ಸಚಿವಾಲಯ ನೌಕರರಿಂದ ಮೇ 27ಕ್ಕೆ ಬಂದ್ಗೆ ಕರೆ: ಸರ್ಕಾರದ ಖಡಕ್ ಎಚ್ಚರಿಕೆ
ಬೆಂಗಳೂರು , ಮೇ 26: ರಾಜ್ಯ ಸರ್ಕಾರ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸದಿರುವುದನ್ನು ಖಂಡಿಸಿ ಕರ್ನಾಟಕ ಸರ್ಕಾರ ಸಚಿವಾಲಯದ ನೌಕರರ ಸಂಘವು ಮೇ 27(ಶುಕ್ರವಾರ) ಸಚಿವಾಲಯದ ಬಂದ್ಗೆ ಕರೆಯನ್ನು ನೀಡಿದೆ. ಮತ್ತೊಂದೆಡೆ ನೌಕರರು ಬಂದ್ ಕರೆಯನ್ನು ಸರ್ಕಾರ ಗಂಭಿರವಾಗಿ ತೆಗೆದುಕೊಂಡಿದ್ದು, ಎಲ್ಲಾ ಅಧಿಕಾರಿಗಳು/ ಸಿಬ್ಬಂದಿ ಕಡ್ಡಾಯವಾಗಿ ಕಚೇರಿಗೆ ಹಾಜರಾಗತಕ್ಕದ್ದು ಎಂದು ಸುತ್ತೋಲೆ ಹೊರಡಿಸಿದೆ.
ಸಚಿವಾಲಯ ನೌಕರರ ಸಂಘದ ಬೇಡಿಕೆ ಏನು..?
ಸಚಿವಾಲಯದ ನೌಕರರು ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. "ಸಚಿವಾಲಯದ 542 ಕಿರಿಯ ಸಹಾಯಕ ಹುದ್ದೆಗಳನ್ನು ಕಡಿತಗೊಳಿಸುವ ಪ್ರಸ್ತಾವನೆ ಸೇರಿದಂತೆ ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಒಂದು ದಿನದ ಮಟ್ಟಿಗೆ ಸಚಿವಾಲಯದ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು, ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಹಲವು ದಿನಗಳಿಂದ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸೇವೆಯಿಂದ ನಿವೃತ್ತಿಯಾದ ನೌಕರರನ್ನು ಮರು ನೇಮಕ ಮಾಡುವ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದೆವು. ಆದರೆ, ಯಾವುದೇ ಪ್ರಯೋಜನವಾಗಿಲ್ಲ," ಎಂದು ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ ತಿಳಿಸಿದ್ದಾರೆ.
ಕಂದಾಯ ಸಚಿವ ಆರ್.ಅಶೋಕ್ ಅವರ ಅಧ್ಯಕ್ಷತೆಯಲ್ಲಿ ರಚಿಸಿರುವ ಸಚಿವ ಸಂಪುಟ ಉಪ ಸಮಿತಿಯು ಅವೈಜ್ಞಾನಿಕವಾಗಿ ಶಿಫಾರಸು ಮಾಡಿರುವ ಅಂಶಗಳನ್ನು ಕೈ ಬಿಡುವುದು, ನಿವೃತ್ತ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅಧ್ಯಕ್ಷತೆಯಲ್ಲಿ ರಚಿಸಿರುವ ಆಡಳಿತಾ ಸುಧಾರಣಾ ಆಯೋಗದ 2ರಲ್ಲಿ ಸಚಿವಾಲಯದ ಕುರಿತು ನೀಡಿರುವ ಶಿಫಾರಸುಗಳು, ಸಚಿವಾಲಯಗಳಲ್ಲಿ ನಿಯೋಜನೆ, ಅನ್ಯ ಕಾರ್ಯನಿಮಿತ್ತ ಕಾರ್ಯ ನಿರ್ವಹಿಸುತ್ತಿರುವವರನ್ನು ಕೂಡಲೇ ಮಾತೃ ಇಲಾಖೆಗೆ ಕಳುಹಿಸಿಕೊಡಬೇಕು ಎಂದು ಗುರುಸ್ವಾಮಿ ಒತ್ತಾಯಿಸಿದರು.
