ಕರಾವಳಿ, ಮಲೆನಾಡು ಅರಣ್ಯ ಪ್ರದೆಶದಲ್ಲಿ ಸದ್ದಿಲ್ಲದೇ ಸ್ಯಾಟಲೈಟ್ ಫೋನ್ ಬಳಕೆ!
ಶಿವಮೊಗ್ಗ, ಜೂನ್06: ಕರ್ನಾಟಕ ರಾಜ್ಯದ ಕರಾವಳಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಿಷೇಧಿತ ಸ್ಯಾಟಲೈಟ್ ಸಿಗ್ನಲ್ ಗಳು ಅಕ್ರಮವಾಗಿ ಕಾರ್ಯಾಚರಣೆ ಪತ್ತೆಯ ಹಿನ್ನೆಲೆಯಲ್ಲಿ, ಕರ್ನಾಟಕ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. "ನಿಷೇಧಿತ ಸ್ಯಾಟಲೈಟ್ ಫೋನ್ ಸಿಗ್ನಲ್ ಕಾರ್ಯಾಚರಣೆ ಕುರಿತು ರಾಜ್ಯದ ಪೊಲೀಸರು ಕೇಂದ್ರದ ಐಬಿ ಸಂಸ್ಥೆ ಸಿಬ್ಬಂದಿ ಜತೆಗೆ ಮಾಹಿತಿ ಹಂಚಿಕೊಳ್ಳಲಾಗಿದ್ದು ಜಂಟಿಯಾಗಿ ತನಿಖೆ ನಡೆಸಲಾಗುತ್ತಿದೆ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಮಂಗಳೂರು ಕಿನಾರೆ ಹಾಗೂ ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಪತ್ತೆ ಮಾಡಿದ್ದು, ರಾಜ್ಯ ಆಂತರಿಕ ಭದ್ರತಾ ವಿಭಾಗದ ಸಿಬ್ಬಂದಿ ತನಿಖೆಯಲ್ಲಿ ಕೈ ಜೋಡಿಸಿದ್ದಾರೆ. ನಿಷೇಧಿತ ಸ್ಯಾಟಲೈಟ್ ಫೋನ್ ಕಾರ್ಯಾಚರಣೆಯ ಹಿಂದಿನ ದುಷ್ಟರು ಯಾರಿದ್ದಾರೆ ಹಾಗೂ ಯಾರ ಜತೆ ಕಾರ್ಯಾಚರಣೆ ನಡೆಯುತ್ತಿದೆ ಎಂಬುದರ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ಸ್ಯಾಟಲೈಟ್ ಫೋನ್ ಬಳಕೆ ಮಾಡಿದ್ಯಾರು..?
ಸ್ಯಾಟಲೈಟ್ ಫೋನ್ ಬಳಕೆಯಾಗಿದೆ ಎಂಬ ಮಾಹಿತಿಯಷ್ಟೇ ಹೊರಬಿದ್ದಿದೆ. ಆ ಸ್ಯಾಟಲೈಟ್ ಫೋನ್ ಬಳಸಿದ್ದು ಯಾರು..? ಯಾರು ಯಾರೊಂದಿಗೆ ಮಾತನಾಡಿದ್ದಾರೆ ಎಂಬ ಮಾಹಿತಿಯಿಲ್ಲ. ಇನ್ನು ಸ್ಯಾಟಲೈಟ್ ಬಳಕೆಗೆ ಸಂಬಂಧಿಸಿದಂತೆ ನಿರ್ಧಿಷ್ಟ ಕಾನೂನು ಸಹ ಇಲ್ಲದಿರೋದು ದುಷ್ಕರ್ಮಿಗಳ ಪಾಲಿಗೆ ವರವಾಗಿದೆ.
