ಶಾಲೆಯಲ್ಲಿ ಬೋಧನಾ ಅವಧಿ ಐದೂವರೆ ತಾಸು ಮಾತ್ರ- ನಿಯಮ ಉಲ್ಲಂಘಿಸಿದ ಖಾಸಗಿ ಶಾಲೆಗೆ ನೋಟೀಸ್!
ಬೆಂಗಳೂರು, ಸೆಪ್ಟೆಂಬರ್ 21: ಶಾಲಾ ಬೋಧನ ಅವಧಿಯನ್ನು ಐದುವರೆ ಗಂಟೆಗಳ ಕಾಲ ನಡೆಸಬೇಕು ಎಂದು ಸರ್ಕಾರ ಆದೇಶವನ್ನು ಮಾಡಿದೆ. ಮಕ್ಕಳಿಗೆ ಯಾವುದೇ ರೀತಿಯ ಮಾನಸಿಕ ಒತ್ತಡ ಉಂಟಾಗದಂತೆ ಕ್ರಮವಹಿಸಲು ಶಿಕ್ಷಣ ಇಲಾಖೆ ಈ ಆದೇಶವನ್ನು ಮಾಡಿದೆ. ನಿಯಮ ಉಲ್ಲಂಘಿಸಿದ ಖಾಸಗಿ ಶಾಲೆಗಳಿಗೆ ನೋಟಿಸ್ ನೀಡಲಾಗುತ್ತಿದೆ.
ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಖಾಸಗಿ ಆಡಳಿತ ಮಂಡಳಿಗಳು ಕರ್ನಾಟಕ ಶಿಕ್ಷಣ ಕಾಯ್ದೆ 1983, ಕಲಂ 30, 31ರ ಅಡಿಯಲ್ಲಿ ನೊಂದಾಯಿಸಿ ಕಲಂ 36ರಂತೆ ಮಾನ್ಯತೆಯನ್ನು ಪಡೆದು ನಡೆಸುತ್ತಿವೆ. ಇಂತಹ ಶಾಲೆಗಳು ರಾಜ್ಯ ಸರ್ಕಾರದಿಂದ ಅಥವಾ ಇಲಾಖೆಯಿಂದ ಹೊರಡಿಸುವ ಆದೇಶದಂತೆ ಶಾಲೆಗಳನ್ನು ನಡೆಸುವುದು ಕಡ್ಡಾಯವಾಗಿರುತ್ತದೆ.
ಕೆಲವು ಖಾಸಗಿ ಶಾಲೆಗಳು ನೊಂದಣಿ ಮತ್ತು ಮಾನ್ಯತೆಯನ್ನು ಪಡೆದು ಕರ್ನಾಟಕ ಶಿಕ್ಷಣ ಕಾಯ್ದೆ ಹಾಗೂ ಅದರಡಿಯಲ್ಲಿ ರಚಿತವಾದ ಕರ್ನಾಟಕ ಶಿಕ್ಷಣ ಸಂಸ್ಥೆಗಳ ವರ್ಗೀಕರಣ, ಪಠ್ಯಕ್ರಮ ನಿಯಂತ್ರಣ ಹಾಗೂ ಇತರೆ 1995ರ ನಿಯಮಗಳನ್ನು ಜಾರಿಗೆ ತರಲಾಗಿತ್ತು. ಈ ನಿಯಮಕ್ಕೆ 1999ರಲ್ಲಿ ತಿದ್ದುಪಡಿಯನ್ನು ತರಲಾಗಿದೆ. ಈ ನಿಯಮದಂತೆ ಶಾಲೆಗಳನ್ನು ಪ್ರತಿದಿನ 5.1/2 ತಾಸು ನಡೆಸುವುದು ಕಡ್ಡಾಯವಾಗಿರುತ್ತದೆ. ಶನಿವಾರ ಅರ್ಧ ದಿನ ಶಾಲೆಯನ್ನು ನಡೆಸುವುದು ಕಡ್ಡಾಯವಾಗಿರುತ್ತದೆ.
