ಪಿಯುಸಿ: ಇತಿಹಾಸ ಪಠ್ಯ ಪರಿಷ್ಕರಣೆ ಕೇಸರಿ ತಜ್ಞ 'ಚಕ್ರತೀರ್ಥ' ಸಮಿತಿ ಹೆಗಲಿಗೆ
ಬೆಂಗಳೂರು, ಮೇ. 23: ರಾಜ್ಯ ಪಠ್ಯಕ್ರಮದ 6 ನೇ ತರಗತಿಯಿಂದ 10 ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿ ವಿವಾದಕ್ಕೆ ನಾಂದಿ ಹಾಡಿದ್ದ ರಾಜ್ಯ ಸರ್ಕಾರ ಪಿಯುಸಿ ಇತಿಹಾಸ ಪಠ್ಯ ಪುಸ್ತಕದ ಪರಿಷ್ಕರಣೆಗೆ ಚಾಲನೆ ನೀಡಿದೆ. ಅಚ್ಚರಿ ಏನೆಂದರೆ, ಪಠ್ಯಪುಸ್ತಕ ಪರಿಷ್ಕರಣೆ ಹೊಣೆಗಾರಿಕೆಯನ್ನು "ಕೇಸರಿ ತಜ್ಞ" ಸಮಿತಿ ರೋಹಿತ್ ಚಕ್ರ ತೀರ್ಥ ಅವರಿಗೆ ವಹಿಸಲು ಮುಂದಾಗಿದೆ. ಇದೀಗ ವಿದ್ಯಾರ್ಥಿಗಳ ಪಠ್ಯಪುಸ್ತಕವನ್ನು ಕೇಸರೀಕರಣಗೊಳಿಸುವ ಕೇಸರಿ ಪಠ್ಯ 2.0 ಗೆ ಸರ್ಕಾರ ಅಧಿಕೃತ ಚಾಲನೆ ನೀಡಿದೆ.
ದ್ವಿತೀಯ ಪಿಯುಸಿ ಕಲಾ ವಿಭಾಗಕ್ಕೆ ಇತಿಹಾಸವನ್ನು ಭಾರತದ ಇತಿಹಾಸ ಅಧ್ಯಯನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಭಾರತ ಇತಿಹಾಸ ಅಧ್ಯಾಯ 4 ರಲ್ಲಿ ಹೊಸ ಧರ್ಮಗಳ ಉದಯ ಪಠ್ಯ ಭಾಗವನ್ನು ಪರಿಶೀಲಿಸಿ ಸೂಕ್ತ ಪರಿಷ್ಕರಣೆ ಹೊಣೆಗಾರಿಕೆಯನ್ನು ರೋಹಿತ್ ಚಕ್ರತೀರ್ಥ ಸಮಿತಿಗೆ ವಹಿಸುವಂತೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಫೆ. 17, 2022 ರಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ "ಟಿಪ್ಪಣಿ" ಹಾಕಿದ್ದಾರೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಇತಿಹಾಸ ವಿಭಾಗಕ್ಕೆ ನಿಗದಿ ಮಾಡಿರುವ " ಭಾರತದ ಇತಿಹಾಸ" ಪಠ್ಯ ಪುಸ್ತಕ 4 ನೇ ಅಧ್ಯಾಯ ಹೊಸ ಧರ್ಮಗಳ ಉದಯ ಪಠ್ಯದಲ್ಲಿ ನಿರ್ದಿಷ್ಟ ಧರ್ಮಗಳ ಭಾವನೆಗಳಿಗೆ ಧಕ್ಕೆಯಾಗುವ ವಿಷಯ ಬಗ್ಗೆ ದೂರುಗಳು ಬಂದಿರುತ್ತವೆ. ದ್ವಿತೀಯ ಪಿಯುಸಿ ಇತಿಹಾಸ ಪಠ್ಯ ಪುಸ್ತಕ ಅಧ್ಯಾಯ " ಹೊಸ ಧರ್ಮಗಳ ಉದಯ" ಪರಿಶೀಲಿಸಿ ಸೂಕ್ತವಾಗಿ ಪರಿಷ್ಕರಣೆ ಮಾಡಲು ರೋಹಿತ್ ಚಕ್ರತೀರ್ಥ ಸಮಿತಿಗೆ ವಹಿಸಬೇಕು. ಈ ಪರಿಷ್ಕೃತ ಪಠ್ಯಪುಸ್ತಕ 2022-23 ನೇ ಸಾಲಿನಲ್ಲಿಯೇ ಮುದ್ರಣ ಮಾಡಿ ವಿತರಿಸಲು ಅಗತ್ಯ ಕ್ರಮ ಜರುಗಿಸಬೇಕು ಎಂದು ಸಚಿವ ಬಿ.ಸಿ. ನಾಗೇಶ್ ಅವರ ಟಿಪ್ಪಣಿಯಲ್ಲಿ ಉಲ್ಲೇಖವಾಗಿದೆ.
ವಿವಾದ ಇಲ್ಲ ಎಂದ ಇತಿಹಾಸ ರಚನಾ ಸಮಿತಿ:
Recommended Video
ಸಚಿವರ ಸೂಚನೆಯಂತೆ ಪಿಯು ಮಂಡಳಿ ನಿರ್ದೇಶಕರು ದ್ವಿತೀಯ ಪಿಯುಸಿ ಇತಿಹಾಸ ಪಠ್ಯ ಪುಸ್ತಕ ಅಧ್ಯಾಯ - 4 'ಹೊಸ ಧರ್ಮಗಳ ಉದಯ' ದಲ್ಲಿ ಯಾವುದೇ ವಿವಾದಿತ ಅಂಶಗಳು ಇರುವುದಿಲ್ಲ. ಇಲಾಖೆ ಈ ಅಂಶಗಳ ಬಗ್ಗೆ ತೆಗೆದುಕೊಳ್ಳುವ ತೀರ್ಮಾನಕ್ಕೆ ಇತಿಹಾಸ ರಚನಾ ಸಮಿತಿ ಅಭ್ಯಂತರ ಇರುವುದಿಲ್ಲ ಎಂದು ದ್ವಿತೀಯ ಪಿಯುಸಿ ಪಠ್ಯ ಪುಸ್ತಕ ರಚನಾ ಸಮಿತಿ ಅಭಿಪ್ರಾಯ ಪಟ್ಟಿದೆ. ಇದನ್ನು ಪಿಯು ಮಂಡಳಿ ನಿರ್ದೇಶಕರು ಉಲ್ಲೇಖಿಸಿ ಸಚಿವರ ಅಪ್ತ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ದ್ವಿತೀಯ ಪಿಯುಸಿ ಪಠ್ಯ ಪುಸ್ತಕ ಪರಿಷ್ಕರಣೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಕೂಡ ಸದ್ದಿಲ್ಲದೇ ಚಾಲನೆ ನೀಡಿದೆ.