ಚುನಾವಣೆ ಕಾಲೇ, ರಾಷ್ಟ್ರಪಕ್ಷಿ ಉಳಿಸ್ರಪ್ಪ ರಾಜಕಾರಣಿಗಳಾ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳು ಜನಗಳ ಉದ್ಧಾರಕ್ಕೆ ಟೊಂಕ ಕಟ್ಟಿ ನಿಂತಂತೆ ಆಡುತ್ತಿದ್ದಾರೆ. ಆದರೆ, ದೇಶದ ಪ್ರಾಣಿ ಪಕ್ಷಿಗಳ ರಕ್ಷಣೆ ಬಗ್ಗೆ ಯಾರೊಬ್ಬರೂ ಮಾತನಾಡಿದ್ದು ಕಂಡು ಬಂದಿಲ್ಲ. ಅದರಲ್ಲೂ ರಾಷ್ಟ್ರ ಪ್ರಾಣಿ 'ಹುಲಿ', ರಾಷ್ಟ್ರ ಪಕ್ಷಿ 'ನವಿಲು' ಸಂಕುಲಕ್ಕೆ ಕುತ್ತು ಇದ್ದರೂ ಯಾರೊಬ್ಬರೂ ಈ ಬಗ್ಗೆ ಕಾಳಜಿ ವಹಿಸಿಲ್ಲ ಎಂಬ ಕೊರಗು ಪರಿಸರ, ಪ್ರಾಣಿ ಪ್ರಿಯರಲ್ಲಿ ಕಾಡುತ್ತಿದೆ.
ಗಂಭೀರದ ಸಂಗತಿ ಎಂದರೆ ದೇಶದಲ್ಲಿ ನವಿಲುಗಳ ಪ್ರಮಾಣ ಎಷ್ಟಿದೆ ಎಂಬುದರ ಲೆಕ್ಕಾಚಾರ ಕೂಡಾ ಸ್ಪಷ್ಟವಾಗಿ ಸಿಗುತ್ತಿಲ್ಲ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ನವಿಲುಗಳು ಇನ್ನೂ ಅವನತಿಯ ಹಂತ ತಲುಪಿಲ್ಲ ಎಂಬ ಉತ್ತರ ಸಿಗುತ್ತದೆ. ಹೀಗಾಗಿ ಈಗ ನವಿಲುಗಳ ರಕ್ಷಣೆಗೆ ಸಾರ್ವಜನಿಕರೇ ಮುಂದಾಗಬೇಕಾಗಿದೆ.
ಕರ್ನಾಟಕದಲ್ಲಿ ದಿನೇ ದಿನೇ ನವಿಲುಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಬಯಲು ಸೀಮೆ ರೈತರು ನೀರಿಲ್ಲದೆ ಬೆಳೆ ಹಾನಿಯಾದರೂ ತಮ್ಮ ಪರಿಸರದ ಪ್ರಾಣಿ ಪಕ್ಷಿಗಳನ್ನು ರಕ್ಷಿಸಲು ಮುಂದಾಗುತ್ತಾರೆ. ಆದರೆ, ರಾಜಕಾರಣಿಗಳು ಈ ಬಗ್ಗೆ ಏನಾದರೂ ಮಾಡಿಯಾರೆ, ಎಂದಾದರೂ ಪ್ರಾಣಿ ಪಕ್ಷಿಗಳ ರಕ್ಷಣೆ ಬಗ್ಗೆ ಗಮನ ಹರಿಸಿಯಾರೆ? ಊಹಿಸಲು ಸಾಧ್ಯವಿಲ್ಲ.
