ಐಎಎಸ್, ಐಪಿಎಸ್ ಅಧಿಕಾರಿಗಳ ಬಂಧನದ ಹಿಂದೆ ಒಂದೇ ಕಾರಣ?
ಆಡಳಿತಾತ್ಮಕವಾಗಿ ಸರಕಾರದ ಭಾಗವಾಗಿರುವ ಐಪಿಎಸ್ ಮತ್ತು ಐಎಎಸ್ ಶ್ರೇಣಿಯ ಇಬ್ಬರು ಅಧಿಕಾರಿಗಳ ಬಂಧನವಾಗಿದೆ. ಅ ಮೂಲಕ, ಅಕ್ರಮ ನಡೆದಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಲೇ ಬರುತ್ತಿದ್ದ ಸರಕಾರ ತಪ್ಪು ನಡೆದಿದ್ದನ್ನು ಒಪ್ಪಿಕೊಂಡಂತಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯ ದೇಗುಲ ವಿಧಾನಸೌಧದಲ್ಲಿ ಇಡೀ ಬಿಜೆಪಿ ಸರಕಾರ ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದೇ ಇಲ್ಲ ಎಂದು ವಾದಿಸಿಕೊಂಡು ಬರುತ್ತಲೇ ಇತ್ತು. ಈಗ, ಎಡಿಜಿಪಿ ಅಮೃತ್ ಪೌಲ್ ಬಂಧನದ ನಂತರ ಸರಕಾರ ಅದಕ್ಕೆ ಇನ್ನೊಂದು ಸಮರ್ಥನೆಯೊಂದಿಗೆ ಸ್ಪಷ್ಟನೆ ನೀಡಲು ಆರಂಭಿಸಿದೆ.
Breaking: ಪಿಎಸ್ಐ ನೇಮಕಾತಿ ಹಗರಣದ ಆರೋಪಿ ದಿವ್ಯಾ ಹಾಗರಗಿ ಬಂಧನ
ಒಂದು ಕಡೆ ಸಿಐಡಿ ಪೊಲೀಸರು ಅಮೃತ್ ಪೌಲ್ ಅವರನ್ನು ಬಂಧಿಸಿದರೆ ಇನ್ನೊಂದು ಕಡೆ ಎಸಿಬಿ ಅಧಿಕಾರಿಗಳು ಐದು ಲಕ್ಷ ಲಂಚದ ಆರೋಪದಡಿಯಲಿ ಐಎಎಸ್ ಅಧಿಕಾರಿ ಮತ್ತು ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಅವರನ್ನು ಬಂಧಿಸಿದ್ದಾರೆ.
ಈ ಎರಡು ವಿದ್ಯಮಾನಗಳು ಖಂಡಿತವಾಗಿಯೂ ಬಿಜೆಪಿ ಸರಕಾರಕ್ಕೆ ಮುಜುಗರ ತಂದೊಡ್ಡುವ ಬೆಳವಣಿಗೆಗಳು. ಸರಕಾರ ತನ್ನದೇ ಆಗಿರುವಾಗ ಇವರಿಬ್ಬರನ್ನು ರಕ್ಷಿಸುವುದು ದೊಡ್ಡ ಕೆಲಸವೇನೂ ಆಗಿರಲಿಲ್ಲ, ಆದರೂ ಬಂಧನವಾಗಿದೆ. ಹಾಗಾದರೆ, ಈ ಘಟನೆಯನ್ನು ರಾಜಕೀಯವಾಗಿ ಅವಲೋಕಿಸಿದಾಗ, ಬೊಮ್ಮಾಯಿ ಸರಕಾರಕ್ಕಿದ್ದ ಅನಿವಾರ್ಯತೆಯಾದರೂ ಎನು?
ಪಿಎಸ್ಐ ನೇಮಕಾತಿ; ಅಮೃತ್ ಪೌಲ್ ಬಂಧನ, ಎಡಿಜಿಪಿ ಕಚೇರಿ ಅಲ್ಮೇರ ರಹಸ್ಯ!
ಬಿಜೆಪಿ ವರಿಷ್ಠರು ಬೊಮ್ಮಾಯಿಯವರನ್ನು ಸಿಎಂ ಮಾಡಲು ಒಪ್ಪಿದ್ದರು
ಯಡಿಯೂರಪ್ಪನವರು ರಾಜೀನಾಮೆ ನೀಡಿದ ನಂತರ ಒಲ್ಲದ ಮನಸ್ಸಿನಿಂದ ಬಿಜೆಪಿ ವರಿಷ್ಠರು ಬಸವರಾಜ ಬೊಮ್ಮಾಯಿಯವರನ್ನು ಸಿಎಂ ಮಾಡಲು ಒಪ್ಪಿದ್ದರು. ಬೊಮ್ಮಾಯಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಸರಕಾರ ಟೇಕ್ ಆಫ್ ಆಗುತ್ತಲೇ ಇಲ್ಲ ಎನ್ನುವ ಬಲವಾದ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಲೇ ಇದೆ. ಇದರ ಜೊತೆಗೆ ಸದಾ ಒಂದಲ್ಲಾ ಒಂದು ಹಗರಣಗಳು, ವಿವಾದಗಳು ಬಿಜೆಪಿ ಸರಕಾರವನ್ನು ಸುತ್ತುಕೊಂಡಿದ್ದವು. ಕೆಲವೊಂದು ವಿದ್ಯಮಾನಗಳು ರಾಷ್ಟ್ರಮಟ್ಟದಲ್ಲೂ ಸುದ್ದಿ ಮಾಡಿದ್ದವು.
