ರಸ್ತೆ ಅಪಘಾತ: ಪತ್ರಕರ್ತ ನಾಗರಾಜ್ ಜಮಖಂಡಿ ಸಾವು
ಹಾವೇರಿ, ಮೇ. 2: ಹಾವೇರಿ ಜಿಲ್ಲೆ ಶಿಗ್ಗಾಂವಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹಿರಿಯ ಪತ್ರಕರ್ತ ಹಾಗೂ ಕವಿತ ಕಮ್ಯೂನಿಕೇಷನ್ ಜಾಹೀರಾತು ಸಂಸ್ಥೆ ಮಾಲೀಕ ನಾಗರಾಜ ಜಮಖಂಡಿ(44) ಮೃತಪಟ್ಟಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ್ ಮತ್ತೋರ್ವ ಪತ್ರಕರ್ತ ಲಿಂಗರಾಜು ಗಂಭೀರ ಗಾಯಗೊಂಡಿದ್ದಾರೆ.
ಮುದ್ದೇಬಿಹಾಳದಲ್ಲಿ ಜನಿಸಿದ ನಾಗರಾಜ್, ಸಂಯುಕ್ತ ಕರ್ನಾಟಕ ಪತ್ರಿಕೆ ಮತ್ತು ಉದಯ ಟಿವಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಬಳಿ ಮಾಧ್ಯಮ ಸಮನ್ವಯಕಾರರಾಗಿಯೂ ಕಾರ್ಯನಿರ್ವಹಿಸಿದ್ದರು.[ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತರ ಪಟ್ಟಿ]
ನಿಂತಿದ್ದ ಲಾರಿಗೆ ನಾಗರಾಜ್ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಗರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರ ಜೊತೆಗಿದ್ದ ಇನ್ನೋರ್ವ ಪತ್ರಕರ್ತ ನಿಂಗರಾಜ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕಿಮ್ಸ್ ಗೆ ದಾಖಲಿಸಲಾಗಿದೆ. ನಾಗರಾಜ್ ಜಮಖಂಡಿ ತಮ್ಮ ಪರಿಚಿತರೋರ್ವರ ಮದುವೆ ಸಮಾರಂಭಕ್ಕೆ ತೆರಳಿ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಸದ್ಯ ತಮ್ಮ ಕುಟುಂಬದವರೇ ನಡೆಸುತ್ತಿದ್ದ ಪತ್ರಿಕೆಯಲ್ಲಿ ನಾಗರಾಜ್ ಸಕ್ರಿಯ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗೆ ಅವರ ಸಹೋದರ ಚೆನ್ನಬಸು ಎಂಬುವರು ಕೂಡಾ ಅಪಘಾತದಲ್ಲಿಯೇ ಮೃತಪಟ್ಟಿದ್ದರು. ಸಹೋದರನ ಸ್ಮರಣಾರ್ಥ ಐಟಿಐ ಕಾಲೇಜು ಸ್ಥಾಪನೆಗೆ ನಾಗರಾಜ್ ಮುಂದಾಗಿದ್ದರು ಎನ್ನಲಾಗಿದೆ.[ವಿರಾಟ್ ಕೊಹ್ಲಿ ಸಿಟ್ಟಿಗೆದ್ದು ಪತ್ರಕರ್ತನಿಗೆ ಉಗಿದಿದ್ದೇಕೆ?]
ನಾಗರಾಜ್ ಉತ್ತರ ಕರ್ನಾಟಕ ಜನಪರ ವೇದಿಕೆ ಸಂಚಾಲಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘ (ಕವಿ ಪವಿ)ದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಹುಬ್ಬಳ್ಳಿ ಭಾಗದಲ್ಲಿ ನಾಗರಾಜ್ ವಿದ್ಯಾರ್ಥಿ ನಾಯಕರಾಗಿ ಹಾಗೂ ಎಬಿವಿಪಿಯ ಸಕ್ರಿಯ ಸದಸ್ಯರಾಗಿ ಹಲವು ಕಾರ್ಯಕ್ರಮಗಳನ್ನು ಸಂಘಟಿಸಿದ್ದರು. ನಾಗರಾಜ್ ಅವರು ಪತ್ನಿ ಮಂಗಳ ಮತ್ತು ಒಂದು ಮಗುವನ್ನು ಅಗಲಿದ್ದಾರೆ.