ವಿದ್ಯುತ್ ದರ ಏರಿಕೆಗೆ ಕೆ.ಇ.ಆರ್.ಸಿ ಆದೇಶ ಖಂಡನೀಯ: ಎಸ್.ಡಿ.ಪಿ.ಐ
ಬೆಂಗಳೂರು, ಫೆ. 26: ರಾಜ್ಯ ಬಿಜೆಪಿ ಸರಕಾರ ರಾಜ್ಯದ ಜನತೆಯ ಮೇಲೆ ತೆರಿಗೆ ಹೊರೆ ಹಾಕಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಈಗಾಗಲೇ ಕೊರೊನಾ ವೈರಸ್ ಸಂಕಷ್ಟದಿಂದ ನಲುಗಿರುವ ಜನರ ಮೇಲೆ ಮತ್ತೆ ಹೊರೆ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.
ಕೊರೊನಾ ಸಂಕಷ್ಟದ ಮಧ್ಯೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಜನತೆಯ ಮೇಲೆ ಹೆಚ್ಚುವರಿ ತೆರಿಗೆ ಹಾಕಿ, ವಸೂಲಿಗೆ ಇಳಿದಿದ್ದಾರೆ. ಇದರಿಂದ ರಾಜ್ಯದ ಜನತೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ಡಿಪಿಐ)ನ ರಾಜ್ಯ ಕಾರ್ಯದರ್ಶಿ ಅಕ್ರಂ ಹಸನ್ ಅವರು ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಜನರ ಜೀವನದ ಜತೆ ಚೆಲ್ಲಾಟವಾಡುತ್ತಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ತೆರಿಗೆ ಹೇರುವ ನೀತಿ ಖಂಡನೀಯ. ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಭಿವೃದ್ಧಿಪರ ಕಾರ್ಯಗಳನ್ನು ಮರೆತು, ಸಾಲ ಮಾಡುವುದರಲ್ಲಿ ದಾಖಲೆ ನಿರ್ಮಿಸಿದ್ದಾರೆ.
Recommended Video
ಅವರು ಮಾಡಿರುವ ಆ ಸಾಲ ತೀರಿಸಲು ಜನರ ಮೇಲೆ ವಿದ್ಯುತ್ ದರ ಏರಿಕೆ ಹಾಗೂ ಬೆಂಗಳೂರು ನಗರ ನಿವಾಸಿಗಳ ಕಟ್ಟಡದ ಆಸ್ತಿ ತೆರಿಗೆ ಹೆಚ್ಚಿಸಲು ನಿರ್ಧರಿಸಿದ್ದಾರೆ. ಈಗಾಗಲೇ ವಿದ್ಯುತ್ ಇಲಾಖೆ ಪ್ರತಿ ಯೂನಿಟ್ಗೆ ಶೇಕಡಾ 40 ರಷ್ಟು ದರ ಏರಿಕೆ ಮಾಡಿರುವ ನೀತಿ ಖಂಡನೀಯ ಎಂದು ಅಕ್ರಂ ಹಸನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.