ಬೆಂಗಳೂರು ವಿವಿ ಕುಲಪತಿಯಾಗಿ ಪ್ರೊ.ಕೆ.ಆರ್.ವೇಣುಗೋಪಾಲ್ ಮುಂದುವರಿಕೆ
ಬೆಂಗಳೂರು, ಏ.5: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೊಫೆಸರ್ ಕೆ.ಆರ್.ವೇಣುಗೋಪಾಲ್ ಅವರು ಸದ್ಯಕ್ಕೆ ಮುಂದುವರಿಯಲಿದ್ದಾರೆ. ಅವರ ನೇಮಕವನ್ನು ರದ್ದುಗೊಳಿಸಿದ ಹೈಕೋರ್ಟ್ ವಿಭಾಗೀಯ ಪೀಠದ ಆದೇಶಕ್ಕೆ ಸುಪ್ರೀಂಕೋರ್ಟ್ ಸೋಮವಾರ ಮಧ್ಯಂತರ ತಡೆ ನೀಡಿದೆ.
ಹೈಕೋರ್ಟ್ ತೀರ್ಪು ಪ್ರಶ್ನಿಸಿ ಕರ್ನಾಟಕ ರಾಜ್ಯಪಾಲರ ಕಚೇರಿ, ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರತ್ಯೇಕ ವಿಶೇಷ ಮೇಲ್ಮನವಿ ಅರ್ಜಿ (ಎಸ್ಎಲ್ಪಿ)ಗಳ ವಿಚಾರಣೆ ನಡೆಸಿದ ನ್ಯಾ. ಡಿ.ವೈ. ಚಂದ್ರಚೂಡ್ ನೇತೃತ್ವದ ವಿಭಾಗೀಯಪೀಠ ಮಾ.17ರ ಹೈಕೋರ್ಟ್ ವಿಭಾಗೀಯಪೀಠಕ್ಕೆ ತಡೆಯಾಜ್ಞೆ ಆದೇಶ ನೀಡಿತು.
ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಬೆಂಗಳೂರು ವಿವಿ ಕುಲಪತಿ ನೇಮಕ ವಿವಾದ
ಇದರಿಂದಾಗಿ ಇದೇ ಜೂನ್ 12ಕ್ಕೆ ನಿವೃತ್ತರಾಗಲಿರುವ ಪ್ರೊ.ಕೆ.ಆರ್.ವೇಣುಗೋಪಾಲ್ ಬಹುತೇಕ ಅಲ್ಲಿಯವರೆಗೆ ಹುದ್ದೆಯಲ್ಲಿಯೇ ಮುಂದುವರಿಯಲಿದ್ದಾರೆ.
ಇದರಿಂದಾಗಿ ಕರ್ನಾಟಕ ಹೈಕೋರ್ಟ್ನಲ್ಲಿ ಎರಡು ಸುತ್ತು ಕಾನೂನು ಹೋರಾಟ ನಡೆದಿದ್ದ ವಿಚಾರ ಮೂರನೇ ಸುತ್ತಿನ ಹೋರಾಟದಲ್ಲಿ ವೇಣುಗೋಪಾಲ್ ಅವರಿಗೆ ತಾತ್ಕಾಲಿಕ ಜಯ ಸಿಕ್ಕಿದೆ.
ಕಳೆದ ವಾರ ಮಾರ್ಚ್ 17 ರಂದು ನ್ಯಾಯಮೂರ್ತಿ ಎಸ್.ಸುಜಾತಾ ಮತ್ತು ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ್ ಅವರಿದ್ದ ವಿಭಾಗೀಯ ಪೀಠವು ಪ್ರೊ.ಕೆ.ಆರ್. ವೇಣುಗೋಪಾಲ್ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯನ್ನಾಗಿ ನೇಮಕ ಮಾಡಿದ್ದನ್ನು ರದ್ದುಗೊಳಿಸಿದೆ.
ಅಲ್ಲದೆ, ಕರ್ನಾಟಕ ಸರ್ಕಾರದ ರಾಜ್ಯಪಾಲರ ಕಚೇರಿ ಮತ್ತು ಬೆಂ.ವಿ.ವಿ. ಕುಲಪತಿ ವೇಣುಗೋಪಾಲ್ ಸಲ್ಲಿಸಿದ್ದ ರಿಟ್ ಮೇಲ್ಮನವಿಗಳನ್ನು ವಜಾಗೊಳಿಸಿದ ವಿಭಾಗೀಯ ಪೀಠವು ಏಕಸದಸ್ಯಪೀಠದ ಆದೇಶ ಎತ್ತಿಹಿಡಿದಿತ್ತು.
