ಸರ್ಕಾರಿ ಸಲೂನ್ ಆರಂಭಕ್ಕೆ ಕ್ಷೌರಿಕರ ಒಕ್ಕೂಟದ ಒತ್ತಾಯ
ಬೆಂಗಳೂರು, ನ 19: ರಾಜ್ಯದ ಗ್ರಾಮಪಂಚಾಯ್ತಿ ಮಟ್ಟದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾದ ಸರ್ಕಾರಿ ಸಲೂನ್ ತೆರೆದು ತುಳಿತಕ್ಕೆ ಒಳಗಾಗಿರುವ ಈ ವರ್ಗದ ಜನರ ಹಿತಾಸಕ್ತಿ ಕಾಪಾಡಬೇಕೆಂದು ಕರ್ನಾಟಕ ರಾಜ್ಯ ಕ್ಷೌರಿಕರ ಮೀಸಲಾತಿ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಬಿ.ಶಿವಕುಮಾರ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಎಂ.ಬಿ ಶಿವಕುಮಾರ್ ಅವರು, ''ಸ್ವಾತಂತ್ರ್ಯ ಪೂರ್ವದಿಂದಲೂ ದಲಿತರು ಮತ್ತು ಇತರೆ ಹಿಂದುಳಿದ ವರ್ಗದವರು ಮೇಲ್ವರ್ಗದ ದೌರ್ಜನ್ಯಕ್ಕೆ ತುತ್ತಾಗುತ್ತಾ ಬಂದಿದ್ದಾರೆ. ಅವರಿಗೆ ಸಮಾಜದಲ್ಲಿ ಗೌರವ ಇಲ್ಲದಂತಾಗಿದ್ದು, ಕ್ಷೌರ ಮಾಡಲೂ ನಿರಾಕರಿಸುವಂತಹ ಘಟನೆಗಳು ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷಗಳು ಕಳೆದಿದ್ದರೂ ಪರಿಸ್ಥಿತಿ ಬದಲಾಗಿಲ್ಲ. ಈಗಲೂ ಗ್ರಾಮಾಂತರ ಪ್ರದೇಶದಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಲಾಗುತ್ತಿರುವುದು ವಿಷಾದನೀಯವಾದ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕ್ಷೌರಿಕರು ಬಲಿಷ್ಠ ಜಾತಿಗಳಿಗೆ ಮುಕ್ತವಾತಿ ಕ್ಷೌರಸೇವೆಯನ್ನು ನೀಡಿ ಪರಿಶಿಷ್ಟರನ್ನು ಹಾಗೂ ಸಂವಿಧಾನ ಶಿಲ್ಪಿ ಡಾ|| ಬಾ.ಬಾ. ಸಾಹೇಬ ಅಂಬೇಡ್ಕರ್ ಅವರಿಗೂ ಕ್ಷೌರ ಸೇವೆ ನಿರಾಕರಣೆ ಮಾಡಿದ್ದರು. ಇಂದು ಅವರು ರಚಿಸಿದ ಸಂವಿಧಾನದ ಅಡಿಯಲ್ಲಿಯೇ ಇದದ್ರೂ ಮತ್ತೊಮ್ಮೆ ಅದೇ ತಪ್ಪನ್ನು ಮಾಡಬಾರದು'' ಎಂದಿದ್ದಾರೆ.
ಕ್ಷೌರಿಕರನ್ನೂ ಪರಿಶಿಷ್ಟ ಪಂಗಡ (ಎಸ್ಟಿ) ಗೆ ಸೇರಿಸಲು ಮನವಿ
''ಇಂತಹ ಸಾಮಾಜಿಕ ಅಸಮತೋಲನ ನಿವಾರಣೆ ಆಗಬೇಕಾದರೆ ಸರ್ಕಾರವೇ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕ್ಷೌರದ ಅಂಗಡಿಯನ್ನು ತೆರೆದು ಕ್ಷೌರಿಕರು ಮತ್ತು ದಲಿತರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಈ ಬಗ್ಗೆ ತ್ವರಿತವಾಗಿ ನಿರ್ಧಾರವನ್ನು ಕೈಗೊಂಡು ಸರ್ಕಾರದ ವತಿಯಿಂದ ಕ್ಷೌರದ ಅಂಗಡಿ ಆರಂಭಿಸಲು ಕಾನೂನನ್ನು ತರಬೇಕು'' ಎಂದು ಎಂ.ಬಿ ಶಿವಕುಮಾರ್ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
Recommended Video
''ಸರ್ಕಾರ ಇಂತಹ ನಿರ್ಧಾರವನ್ನು ತೆಗೆದುಕೊಂಡರೆ ಅದು ಐತಿಹಾಸಿಕ ಹೆಜ್ಜೆಯಾಗುತ್ತದೆ ಮತ್ತು ದೇಶದ ಇತರೆ ಎಲ್ಲಾ ರಾಜ್ಯಗಳಿಗೂ ಮಾದರಿಯಾಗುತ್ತದೆ. ಈ ಮೂಲಕ ಸ್ವಾತಂತ್ರ್ಯ ಬಂದು 73 ವರ್ಷಗಳ ನಂತರವಾದರೂ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಸಮಾಜದ ಇತರೆ ಸಮುದಾಯಗಳ ರೀತಿಯಲ್ಲಿ ಗೌರವಯುತವಾಗಿ ಜೀವನ ಸಾಗಿಸಲು ಅನುವು ಮಾಡಿಕೊಟ್ಟಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸರ್ಕಾರಿ ಸಲೂನ್ ಅನ್ನು ಆರಂಭಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಬೇಕು'' ಎಂದು ರಾಜ್ಯ ಸಂಚಾಲಕರಾದ ಎನ್ ನರಸಿಂಹಮೂರ್ತಿ ಅವರು ಸಹ ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.