ಶಿಕ್ಷಕರಾಗಿ ಆಯ್ಕೆಯಾದರೂ ನೇಮಕಾತಿಯಲ್ಲಿ ಕಾನೂನು ತೊಡಕು, ಭವಿಷ್ಯದ ಆತಂಕದಲ್ಲಿ 13,363 ಅಭ್ಯರ್ಥಿಗಳು
ಮೇ 2022 ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ 13,363 ಪದವೀಧರ ಪ್ರಾಥಮಿಕ ಶಿಕ್ಷಕ ಹುದ್ದೆಯ ಅಭ್ಯರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಆತಂಕ ಹೊರಹಾಕಿದ್ದಾರೆ. ವಿವರಗಳಿಗಾಗಿ ಮುಂದೆ ಓದಿ.
ಬೆಂಗಳೂರು, ಫೆಬ್ರವರಿ. 05: 2022ರ ಮಾರ್ಚ್ ತಿಂಗಳಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಸಂಸ್ಥೆಗಳಲ್ಲಿ 6 ನೇ ತರಗತಿಯಿಂದ 8 ನೇ ತರಗತಿಯವರೆಗಿನ ಪ್ರಾಥಮಿಕ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿತ್ತು. ಸಾವಿರಾರು ಮಂದಿ ಭವಿಷ್ಯದ ಕನಸು ಕಾಣುತ್ತಾ ಕಷ್ಟಪಟ್ಟು ಪರೀಕ್ಷೆ ಬರೆದು ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಆದರೆ, ಈ ಅಭ್ಯರ್ಥಿಗಳು ಈಗ ಆತಂಕದಲ್ಲಿ ದಿನದೂಡುತ್ತಿದ್ದಾರೆ.
ರಾಜ್ಯದ ಶಾಲೆಗಳಲ್ಲಿ 6 ರಿಂದ 8 ತರಗತಿಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸುವ ಸಲುವಾಗಿ ಸಾಕ್ಷರತಾ ಮತ್ತು ಶಿಕ್ಷಣ ಸಚಿವರು ಮತ್ತು ಶಿಕ್ಷಣ ಇಲಾಖೆಯು ಏಕಕಾಲದಲ್ಲಿ 15,000 ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವ ಉದ್ದೇಶದಿಂದ ಮೇ 2022 ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿತ್ತು. ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ 13,363 ಅಭ್ಯರ್ಥಿಗಳ ಹೆಸರನ್ನು ನವೆಂಬರ್ 2022 ರಲ್ಲಿ ಇಲಾಖೆಯ ವೆಬ್ ಸೈಟ್ ನಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಪ್ರಕಟಿಸಿತ್ತು.
Karnataka Teachers Recruitment : 15 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ರದ್ದುಗೊಳಿಸಿದ ಹೈಕೋರ್ಟ್
ಇದಾದ ಬಳಿಕ ಸುಮಾರು 80 ವಿವಾಹಿತ ಮಹಿಳೆಯರು ತಮ್ಮ ಪೋಷಕರ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ನೇಮಕಾತಿ ಮೀಸಲಾತಿ ಅಡಿಯಲ್ಲಿ ಪರಿಗಣಿಸುವಂತೆ ರಿಟ್ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ನಲ್ಲಿ ದಾಖಲಿಸಿದ್ದಾರೆ. ನ್ಯಾಯಮೂರ್ತಿ ಎಂ ನಾಗಪ್ರಸನ್ನ ರವರ ಏಕ ಸದಸ್ಯ ಪೀಠ ವಿವಾಹಿತ ಮಹಿಳೆಯರ ಗಂಡನ ಅಥವಾ ಪೋಷಕರ ಆದಾಯ ಪ್ರಮಾಣ ಪತ್ರವನ್ನು ಪರಿಗಣಿಸುವಂತೆ ಮತ್ತು ಈಗಿರುವ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ರದ್ದುಪಡಿಸಿ ಹೊಸ ಆಯ್ಕೆ ಪಟ್ಟಿಯನ್ನು ಬುಡುಗಡೆ ಮಾಡುವಂತೆ ಸರ್ಕಾರಕ್ಕೆ ಆದೇಶಿಸಿ ಜನವರಿ 30 ರಂದು ತೀರ್ಪು ನೀಡಿದೆ.
ಆದರೆ, ಶಿಕ್ಷಣ ಸಚಿವರು ಮತ್ತು ಶಿಕ್ಷಣ ಇಲಾಖೆ ಈ ತೀರ್ಪನ್ನು ನೇಮಕಾತಿಯಲ್ಲಿ ಅನುಸರಿಸುವಲ್ಲಿ ಕೆಲವು ಕಾನೂನು ತೊಡಕುಗಳಿವೆ ಎಂದು ಮೇಲ್ಮನವಿ ಸಲ್ಲಿಸಲು ಸಿದ್ಧರಾಗುತ್ತಿದ್ದಾರೆ. ಈ ನಿರ್ಧಾರಕ್ಕೆ ತಾತ್ಕಾಲಿಕ ಆಯ್ಕೆಪಟಗಟಿಯಲ್ಲಿರುವ ಅಭ್ಯರ್ಥಿಗಳು ಆತಂಕ ಹೊರಹಾಕಿದ್ದು, ಈ ದೀರ್ಘ ವಿಳಂಬ ತಮ್ಮ ವರ್ತಮಾನ ಮತ್ತು ಭವಿಷ್ಯದ ಮೇಲೆ ಗಾಢ ಪರಿಣಾಮ ಬೀರಲಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸರ್ಕಾರದ ಸಂವಿಧಾನಿಕ ಅವಕಾಶವನ್ನು ಗೌರವಿಸುತ್ತೇವೆ ಎನ್ನುವ ಈ ಅಭ್ಯರ್ಥಿಗಳು, ಮೇಲ್ಮನವಿ ಹೋಗುವುದರಿಂದ ನ್ಯಾಯತೀರ್ಮಾನ ವಿಳಂಬವಾಗುತ್ತದೆ. ಹತ್ತಿರದಲ್ಲೇ ಚುನಾವಣೆ ನೀತಿ ಸಂಹಿತೆಯು ಜಾರಿಯಾಗಲಿದೆ. ಇದರಿಂದ ಕೇವಲ 80 ಅಭ್ಯರ್ಥಿಗಳ ಸಮಸ್ಯೆಯಿಂದಾಗಿ ಈಗಾಗಲೇ 1:1 ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾದ 13,363 ಅಭ್ಯರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದಿದ್ದಾರೆ.
