ಸತ್ಯಬೋಧರ ಆರಾಧನಾ ಮಹೋತ್ಸವಕ್ಕೆ ಸವಣೂರು ಸಜ್ಜು
ಸವಣೂರ ಮಾ, 4: ಮಾರ್ಚ್ 5 , 6 ಹಾಗೂ 7 ರಂದು ಸವಣೂರಿನಲ್ಲಿ ಶ್ರೀ ಸತ್ಯಬೋಧರ ಆರಾಧನಾ ಮಹೋತ್ಸವವು ಜರುಗಲಿದೆ. ಕಾರ್ಯಕ್ರಮದ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಮಧ್ವಾಚಾರ್ಯರ ಸರ್ವೋತ್ತಮ ಸರ್ವಜ್ಞ ಪೀಠದ 25 ನೇ ಪೀಠಾಧಿಕಾರಿಗಳಾಗಿದ್ದ ಸತ್ಯಬೋಧ ತೀರ್ಥರು 40 ವರ್ಷಗಳ ಕಾಲ ಶ್ರೀಮದ್ ಉತ್ತರಾಧಿ ಮಠದ ಪೀಠಾಧಿಪತಿಗಳಾಗಿ ಧರ್ಮ ಸಂರಕ್ಷಣೆ ಮಾಡಿದರು.[ಸವಣೂರು ವೃಂದಾವನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು]
ರಾಯಚೂರಿನ ಪಂಡಿತ ಹರಿಯಾಚಾರ್ಯ ಅರಳಮ್ಮ ದಂಪತಿಗೆ 1710 ರಲ್ಲಿ ಜನಿಸದ ರಾಮಾಚಾರ್ಯರು (ಸತ್ಯಬೋಧ ತೀರ್ಥರ ಪೂರ್ವನಾಮ) ಸಕಲ ಸಂಸ್ಕಾರಗಳನ್ನು ಪಡೆದುಕೊಂಡರು. ಗುರುಗಳೊಂದಿಗೆ ಸಂಚಾರ ಕೈಗೊಂಡು, ಅವರ ಅಪ್ಪಣೆಯ ಅನುಸಾರ ಸವಣೂರಿನ ಗಿರಿಜಾಳನ್ನು ವಿವಾಹವಾದರು. ಬಳಿಕ ಪುತ್ರ ಪ್ರಾಪ್ತಿಹೊಂದಿ ತಮ್ಮ 28 ನೇ ವರ್ಷದಲ್ಲಿ ಸನ್ಯಾಸ ಸ್ವೀಕರಿಸಿ ಶ್ರೀ ಸತ್ಯಬೋಧ ತೀರ್ಥ ಎಂಬ ನಾಮಾಂಕಿತರಾದರು.
ಭಾರತ ಸಂಚಾರ: ರಾಮೇಶ್ವರ ಯಾತ್ರೆಯೊಂದಿಗೆ ಪ್ರವಾಸ ಆರಂಭಿಸಿದ ಯತಿಗಳು ತಿರುಚನಾಪಳ್ಳಿ, ಶ್ರೀರಂಗ, ತಂಜಾವೂರು, ಕುಂಭಕೋಣ, ಅರಣಿ, ಆರ್ಕಾಟಗಳಲ್ಲಿ ತಿರಿಗಾಡಿ ಅಖಂಡ ಭಾರತವನ್ನು ಸುತ್ತಿದರು. ಕಾಶಿ, ಗಯಾ, ಪ್ರಯಾಗ, ಪುರಿ, ಕುಂಭಕೋಣ, ಉಡುಪಿ, ರಾಮದುರ್ಗ ಮುಂತಾದ ಪ್ರಸಿದ್ಧ ಸ್ಥಳಗಳಲ್ಲಿ ಮಧ್ವಮಠ ಸ್ಥಾಪಿಸಿದರು. ಸವಣೂರ ಸಂಸ್ಥಾನದ ದಿವಾನ ಖಂಡೇರಾಯನ ಪ್ರಾರ್ಥನೆಯಂತೆ ಸವಣೂರಿಗೆ ಆಗಮಿಸಿ, ಮುಂದಿನ 20 ವರ್ಷಗಳ ಕಾಲ ಸವಣೂರಿನಲ್ಲಿಯೇ ನೆಲೆಸಿದರು. ಸತತ 18 ಚಾತುರ್ಮಾಸ್ಯ ವ್ರತಗಳನ್ನು ಕೈಗೊಂಡಿದ್ದರು.[ಶ್ರಾವಣದ ಊರಲ್ಲಿ ಗೋಕಾಕರ ನಿರರ್ಥಕ ಹುಟ್ಟುಹಬ್ಬ]
ರಾಜ್ಯಾಡಳಿತದಲ್ಲೂ ಪಾಲ್ಗೊಂಡ ಸ್ವಾಮೀಜಿ, ಪೇಶ್ವೆಯರು, ಮೈಸೂರು ಸುಲ್ತಾನರು, ಇಂಗ್ಲೀಷರ ನಡುವೆ ಸವಣೂರ ಸಂಸ್ಥಾನಕ್ಕಾಗಿ ಪೈಪೋಟಿ ಎದುರಾಗಿದ್ದಾಗ ಸಂಧಾನ ಮಾಡಿ ಸಮಸ್ಯೆಗೆ ಪರಿಹಾರ ಸೂಚಿಸಿದ್ದರು.
ಹರಿದಾಸ ಸಾಹಿತ್ಯಕ್ಕೆ ಕೊಡುಗೆ : ಸತ್ಯಬೋಧತೀರ್ಥರು ತಮ್ಮ ಸಮಕಾಲಿನರಾದ ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರು, ಮೋಹನದಾಸರು, ಹೊನ್ನಾಳಿದಾಸರು, ಶ್ರೀಧರ ವಿಟ್ಠಲರು, ವಿಷ್ಣುತೀರ್ಥರು ಮೊದಲಾದ ಹಲವಾರು ದಾಸರಿಗೆ, ಮಹನೀಯರಿಗೆ ಆಶ್ರಯದಾತರಾಗಿದ್ದರು. ಅವರಿಗೆ ಮಾರ್ಗದರ್ಶಕರಾಗಿ, ತತ್ವೋಪದೇಶ ನೀಡಿ ಅವರಿಂದ ಅಸಂಖ್ಯಾತ ಕೃತಿಗಳ ರಚನೆಗೆ ಪ್ರೇರಣೆ ನೀಡಿದರು. ಭಾಗವತ ಧರ್ಮವನ್ನು ಮನೆ ಮನಗಳಿಗೆ ತಲುಪಿಸಿದರು. ಜನಮಾನಸದಲ್ಲಿ ಧರ್ಮಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಅಖಂಡ 40 ವರ್ಷಗಳ ಕಾಲ ಮೂಲ ರಾಮ ದೇವರನ್ನು ಪೂಜಿಸಿ, ಶ್ರೀ ಸತ್ಯಸಂಧ ತೀರ್ಥರಿಗೆ ಆಶ್ರಮವನ್ನು ನೀಡಿದರು. 1784 ರ ಶೋಭಕೃತ ಸಂವತ್ಸರದ ಪಾಲ್ಗುಣ ಕೃಷ್ಣ ಪ್ರತಿಪದೆ ದಿವಸ ವೃಂದಾವನಸ್ಥರಾದರು.