5.1/2 ಗಂಟೆ ಬೋಧನಾ ಅವಧಿ ಕಡ್ಡಾಯ
ಬೆಂಗಳೂರು ನಗರಕ್ಕೆ ಸೀಮಿತಗೊಳಿಸಿ ಬೆಳಗ್ಗೆ 8 ರಿಂದ 8.30ರೊಳಗೆ ಶಾಲೆಯನ್ನು ಪ್ರಾರಂಭಿಸಿ ವಿರಾಮದ ಅವಧಿಯನ್ನು ಹೊರತುಪಡಿಸಿ 5.1/2 ಗಂಟೆಗಳ ಕಾಲ ಶಾಲೆಯನ್ನು ನಡೆಸಬೇಕಿದೆ. ಶಾಲೆಯನ್ನು 8.30ಕ್ಕೆ ಪ್ರಾರಂಭಿಸಿದರೆ ಪ್ರಾರ್ಥನೆ ಮತ್ತು ಇತರೆ ಸೂಚನೆಗಾಗಿ 10 ನಿಮಿಷದ ಅವಧಿಯನ್ನು ಹೊರತು ಪಡಿಸಿ ತರಗತಿಗಳು ಬೆಳಗ್ಗೆ 8.40ಕ್ಕೆ ಪ್ರಾರಂಭಿಸಿ ಮಧ್ಯಾಹ್ನ ಊಟದ ವಿರಾಮಕ್ಕೆ 30 ರಿಂದ 40 ನಿಮಿಷ ಅವಕಾಶವನ್ನು ನೀಡುವುದು. ಊಟದ ವಿರಾಮದ ಬಳಿಕ ಮತ್ತೆ ಶಾಲೆಯ ಬೋಧನ ಅವಧಿಯನ್ನು ನಡೆಸಿ ಒಟ್ಟು 5.1/2 ಗಂಟೆ ಶಾಲೆಯನ್ನು ನಡೆಸಿ ಅಂದಿನ ದಿನದ ಶಾಲೆಯನ್ನು ಮುಕ್ತಾಯಗೊಳಿಸಬೇಕಾಗಿದೆ. ಬೆಂಗಳೂರು ನಗರ ಹೊರತು ಪಡಿಸಿ ಬೇರೆಡೆಯ ಶಾಲೆಗಳು ಸಂಬಂಧಪಟ್ಟ ಪ್ರಾಧಿಕಾರದ ಅನುಮತಿಯನ್ನು ಪಡೆದುಕೊಂಡು ಅದರಂತೆ ಶಾಲೆಯನ್ನು ನಡೆಸಬೇಕಾಗಿದೆ.
17 ಅಧಿಕಾರಿಗಳ ವಿರುದ್ದ ಇಲಾಖೆ ಸಿಡಿಮಿಡಿ
ಕೆಲವು ಖಾಸಗಿ ಶಾಲೆಗಳು ಮನಸೋಯಿಚ್ಛೆ ಶಾಲೆಯನ್ನು ಪ್ರಾರಂಭವನ್ನು ಮಾಡುತ್ತಿವೆ. ಕೆಲವು ಶಾಲೆಗಳು ಪ್ರತಿ ಶನಿವಾರ ರಜೆಯನ್ನು ನೀಡುತ್ತಿವೆ. ಇನ್ನು ಕೆಲವು ಶಾಲೆಗಳು 2ನೇ ಮತ್ತು 4ನೇ ಶನಿವಾರ ರಜೆಯನ್ನು ನೀಡುತ್ತಿವೆ. ಇಂಥಾ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಪೋಷಕರು ಮತ್ತು ಸಂಘ ಸಂಸ್ಥೆಗಳು ದೂರನ್ನು ನೀಡುತ್ತಿವೆ. ಆದರೆ ಇಲಾಖೆಯ ಜವಾಬ್ದಾರಿಯುತ ಕೆಲಸವನ್ನು ಮಾಡಬೇಕಿರುವ 17 ಅಧಿಕಾರಿಗಳ ವಿರುದ್ದ ಅಸಮಧಾನ ವ್ಯಕ್ತವಾಗಿದೆ. ಬಿಇಓ, ಬಿಆರ್ಸಿ, ಬಿಆರ್ಪಿ, ಸಿಆರ್ಪಿ ಶಿಕ್ಷಣ ಸಂಯೋಜಕರು ಸೂಕ್ತ ರೀತಿಯಲ್ಲಿ ಕೆಲಸವನ್ನು ಮಾಡಲು ಸೂಚನೆಯನ್ನು ನೀಡಲಾಗಿದೆ.
