ಭೌತಿಕ ತರಗತಿ ಆರಂಭವಾದ್ರೂ ಕೊರೊನಾ ಭಯದಿಂದ ವಿದ್ಯಾರ್ಥಿಗಳು ಗೈರು
ಬೆಂಗಳೂರು, ನವೆಂಬರ್, 11: ಪೋಷಕರಲ್ಲಿ ಕೊರೊನಾ ಆತಂಕ ಇನ್ನೂ ಕಡಿಮೆಯಾದಂತೆ ಕಾಣುತ್ತಿಲ್ಲ. ನವೆಂಬರ್ 8 ರಿಂದ ಅಂಗನವಾಡಿಗಳು ಸೇರಿದಂತೆ ರಾಜ್ಯದಲ್ಲಿ ಪೂರ್ಣ ಪ್ರಮಾಣದ ಶಾಲಾ ಕಾಲೇಜುಗಳು ಆರಂಭವಾಗಿವೆ. ಆದರೆ, ಶಾಲಾ ಮಕ್ಕಳ ಹಾಜರಾತಿ ಗಣನೀಯವಾಗಿ ಇಳಿಕೆಯಾಗಿದೆ. ರಾಜ್ಯದಲ್ಲಿ ಅಂಗನವಾಡಿ ಯಿಂದ ಉನ್ನತ ಶಿಕ್ಷಣದ ವರೆಗೂ ಭೌತಿಕ ತರಗತಿಗಳು ಆರಂಭವಾಗಿವೆ. ಆದರೆ, ಕೊರೊನಾ ಸೋಂಕಿನ ಭಯ ಕಾಡುತ್ತಿರುವ ಕಾರಣ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಪೋಷಕರೇ ಹಿಂದೇಟು ಹಾಕುತ್ತಿದ್ದಾರೆ.
ಕಳೆದ ಆಗಸ್ಟ್ 23ರಂದು ಹೈಸ್ಕೂಲ್ ಹಾಗೂ ಪಿಯು ಕಾಲೇಜು ಆರಂಭಗೊಂಡಿದ್ದವು. ಎರಡನೇ ಹಂತವಾಗಿ ಪ್ರಾಥಮಿಕ ತರಗತಿಯಾದ 6,7 ಹಾಗೂ 8ನೇ ಭೌತಿಕ ತರಗತಿ ಆರಂಭವಾಗಿವೆ. ಸೋಮವಾರದಿಂದ ಎಲ್ ಕೆಜಿ, ಯುಕೆಜಿ ಹಾಗೂ ಅಂಗನವಾಡಿ ಕೇಂದ್ರಗಳು ಆರಂಭವಾಗಿದೆ. ಕೋವಿಡ್ ಕಾರಣಕ್ಕಾಗಿ ಪೋಷಕರು ವಿದ್ಯಾರ್ಥಿಗಳನ್ನ ಶಾಲೆಗಳಿಗೆ ಕಳುಹಿಸಲು ಮೊದಲ ದಿನ ಹಿಂದೇಟು ಹಾಕಿದ್ದಾರೆ ಅಂತಿದೆ ಹಾಜರಾತಿಯ ಅಂಕಿ-ಅಂಶ.
ರಾಜ್ಯದಲ್ಲಿ ಒಟ್ಟಾರೆ 37,693 ಶಾಲೆಗಳ ಪೈಕಿ 13,435 ಶಾಲೆಗಳು ಶೇ.35.64ರಷ್ಟು ಭೌತಿಕ ತರಗತಿ ಆರಂಭಿಸಿವೆ. 24,258 ಶಾಲೆಗಳಲ್ಲಿ ಶೇ.64.36ರಷ್ಟು ಶಾಲೆಗಳಲ್ಲಿ ಇನ್ನೂ ತರಗತಿಗಳು ಶುರುವಾಗಿಲ್ಲ. 6ನೇ ತರಗತಿಯಲ್ಲಿ 3,05,137 ( 29.15%) ವಿದ್ಯಾರ್ಥಿಗಳು, 7ನೇ ತರಗತಿಗೆ 2,94,450 (28.05) ಹಾಗೂ 8ನೇ ತರಗತಿಯಲ್ಲಿ 2,35,616 ( 23.22) ವಿದ್ಯಾರ್ಥಿಗಳು ಮಾತ್ರ ಹಾಜರಾಗುತ್ತಿದ್ದಾರೆ.
