು ಪಡೆದುಕೊಳ್ಳುವಲ್ಲಿ ಕೆಎಸ್ ಈಶ್ವರಪ್ಪ ಯಶಸ್ವಿಯಾಗಿದ್ದರು. ಅಲ್ಲದೆ, ರಾಯಣ್ಣ ಬ್ರಿಗೇಡ್ ಮೂಲಕ ತಮ್ಮ ಪ್ರಾಬಲ್ಯವನ್ನು ಪ್ರದರ್ಶಿಸುವ ಚಟುವಟಿಕೆಗಳನ್ನು ಮಾಡಿದ್ದರು. ಡಿಸಿಎಂ ಹುದ್ದೆ ತಮಗೆ ಸುಲಭವಾಗಿ ಒಲಿಯಲಿದೆ ಎಂಬ ಲೆಕ್ಕಾಚಾರವಿತ್ತು. ಆದರೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಅವರಿಗೆ ನೀಡಲಾಗಿದೆ. ಈಶ್ವರಪ್ಪ ಅವರನ್ನು ಕಡೆಗಣಿಸಲಾಗಿದೆ ಎಂದು ರಾಯಣ್ಣ ಬ್ರಿಗೇಡ್ನಲ್ಲಿ ಅಸಮಾಧಾನ ವ್ಯಕ್ತವಾಗಿವೆ. ಈಶ್ವರಪ್ಪ ಅವರಿಗೆ ಡಿಸಿಎಂ ಸ್ಥಾನ ನೀಡದೆ ಇದ್ದರೆ ಭಾರಿ ಹೊಡೆತ ನೀಡಲಾಗುವುದು ಎಂಬ ಎಚ್ಚರಿಕೆ ನೀಡಲಾಗಿದೆ.
ಕೊನೆಗೂ ಅಧಿಕೃತ : ಕರ್ನಾಟಕಕ್ಕೆ 3 ಉಪಮುಖ್ಯಮಂತ್ರಿಗಳು
ಶ್ರೀರಾಮುಲುಗೆ ಸಿಗದ ಡಿಸಿಎಂ
ತಮಗೆ ಸಿಕ್ಕಿರುವ ಖಾತೆ ಬಗ್ಗೆ ಬಿ. ಶ್ರೀರಾಮುಲು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಶ್ರೀರಾಮುಲು ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಜವಾಬ್ದಾರಿ ನೀಡಲಾಗಿದೆ. ಉಪಮುಖ್ಯಮಂತ್ರಿ ಹುದ್ದೆ ತಮಗೆ ಸಿಗುವುದು ಖಚಿತ ಎಂದು ಶ್ರೀರಾಮುಲು ನಿರೀಕ್ಷಿಸಿದ್ದರು. ಅವರ ನಿರೀಕ್ಷೆ ಫಲಿಸಿಲ್ಲ. ಈ ಬಗ್ಗೆ ಅಸಮಾಧಾನಗೊಂಡಿರುವ ಅವರು ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ್ದಾರೆ.
ಅನರ್ಹ ಶಾಸಕರಿಗೂ ಆಘಾತ
ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಬಂಡಾಯವೆದ್ದು ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ 17 ಮಂದಿ ಶಾಸಕರು ಸದ್ಯ ಅತಂತ್ರರಾಗಿಯೇ ಇದ್ದಾರೆ. ಸುಪ್ರೀಂಕೋರ್ಟ್ನಲ್ಲಿ ಅವರ ಅರ್ಜಿ ವಿಚಾರಣೆಗೆ ಬರುತ್ತಿಲ್ಲ ಎನ್ನುವುದು ಒಂದೆಡೆಯಾದರೆ, ಇತ್ತ ಬಿಜೆಪಿ ಹೈಕಮಾಂಡ್ ನಿರ್ಧಾರಗಳು ಅವರಲ್ಲಿ ಗೊಂದಲ ಉಂಟುಮಾಡಿವೆ. ಈಗಲೇ ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಅನರ್ಹ ಶಾಸಕರಲ್ಲಿ ಪ್ರಮುಖರಾಗಿರುವ ರಮೇಶ್ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗುವ ನಿರೀಕ್ಷೆಯಿತ್ತು. ಈಗಲೇ ಮೂರು ಡಿಸಿಎಂಗಳನ್ನು ನೇಮಿಸಿರುವುದು ಮತ್ತು ಲಕ್ಷ್ಮಣ ಸವದಿ ಅವರನ್ನು ಆ ಹುದ್ದೆಗೆ ಕೂರಿಸಿರುವುದು ಅವರಿಗೆ ಆಘಾತ ಉಂಟುಮಾಡಿದೆ.