ಕರ್ನಾಟಕದಲ್ಲಿ ಧಾರವಾಡ ಸಮೀಪದ ಬಂಕಾಪುರದಲ್ಲಿ ಹಾಗೂ ಆದಿಚುಂಚನಗಿರಿಯಲ್ಲಿ ನವಿಲು ಸಂರಕ್ಷಣಾ ಪಾರ್ಕ್ ಗಳಿವೆ. ಉಳಿದಂತೆ ಬನ್ನೇರುಘಟ್ಟ ಸೇರಿದಂತೆ ರಾಜ್ಯ ಜೈವಿಕ ಉದ್ಯಾನವನಗಳಲ್ಲಿ ನವಿಲುಗಳನ್ನು ರಕ್ಷಿಸಲಾಗುತ್ತಿದೆ. ಆದರೆ, ನವಿಲುಗಳ ಸಂಖ್ಯೆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದು ಅರಣ್ಯಾಧಿಕಾರಿ ಗೋಪಾಲ್ ಸಿಂಗ್ ಹೇಳಿದ್ದಾರೆ.
ಇಂದಿಗೂ
ಬಯಲು
ಸೀಮೆ,
ಮಲೆನಾಡು,
ಉತ್ತರ
ಕರ್ನಾಟಕ
ಭಾಗಗಳಲ್ಲಿ
ಮಯೂರ
ಬೇಟೆ
ಅವ್ಯಾಹತವಾಗಿ
ನಡೆದಿದೆ.
ನವಿಲಿನ
ಮಾಂಸ
ತಿಂದರೆ
ಅನೇಕ
ರೋಗಗಳು
ವಾಸಿಯಾಗುತ್ತದೆ
ಎಂಬ
ಕುರುಡು
ನಂಬಿಕೆ
ಅನೇಕರಲ್ಲಿ
ಇದೆ.
ಇದರ
ಜತೆಗೆ
ಅತ್ಯಂತ
ಸುಂದರ
ನವಿಲುಗರಿಗಳನ್ನು
ಸಂಗ್ರಹಿಸಲು
ರಾಷ್ಟ್ರಪಕ್ಷಿಯನ್ನು
ಸಾಯಿಸುವುದು
ನಡೆದಿದೆ.
ರೈತ ಮಿತ್ರನಾಗಿ ಹಾವುಗಳನ್ನು ಸಾಯಿಸುವ ನವಿಲುಗಳನ್ನು ಕೆಲವರು ಬೆಳೆಗಳಿಗೆ ಮಾರಕ ಎಂದು ಪರಿಗಣಿಸಿ ಸಾಯಿಸುತ್ತಾರೆ ಅಥವಾ ಓಡಿಸುತ್ತಾರೆ. ತನ್ನ ನೈಸರ್ಗಿಕ ಪ್ರದೇಶ ತೊರೆದ ನವಿಲುಗಳು ಹೊಸ ಪ್ರದೇಶಕ್ಕೆ ಹೊಂದಿಕೊಳ್ಳಲಾಗದೆ ಅಸುನೀಗುವ ಘಟನೆಗಳು ನಡೆದಿದೆ ಎಂದು ಹಿರಿಯ ವನ್ಯಜೀವಿ ಛಾಯಾಗ್ರಾಹಕ, ಪರಿಸರವಾದಿ ಟಿಎನ್ ಎ ಪೆರುಮಾಳ್ [ಫೇಸ್ಬುಕ್ ಪುಟ ನೋಡಿ]ಅವರು ಹೇಳಿದ್ದಾರೆ.
