ತಂತ್ರಜ್ಞಾನದಿಂದ ಎಲ್ಲ ಸಮಸ್ಯೆಗಳಿಗೆ ಪರಿಹಾರ : ಸಿದ್ದರಾಮಯ್ಯ
ಬೆಂಗಳೂರು, ನವೆಂಬರ್ 5 : ವಿಜ್ಞಾನ ಹಾಗೂ ತಂತ್ರಜ್ಞಾನ ಅಭಿವೃದ್ಧಿಯಿಂದ ಅನೇಕ ಜನಪರ ಕೆಲಸಗಳನ್ನು ಮಾಡಲು ಮತ್ತು ಕಸ ವಿಲೇವಾರಿಯಂಥ ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಅವರು ಇಂದು ವಿ.ವಿ.ಪುರಂನ ಬೆಂಗಳೂರು ತಾಂತ್ರಿಕ ವಿಶ್ವವಿದ್ಯಾಲಯದ ಕುವೆಂಪು ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗದ್ದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ 8ನೇ ಸಮ್ಮೇಳನವನ್ನು ಉದ್ಘಾಟಿಸಿ ಗುರುವಾರ ಮಾತನಾಡುತ್ತಿದ್ದರು.
ಬೆಂಗಳೂರಿನಲ್ಲಿ ಇನ್ನೂ ಸಂಚಾರ ವ್ಯವಸ್ಥೆ, ಕಸ ವಿಲೇವಾರಿಯಂತಹ ಸಮಸ್ಯೆಗಳು ಸುಧಾರಣೆಗೊಳ್ಳಬೇಕಿದೆ. ಹೊಸ ತಂತ್ರಜ್ಞಾನಗಳ ಅಳವಡಿಕೆಯಿಂದ ಜನರ ಸಮಸ್ಯೆಗಳನ್ನು ದೂರವಿಡಬಹುದಾಗಿದೆ. ವಿದ್ಯಾರ್ಥಿಗಳು ಇಂಜಿನಿಯರಿಂಗ್, ವೈದ್ಯಕೀಯ ಕೋರ್ಸ್ಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸಾಮಾನ್ಯ ವಿಜ್ಞಾನ, ಸಂಶೋಧನೆಗಳನ್ನು ಹೆಚ್ಚು ಜನರು ಆಯ್ಕೆ ಮಾಡಿಕೊಳ್ಳುವುದು ಒಳಿತು. ವಿಜ್ಞಾನ ತಂತ್ರಜ್ಞಾನದ ಹೊಸ ಆವಿಷ್ಕಾರಗಳಿಗೆ ಸರ್ಕಾರ ಎಲ್ಲ ರೀತಿಯಲ್ಲಿ ಸ್ಪಂದಿಸುತ್ತದೆ ಎಂದರು. ['ಸಿದ್ದು ಅವರೆ, ಎಲ್ಲರೂ ಸೈ ಅನ್ನುವಂತೆ ಆಡಳಿತ ನಡೆಸಿ']
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷರಾದ ಪದ್ಮಭೂಷಣ ಪ್ರೊ. ಯು.ಆರ್. ರಾವ್ ಅವರು, ಕಳೆದ ಎರಡು ದಶಕಗಳಲ್ಲಿ ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಯಿಂದ ಔದ್ಯೋಗಿಕ ಕ್ರಾಂತಿ ಉಂಟಾಗಿದೆ. ಅಣುಶಕ್ತಿ, ಬಾಹ್ಯಾಕಾಶ ತಂತ್ರಜ್ಞಾನದಲ್ಲೂ ಭಾರತ ಮಂಚೂಣಿಯಲ್ಲಿದೆ. ಆದರೂ ಎಲೆಕ್ಟ್ರಾನಿಕ್ ಉಪಕರಣಗಳು ಹೆಚ್ಚಾಗಿ ಹೊರದೇಶಕ್ಕೇ ಬೇಡಿಕೆಯಿದೆ. ಬೇರೆ ದೇಶದ ಮೊಬೈಲ್, ಕ್ಯಾಮೆರಾ ಮುಂತಾದವುಗಳನ್ನು ನಾವು ಬಳಸುತ್ತಿದ್ದೇವೆ. ಕಸ ವಿಲೇವಾರಿ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಡೆಂಗ್ಯೂ ಅಂತಹ ಕಾಯಿಲೆಗಳು ಜನರನ್ನು ಬಾಧಿಸುತ್ತಿದೆ. ಇದಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಎರಡೂ ಕೈ ಜೋಡಿಸಿ ಸಮಸ್ಯೆ ಬಗೆಹರಿಸಬೇಕೆಂದರು.
ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎಸ್.ಆರ್. ಪಾಟೀಲ್ ಅವರು, ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ತನ್ನ 8ನೇ ಸಮ್ಮೇಳನವನ್ನು ಹಮ್ಮಿಕೊಂಡಿರುವುದು ಸಂತಸದ ವಿಷಯ. ಇದೇ ಸಂದರ್ಭದಲ್ಲಿ ಡಾ: ವಿಕ್ರಂ ಸಾರಾಬಾಯಿ, ವಿಪ್ರೋ ಪ್ರೊಫೆಸರ್ ಪದ್ಮಭೂಷಣ ಡಾ: ವಿ.ಎನ್. ಸುರೇಶ್ ಅವರಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿನ ಸಾಧನೆಗೆ ಸಾಧನೆಗೆ ಜೀವಮಾನದ ಪ್ರಶಸ್ತಿಯನ್ನು ಅಕಾಡೆಮಿಯಿಂದ ನೀಡಿರುವುದು ಪ್ರಶಂಸನೀಯ ಎಂದರು. [ಪ್ರಶಸ್ತಿ ವಾಪಸ್ ಕೊಟ್ಟ ಅರುಂಧತಿಗೆ ಟ್ವಿಟ್ಟರ್ನಲ್ಲಿ ಮಂಗಳಾರತಿ]
ಬೆಂಗಳೂರಿಗೆ ಹೆಚ್ಚು ಜನ ಕೆಲಸ ಅರಸಿ ಬರುತ್ತಿದ್ದಾರೆ. ಬೆಂಗಳೂರನ್ನು ಸ್ಮಾರ್ಟ್ ಸಿಟಿಯಾಗಿ ಪರಿವರ್ತಿಸುವಲ್ಲಿ ಸರ್ಕಾರ ಉತ್ಸುಕವಾಗಿದೆ. 2020ರ ವೇಳೆಗೆ ಐ.ಟಿ. ಕ್ಷೇತ್ರದಲ್ಲಿ 80 ಲಕ್ಷ ಜನರಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ. ಅಂತೆಯೇ ಹಳ್ಳಿಗಳ ಬೆಳವಣಿಗೆ ಸಹ ಸರ್ಕಾರ ಒತ್ತು ಕೊಟ್ಟಿದೆ. ಹಳ್ಳಿಗಳನ್ನು ಸ್ಮಾರ್ಟ್ ವಿಲೇಜ್ಗಳನ್ನಾಗಿ ಮಾಡಬೇಕಿದೆ. ಮೂಲಭೂತ ಸೌಕರ್ಯ, ತಂತ್ರಜ್ಞಾನಗಳ ಅಭಿವೃದ್ಧಿ ಪಡೆದ ಹಳ್ಳಿಗೆ ಉತ್ತಮ ಡಿಜಿಟಲ್ ವಿಲೇಜ್ ಪ್ರಶಸ್ತಿ ನೀಡಲಾಗುವುದೆಂದು ತಿಳಿಸಿದರು. [ದೇಶಕ್ಕೆ 100 ಸ್ಮಾರ್ಟ್ ಸಿಟಿ, ಕರ್ನಾಟಕಕ್ಕೆ ಎಷ್ಟು?]
ಇದೇ ಸಂದರ್ಭದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ 192 ಲೇಖನಗಳನ್ನೊಳಗೊಂಡ ಸ್ಮರಣ ಸಂಚಿಕೆಯನ್ನು ಸಚಿವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ವಿಜ್ಞಾನ ತಂತ್ರಜ್ಞಾನ ಇಲಾಖೆಯ ನಿರ್ದೇಶಕರಾದ ಡಾ: ಎಚ್. ಹೊನ್ನೇಗೌಡ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಡಾ: ಅಪ್ಪಾಜಿಗೌಡ, ಬೆಂಗಳೂರು ತಾಂತ್ರಿಕ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ: ಎ.ಜಿ. ನಟರಾಜ್ ಉಪಸ್ಥಿತರಿದ್ದರು.