ಪಿಯುಸಿ ಕರಡು ಪ್ರವೇಶ ಪತ್ರ ಬಿಡುಗಡೆ, ತಪ್ಪುಗಳಿದ್ದರೆ ತಿದ್ದಿಕೊಳ್ಳಿ
ಬೆಂಗಳೂರು, ಡಿಸೆಂಬರ್ 28: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಕರಡು ಪ್ರವೇಶ ಪತ್ರವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ನಿನ್ನೆ ಬಿಡುಗಡೆ ಮಾಡಿದೆ.
ವಿದ್ಯಾರ್ಥಿಗಳು ಕರಡು ಪ್ರವೇಶ ಪತ್ರವನ್ನು ಪರಿಶೀಲಿಸಬಹುದಾಗಿದೆ. ಒಂದು ವೇಳೆ ಕರಡು ಪ್ರವೇಶ ಪತ್ರದಲ್ಲಿ ತಪ್ಪಿದ್ದಲ್ಲಿ ಇಲಾಖೆಯ ಗಮನಕ್ಕೆ ತಂದು ತಿದ್ದುವ ಅವಕಾಶ ಇದೆ.
ಆಯಾ ಕಾಲೇಜುಗಳ ಪ್ರಾಂಶುಪಾಲರು ಈ ಕರಡು ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಂಡು, ವಿದ್ಯಾರ್ಥಿಗಳಿಗೆ ವಿತರಿಸಿ ಅದು ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಲು ತಿಳಿಸಿ, ತಪ್ಪಿದ್ದರೆ ಮಾಹಿತಿ ಪಡೆದು ಇಲಾಖೆಯ ಗಮನಕ್ಕೆ ತರಬೇಕಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ.
ಜನವರಿ 6 ನೇ ತಾರೀಖಿನ ಒಳಗಾಗಿ ತಪ್ಪುಗಳನ್ನು ಇಲಾಖೆಯ ಗಣಕಯಂತ್ರ ವಿಭಾಗದ ಗಮನಕ್ಕೆ ಸೂಕ್ತ ದಾಖಲೆಗಳೊಂದಿಗೆ ತಲುಪಿಸಬೇಕೆಂದು ಇಲಾಖೆಯು ಸೂಚಿಸಿದೆ.
ಪರೀಕ್ಷೆಯ ದಿನ ಪ್ರವೇಶ ಪತ್ರದಲ್ಲಿ ತಪ್ಪುಗಳಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಿರಲೆಂದು ಮುಂಚಿತವಾಗಿಯೇ ಕರಡು ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಲಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ: ಯಾವಾಗ ಯಾವ ಪರೀಕ್ಷೆ?
ಕರಡು ಪ್ರವೇಶ ಪತ್ರದಲ್ಲಿನ ಹೆಸರು, ತಂದೆ-ತಾಯಿಯ ಹೆಸರು, ಭಾಗ 1, 2 ರ ಪಠ್ಯ ವಿಷಯಗಳು, ವಿದ್ಯಾರ್ಥಿಗಳ ಫೊಟೊ, ಪರೀಕ್ಷಾ ಮಾಧ್ಯಮ, ಸಂಯೋಜನೆ ಇತರೆ ತಪ್ಪುಗಳನ್ನು ತಿದ್ದಬಹುದಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಈಗಾಗಲೇ ಬಿಡುಗಡೆ ಆಗಿದ್ದು, ಪರೀಕ್ಷೆಯು 2020 ಮಾರ್ಚ್ 4 ತಾರೀಖಿನಿಂದ ಪರೀಕ್ಷೆಗಳು ಆರಂಭವಾಗಲಿವೆ. ಮಾರ್ಚ್ 23 ಕ್ಕೆ ಕೊನೆಯ ಪರೀಕ್ಷೆ ನಡೆಯಲಿದೆ.