1968ರಲ್ಲೇ ನವಿಲು ರಾಷ್ಟ್ರಪಕ್ಷಿ ಎಂದು ಘೋಷಣೆಯಾಗಿದೆ. ಭಾರತೀಯ ವನ್ಯಜೀವಿ (ಸಂರಕ್ಷಣಾ ) ಕಾಯ್ದೆ 1972 ರ ಅನ್ವಯ ನವಿಲನ್ನು ಕೊಲ್ಲುವುದು ಕ್ರಿಮಿನಲ್ ಅಪರಾಧ ಎನಿಸುತ್ತದೆ. ನೆಲದಲ್ಲಿ ಬಿದ್ದಿರುವ ನವಿಲು ಗರಿ ಸಂಗ್ರಹಿಸಲು ಅನುಮತಿ ಇದೆ. ಆದರೆ, ನವಿಲು ಗರಿಗಾಗಿ ನವಿಲಿಗೆ ಹಿಂಸೆ ನೀಡುವಂತಿಲ್ಲ. ರಾಷ್ಟ್ರಪಕ್ಷಿಯನ್ನು ಸಾಕು ಪ್ರಾಣಿಯಾಗಿ ರಕ್ಷಿಸಬಹುದು. ಶ್ರೀಗಂಧದ ಮರನ್ನು ಮಲೆನಾಡಿನ ಮನೆಗಳ ತೋಟದಂಚಿಯಲ್ಲಿ ರಕ್ಷಿಸಿದ ಹಾಗೆ ನವಿಲುಗಳ ರಕ್ಷಣೆಗೂ ಕೆಲವು ನಿಯಮಗಳ ಅಡಿಯಲ್ಲಿ ಅನುಮತಿ ಸಿಗುತ್ತದೆ. ಅದರೆ, ನವಿಲು ಕೊಲ್ಲುವುದು, ಕೊಂದು ತಿನ್ನುವುದು ಅಕ್ಷಮ್ಯ.
ನವಿಲು ಹಾಗೂ ಕರ್ನಾಟಕ: ಕರ್ನಾಟಕದ ರಾಜ ಪರಂಪರೆಯ ಮೊದಲ ಅರಸು ಮಯೂರ ವರ್ಮ(ಮಯೂರ ಎಂದರೆ ನವಿಲು) ಬನವಾಸಿಯಲ್ಲಿ ಕದಂಬ ರಾಜ್ಯ ಕಟ್ಟಿ ಮಯೂರವನ್ನು ತನ್ನ ಲಾಂಛನವನ್ನಾಗಿಸಿಕೊಂಡಿದ್ದ. ಕರ್ನಾಟಕದಲ್ಲಷ್ಟೆ ಅಲ್ಲ ಪೂರ್ವ ಏಷ್ಯಾ, ಪರ್ಷಿಯಾ, ಗ್ರೀಸ್ ದೇಶದಲ್ಲೂ ನವಿಲಿಗೆ ಮಹತ್ವದ ಸ್ಥಾನವಿದೆ.
ಹಿಂದೂಗಳಂತೆ ಕ್ರಿಶ್ಚಿಯನ್ ಸಮುದಾಯದಲ್ಲೂ ನವಿಲುಗಳನ್ನು ಗೌರವದಿಂದ ಕಾಣಲಾಗುತ್ತದೆ. ದಕ್ಷಿಣ ಭಾರತದಲ್ಲಂತೂ ನವಿಲು ಕಾರ್ತಿಕೇಯ, ಮುರುಗನ ವಾಹನ ಎಂದು ಭಕ್ತಿಯಿಂದ ಪೂಜಿಸಲಾಗುತ್ತದೆ. ದೇವತೆಗಳ ಸೇನಾನಿ ಮುರುಗನ ವಾಹನ ಇದು ಎಂಬ ನಂಬಿಕೆಯಿದೆ. ಧಾರ್ಮಿಕ, ಪೌರಾಣಿಕ, ಐತಿಹಾಸಿಕ ಹಿನ್ನೆಲೆಯುಳ್ಳ ನಮ್ಮ ರಾಷ್ಟ್ರಪಕ್ಷಿ ನವಿಲು ನಮ್ಮ ಹೆಮ್ಮೆಯ ಸಂಕೇತ. ಇಂಥ ಹೆಮ್ಮೆಯ ವಿಷಯಗಳ ಬಗ್ಗೆ ಯಾಕೆ ಯಾವ ರಾಜಕೀಯ ಪಕ್ಷಗಳು ತಲೆಕೆಡಿಸಿಕೊಂಡಿಲ್ಲವೋ ದೇವರೇ ಬಲ್ಲ.