ಬಡ್ತಿಯಲ್ಲಿ ಮೀಸಲಾತಿ ಆದೇಶ: ಕರ್ನಾಟಕದ ಹಾದಿ ಸುಗಮವೇ?
ಬೆಂಗಳೂರು, ಸೆ.26: ಸರ್ಕಾರಿ ಉದ್ಯೋಗದಲ್ಲಿ ಬಡ್ತಿ ನೀಡುವಾಗ ಮೀಸಲಾತಿ ಅನುಸರಿಸಬೇಕಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದ್ದರೂ ಒಂದು ವೇಳೆ ಬಡ್ತಿಯಲ್ಲಿ ಮೀಸಲಾತಿ ನೀಡುವುದಾದರೆ ಅದು ಆಯಾ ರಾಜ್ಯಗಳಿಗೆ ಬಿಟ್ಟ ವಿಚಾರ ಎಂದು ಹೇಳಿರುವುದು ಕರ್ನಾಟಕದಲ್ಲಿ ಬಡ್ತಿ ಮೀಸಲಾತಿ ಜಾರಿಗೆ ಹಸಿರು ನಿಶಾನೆ ತೋರಿದಂತಾಗುತ್ತದೆಯೇ?
ಹೀಗೊಂದು ಚರ್ಚೆ ಸರ್ಕಾರದ ಉನ್ನತ ಮಟ್ಟದಲ್ಲಿ ನಡೆದಿದೆ. ಕಳೆದ ಎರಡೂವರೆ ದಶಕಗಳಿಂದ ಬಡ್ತಿಯಲ್ಲಿ ಮೀಸಲಾತಿ ಕುರಿತಂತೆ ಕರ್ನಾಟಕದ ಕಾನೂನು ಹೋರಾಟ ನಡೆಯುತ್ತಿದ್ದು ಇದೀಗ ಆದೇಶ ಹೊರಬಿದ್ದಿದೆ.
ಸರ್ಕಾರಿ ಉದ್ಯೋಗದ ಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ ಸುಪ್ರೀಂ ಐತಿಹಾಸಿಕ ತೀರ್ಪು
ಆದರೂ ಒಂದು ಅರ್ಥದಲ್ಲಿ ಹೋರಾಟಕ್ಕೆ ಹಿನ್ನಡೆಯೇ ಉಂಟಾಗಿದೆ.ಏಕೆಂದರೆ ಸುಪ್ರೀಂಕೋರ್ಟ್ ಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ ಎಂದು ಹೇಳಿಯೂ ಕೊನೆಗೆ ಕೊಡುವುದಾದರೆ ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟ ವಿಚಾರ ಎಂದಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬಡ್ತಿ ಮೀಸಲಾತಿ ಜಾರಿಗೆ ಈಗಾಗಲೇ ಕಾಯ್ದೆಯನ್ನು ರಚಿಸಲಾಗಿದ್ದು, ರಾಷ್ಟ್ರಪತಿಗಳ ಅಂಕಿತವೂ ದೊರೆತಿದೆ. ಅಂಕಿತ ಬಳಿ ಸುಪ್ರೀಂಕೋರ್ಟ್ ನ ಆದೇಶಕ್ಕೆ ಕಾಯುತ್ತಿದ್ದ ಸರ್ಕಾರ ಇದೀಗ ಬಡ್ತಿಯಲ್ಲಿ ಮೀಸಲಾತಿಯನ್ನು ರಚಿಸುವ ಕಾಯ್ದೆಯನ್ನು ಇದೀಗ ಅನುಷ್ಠಾನಗೊಳಿಸುವ ಒತ್ತಡಕ್ಕೆ ಸಿಲುಕಿದೆ.
ಈಗಾಗಲೇ 1977ರಿಂದ ಈವರೆಗೆ ನೀಡಿರುವ ಬಡ್ತಿಯಲ್ಲಿನ ಮೀಸಲಾತಿಯನ್ನು ರದ್ದುಗೊಳಿಸಿ ಕಳೆದ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಅದರಿಂದ ಸರಿಸುಮಾರು 20ಸಾವಿರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರಿಗೆ ಮುಂಬಡ್ತಿ ನೀಡಬೇಕೆಂಬ ಕಾರಣಕ್ಕಾಗಿ ಬಡ್ತಿ ರಕ್ಷಣೆಗಾಗಿ ವಿಶೇಷ ಕಾಯ್ದೆಯನ್ನು ರಾಜ್ಯ ಸರ್ಕಾರ ರಚಿಸಿ ರಾಷ್ಟ್ರಪತಿಗಳಿಗೆ ರವಾನಿಸಿತ್ತು.
ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಸ್ಸಿ ಎಸ್ಟಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಬೇಕೆನ್ನುವ ನೀತಿಯನ್ನು ಅನುಸರಿಸಿತ್ತು. ಅದರ ಕಾರಣಕ್ಕಾಗಿಯೇ ವಿಶೇಷ ಕಾಯ್ದೆಯನ್ನು ರಚಿಸಿ ರಾಷ್ಟ್ರಪತಿಗಳ ಅನುಮತಿಗೆ ಕಳಿಸಿತ್ತು.
ಬಡ್ತಿ ಮೀಸಲಾತಿ ಕಾಯ್ದೆ: ಎಸ್ಸಿ-ಎಸ್ಟಿ ನೌಕಕರ ಅಂತಿಮ ಹೋರಾಟ
ಅಂತಿಮವಾಗಿ ರಾಷ್ಟ್ರಪತಿಗಳು ಸಹಿ ಹಾಕಿದ್ದರೂ ಆ ವೇಳೆ ಸರ್ಕಾರದ ಅವಧಿ ಮುಗಿದಿತ್ತು, ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ವಿತ್ವಕ್ಕೆ ಬಂದಿದ್ದು, ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಇಲ್ಲಿಯವರೆಗ ಬಹಿರಂಗವಾಗಿ ಬಡ್ತಿ ಮೀಸಲಾತಿಗೆ ಬದ್ಧ ಎಂದು ಹೇಳಿದ್ದಾರೆ.
ಆದರೆ ಸರ್ಕಾರದಲ್ಲಿನ ಕೆಲಸ ಸಚಿವರ ತೀವ್ರ ಪ್ರತಿರೋಧದಿಂದಾಗಿ ಬಡ್ತಿ ಮೀಸಲಾತಿ ಸುರಕ್ಷಾ ಕಾಯ್ದೆಯನ್ನು ಅನುಷ್ಠಾನಗೊಳಿಸಿರಲಿಲ್ಲ. ಆದರೆ ಬುಧವಾರ ಸುಪ್ರೀಂಕೋರ್ಟ್ ತೀರ್ಪು ರಾಜ್ಯಸರ್ಕಾರಕ್ಕೆ ಬಿಟ್ಟಿದ್ದು ಎಂಬ ಅಂಶವನ್ನು ಒಳಗೊಂಡಿರುವುದರಿಂದ ಕರ್ನಾಟಕದಲ್ಲಿ ಬಡ್ತಿ ಮೀಸಲಾತಿ ಜಾರಿಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಬಡ್ತಿ ಮೀಸಲಾತಿಗೆ ಹಿಂಜರಿಕೆ: ಸರ್ಕಾರದ ವಿರುದ್ಧ ಹೋರಾಟ
ಆದರೆ ಸಾಮಾನ್ಯ ಹಿಂದುಳಿದ ಅಲ್ಪಸಂಖ್ಯಾತರ ಸಂಘಟನೆಯಾದ ಅಹಿಂಸಾ ಸಂಘಟನೆಯು ಬಡ್ತಿ ಮೀಸಲಾತಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದು, 22 ಸಾವಿರ ಪರಿಶಿಷ್ಟ ಜಾತಿ, ವರ್ಗ ನೌಕರರ ಹಿತರಕ್ಷಣೆಗಾಗಿ ಪ್ರತಿ ವರ್ಷ 4 ಸಾವಿರ ನೌಕರರನ್ನು ಸರ್ಕಾರ ಎದುರು ಹಾಕಿಕೊಳ್ಳಬೇಕಾಗುತ್ತಿದೆ ಎನ್ನುವ ತರ್ಕವೂ ಕೇಳಿಬರುತ್ತಿದೆ.
ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಆದೇಶ ಹೊರಬಿದ್ದ ತಕ್ಷಣವೇ ಪ್ರತಿಕ್ರಿಯೆ ನೀಡಲು ಸಿಎಂ ತೀವ್ರ ಹಿಂದೇಟು ಹಾಕಿದ್ದು ಯಾವ ರೀತಿ ತೀರ್ಪನ್ನು ಪಾಲಿಸಬೇಕು ಎಂಬ ಚಿಂತನೆ ಇದೀಗ ಸರ್ಕಾರದ ಮಟ್ಟದಲ್ಲಿ ಆರಂಭವಾಗಿದೆ.