ವಿಭಾಗೀಯಪೀಠದ ತೀರ್ಪು ಏನು? ನಾಲ್ಕು ಮೇಲ್ಮನವಿಗಳನ್ನು ವಜಾಗೊಳಿಸಿರುವ ವಿಭಾಗೀಯಪೀಠ, 2018ರ ಜೂ.12ರಂದು ನೇಮಕ ಆದೇಶ ಹೊರಡಿಸಲಾಗಿದೆ. ಅದಕ್ಕೆ ಸರ್ಕಾರದ ಅನುಮೋದನೆ ವಜಾಗೊಳಿಸಿರುವ ವಿಭಾಗೀಯಪೀಠ, ''2018ರ ಜೂ.12ರಂದು ನೇಮಕ ಆದೇಶ ಹೊರಡಿಸಲಾಗಿದೆ. ಅದಕ್ಕೆ ಸರ್ಕಾರದ ಅನುಮೋದನೆ ಇರಲಿಲ್ಲ. ತದ ನಂತರ 2018ರ ಜೂ.28ರಂದು ಸರ್ಕಾರ ಅನುಮೋದನೆ ನೀಡಿದೆ. ಇದು ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ2000ರ ಸೆಕ್ಷನ್ 14(4)ರ ಸ್ಪಷ್ಟ ಉಲ್ಲಂಘನೆಯಾಗಿದೆ'' ಎಂದು ಆದೇಶಿಸಿದೆ.
ಅಲ್ಲದೆ, ''ಸರ್ಕಾರದ ಅನುಮೋದನೆ ಪಡೆದ ನಂತರವೇ ನೇಮಕ ಆದೇಶ ಹೊರಡಿಸಬೇಕಿದೆ. ಅದು ಬಿಟ್ಟು ನೇಮಕಾತಿ ಆದೇಶ ಹೊರಡಿಸಿದ ನಂತರ ಸರ್ಕಾರದ ಅನುಮೋದನೆ ನೀಡಿದರೆ, ಅದು ನೇಮಕದಲ್ಲಿ ಲೋಪವಾದಂತಾಗುತ್ತದೆ. ಆದ್ದರಿಂದ ವೇಣುಗೋಪಾಲ್ ಅವರನ್ನು ಕುಲಪತಿಗೆ ನೇಮಿಸಿದ ಆದೇಶ ರದ್ದುಪಡಿಸಿ ಏಕಸದಸ್ಯಪೀಠ ನೀಡಿರುವ ತೀರ್ಪು ಸರಿ ಇದ್ದು, ಅದರಲ್ಲಿ ಹಸ್ತಕ್ಷೇಪಮಾಡಲಾಗದು,'' ಎಂದು ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಡಾ.ಕೆ.ಆರ್.ವೇಣುಗೋಪಾಲ್ ಅವರನ್ನು ಕುಲಪತಿ ಹುದ್ದೆಗೆ ನಾಲ್ಕು ವರ್ಷ ಅವಧಿ ಅಥವಾ ಅವರಿಗೆ 67 ವರ್ಷ ತುಂಬುವವರೆಗೆ, ಈ ಎರಡರಲ್ಲಿ ಯಾವುದು ಮೊದಲು ಘಟಿಸುವುದಕ್ಕೆ ಅಲ್ಲಿಯವರೆಗೆ ನೇಮಕ ಮಾಡಿ 2018ರ ಜೂ.12ರ ಆದೇಶಿಸಲಾಗಿತ್ತು. ಏಕ ಸದಸ್ಯ ನ್ಯಾಯಪೀಠವು 2019ರ ಸೆ.24ರಂದು ವೇಣುಗೋಪಾಲ್ ನೇಮಕ ರದ್ದುಪಡಿಸಿತ್ತು. ಆ ಆದೇಶಕ್ಕೆ ವಿಭಾಗೀಯಪೀಠ ತಡೆಯಾಜ್ಞೆ ನೀಡಿತ್ತು. ಡಾ.ಕೆ.ಆರ್. ವೇಣುಗೋಪಾಲ್ ನೇಮಕ ಪ್ರಶ್ನಿಸಿ ನಿವೃತ್ತ ಪ್ರೊ. ಸಂಗಮೇಶ್ ಪಾಟೀಲ್ ಹೈಕೋರ್ಟ್ ಮೊರೆ ಹೋಗಿದ್ದರು, ಸರ್ಕಾರದ ಅನುಮೋದನೆ ಇಲ್ಲದೆಯೇ ಡಾ.ವೇಣುಗೋಪಾಲ್ ಅವರನ್ನು ಕುಲಪತಿ ಹುದ್ದೆಗೆ ನೇಮಿಸಿರುವುದು ಕಾನೂನು ಬಾಹಿರ ಎಂದು ವಾದಿಸಿದ್ದರು. ಈ ವಾದ ಪುರಸ್ಕರಿಸಿದ್ದ ಏಕ ಸದಸ್ಯ ಪೀಠ, ಡಾ.ವೇಣುಗೋಪಾಲ್ ಅವರನ್ನು ಕುಲಪತಿಗೆ ನೇಮಿಸಿದ್ದ ಆದೇಶ ರದ್ದುಪಡಿಸಿತ್ತು.
Recommended Video