SC ST ಸಮುದಾಯಕ್ಕೆ ಗುಡ್ ನ್ಯೂಸ್!
ಬೆಂಗಳೂರು, ಡಿಸೆಂಬರ್ 18: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ನೀಡಿರುವ ಮೀಸಲಾತಿ ಹೆಚ್ಚಳ ಮಾಡುವ ಸಂಬಂಧ ಪರಮಾರ್ಶೆ ನಡೆಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಚಿಸಿದ ಸಚಿವ ಸಂಪುಟ ಉಪ ಸಮಿತಿಯ ಮೊದಲ ಸಭೆ ಡಿಸೆಂಬರ್ 21 ರಂದು ನಡೆಯಲಿದೆ. ವಿಧಾಸೌಧ ಕ್ಯಾಬಿನೆಟ್ ಹಾಲ್ ನಲ್ಲಿ ಅಂದು ಬೆಳಗ್ಗೆ ಹನ್ನೊಂದು ಗಂಟೆಗೆ ಸಚಿವ ಶ್ರೀರಾಮುಲು ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ, ಕಂದಾಯ ಸಚಿವ ಆರ್. ಅಶೋಕ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸರ್ಕಾರದ ಮುಖ್ಯ ಕಾರ್ಯದರ್ಶಿ , ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮೊದಲ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ಹೆಚ್ಚಳ ಮಾಡುವ ಸಂಬಂಧ ಮೊದಲ ಸಭೆಯಲ್ಲಿ ಏನೆಲ್ಲಾ ಚರ್ಚೆ ನಡೆಯಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಬೇಡಿಕೆ ಏನು?
ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ ಮೀಸಲಾತಿ ಕೋಟಾ ಪ್ರಮಾಣ ಶೇ. 15 ಇದ್ದು, ಅದನ್ನು ಶೇ. 17 ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಇದೆ. ಅದೇ ರೀತಿ ಪರಿಶಿಷ್ಟ ವರ್ಗಕ್ಕೆ ಶೇ. 3 ರಷ್ಟಿದ್ದು, ಅದನ್ನು ಶೇ. 7 ಕ್ಕೆ ಏರಿಸಬೇಕೆಂಬ ಒತ್ತಾಯವಿದ್ದು, ರಾಜ್ಯದಲ್ಲಿ ಈ ಎರಡೂ ಸಮುದಾಯದ ಜನ ಸಂಖ್ಯೆ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು ಅದಕ್ಕೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವ ಕುರಿತು ಪರಮಾರ್ಶೆ ನಡೆಸಲು ಸಚಿವ ಸಂಪುಟ ಉಪ ಸಮಿತಿ ರಚಿಸಿ ಕಳೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಏನಿದು ಒಳಮೀಸಲಾತಿ ವಿವಾದ? ಇಲ್ಲಿದೆ ಸಂಪೂರ್ಣ ಮಾಹಿತಿ!
ಜಾತಿ ಜನಗಣತಿ ವರದಿ ನೆರವಾಗಬಲ್ಲದೇ?
