ಡಿಕೆಶಿ ಬಂಧಮುಕ್ತ: ವಕೀಲರ ಸಲಹೆ, ದೇವರ ಆಶೀರ್ವಾದ ಏನನ್ನುತ್ತೆ?
ಅಕ್ರಮ ಹಣ ವರ್ಗಾವಣೆ ಕೇಸ್ ನಲ್ಲಿ ಐವತ್ತು ದಿನಗಳ ಕಾಲ ತಿಹಾರ್ ಜೈಲಿನಲ್ಲಿದ್ದ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಬುಧವಾರ (ಅ 23) ರಾತ್ರಿ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಅಂದೇ ಬೆಳಗ್ಗೆ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಶಿವಕುಮಾರ್ರನ್ನು ಜೈಲಿನಲ್ಲಿ ಭೇಟಿಯಾಗಿದ್ದರು.
ಕಾಂಗ್ರೆಸ್ ಪಾಲಿಗೆ ನಿರ್ಣಾಯಕವಾಗಿರುವ ಉಪಚುನಾವಣೆಯ ವೇಳೆ, ಡಿಕೆಶಿ ಬಂಧನದಿಂದ ಮುಕ್ತಿಗೊಂಡಿದ್ದು ರಾಜ್ಯ ಕಾಂಗ್ರೆಸ್ಸಿಗೆ ಮತ್ತಷ್ಟು ಬಲ ಬಂದಾಂತಾಗಿದೆ. ಡಿಕೆಶಿ ಜೈಲಿನಲ್ಲಿದ್ದಾಗಲೇ ಮತ್ತೊಬ್ಬ ಕಾಂಗ್ರೆಸ್ ಮುಖಂಡ ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ನಿವಾಸದ ಮೇಲೆ ಆದಾಯ ತೆರಿಗೆ ದಾಳಿ ನಡೆದಿತ್ತು.
Recommended Video
ಜೈಲಿನಿಂದ ಬಿಡುಗಡೆಯಾದ ಬಳಿಕ ಡಿಕೆ ಶಿವಕುಮಾರ್ ಹೇಳಿದ್ದೇನು?
ಕಾಂಗ್ರೆಸ್ ನಾಯಕರ ಮೇಲಿನ ದಾಳಿಗಳ ನಡುವೆಯೇ ವಿರೋಧ ಪಕ್ಷದ ನಾಯಕನನ್ನಾಗಿ ಸಿದ್ದರಾಮಯ್ಯ ಅವರನ್ನು ನೇಮಿಸಲಾಗಿತ್ತು. ನಂತರ ನಡೆದ ಅಧಿವೇಶನದಲ್ಲಿ ಕಾಂಗ್ರೆಸ್ ಖದರ್ ತೋರಿಸಿತ್ತು. ಡಿಸೆಂಬರ್ನಲ್ಲಿ ನಡೆಯಲಿರುವ 15 ಕ್ಷೇತ್ರಗಳ ಉಪಚುನಾವಣೆವರೆಗೂ ಇದೇ ಕಾವು ಉಳಿಸಿಕೊಳ್ಳಬೇಕಿತ್ತು.
'ಡಿಕೆ ಶಿವಕುಮಾರ್ ಬಿಡುಗಡೆಯಿಂದ ಸಿದ್ದರಾಮಯ್ಯಗೆ ಸಂಕಟ'
ಹೀಗಿರುವಾಗಲೇ, ಡಿ.ಕೆ.ಶಿವಕುಮಾರ್ ಜೈಲಿನಿಂದ ಬಿಡುಗಡೆಗೊಂಡಿದ್ದು ಕಾಂಗ್ರೆಸ್ಸಿಗೆ ಯಾವ ರೀತಿ ಲಾಭ ತಂದುಕೊಡಲಿದೆ ಎನ್ನುವ ಚರ್ಚೆ ಆರಂಭವಾಗಿದೆ. "ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಆಶೀರ್ವಾದದಿಂದ ನನಗೆ ಬೇಲ್ ಸಿಕ್ಕಿದೆ" ಎಂದು ಜೈಲಿನಿಂದ ಹೊರಬಂದ ನಂತರ ಡಿಕೆಶಿ ಮೊದಲ ಹೇಳಿಕೆ ನೀಡಿದರು.