ಹುದ್ದೆಗಳ ಕಡಿತದ ಪ್ರಸ್ತಾನೆಯನ್ನು ಕೈ ಬಿಡಬೇಕು
ಸಚಿವಾಲಯದ ಯಾವುದೇ ಇಲಾಖೆ ಹುದ್ದೆಗಳ ಕಡಿತದ ಪ್ರಸ್ತಾನೆಯನ್ನು ಕೈ ಬಿಡಬೇಕು. ಜನಸ್ಪಂದನೆ ಇಲಾಖೆ ರದ್ದುಗೊಳಿಸಿರುವುದನ್ನು ಹಿಂಪಡೆಯುವುದು. ಖಾಲಿ ಇರುವ ಗ್ರೂಪ್ ಡಿ ಮತ್ತು ವಾಹನ ಚಾಲಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವುದು, ಎನ್ಕೇಡರ್ ಹುದ್ದೆಗಳನ್ನು ಸಿಆಸು ಮೂಲಕವೇ ತುಂಬ ಬೇಕೆಂದು ಗುರುಸ್ವಾಮಿ ಮನವಿ ಮಾಡಿದರು.
ಸಚಿವಾಲಯದ ಆಪ್ತ ಶಾಖೆಗಳಲ್ಲಿ ಆಪ್ತ ಕಾರ್ಯದರ್ಶಿ/ ಆಪ್ತ ಸಹಾಯಕರ ಸೇವೆಗಳನ್ನು ಹೊರತುಪಡಿಸಿ ಹೊರಗುತ್ತಿಗೆ ನೌಕರರ ಸೇವೆಯನ್ನು ತಕ್ಷಣವೇ ರದ್ದುಗೊಳಿಸಬೇಕು. ನೌಕರರ ಸೇವೆಗಳನ್ನು ಸಚಿವ ಆಪ್ತ ಶಾಖೆಗಳಲ್ಲಿ ಕಡ್ಡಾಯವಾಗಿ ಬಳಸಿಕೊಳ್ಳುವುದು, ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿಯೇ ಇಲಾಖೆಗಳನ್ನು ತರುವುದು, ಬಹುಮಹಡಿ ಕಟ್ಟಡದ ಆವರಣದ ರಸ್ತೆಯನ್ನು ಸಾರ್ವಜನಿಕ ರಸ್ತೆಯನ್ನಾಗಿ ಮಾಡಿರುವ ಕ್ರಮವನ್ನು ರದ್ದುಗೊಳಿಸಬೇಕೆಂದು ಅವರು ಆಗ್ರಹಿಸಲಾಗಿದೆ.ನಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕಚೇರಿಗೆ ರಜೆ ಹಾಕಿ ಸಚಿವಾಲಯ ಬಂದ್ ಮಾಡುತ್ತೇವೆ ಎಂದು ನೌಕರ ಸಂಘ ತಿಳಿಸಿದೆ.
ಬಂದ್ಗೆ ಅನುಮತಿ ಇಲ್ಲ:
"ಕರ್ನಾಟಕ ಸರ್ಕಾರ ಸಚಿವಾಲಯದ ನೌಕರರ ಸಂಘವು ಹಲವು ಬೇಡಿಕೆಗಳನ್ನು ಈಡೇರಿಸದ ಕುರಿತು ಮೇ 27(ಶುಕ್ರವಾರ) ಸಚಿವಾಲಯದ ಬಂದ್ಗೆ ಕರೆಯನ್ನು ನೀಡಿರುವುದು ಕಾನೂನುಬಾಹಿರವಾಗಿರುತ್ತದೆ. ಈ ಕ್ರಮವನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಎಲ್ಲಾ ಅಧಿಕಾರಿಗಳು/ ಸಿಬ್ಬಂದಿ ಕಡ್ಡಾಯವಾಗಿ ಕಚೇರಿಗೆ ಹಾಜರಾಗತಕ್ಕದ್ದು. ಒಂದು ವೇಳೆ ಸಚಿವಾಲಯದ ಅಧಿಕಾರಿಗಳು/ ಸಿಬ್ಬಂದಿ ಮೇಲಾಧಿಕಾರಿಗಳ ಪೂರ್ವಾನುಮತಿಯನ್ನು ಪಡೆಯದೆ ಕಚೇರಿಗೆ ಗೈರುಹಾಜರಾದರೇ ಅದನ್ನು ಲೆಕ್ಕಕ್ಕಿಲ್ಲದ ಅವಧಿ (Dies-non) ಎಂದು ಪರಿಗಣಿಸಲಾಗವುದು," ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಪಿರವಿಕುಮಾರ್ ಸುತ್ತೋಲೆಯನ್ನು ಹೊರಡಿಸಿದ್ದಾರೆ.