ದಶಕಗಳ ಹಿಂದೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿಯನ್ನು ನಿಗದಿ ಮಾಡಲಾಗಿತ್ತು. ಗಣನೀಯ ಪ್ರಮಾಣದಲ್ಲಿ ಎರಡೂ ವರ್ಗದ ಜನ ಸಂಖ್ಯೆ ಹೆಚ್ಚಳವಾಗಿದೆ. ಆದರೆ ಅದಕ್ಕೆ ಅನುಗುಣವಾಗಿ ಮಿಸಲಾತಿ ಪ್ರಮಾಣ ಹೆಚ್ಚಳ ಮಾಡಿಲ್ಲ. ಇದೀಗ ಸರ್ಕಾರ ರಚಿಸಿರುವ ಸಚಿವ ಸಂಪುಟ ಉಪ ಸಮಿತಿ ಈ ಕುರಿತು ಪರಮಾರ್ಶೆ ನಡೆಸಲಿದೆ. ರಾಜ್ಯದಲ್ಲಿ ಜಾತಿವಾರು ನಡೆಸಿದ ಜನಗಣತಿ ವರದಿ ಇದೀಗ ಮಹತ್ವ ಪಡೆದುಕೊಂಡಿದೆ. ಜಾತಿ ವಾರು ಜನಸಂಖ್ಯೆ ಲೆಕ್ಕ ಸಿಕ್ಕಿದ್ದೇ ಆದಲ್ಲಿ ಸಚಿವ ಸಂಪುಟ ಉಪ ಸಮಿತಿ ವಾಸ್ತವ ನೆಲೆಗಟ್ಟಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಪ್ರಮಾಣ ನಿಗಧಿ ಮಾಡಲು ಅನುಕೂಲವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಜಾತಿ ಜಣಗಣತಿ ನಡೆಸಿದರೂ ಈ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣ ವ್ಯಯಿಸಿ ತಯಾರಿಸಿದ ವರದಿ ಬಹಿರಂಗಗೊಂಡರೆ ರಾಜಕೀಯವಾಗಿ ಸಮಸ್ಯೆಯಾಗಲಿದೆ ಎಂಬ ಕಾರಣಕ್ಕೆ ಈವರೆಗೂ ಜಾತಿ ಜನಗಣತಿ ವರದಿ ಬಹಿರಂಗಗೊಂಡಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚಳ ಸಂಬಂಧ ಪರಮಾರ್ಶೆಗಾದರೂ ಈ ಜಾತಿ ವಾರು ಜನಗಣತಿ ವರದಿ ಪ್ರಯೋಜನವಾಗಲಿದೆಯಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವ ಸಂಬಂಧ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ನೇತೃತ್ವದಲ್ಲಿ ಆಯೋಗ ರಚಿಸಿತ್ತು. ಸಮಿತಿ 277 ಪುಟಗಳ ವರದಿಯನ್ನು ಸರ್ಕಾರಕ್ಕೆ ನೀಡಿತ್ತು. ವರದಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವಂತೆ ಆಯೋಗ ಶಿಫಾರಸು ಮಾಡಿತ್ತು. ಈ ವರದಿಯನ್ನು ಕ್ಯಾಬಿನೆಟ್ ಉಪ ಸಮಿತಿ ಮಾನದಂಡವಾಗಿ ಪರಿಗಣಿಸಿ ವರದಿ ನೀಡುವ ಸಾಧ್ಯತೆಗಳಿವೆ. ಇನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚಳ ಸಂಬಂಧ ಆಯೋಗ ಸಾರ್ವಜನಿಕರಿಂದ 850 ಲಿಖಿತ ಅರ್ಜಿಗಳನ್ನು ಸ್ವೀಕರಿಸಿತ್ತು. ಅದರಲ್ಲಿ ಬಹುತೇಕ ಸಮುದಾಯಗಳು ಮೀಸಲಾತಿ ಸೌಲಭ್ಯದಿಂದ ಬಹುದೂರ ಉಳಿದ ಅಂಶಗಳು ಆಯೋಗದ ವರದಿಯಲ್ಲಿ ಉಲ್ಲೇಖವಾಗಿದ್ದವು.