ಸ್ಯಾಟಲೈಟ್ ಮೂಲಕವೇ ಬಳಕೆಯಾಗುವ ಫೋನ್
ಸಾಮಾನ್ಯವಾಗಿ ನಾವು ಬಳಕೆ ಮಾಡುವ ಫೋನ್ ಟವರ್ನ ನೆಟ್ವರ್ಕ್ ಮೂಲಕ ಸಂಪರ್ಕ ಸಾಧ್ಯವಾಗಿಸುತ್ತದೆ. ಮೂಲಕ ಸ್ಥಿರ ದೂರವಾಣಿಗಳು ಕೆಲಸವನ್ನು ನಿರ್ವಹಿಸುತ್ತದೆ. ಆದರೆ, ಈ ಸ್ಯಾಟಲೈಟ್ ಫೋನ್ಗಳು ಸ್ಥಳೀಯ ಸಂಪರ್ಕ ನೆಟ್ವರ್ಕ್ಗಳ ನೆರವು ಇಲ್ಲದೆ ನೇರವಾಗಿ ಸ್ಯಾಟಲೈಟ್ ಫೋನ್ಗಳ ಮೂಲಕವೇ ಇಲ್ಲಿಂದ ಮತ್ತೊಂದು ದೇಶಗಳಿಗೆ ಕನೆಕ್ಟ್ ಮಾಡಿಕೊಳ್ಳಬಹುದು. ಆ ಮೂಲಕ ಕೆಲವರು ಮಾತುಕತೆಯನ್ನು ನಡೆಸಲಿದ್ದಾರೆ. ಈ ಫೋನ್ ಬಳಕೆಯನ್ನು ಭಯೋತ್ಪಾದನೆಗೂ ಬಳಸಲಾಗುತ್ತದೆ ಎನ್ನಲಾಗಿದ್ದು ಸೂಕ್ತ ತನಿಖೆಯನ್ನು ನಡೆಸಬೇಕಿದೆ.
ನಿರ್ಧಿಷ್ಟ ಎಫ್ಐಆರ್ ದಾಖಲಾಗಿಲ್ಲ
ಸ್ಯಾಟಲೈಟ್ ಫೋನ್ ಯಾರು ಬಳಕೆ ಮಾಡಿದ್ದಾರೆ ಅನ್ನೋದು ತಿಳಿಯಬೇಕೆಂದರೆ ಮೊದಲು ವ್ಯಕ್ತಿಗಳು ಯಾರು ಎಂದು ತಿಳಿಯಬೇಕು. ಬಳಕೆ ಮಾಡಲಾಗಿರುವ ವಸ್ತುಗಳು ಸಿಗಬೇಕಿದೆ. ಆ ಬಳಿಕವಷ್ಟೇ ಕೇಸ್ ಮಾಡಬಹುದಾಗಿದೆ. ಯಾಕೆಂದರೆ ಕಾನೂನಿನಲ್ಲಿ ಸ್ಯಾಟಲೈಟ್ ಫೋನ್ ಬಳಕೆಗೆ ಸಂಬಂಧಿಸಿದಂತೆ ನಿರ್ಧಿಷ್ಟವಾದ ಕಾನೂನುಗಳು ಇಲ್ಲದಿದ್ದರೂ ಪೊಲೀಸರು ಕ್ರಮ ಕೈಗೊಳ್ಳಲು ಅಡ್ಡಿಯಿಲ್ಲ. ಆದರೂ ಸ್ಯಾಟಲೈಟ್ ಫೋನ್ ಬಳಕೆ ಬಗ್ಗೆ ಆಗಿಂದಾಗ್ಗೆ ಮಾಹಿತಿ ಸಿಗುತ್ತಿದ್ದರು ನಿರ್ಧಿಷ್ಟವಾಗಿ ಆರೋಪಿಗಳು ಪತ್ತೆಯಾಗುತ್ತಿಲ್ಲ.
ಗೃಹ ಸಚಿವ ಆರಗ ಜ್ಞಾನೇಂದ್ರರವರು ಈಗಾಗಲೇ ತಮ್ಮ ಇಲಾಖೆಯ ಅಧಿಕಾರಿಗಳಿಗೆ ತನಿಖೆಯನ್ನು ನಡೆಸುವಂತೆ ಸೂಚನೆಯನ್ನು ನೀಡಿದ್ದಾರೆ. ಕೇಂದ್ರದ ಐಬಿಯಿಂದ ಬಂದ ಮಾಹಿತಿಯನ್ನು ಆಧರಿಸಿ ತನಿಖೆಗೆ ಮುಂದಾಗಿದ್ದಾರೆ.
Recommended Video