ಸೀಟು ಹಂಚಿಕೆ: ಜೆಡಿಎಸ್ಗೆ 7, ಕಾಂಗ್ರೆಸ್ 21: ಯಾವ ಕ್ಷೇತ್ರ ಯಾರಿಗೆ?
ನವದೆಹಲಿ, ಮಾರ್ಚ್ 09: ಆರಂಭದಲ್ಲಿ 12 ಲೋಕಸಭಾ ಕ್ಷೇತ್ರಗಳು ಜೆಡಿಎಸ್ಗೆ ಬೇಕು ಎಂದು ಪಟ್ಟು ಹಿಡಿದಿದ್ದ ಜೆಡಿಎಸ್ ಇದೀಗ ತಣ್ಣಗಾದಂತಿದೆ. ಜೆಡಿಎಸ್ 7 ಕ್ಷೇತ್ರಗಳಿಗೆ ತೃಪ್ತಿ ಪಟ್ಟುಕೊಂಡಿದ್ದರೆ, ಕಾಂಗ್ರೆಸ್ 21 ಲೋಕಸಭಾ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.
ರಾಜ್ಯ ಕಾಂಗ್ರೆಸ್ ಮುಖಂಡರ ಬಳಿ ಮಾತನಾಡಿ ಪ್ರಯೋಜನವಿಲ್ಲವೆಂದು ದೇವೇಗೌಡ ಅವರು ರಾಹುಲ್ ಗಾಂಧಿ ಬಳಿ ಹೋಗಿ ಲಾಭಿ ಮಾಡಲು ಯತ್ನಿಸಿದರೂ ಮಹತ್ ಲಾಭ ಆದಂತಿಲ್ಲ. ಜೆಡಿಎಸ್ಗೆ 7, ಕಾಂಗ್ರೆಸ್ಗೆ 21 ಸೀಟುಗಳು ಎಂಬುದು ಬಹುತೇಕ ನಿಶ್ಚಯವಾಗಿದೆ.
ಸೀಟು ಹಂಚಿಕೆ ಪಟ್ಟು ಸಡಿಲಿಸಿದ ಜೆಡಿಎಸ್, ಮೈತ್ರಿ ಗೆಲುವು ಮುಖ್ಯ ಎಂದ ಸಿಎಂ
ಇದಕ್ಕೆ ಸಾಕ್ಷ್ಯವೆಂಬಂತೆ ಇಂದು ಬೆಳಿಗ್ಗೆ ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮಗೆ ಸಂಖ್ಯೆ ಮುಖ್ಯವಲ್ಲ, ಮೈತ್ರಿ ಮುಖ್ಯ, ಹೆಚ್ಚು ಸ್ಥಾನ ಗೆಲ್ಲುವುದು ಮುಖ್ಯ ಎಂದು ಹೇಳಿದ್ದಾರೆ.
ಮಾರ್ಚ್ 11 ರಂದು ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮುಖಂಡರ ನಡುವೆ ನಡೆಯಲಿರುವ ಸ್ಕ್ರೀನಿಂಗ್ ಕಮಿಟಿ ಸಭೆಯು ಔಪಚಾರಿಕ ಎನ್ನಲಾಗುತ್ತಿದ್ದು, ಅಂದು ಅಭ್ಯರ್ಥಿಗಳ ಬಗ್ಗೆ ಇಬ್ಬರೂ ನಾಯಕರು ಚರ್ಚೆ ಮಾಡಲಿದ್ದಾರೆ, ಹಾಗೂ ಪ್ರಚಾರ ಮತ್ತಿತರೆ ವಿಷಯಗಳ ಬಗ್ಗೆ ಚರ್ಚೆ ಆಗಲಿದೆ.
ಕಡಿಮೆಯಾದರೂ ಗಟ್ಟಿ ಕ್ಷೇತ್ರ ಆರಿಸಿರುವ ಜೆಡಿಎಸ್
ಜೆಡಿಎಸ್ ಪಕ್ಷದ ಬುಟ್ಟಿಗೆ ಕಡಿಮೆ ಕ್ಷೇತ್ರ ಬಿದ್ದಿದೆಯಾದರೂ ಮೈತ್ರಿಯ ಲಾಭದಿಂದ ಗೆಲ್ಲುವ ಅತಿ ಹೆಚ್ಚು ಸಾಧ್ಯತೆ ಇರುವ ಕ್ಷೇತ್ರಗಳನ್ನೇ ಜೆಡಿಎಸ್ ಆಯ್ಕೆ ಮಾಡಿಕೊಂಡಿದೆ. ಜೆಡಿಎಸ್ ಪಕ್ಷವು ಬಹುತೇಕ ಹಳೆ ಮೈಸೂರು ಭಾಗದ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿದೆ. ಕರಾವಳಿ ಮತ್ತು ಉತ್ತರ ಕರ್ನಾಟಕದ ಒಂದೊಂದು ಕ್ಷೇತ್ರವನ್ನು ಸಹ ಆಯ್ದುಕೊಂಡಿದೆ. ಹಾಗಾಗಿ ಮೇಲ್ನೋಟಕ್ಕೆ ಸೋತರೂ ಜೆಡಿಎಸ್ ಗೆದ್ದಿದೆ ಎಂದೇ ಭಾವಿಸಬಹುದಾಗಿದೆ.