ಇನ್ನು ಈ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಬಹಳಷ್ಟು ಅಭ್ಯರ್ಥಿಗಳು ಖಾಸಗಿ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು. ಖಾಸಗಿ ಸಂಸ್ಥೆಗಳ ಆಡಳಿತ ಮಂಡಳಿಗಳು ಶೈಕ್ಷಣಿಕ ವರ್ಷದ ಅಂಚಿನಲ್ಲಿದ್ದ ಅಭ್ಯರ್ಥಿಗಳನ್ನು ಮುಂದಿನ ವಾರ್ಷಿಕಕ್ಕೆ ಇರುವುದಿಲ್ಲವೆಂಬುದನ್ನು ಪರಿಗಣಿಸಿ ಉದ್ಯೋಗದಿಂದ ಕೈಬಿಟ್ಟಿರುತ್ತಾರೆ. ಇದರಿಂದ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ನಿರುದ್ಯೋಗಿಗಳಾಗಿದ್ದು ಅವರ ಕುಟುಂಬ ನಿರ್ವಹಣೆ ಕಷ್ಟವಾಗಿರುತ್ತದೆ. ಅಷ್ಟೆ ಅಲ್ಲದೆ ಕೋರ್ಟ್ ತೀರ್ಮಾನ ವಿಳಂಬವಾದಲ್ಲಿ ಈಗಾಗಲೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು ಮುಂದಿನ ವಾರ್ಷಿಕಕ್ಕೂ ಶಿಕ್ಷಕರು ನೇಮಕವಾಗದಿದ್ದರೆ ಮಕ್ಕಳು ಪುನಃ ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ತಮ್ಮ ಸಂಕಷ್ಟವನ್ನು ತೋಡಿಕೊಂಡಿದ್ದಾರೆ.
ಸರ್ಕಾರದ ಬೇರೆ ಬೇರೆ ನೇಮಕಾತಿಗಳಲ್ಲಿ ಇಂತಹದ್ದೇ ಸಮಸ್ಯೆಗಳು ಎದುರಾದಾಗ, ಸಮಸ್ಯೆ ಇರುವ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯನ್ನ ನ್ಯಾಯ ತೀರ್ಮಾನದವರೆಗೆ ತಡೆಹಿಡಿದು ಉಳಿದ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಟ್ಟ ಉದಾಹರಣೆಗಳಿವೆ. ಉದಾಹರಣೆಗೆ ಈ ವರ್ಷವೆ ಕರ್ನಾಟಕ ಲೋಕ ಸೇವಾ ಆಯೋಗ ನಡೆಸಿದ ದ್ವಿತಿಯ ದರ್ಜೆ ಸಹಾಯಕ ನೇಮಕಾತಿಯಲ್ಲಿ ಕೆಲವು ಅಭ್ಯರ್ಥಿಗಳು ನ್ಯಾಯಲಯದ ಮೆಟ್ಟಿಲೇರಿದ್ದು ಅಂತಹ ಅಭ್ಯರ್ಥಿಗಳ ನೇಮಕಾತಿಯನ್ನು ಕಾಯ್ದಿರಿಸಿ ಉಳಿದವರ ನೇಮಕಾತಿಯನ್ನು ಇಲಾಖೆಯು ಮುಂದುವರೆಸಿದೆ. ಇದೆ ಮಾದರಿಯಲ್ಲಿ ಶಿಕ್ಷಣ ಇಲಾಖೆಯು ಸಮಸ್ಯೆ ಇರುವ ಕೆಲವು ಅಭ್ಯರ್ಥಿಗಳ ನೇಮಕಾತಿಯನ್ನು ನ್ಯಾಯತೀರ್ಮಾನದವರೆಗೆ ಕಾಯ್ದಿರಿಸಿ ಈಗಾಗಲೆ ತಾತ್ಕಾಲಿ ಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳ ನೇಮಕಾತಿ ಆದೇಶವನ್ನು ನೀಡಬೇಕು. ಈ ಮೂಲಕ 13,363 ಅಭ್ಯರ್ಥಿಗಳ ನೆರವಿಗೆ ನಿಲ್ಲಬೇಕು ಎಂದು ಶಿಕ್ಷಣ ಸಚಿವರು ಮತ್ತು ಶಿಕ್ಷಣ ಇಲಾಖೆಯಲ್ಲಿ ಮನವಿ ಮಾಡಿದ್ದಾರೆ.