ನಿಯಮ ಉಲ್ಲಂಘಿಸಿದ ಶಾಲೆಗಳಿಗೆ ನೋಟಿಸ್
ಶಿಕ್ಷಣ ಇಲಾಖೆಯ ಅಧಿಕಾರಿಗಳು ಖಾಸಗಿ ಶಾಲೆಗಳಿಗೆ ಭೇಟಿಯನ್ನು ನೀಡಿ ಅನುಮತಿಯನ್ನು ಪಡೆದ ಮಾಧ್ಯಮದಲ್ಲಿ ಮತ್ತು ಪಠ್ಯಕ್ರಮದಲ್ಲಿ ನಡೆಯುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕು. ನಿಯಮವನ್ನು ಉಲ್ಲಂಘನೆ ಮಾಡಿರುವ ಶಾಲೆಯ ಮುಖ್ಯೋಪಾಧ್ಯರಿಗೆ ನೋಟಿಸ್ ಜಾರಿ ಮಾಡಿ ಉತ್ತರವನ್ನು ಪಡೆದು ಮೇಲಾಧಿಕಾರಿಗಳ ಗಮನಕ್ಕೆ ತರುವುದು. ಇನ್ನು ಸರ್ಕಾರಿ ಶಾಲಾ ಶಿಕ್ಷಕರು ನಿಯಮನುಸಾರ ಇದ್ದಲ್ಲಿ ಅಂತಹ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಮುಖಾಂತರ ತಿಳುವಳಿಕೆಯನ್ನು ನೀಡಿ ನಿಯಮಾನುಸಾರ ಕರ್ತವ್ಯ ನಿರ್ವಹಿಸಲು ಸೂಚಿಸುವುದು. ಪದೇ ಪದೇ ನಿಯಮವನ್ನು ಉಲ್ಲಂಘಿಸಿದಲ್ಲಿ ಕಾನೂನು ರೀತಿ ಕ್ರಮವನ್ನು ಕೈಗೊಳ್ಳಲು ಸೂಚನೆಯನ್ನು ನೀಡಿದೆ.
ಮಕ್ಕಳಿಗೆ ಮಾನಸಿಕ ಒತ್ತಡ ಹಾಕುತ್ತಿದ್ದ ಶಾಲೆ
ಮಕ್ಕಳಿಗೆ ಕೆಲವು ಖಾಸಗಿ ಶಾಲೆಯಿಂದ ಸಾಕಷ್ಟು ಮಾನಸಿಕ ಒತ್ತಡ ಉಂಟಾಗುತ್ತಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಈ ಬಗ್ಗೆ ಪೋಷಕರೊಬ್ಬರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ದೂರನ್ನು ನೀಡಿದ್ದಲ್ಲದೇ ಸಮಸ್ಯೆಗೆ ಪರಿಹಾರವನ್ನು ಕೋರಿದ್ದರು. ಇದರಿಂದಾಗಿ ಎಚ್ಚೆತ್ತಾ ಹಿರಿಯ ಅಧಿಕಾರಿಗಳು ಖಾಸಗಿ ಶಾಲೆಗಳ ಮನಸೋಯಿಚ್ಛೆ ನಿಯಮಗಳ ನಿಯಂತ್ರಣಕ್ಕೆ ಮುಂದಾಗಿದ್ದಾರೆ.