ಅರ್ಧದಷ್ಟು ವಿದ್ಯಾರ್ಥಿಗಳು ಶಾಲೆಗೆ
ಅರ್ಧದಷ್ಟು ವಿದ್ಯಾರ್ಥಿಗಳು ಶಾಲೆಗೆ: ಆಗಸ್ಟ್ 23 ರಿಂದ 9-10ನೇ ತರಗತಿ ಶುರುವಾಗಿದೆ. ಮೊದ ಮೊದಲು ಹಾಜರಾತಿ ಪ್ರಮಾಣ ಕಡಿಮೆ ಇತ್ತು. ಇದೀಗ 9ನೇ ತರಗತಿಗೆ 9,80,794 ವಿದ್ಯಾರ್ಥಿಗಳ ಪೈಕಿ 5,09,597 (ಶೇ.51.96%) ಭೌತಿಕ ತರಗತಿಗೆ ಹಾಜರಾಗಿದ್ದಾರೆ. ಹಾಗೇ 10ನೇ ತರಗತಿಗೆ 9,75,590 ವಿದ್ಯಾರ್ಥಿಗಳ ಪೈಕಿ 5,28,712 ( 54.19%) ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಇನ್ನೂ ಆರಂಭ ಮಾಡದ ಖಾಸಗಿ ಸಂಸ್ಥೆಗಳು
ಇನ್ನೂ ಆರಂಭ ಮಾಡದ ಖಾಸಗಿ ಸಂಸ್ಥೆಗಳು: ಈ ನಡುವೆ ಬೆಂಗಳೂರಿನ ಹಲವು ಖಾಸಗಿ ಶಾಲೆಗಳು ಶಾಲೆ ಆರಂಭಿಸಲು ಹಿಂದೇಟು ಹಾಕುತ್ತಿವೆ. ಮತ್ತೆ ಕೆಲವು ಶಾಲೆಗಳಲ್ಲಿ ನರ್ಸರಿ ತರಗತಿಗಳು ಆರಂಭವಾಗಿವೆ.ವರ್ಷದ ಅಂತ್ಯದಲ್ಲಿರುವ ಕಾರಣ ಅನೇಕ ರಜೆಗಳು ಹಾಗೂ ಇನ್ನುಳಿದ ಮೂರು ತಿಂಗಳಲ್ಲಿ ಶೈಕ್ಷಣಿಕ ವರ್ಷ ಮುಗಿಯಲಿದೆ. ಮತ್ತೊಂದೆಡೆ ಕೊರೋನಾ ಮೂರನೇ ಅಲೆ ಭೀತಿ ಶಾಲಾ ಸಂಸ್ಥೆಗಳನ್ನು ಆತಂಕಕ್ಕೆ ತಳ್ಳಿದೆ. ಒಟ್ಟಾರೆ, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೋ, ಬೇಡವೋ ಎಂಬ ಗೊಂದಲ್ಲಿದ್ದಾರೆ.
ಇಪ್ಪತ್ತು ತಿಂಗಳಿನಿಂದ ಕಲಿಕೆಯಿಂದ ದೂರ
ವಿದ್ಯಾರ್ಥಿಗಳು ಕಳೆದ ಇಪ್ಪತ್ತು ತಿಂಗಳಿನಿಂದ ಕಲಿಕೆಯಿಂದ ದೂರ ಉಳಿದಿದ್ದಾರೆ. ಇದರಿಂದ ಮಕ್ಕಳ ಶಿಕ್ಷಣದ ಮೇಲೆ ಗಂಭೀರ ಪರಿಣಾಂ ಬೀರಿದೆ. ಮಕ್ಕಳ ಕಲಿಕೆಗೆ ಆದ್ಯತೆ ನೀಡದಿದ್ದರೆ ಭವಿಷ್ಯದಲ್ಲಿ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ. ಹೀಗಾಗಿ ಮೊದಲು ಶಾಲಾ ಕಾಲೇಜುಗಳನ್ನು ತೆರೆಯುವುದು ಸೂಕ್ತ ಎಂದು ಶಾಲೆಗಳ ಕಾರ್ಯಾರಂಭದ ಬಗ್ಗೆ ತಜ್ಞರ ಸಮಿತಿ ವರದಿ ನೀಡಿತ್ತು. ವರದಿ ಆಧರಿಸಿ ಮೊದಲ ಹಂತದಲ್ಲಿ ಹೈಸ್ಕೂಲ್ ಶಾಲೆಗಳನ್ನು ರಾಜ್ಯದಲ್ಲಿ ತೆರೆಯಲಾಗಿತ್ತು. ಆದರೆ ಮಕ್ಕಳ ಹಾಜರಾತಿ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ.