ಇಡಿ ಕುಣಿಕೆ ಇನ್ನೂ ಮುಗಿದಿಲ್ಲ
ಇಡಿ ಕುಣಿಕೆ ಇನ್ನೂ ಮುಗಿದಿಲ್ಲವಾಗಿರುವುದರಿಂದ, ಇಡಿ ಡಿಕೆಶಿಗೆ ನೀಡಿದ ಬೇಲ್ ವಿರುದ್ದ,ಸುಪ್ರೀಂಕೋರ್ಟ್ ಮೊರೆಹೋಗುವ ಸಾಧ್ಯತೆಯಿರುವುದರಿಂದ, ಕಾಂಗ್ರೆಸ್ ನಾಯಕನ, ಯಾವ ಹೆಜ್ಜೆಯನ್ನು ಇಡಲಿದ್ದಾರೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಬಿಜೆಪಿಯದ್ದು ದ್ವೇಷದ ರಾಜಕಾರಣ
ಡಿ.ಕೆ.ಶಿವಕುಮಾರ್ ವಿಚಾರದಲ್ಲಿ, ಬಿಜೆಪಿಯದ್ದು ದ್ವೇಷದ ರಾಜಕಾರಣ ಎಂದು ಕಾಂಗ್ರೆಸ್ ಹೇಳಿಕೊಂಡು ಬರುತ್ತಲೇ ಇತ್ತು. ಈ ವಿಚಾರವನ್ನು ಇಟ್ಟುಕೊಂಡು, ಡಿಕೆಶಿಗೆ ಭಾರೀ ಸ್ವಾಗತದ ಪ್ಲಾನ್ ಕೂಡಾ ಹಾಕಿತ್ತು. ಆದರೆ, ಇದು ಯಾವರೀತಿ ವರ್ಕೌಟ್ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಅತೃಪ್ತರನ್ನು ಒಲಿಸಲು ಡಿಕೆಶಿ ಮುಂಬೈಗೆ ಹೋಗಿದ್ದರು
ಕುಮಾರಸ್ವಾಮಿಯವರ ಸಮ್ಮಿಶ್ರ ಸರಕಾರವನ್ನು ಉಳಿಸಿಕೊಳ್ಳಲು, ಡಿಕೆಶಿ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಪಕ್ಷದ ಯಾವ ಹಿರಿಯ ನಾಯಕರ ಅನುಮತಿಗೂ ಕಾಯದೇ, ಅತೃಪ್ತರನ್ನು ಒಲಿಸಲು ಡಿಕೆಶಿ ಮುಂಬೈಗೆ ಹೋಗಿದ್ದರು. ಇದಕ್ಕೆ, ಪಕ್ಷದಲ್ಲೇ ಅಪಸ್ವರ ಎದ್ದಿತ್ತು. ಇವೆಲ್ಲದರ ನಡುವೆ, ಅತೃಪ್ತರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಸರಕಾರ ವಿಶ್ವಾಸ ಮತ ಸಾಬೀತುಪಡಿಸಲಾಗದೆ ಪತನಗೊಂಡಿತ್ತು.
ಹೊಸಕೋಟೆಯ ಮಾಜಿ ಶಾಸಕ ಎಂ.ಟಿ.ಬಿ ನಾಗರಾಜ್
ಹೊಸಕೋಟೆಯ ಮಾಜಿ ಶಾಸಕ ಎಂ.ಟಿ.ಬಿ ನಾಗರಾಜ್ ವಿರುದ್ದ ಅಸೆಂಬ್ಲಿಯಲ್ಲೇ ಡಿಕೆಶಿ ಚಾಲೆಂಜ್ ಮಾಡಿದ್ದರು. "ನನ್ನ ನಿನ್ನ ರಾಜಕೀಯ ರಣರಂಗ ಏನಿದ್ದರೂ, ಹೊಸಕೋಟೆಯಲ್ಲಿ" ಎಂದು ಡಿಕೆಶಿ ಹೇಳಿದ್ದರು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಡಿಕೆಶಿ ಜೈಲುಪಾಲಾಗಿ, ಈಗ ಹೊರಬಂದಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೇನಂದರೆ, ಕರ್ನಾಟಕ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್ ತನ್ನ ಹಿಂದಿನ ಖದರ್ ಅನ್ನು ಮುಂದುವರಿಸುತ್ತಾರಾ ಎನ್ನುವುದಿಲ್ಲಿ ಪ್ರಶ್ನೆ. ತಮ್ಮ ಎಂದಿನ ರಾಜಕಾರಣ ನಡೆಸಲು ಕಾನೂನು ಕುಣಿಕೆ ಅವರಿಗೆ ಬ್ರೇಕ್ ಹಾಕುತ್ತಾ ಎನ್ನುವುದು ಮುಂದಿನ ದಿನದಲ್ಲಿ ಗೊತ್ತಾಗಲಿದೆ.
ವಕೀಲರ ಸಲಹೆ, ದೇವರ ಆಶೀರ್ವಾದಗಳು ಹಳೇ ಡಿ.ಕೆ.ಶಿ ಆಗಿಯೇ ಮುಂದುವರಿಸುವ ಕೆಲಸ ಮಾಡುತ್ತವಾ?
ಅದೇನೇ ಇರಲಿ, ಡಿಕೆಶಿ ಬಂಧನಮುಕ್ತಿಯ ನಂತರ ಪ್ರಮುಖವಾಗಿ ಉಪಚುನಾವಣೆ ಎದುರಾಗಲಿದೆ. ಬೆಂಗಳೂರು ವ್ಯಾಪ್ತಿಯ ಬಿಜೆಪಿ ಮುಖಂಡರು ಈಗಲೇ ಆತಂಕಕ್ಕೆ ಒಳಗಾಗಿದ್ದರೆ ಅದು ಸಹಜ ಕೂಡ. ವಕೀಲರ ಬಳಿ ಮಾತುಕತೆ ನಡೆಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ, ಡಿಕೆಶಿ ಜೈಲಿನಿಂದ ಹೊರಬಂದ ನಂತರ ಹೇಳಿದ್ದಾರೆ. ವಕೀಲರ ಸಲಹೆ, ದೇವರ ಆಶೀರ್ವಾದಗಳು ಹಳೇ ಡಿ. ಕೆ. ಶಿವಕುಮಾರ್ ಆಗಿಯೇ ಮುಂದುವರಿಸುವ ಕೆಲಸ ಮಾಡುತ್ತವಾ? ಕಾದು ನೋಡಬೇಕಿದೆ.