ಕೊರೊನಾ ಬಗ್ಗೆ 30 ವರ್ಷದ ಹಿಂದೆ ಬರೆದಿದ್ದ ಕರ್ನಾಟಕದ ವಿಜ್ಞಾನಿ ಏನಂದ್ರು?
ಬೆಂಗಳೂರು, ಮಾರ್ಚ್ 7: ಕೊರೊನಾ ವೈರಸ್ ಎಂಬುದು ಸದ್ಯ ವ್ಯಾಪಕ ಚರ್ಚೆ ಹುಟ್ಟಿಹಾಕಿದೆ. ಕಳೆದ ಡಿಸೆಂಬರ್ನಲ್ಲಿ ಚೀನಾದಲ್ಲಿ ಕಾಣಿಸಿಕೊಂಡು ಇದೀಗ 60 ಕ್ಕೂ ಹೆಚ್ಚು ದೇಶಗಳಲ್ಲಿ ಪಸರಿಸಿರುವ ನಾವೆಲ್ ಕೊರೊನಾ ವೈರಸ್ ಬಗ್ಗೆ ಅನೇಕ ವರ್ಷಗಳ ಹಿಂದೆಯೇ ಪುಸ್ತಕಗಳಲ್ಲಿ, ಪತ್ರಿಕೆಗಳಲ್ಲಿ, ಸಿನಿಮಾದಲ್ಲಿ ಚರ್ಚೆಯಾಗಿತ್ತು.
ಇದೇ ರೀತಿ ಕಳೆದ ಎರಡು ದಿನಗಳಿಂದ 30 ವರ್ಷಗಳ ಹಿಂದೆಯೇ ಕೊರೊನಾ ಬಗ್ಗೆ ತರಂಗ ವಾರ ಪತ್ರಿಕೆಯಲ್ಲಿ ಬರೆಯಲಾಗಿತ್ತು ಎಂಬುದು ಕರ್ನಾಟಕದ ಮಟ್ಟಿಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದೆ.
ಕೊರೊನಾ ಕಂಟಕ: ಬೆಂಗಳೂರಿನ ಮಾಲ್, ಥಿಯೇಟರ್ ಗಳು ಖಾಲಿ ಖಾಲಿ
ತರಂಗ ವಾರಪತ್ರಿಕೆಯ 1989 ರ ಜುಲೈ 16 ರ ಸಂಚಿಕೆಯಲ್ಲಿ ಕೊಳ್ಳೆಗಾಲ ಶರ್ಮಾ ಎಂಬ ಮೈಸೂರಿನ 59 ವರ್ಷದ ವಿಜ್ಞಾನಿ ಬರೆದ ನೆಗಡಿ-ನಗಬೇಡಿ ಎಂಬ ಲೇಖನದ ಪ್ರತಿ ವೈರಲ್ ಆಗಿತ್ತು. ಶರ್ಮಾ ಅವರು 29 ವರ್ಷದವರಿದ್ದಾಗ ಮಣಿಪಾಲ್ ವಿವಿಯಲ್ಲಿ ಪಿಎಚ್ಡಿ ಮಾಡುತ್ತಿದ್ದಾಗ ಬರೆದಿದ್ದ ಲೇಖನ ಇದಾಗಿತ್ತು.
4 ಪುಟಗಳ ಲೇಖನ
ಕೊಳ್ಳೆಗಾಲ ಶರ್ಮಾ ಅವರು ನೆಗಡಿಗೆ ಕಾರಣವಾಗುವ ವೈರಸ್ಗಳ ಬಗ್ಗೆ ತರಂಗದ 1989 ರ ಜುಲೈ 16 ರ ಸಂಚಿಕೆಯಲ್ಲಿ ನಾಲ್ಕು ಪುಟಗಳ ವಿವರಣಾತ್ಮಾಕ ಲೇಖನ ಬರೆದಿದ್ದರು. ಗಂಭೀರ ನೆಗಡಿ ಬಂದಾಗ ಅದಕ್ಕೆ ಕೊರೊನಾ ಎಂಬ ವೈರಸ್ ಸಹ ಕಾರಣವಾಗುತ್ತದೆ. ಕೊರೊನಾ ಎಂಬುದು ವೈರಸ್ಗಳ ಸಮೂಹ. ಇದು ನೆಗಡಿಯ ರೂಪದಲ್ಲಿ ಮನುಷ್ಯನ ದೇಹ ಪ್ರವೇಶಿಸಿ ಸಂತಾನೋತ್ಪತ್ತಿ ಮಾಡುತ್ತದೆ ಎಂದು ಬರೆದಿದ್ದರು.
ಮಗುವೊಂದು ಬಿಡಿಸಿದ ಸೂರ್ಯನ ಚಿತ್ರದಂತೆ
ಗೋಲಾಕಾರದಲ್ಲಿ ಕಾಣಿಸುವ ಕೊರೊನಾ ವೈರಸ್ನ ಆಕಾರದ ಬಗ್ಗೆ ಕೊಳ್ಳೆಗಾಲ ಶರ್ಮಾ ಅಂದೇ ಹೇಳಿದ್ದರು. ಮಗುವೊಂದು ಬಿಡಿಸಿದ ಸೂರ್ಯನ ಚಿತ್ರದಂತೆ ಸೂಕ್ಷ್ಮ ದರ್ಶಕದಲ್ಲಿ ಕೊರೊನಾ ವೈರಸ್ ಕಾಣಿಸುತ್ತದೆ ಎಂದು ಮೂವತ್ತು ವರ್ಷಗಳ ಹಿಂದೆಯೇ ಶರ್ಮಾ ಬರೆದಿದ್ದರು. ಇಂದಿನ ನಾವೆಲ್ ಕೊರೊನಾ ವೈರಸ್ ಕೂಡ ಇದೇ ಆಕಾರವನ್ನು ಹೊಂದುತ್ತದೆ.
