ಎಸ್. ಸಸಿಕಾಂತ್ ಸೆಂಥಿಲ್ ರಾಜೀನಾಮೆ : ಯಾರು, ಏನು ಹೇಳಿದರು?
ಬೆಂಗಳೂರು, ಸೆಪ್ಟೆಂಬರ್ 06 : 2009ನೇ ಬ್ಯಾಚ್ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಅವರು ಕಾರ್ಯ ನಿರ್ವಹಣೆ ಮಾಡುತ್ತಿದ್ದು, ರಾಜೀನಾಮೆ ತೀರ್ಮಾನ ಕುತೂಹಲಕ್ಕೆ ಕಾರಣವಾಗಿದೆ.
40 ವರ್ಷದ ಎಸ್. ಸಸಿಕಾಂತ್ ಸೆಂಥಿಲ್ ತಮಿಳುನಾಡು ಮೂಲದವರು. ತಿರುಚಿನಾಪಳ್ಳಿಯ ಖಾಸಗಿ ಕಾಲೇಜಿನಿಂದ ಎಲೆಕ್ಟ್ರಾನಿಕ್ನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ. 2009ರಲ್ಲಿ ಅವರು ಸರ್ಕಾರಿ ಸೇವೆ ಆರಂಭಿಸಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ
ಬಳ್ಳಾರಿ, ಶಿವಮೊಗ್ಗ, ಚಿತ್ರದುರ್ಗ ಮತ್ತು ರಾಯಚೂರು ಜಿಲ್ಲೆಯಲ್ಲಿ ಸಸಿಕಾಂತ್ ಸೆಂಥಿಲ್ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಜೂನ್ 2017ರಲ್ಲಿ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು.
"ಪ್ರಜಾಪ್ರಭುತ್ವದ ಅಡಿಗಲ್ಲೇ ಕುಸಿಯುತ್ತಿದೆ; ಇಲ್ಲಿರಲಾರೆ" ಎಂದ ಸಸಿಕಾಂತ್ ಸೆಂಥಿಲ್
ರಾಜೀನಾಮೆ ಪತ್ರದಲ್ಲಿ ಸಸಿಕಾಂತ್ ಸೆಂಥಿಲ್, "ನಾನು ಇಂದು ನನ್ನ ಭಾರತೀಯ ಆಡಳಿತಾತ್ಮಕ ಸೇವೆಗೆ ರಾಜೀನಾಮೆ ಸಲ್ಲಿಸಿದ್ದೇನೆ. ನನ್ನ ರಾಜೀನಾಮೆಗೆ ವೈಯಕ್ತಿಕ ಕಾರಣಗಳಿವೆಯೇ ಹೊರತು ಯಾವುದೇ ವೈಮನಸ್ಸಿಲ್ಲ. ದೇಶದ ಸಂವಿಧಾನದ ಮೂಲ ಆಶಯಗಳು ಹಾದಿ ತಪ್ಪುತ್ತಿರುವ ಈ ದಿನಗಳಲ್ಲಿ ನಾನು ಸೇವೆಯಲ್ಲಿ ಮುಂದುವರೆಯುವುದು ನನಗೆ ಸಮಂಜಸವೆನಿಸುತ್ತಿಲ್ಲ" ಎಂದು ಹೇಳಿದ್ದಾರೆ. ಸಸಿಕಾಂತ್ ಸೆಂಥಿಲ್ ರಾಜೀನಾಮೆ ಬಗ್ಗೆ ಯಾರು, ಏನು ಹೇಳಿದರು?
ಮಲ್ಲಿಕಾರ್ಜುನ ಖರ್ಗೆ ಹೇಳಿಕೆ
"ಐಎಎಸ್ ಅಧಿಕಾರಿಗಳು ನೇರವಾಗಿ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದವರು. ಕೇಂದ್ರ ಸರ್ಕಾರದ ಹಸ್ತಕ್ಷೇಪದಿಂದ ಐಎಎಸ್ ಅಧಿಕಾರಿಗಳು ಬೇಸತ್ತಿದ್ದಾರೆ. ಕೇಂದ್ರ ಸರ್ಕಾರ ಇಡಿ, ಸಿಬಿಐ ಮತ್ತು ನ್ಯಾಯಾಂಗದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಇಲ್ಲಿಯ ತನಕ ರಾಜಕಾರಣಿಗಳು ಮಾತ್ರ ಮಾತನಾಡುತ್ತಿದ್ದರು. ಈಗ ಐಎಎಸ್ ಅಧಿಕಾರಿಗಳು ರಾಜೀನಾಮೆ ಮೂಲಕ ಮಾತನಾಡುತ್ತಿದ್ದಾರೆ" ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
ಯಾರ ಒತ್ತಡ ಸ್ಪಷ್ಟಪಡಿಸಲಿ
ಗಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, "ರಾಜೀನಾಮೆ ಕೊಡುವುದು ಅವರ ಹಕ್ಕು. ಯಾವ ಕಾರಣಕ್ಕಾಗಿ ರಾಜೀನಾಮೆ ಕೊಟ್ಟಿದ್ದಾರೆ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಲಿ. ರಾಜಕೀಯ ಕಾರಣ ಅಂದರೆ ಹಿಂದಿನ ಸರ್ಕಾರದ ಒತ್ತಡವೋ, ಈಗಿನ ಸರ್ಕಾರದ ಒತ್ತಡವೋ? ಎಂಬುದನ್ನು ಹೇಳಲಿ" ಎಂದರು.
ಈ ವಿಚಾರ ನನಗೆ ಗೊತ್ತಿಲ್ಲ
ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿದ್ದು, "ಈ ವಿಚಾರ ನನಗೆ ಗೊತ್ತಿಲ್ಲ. ಆದ್ದರಿಂದ, ಪ್ರತಿಕ್ರಿಯೆ ನೀಡುವುದಿಲ್ಲ. ನಮ್ಮ ಹಿರಿಯ ನಾಯಕರು ಏನು ಹೇಳುತ್ತಾರೋ ನೋಡುತ್ತೇನೆ. ನಂತರ ನಾನು ಪ್ರತಿಕ್ರಿಯೆ ನೀಡುತ್ತೇನೆ" ಎಂದು ಹೇಳಿದರು.
ವಿಜಯ ಭಾಸ್ಕರ್ಗೆ ಸೂಚನೆ
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜೀನಾಮೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯ ಭಾಸ್ಕರ್ಗೆ ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ? ಎಂದು ವಿಚಾರಿಸಲು ಸೂಚನೆ ನೀಡಿದ್ದಾರೆ.