ರಾಜಕೀಯ ಲಾಭ
ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದಲ್ಲಿ ಇನ್ನೂ ಎಷ್ಟೋ ಮಂದಿ ಅನಕ್ಷರಸ್ತರಾಗಿಯೇ ಉಳಿದುಕೊಂಡಿದ್ದಾರೆ. ಅವರಿಗೆ ಮೀಸಲಾತಿ ಸೌಲಭ್ಯವಾಗಲೀ, ಅದರ ಗಾಳಿ ಗಂಧ ಕೂಡ ಗೊತ್ತಿಲ್ಲದ ಸಮುದಾಯಗಳಿವೆ. ಇದರ ನಡುವೆ ಮೀಸಲಾತಿ ಸೌಲಭ್ಯ ಪಡೆದವರು ಕೂಡ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಒತ್ತಾಯಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿ ಕೈಗೊಳ್ಳುವ ತೀರ್ಮಾನ ಆಡಳಿತ ರೂಢ ಸರ್ಕಾರಗಳ ಭವಿಷ್ಯದ ರಾಜಕೀಯ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರೂ ಅಚ್ಚರಿ ಪಡಬೇಕಿಲ್ಲ. ಬಿಜೆಪಿ ಸರ್ಕಾರ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿ ತೀರ್ಮಾನ ಕೈಗೊಂಡಿದ್ದೇ ಆದರಲ್ಲಿ, ನಮ್ಮದು ದಲಿತ ಪರ ಸರ್ಕಾರ ಎಂಬ ಕಾರ್ಡ್ ಪ್ಲೇ ಮಾಡುವ ಬಹುದೊಡ್ಡ ಅವಕಾಶ ಸೃಷ್ಟಿಮಾಡಿಕೊಂಡಂತಾಗುತ್ತದೆ. ಸದ್ಯ ರಾಜ್ಯದಲ್ಲಿ ಕ್ಯಾಬಿನೆಟ್ ಉಪ ಸಮಿತಿ ಅಧ್ಯಯನ ನಡೆಸಿ ವರದಿ ನೀಡಿ, ಅದನ್ನು ಅನುಮೋದಿಸಿ ಜಾರಿಗೆ ತರುವ ವೇಳೆಗೆ ಮುಂದಿನ ವಿಧಾನಸಭಾ ಚುನಾವಣೆ ಬರಬಹದೇನೋ ?
Recommended Video
ಸುಪ್ರೀಂ ಮಿತಿ
ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅದರ ಪ್ರಕಾರ ಮೀಸಲಾತಿ ಪ್ರಮಾಣ ಶೇ. 50 ಕ್ಕಿಂತಲೂ ಹೆಚ್ಚಳ ಆಗಬಾರದು ಎಂಬುದು. ಆದರೆ ಕೆಲವು ರಾಜ್ಯಗಳು ಸುಪ್ರೀಂಕೋರ್ಟ್ ನಿಗಧಿ ಮಾಡಿದ ಪ್ರಮಾಣಕ್ಕಿಂತಲೂ ಹೆಚ್ಚು ಮೀಸಲಾತಿ ನೀಡಿವೆ. ರಾಜ್ಯದಲ್ಲಿ ಪ್ರಸ್ತುತ ಪರಿಶಿಷ್ಟ ಜಾತಿಗೆ ಶೇ. 15 ರಷ್ಟು ಮೀಸಲಾತಿ, ಪರಿಶಿಷ್ಟ ಪಂಗಡಕ್ಕೆ ಶೇ. 3 ರಷ್ಟು, ಹಿಂದುಳಿದ ವರ್ಗ (OBC) ಶೇ. 32 ರಷ್ಟು ಮೀಸಲಾತಿ ನೀಡಲಾಗಿದೆ. ಇದರ ಪ್ರಕಾರ ರಾಜ್ಯದಲ್ಲಿ 101 ಪರಿಶಿಷ್ಟ ಜಾತಿ, 50 ಪರಿಶಿಷ್ಟ ಪಂಗಡ ಹಾಗೂ 207 ಕ್ಕೆ ಹಿಂದುಳಿದ ವರ್ಗಗಳ ಜಾತಿ, ಉಪ ಜಾತಿಗಳು ಸೇರಿವೆ. ಇದರ ಪ್ರಕಾರ ಈಗಾಗಲೇ ರಾಜ್ಯದಲ್ಲಿ ಕೊಟ್ಟಿರುವ ಮೀಸಲಾತಿ ಪ್ರಮಾಣ ಶೇ. 50 ರಷ್ಟಿದೆ. ಇನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಪ್ರಸ್ತುತ ಬೇಡಿಕೆ ಈಡೇರಿಸಿದರೂ ಮೀಸಲಾತಿ ಪ್ರಮಾಣ ಶೇ. 56 ಆಗಲಿದೆ. ಇದೇ ಮಾನದಂಡ ಆಧಾರದ ಮೇಲೆ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣ ಹೆಚ್ಚಿಸುವ ಅನಿವಾರ್ಯತೆ ಸೃಷ್ಟಿಯಾದರೆ, ಮೀಸಲಾತಿ ಪ್ರಮಾಣ ಶೇ. 60 ರ ಗಡಿ ದಾಟಿದರೂ ಅಚ್ಚರಿ ಪಡಬೇಕಿಲ್ಲ.