ರಾಜ್ಯದಲ್ಲಿ ಈವರೆಗೆ ಒಂದೇ ಒಂದು ಕೊರೊನಾ ಪ್ರಕರಣ ಇಲ್ಲ; ಡಾ.ಸುಧಾಕರ್
ನಾವೆಲ್ ಕೊರೊನಾ ಹತ್ತಿಕ್ಕಲೇಬೇಕು
ಮೂವತ್ತು ವರ್ಷದ ಹಿಂದೆ ಬರೆದ ಲೇಖನ ಇಂದು ವೈರಲ್ ಆಗಿರುವ ಕುರಿತು ಪ್ರತಿಕ್ರಿಯಿಸಿರುವ ಕೊಳ್ಳೆಗಾಲ ಶರ್ಮಾ ಅವರು, "ಅಂದು ವೈರಸ್ಗಳ ಬಗ್ಗೆ ಅಷ್ಟೊಂದು ಜನಜಾಗೃತಿ ಇರಲಿಲ್ಲ. ವಾತಾವರಣದಲ್ಲಿ ಸಾಮಾನ್ಯವಾಗಿ ವೈರಸ್ಗಳು ಇದ್ದೇ ಇರುತ್ತವೆ. ಸತ್ತ ಪ್ರಾಣಿಯ ಶರೀರದಲ್ಲಿ ನಡೆಯುವ ಜೈವಿಕ ಪ್ರಕ್ರಿಯೆಗಳಿಂದ ಮಾರಕ ವೈರಸ್ಗಳು ಹುಟ್ಟುತ್ತವೆ. ಈ ವೈರಸ್ಗಳು ಮೂಗು, ಕಣ್ಣು, ಬಾಯಿಯ ಮೂಲಕ ಮನುಷ್ಯನ ದೇಹ ಪ್ರವೇಶಿಸುತ್ತವೆ. ಕೊರೊನಾ ಎಂಬುದು ನೆಗಡಿಗೆ ಕಾರಣವಾಗುವ ವೈರಸ್ಗಳ ಗುಂಪು. ಚೀನಾದಲ್ಲಿ ಕಾಣಿಸಿಕೊಂಡಿರುವುದು ನಾವೆಲ್ ಕೊರೊನಾ ವೈರಸ್ ಸತ್ತ ಪ್ರಾಣಿಗಳಿಂದ ಮನುಷ್ಯನ ದೇಹ ಪ್ರವೇಶಿಸಿದ್ದು. ಅದನ್ನು ಹತ್ತಿಕ್ಕಲೇ ಬೇಕು. ಇಲ್ಲದಿದ್ದರೇ ದೊಡ್ಡ ಅವಾಂತರ ಸೃಷ್ಠಿಸುತ್ತದೆ'' ಎಂದು ಅವರು ಹೇಳಿದ್ದಾರೆ.
ಕೊರೊನಾ ವೈರಸ್; ನಾವೆಲ್ ಕೊರೊನಾ ವೈರಸ್ ಭಿನ್ನ
ಆದರೆ, ಈಗ ಕಾಣಿಸಿಕೊಂಡಿರುವ ಕೊರೊನಾ ವೈರಸ್ಗೂ ಹಾಗೂ ಈ ಹಿಂದೆ ಪುಸ್ತಕ, ಸಿನಿಮಾ, ಪತ್ರಿಕೆಗಳಲ್ಲಿ ಹೇಳಲಾದ ಕೊರೊನಾ ವೈರಸ್ಗೂ ವ್ಯತ್ಯಾಸವಿದೆ. ಅದಾಗ್ಯೂ, ಇಂದು ಸಾಕಷ್ಟು ತಲ್ಲಣ ಸೃಷ್ಟಿಸಿರುವ ಕೊರೊನಾ ವೈರಸ್ ಬಗ್ಗೆ ಶರ್ಮಾರಂತಹ ಅನೇಕ ವಿಜ್ಞಾನಿಗಳು ಭವಿಷ್ಯ ನುಡಿದಿದ್ದನ್ನು ತಳ್ಳಿಹಾಕುವಂತಿಲ್ಲ.
33 ಜನರಿಗೆ ಕೊರೊನಾ ಸೋಂಕು
ಜಾಗತಿಕವಾಗಿ ತಲ್ಲಣ ಸೃಷ್ಠಿಸಿರುವ ಕೊರೊನಾ ವೈರಸ್ ಸೋಂಕು ಭಾರತದಲ್ಲೂ ತನ್ನ ಪ್ರಭಾವ ಬೀರತೊಡಗಿದೆ. ಒಟ್ಟು ಇಲ್ಲಿಯವರೆಗೆ ಭಾರತದಲ್ಲಿ 33 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿವೆ. ಆದರೆ, ಕರ್ನಾಟಕದಲ್ಲಿ ಯಾವುದೇ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿಲ್ಲ.