ಕಾಂಗ್ರೆಸ್ಗೆ ಯಾವ ಕ್ಷೇತ್ರಗಳು
ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ದಕ್ಷಿಣ, ಬೆಂಗಳೂರು ಸೆಂಟ್ರಲ್, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಹುಬ್ಬಳ್ಳಿ-ಧಾರವಾಡ, ಚಿತ್ರದುರ್ಗ, ಕಲಬುರಗಿ, ಬೆಳಗಾವಿ, ಬಳ್ಳಾರಿ, ಕೊಪ್ಪಳ, ಬಾಗಲಕೋಟೆ, ರಾಯಚೂರು, ಉಡುಪಿ-ಚಿಕ್ಕಮಗಳೂರು, ಬೀದರ್, ಚಾಮರಾಜನಗರ, ದಾವಣಗೆರೆ, ಹಾವೇರಿ, ದಕ್ಷಿಣ ಕನ್ನಡ, ಮೈಸೂರು ಅಥವಾ ತುಮಕೂರು ಇಷ್ಟು ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಲಿವೆ.
ಕಾಂಗ್ರೆಸ್ಗೆ 21 ಕ್ಷೇತ್ರಗಳು
ಹಾಲಿ ಸಂಸದರಿರುವ ಸ್ಥಾನದಲ್ಲಿ ಬದಲಾವಣೆ ಇಲ್ಲ ಎಂಬ ಮೈತ್ರಿ ಸೂತ್ರದ ಅನ್ವಯ ಪ್ರಸ್ತುತ ಕಾಂಗ್ರೆಸ್ನ ಹಾಲಿ ಸಂಸದರಿರುವ ಎಲ್ಲ 13 ಕ್ಷೇತ್ರಗಳ ಜೊತೆಗೆ 8 ಕ್ಷೇತ್ರಗಳು ದೊರೆಯಲಿವೆ. ಕಾಂಗ್ರೆಸ್ನ ಭದ್ರ ಕೋಟೆ ಹಳೆ ಮೈಸೂರಿನ ಕೆಲ ಕ್ಷೇತ್ರಗಳು ಕಾಂಗ್ರೆಸ್ನ ಕೈತಪ್ಪುತ್ತಿವೆ. ಆದರೆ ಹೆಚ್ಚಿನ ಸೀಟನ್ನೇ ಪಡೆಯುವ ಮೂಲಕ ಕಾಂಗ್ರೆಸ್ ನಿರುಮ್ಮಳವಾಗಿದೆ.
ಕರ್ನಾಟಕ: 2014ರ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆದ್ದ ಐವರು ಮುಖಂಡರು
ಜೆಡಿಎಸ್ಗೆ ಯಾವ-ಯಾವ ಕ್ಷೇತ್ರ?
ಜೆಡಿಎಸ್ ಪಕ್ಷವು ಪ್ರಸ್ತುತ ಅಧಿಕಾರದಲ್ಲಿರುವ ಮಂಡ್ಯ ಮತ್ತು ಹಾಸನದ ಜೊತೆಗೆ, ಶಿವಮೊಗ್ಗ, ಬೆಂಗಳೂರು ಉತ್ತರ, ವಿಜಯಪುರ, ಉತ್ತರ ಕನ್ನಡ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿದೆ. ತುಮಕೂರು ಅಥವಾ ಮೈಸೂರು ಕ್ಷೇತ್ರಗಳಲ್ಲಿ ಯಾವುದಾದರೂ ಒಂದು ಕ್ಷೇತ್ರ ಜೆಡಿಎಸ್ಗೆ ಏಳನೇ ಕ್ಷೇತ್ರವಾಗಿ ದೊರೆಯಲಿದೆ.
ಬಿಜೆಪಿಯ 6 ಹಾಲಿ ಸಂಸದರಿಗೆ ಟಿಕೆಟ್ ನೀಡಲು ವಿರೋಧ
ಮೈಸೂರಿಗಾಗಿ ಸಿದ್ದರಾಮಯ್ಯ, ತುಮಕೂರಿಗೆ ಪರಂ ಪಟ್ಟು
ಮೈಸೂರು ಅಥವಾ ತುಮಕೂರು ಕ್ಷೇತ್ರಗಳಲ್ಲಿ ಒಂದನ್ನು ಕೊಡುವಂತೆ ಜೆಡಿಎಸ್ ಪಟ್ಟು ಹಿಡಿದಿದೆ. ಆದರೆ ಮೈಸೂರು ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ದರಾಮಯ್ಯ ಒಪ್ಪುತ್ತಿಲ್ಲ. ಅಂತೆಯೇ ಕಳೆದ ಬಾರಿ ಗೆದ್ದಿರುವ ತುಮಕೂರು ಕ್ಷೇತ್ರವನ್ನು ಬಿಟ್ಟುಕೊಡಲು ಡಿಸಿಎಂ ಪರಮೇಶ್ವರ್ ಅವರು ಒಪ್ಪುತ್ತಿಲ್ಲ.
ದೇವೇಗೌಡ ಅವರ ಸ್ಪರ್ಧೆ ಖಚಿತ?
ದೇವೇಗೌಡ ಅವರು ಈ ಬಾರಿ ಲೋಕಸಭೆಗೆ ಸ್ಪರ್ಧೆ ಮಾಡುವುದಿಲ್ಲ ಎಂದಿದ್ದರು. ಆದರೆ ಅವರು ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ. ಅವರು ಸ್ಪರ್ಧೆ ಮಾಡುವ ಕಾರಣಕ್ಕೆಯೇ ಮೈಸೂರು ಅಥವಾ ತುಮಕೂರು ಕ್ಷೇತ್ರವನ್ನು ಕೇಳಲಾಗುತ್ತಿದೆ. ಆದರೆ ಕಾಂಗ್ರೆಸ್ ಪಕ್ಷವು ದೇವೇಗೌಡರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲಿ ಎಂದು ಸಲಹೆ ನೀಡಿದೆ.