ಎರಡೇ ವಾಕ್ಯದಲ್ಲಿ RSS ಬಗ್ಗೆ ಸಿ.ಎಂ.ಇಬ್ರಾಹಿಂ ಹೇಳಿದ್ದು ಹೀಗೆ
ಹುಬ್ಬಳ್ಳಿ, ಜ 31: ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ತಪ್ಪಿದ ನಂತರ, ಕಾಂಗ್ರೆಸ್ ತೊರೆಯುವುದಾಗಿ ಪ್ರಕಟಿಸಿರುವ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ, "ಜೆಡಿಎಸ್ ಸೇರಿ ಮೂರು ಇತರ ಪಕ್ಷಗಳಿಗೆ (ಜೆಡಿಎಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ) ಸೇರುವ ಬಗ್ಗೆ ಆಲೋಚಿಸುತ್ತಿದ್ದೇನೆ, ಮುಂದಿನ ಹತ್ತು ದಿನಗಳಲ್ಲಿ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ" ಎಂದು ಹೇಳಿದ್ದಾರೆ.
ಈಗಾಗಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ದ ತೀವ್ರ ಅಸಮಾಧಾನ ವ್ಯಕ್ತ ಪಡಿಸಿರುವ ಇಬ್ರಾಹಿಂ, ಬಿಜೆಪಿ ಸೇರುವ ಬಗ್ಗೆ ವ್ಯಂಗ್ಯವಾದ ಉತ್ತರವನ್ನು ನೀಡಿದ್ದಾರೆ. "ನಮ್ಮದು ಬಸವ ತತ್ವ, ಅವರದ್ದು ಕೇಶವಕೃಪಾ ತತ್ವ, ನಮಗೂ ಅವರಿಗೂ ಆಗಿ ಬರುವುದಿಲ್ಲ"ಎಂದು ಬಿಜೆಪಿ ಸೇರುವ ವಿಚಾರವನ್ನು ತಳ್ಳಿ ಹಾಕಿದ್ದಾರೆ.
ಹುಬ್ಬಳ್ಳಿಯಲ್ಲಿ ಹೊಸ ಬಾಂಬ್ ಸಿಡಿಸಿದ ಸಿ. ಎಂ. ಇಬ್ರಾಹಿಂ!
"ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲೂ ಉತ್ತಮ ನಾಯಕರಿದ್ದಾರೆ, ಅವರ ಜೊತೆಗೂ ನನಗೆ ಉತ್ತಮ ಒಡನಾಟವಿದೆ. ರಾಮಾ ಜೋಯಿಶರು ನನ್ನ ಆತ್ಮೀಯರಾಗಿದ್ದರು, ಆದರೆ ಅವರ ಸಿದ್ದಾಂತ ಬೇರೆ, ನನ್ನ ಸಿದ್ದಾಂತ ಬೇರೆ. ನಾನು ಎಲ್ಲರನ್ನೂ ಪ್ರೀತಿಸುವ ವ್ಯಕ್ತಿ"ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
"ನಾವು ಮಾಡುವ ಭಾಷಣವನ್ನು ಕೇಳಲು ಜನರೇ ಬರಬೇಕು ಹೊರತು ಜನರನ್ನು ಕರೆತರಬಾರದು. ಈಗ ಎಲ್ಲಾ ಜನರನ್ನು ಕರೆತರುವ ಸಂಪ್ರದಾಯವೇ ಹೆಚ್ಚಾಗುತ್ತಿದೆ. ಒಂದು ಕಾಲವಿತ್ತು, ಹುಬ್ಬಳ್ಳಿ ದುರ್ಗದಬೈಲ್ ರಾತ್ರಿ ಹತ್ತು ಗಂಟೆಗೆ ಸಾರ್ವಜನಿಕ ಸಭೆ, ಜಯಜಯ ಪಾರ್ವತೀ ಪತಯೇ, ಹರಹರ ಮಹಾದೇವ ಎಂದು ಒಂದು ಘೋಷಣೆ ಮಾಡಿದರೆ ಜನ ಹೇಗೆ ಸೇರುತ್ತಿದ್ದರು ಗೊತ್ತಾ"ಎಂದು ಸಿ.ಎಂ.ಇಬ್ರಾಹಿಂ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಹೇಳಿದ್ದಾರೆ.
"ಧಾರವಾಡ ಕಡಪ ಮೈದಾನದಲ್ಲಿ ಬಹಿರಂಗ ಸಭೆ, ಲಾರಿ, ಬಸ್ ನಲ್ಲಿ ಯಾರನ್ನೂ ಕರೆದುಕೊಂಡು ಬರುವುದಿಲ್ಲ, ಬರೀ ಸಂಘಟನೆಯ ಹೆಸರಿಗೆ ಆ ಶಕ್ತಿಯಿತ್ತು. ರಾಷ್ಟ್ರಭಕ್ತ ಆರ್ ಎಸ್ ಎಸ್ ನವರನ್ನು ನಾನು ಕಂಡಿದ್ದೇನೆ. ಸೈದ್ದಾಂತಿಕವಾಗಿ ನನಗೂ ಅವರಿಗೆ ಆಗಿ ಬರುವುದಿಲ್ಲ, ಆ ಸಂಘಟನೆಯಲ್ಲಿ ದೇಶಭಕ್ತಿ ಇರುವಂತಹ ಮುಖಂಡರಿದ್ದಾರೆ"ಎಂದು ಇಬ್ರಾಹಿಂ ಹೇಳಿದ್ದಾರೆ.
ಬೆಳಗಾವಿಯಲ್ಲಿ ಇಬ್ಬಾಗದತ್ತ ಕಮಲ: ತಾರಕಕ್ಕೇರಿದ ಬಿಜೆಪಿ Vs ಬಿಜೆಪಿ
Recommended Video
"ಭಾವನಾ ದೇಶಪಾಂಡೆಯವರಿಗೆ ನಡೆದಾಡಲು ಚಪ್ಪಲಿ ಇರಲಿಲ್ಲ, ಜಗನ್ನಾಥ್ ರಾವ್ ಜೋಶಿಯವರು ನಿಧನ ಹೊಂದುವ ಸಮಯದಲ್ಲಿ ಪೂನಾ ಆಸ್ಪತ್ರೆಯ ಬಿಲ್ ಭರಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಅವರು ದೇಶಭಕ್ತರು, ಅಂತವರ ಜೊತೆ ನಾನು ಕೆಲಸ ಮಾಡಿದ್ದೇನೆ. ಹಾಗಾಗಿ ನನಗೆ ಯಾರ ಮೇಲೂ ದ್ವೇಷವಿಲ್ಲ, ನನ್ನನ್ನೂ ಯಾರೂ ದ್ವೇಷಿಸುವುದಿಲ್ಲ ಎಂದು ನಂಬಿದ್ದೇನೆ"ಎಂದು ಇಬ್ರಾಹಿಂ ಹೇಳಿದ್ದಾರೆ.