ಸರ್ಕಾರ ಭರವಸೆ ಕೊಡಬೇಕು
ರಾಜ್ಯದಲ್ಲಿ ಎಲ್ಲಾ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ತೆರೆಯಲಾಗಿದೆ. ನವೆಂಬರ್ ಎಂಟರಿಂದಲೂ ನರ್ಸರಿ ಶಾಲೆಗಳ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದೆ. ಕೊರೊನಾ ಮಾರ್ಗಸೂಚಿ ಪಾಲನೆಯೊಂದಿಗೆ ಶಾಲೆಗಳನ್ನು ತೆರೆಯಲು ಸೂಚಿಸಲಾಗಿದೆ. ಆದರೂ ಪೋಷಕರಲ್ಲಿ ಆತಂಕ ಮನೆ ಮಾಡಿದೆ. ಹೀಗಾಗಿ ಬಹುತೇಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಇನ್ನೂ ಕೆಲವು ಕಡೆ ಭೌತಿಕ ತರಗತಿ ಪ್ರಾರಂಭಿಸಿದರೆ ವ್ಯಾನ್ ವೆಚ್ಚ ಸೇರಿ ಆರ್ಥಿಕ ಹೊರೆ ಬೀಳಲಿದೆ ಎಂಬ ಕಾರಣಕ್ಕೆ ಶಾಲಾ ಆಡಳಿತ ಮಂಡಳಿಗಳೇ ಮಕ್ಕಳನ್ನು ಭೌತಿಕ ತರಗತಿಗಳಿಗೆ ಕರೆಸಿಕೊಳ್ಳಲು ಹಿಂದೇಟು ಹಾಕುತ್ತಿವೆ.
ಜಾಗೃತಿ ಮೂಡಿಸುವ ಅಗತ್ಯವಿದೆ
ಪೋಷಕರ ಕಾರಣ ಕೊಟ್ಟು ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆಯದೇ ಮೊಂಡಾಟ ಆಡುತ್ತಿವೆ. ಶಾಲೆಗಳು ಆರಂಭ ಮಾಡಿದ್ದು ಮಾತ್ರವಲ್ಲದೇ, ಸರ್ಕಾರ ಪೋಷಕರಲ್ಲಿ ಭರವಸೆ ತುಂಬಬೇಕು. ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವಂತೆ ಸರ್ಕಾರ ಪೋಷಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕ್ಯಾಮ್ಸ್ ಸಂಘಟನೆ ಮುಖ್ಯಸ್ಥರು ಒನ್ಇಂಡಿಯಾ ಕನ್ನಡಕ್ಕೆ ಸ್ಪಷ್ಟನೆ ನೀಡಿದ್ದಾರೆ. ಶೇ. ಅರ್ಧದಷ್ಟು ಮಕ್ಕಳು ಶಾಲೆಗಳಿಗೆ ಹೋಗುತ್ತಿಲ್ಲ.
ನಗರ ಪ್ರದೇಶದ ಶಾಲೆಗಳಲ್ಲಿ ಹಾಜರಾತಿ ಪ್ರಮಾಣ ತೀರಾ ಕಡಿಮೆಯಾಗಿದೆ. ಗ್ರಾಮೀಣ ಭಾಗದ ಶಾಲೆಗಳಿಗೆ ವಿದ್ಯಾರ್ಥಿಗಳು ಧೈರ್ಯವಾಗಿ ಬರುತ್ತಿದ್ದಾರೆ. ಮಕ್ಕಳು ಕಲಿಕೆಯಿಂದ ದೂರ ಉಳಿಯದಂತೆ ಶಿಕ್ಷಣ ಇಲಾಖೆ ಮಹತ್ವದ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಎದುರಾಗಿದೆ.
Recommended Video