ಇದೇ ಮೊದಲ ಬಾರಿಗೆ ಇಬ್ಬರು ಉನ್ನತ ಅಧಿಕಾರಿಗಳ ಬಂಧನ
ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಉನ್ನತ ಅಧಿಕಾರಿಗಳ ಬಂಧನವಾಗಿದೆ. ಭ್ರಷ್ಟಾಚಾರ ಮಟ್ಟ ಹಾಕಬೇಕಾಗಿರುವ ತನಿಖಾ ಸಂಸ್ಥೆಗಳೇ ಭ್ರಷ್ಟಾಚಾರದಲ್ಲಿ ತೊಡಗಿದೆ. ಉಳ್ಳವರು ಸೇಫ್ ಆಗುತ್ತಿದ್ದಾರೆ, ನ್ಯಾಯಮೂರ್ತಿಗಳಿಗೂ ಬೆದರಿಕೆ ಹಾಕಲಾಗುತ್ತಿದೆ ಎಂದು ಹೈಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ ಸರಕಾರ ಎಚ್ಚೆತ್ತುಗೊಂಡಿದೆ. ಇಬ್ಬರು ಅಧಿಕಾರಿಗಳ ಬಂಧನದ ಜೊತೆಗೆ ಅವರನ್ನು ಅಮಾನತು ಕೂಡಾ ಮಾಡಲಾಗಿದೆ. ಅಲ್ಲಿಗೆ, ಪಿಎಸ್ಐ ನೇಮಕಾತಿ ಎಲ್ಲವೂ ಪಾರದರ್ಶಕತೆಯಿಂದ ಕೂಡಿದೆ ಎಂದು ಅಸೆಂಬ್ಲಿಯಲ್ಲಿ ವಾದಿಸಿದ್ದ ಆರಗ ಜ್ಞಾನೇಂದ್ರಗೆ ಮತ್ತೊಮ್ಮೆ ಮುಖಭಂಗವಾಗಿದೆ.
ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆ
ಚುನಾವಣಾ ವರ್ಷವಾಗಿರುವುದರಿಂದ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆಯೇ ಇಬ್ಬರು ಅಧಿಕಾರಿಗಳ ಬಂಧನಕ್ಕೆ ಕಾರಣವಾಯಿತೇ ಎನ್ನುವ ಚರ್ಚೆ ಆರಂಭವಾಗಿದೆ. "ನಾನು ಹಿಂದೆನೇ ಹೇಳಿದ್ದೆ, ಯಾರು ಎಷ್ಟೇ ದೊಡ್ಡವರಿದ್ದರೂ ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳುತ್ತೇವೆ, ಸಾಕ್ಷ್ಯಾಧಾರಗಳ ಆಧಾರದಲ್ಲಿ ಇಬ್ಬರು ಅಧಿಕಾರಿಗಳ ಬಂಧನವಾಗಿದೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರೇನೋ ಹೇಳಿದ್ದಾರೆ.
ಹೈದರಾಬಾದ್ ನಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ
ಆದರೆ, ಆಡಳಿತದಲ್ಲಿ ಚುರುಕು ಮುಟ್ಟಿಸುವುದರ ಜೊತೆಗೆ ತಮ್ಮ ಸರಕಾರ ಜನಪರ, ಭ್ರಷ್ಟಾಚಾರ ಸಹಿಸುವುದಿಲ್ಲ ಎನ್ನುವ ಸಂದೇಶ ಜನರಿಗೆ ಹೋಗುವುದು ಈ ಸಮಯದಲ್ಲಿ ಬಿಜೆಪಿ ಸರಕಾರಕ್ಕೆ ಅತ್ಯಂತ ಅವಶ್ಯಕವಾಗಿದೆ. ಕೆಲವೊಂದು ಆಂತರಿಕ ಸಮೀಕ್ಷೆಗಳು ಪಕ್ಷದ ಪರವಾಗಿಲ್ಲ ಎನ್ನುವುದನ್ನು ಅರಿತಿರುವ ಬಿಜೆಪಿಯ ಹೈಕಮಾಂಡ್ ಆಡಳಿತ ಯಂತ್ರ ಚುರುಕುಗೊಳಿಸಲು ಸಿಎಂ ಬೊಮ್ಮಾಯಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೈದರಾಬಾದ್ ನಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿಯಲ್ಲೂ ಮೋದಿ, ಅಮಿತ್ ಶಾ ಮತ್ತು ನಡ್ಡಾ ಕೆಲವೊಂದು ಕಾರ್ಯತಂತ್ರದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಹಾಗಾಗಿ, ಇಬ್ಬರು ಅಧಿಕಾರಿಗಳ ಬಂಧನ ಬಿಜೆಪಿಗೆ ಮುಂದಿನ ಚುನಾವಣೆಯ ದೃಷ್ಟಿಯಿಂದ ಅನಿವಾರ್ಯವಾಗಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.
Recommended Video