ಹೀಗೆಲ್ಲಾ ಆದರೆ ಕನ್ನಡ ಸಿನಿಮಾಗಳಿಗೆ ಉಳಿಗಾಲ ಇಲ್ಲ
ಬೆಂಗಳೂರು, ನವೆಂಬರ್ 06: 'ಸರ್ಕಾರ್' ಎಂಬ ತಮಿಳು ಚಿತ್ರವೊಂದು ಇಂದು ಬಿಡುಗಡೆ ಆಗಿದೆ. ಅದು ತಮಿಳಿನ ಚಿತ್ರವೋ ಅಥವಾ ಕನ್ನಡದ್ದೇ ಚಿತ್ರವೋ ಎಂಬುವಂತೆ ಕರ್ನಾಟಕದಲ್ಲಿ ಭಾರಿ ಸ್ವಾಗತ ಆ ಚಿತ್ರಕ್ಕೆ ದೊರೆತಿದೆ.
ಉತ್ತಮ ಚಿತ್ರವನ್ನು ಯಾವುದೇ ಭಾಷೆಯಾದರೂ ನೋಡುವುದರಲ್ಲಿ, ಮೆಚ್ಚಿಕೊಳ್ಳುವುದರಲ್ಲಿ ತಪ್ಪಿಲ್ಲ ನಿಜ, ಆದರೆ ನಮ್ಮ ಚಿತ್ರಗಳನ್ನು ಬದಿಗೆ ಸರಿಸಿ ಪರಭಾಷೆ ಚಿತ್ರವೊಂದು ಚಿತ್ರಮಂದಿರಗಳ ಮೇಲೆ ಆಕ್ರಮಣ ಮಾಡಿಕೊಳ್ಳಲು ಬಿಡುವಷ್ಟು ವಿಶಾಲ ಹೃದಯಿಗಳು ನಾವಾಗಬೇಕೆ ಎಂಬುದು ಪ್ರಶ್ನೆ.
ವಿಜಯ್ ಅಭಿನಯದ, ಮುರಗದಾಸ್ ನಿರ್ದೇಶಿರುವ 'ಸರ್ಕಾರ್' ಚಲನಚಿತ್ರ ಕರ್ನಾಟಕದಲ್ಲಿ 590 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಾಣುತ್ತಿದೆ. ತಮಿಳುನಾಡಿನಲ್ಲಿ ಇದೇ ಸರ್ಕಾರ್ ಚಿತ್ರಕ್ಕೆ ಇಷ್ಟು ಪ್ರದರ್ಶನಗಳು ದೊರೆತಿಲ್ಲ ಎಂದರೆ ನಮ್ಮ ಪಡಪೋಸಿ ತನ ಎಷ್ಟೆಂಬುದು ಅರ್ಥವಾಗುತ್ತದೆ.
ಹೃದಯ ವೈಶಾಲ್ಯತೆ ಅಲ್ಲ ನಮ್ಮ ದೌರ್ಬಲ್ಯ
ಖಂಡಿತ ಮರುಗದಾಸ್ ಒಳ್ಳೆಯ ನಿರ್ದೇಶಕ, ವಿಜಯ್ ಅತ್ಯುತ್ತಮ ನಟ, 'ಸರ್ಕಾರ್' ಸಿನಿಮಾ ಉತ್ತಮವಾಗಿಯೇ ಇರಬಹುದು ಎಂಬುದನ್ನೂ ಒಪ್ಪಿಕೊಳ್ಳೋಣ, ಆದರೆ ನಮ್ಮ ಸಿನಿಮಾಗಳನ್ನು ಬದಿಗೆ ಸರಿಸಿ ಅವರಿಗೆ ಮಣೆ ಹಾಕುವುದು ವೈಶಾಲ್ಯತೆ ಎನಿಸಿಕೊಳ್ಳುವುದಿಲ್ಲ ಅದು ದೌರ್ಬಲ್ಯ ಎನಿಸಿಕೊಳ್ಳುತ್ತದೆ.
ಫಿಲ್ಮ್ ಛೇಂಬರ್ಗೆ ಬೆನ್ನೆಲುಬೇ ಇಲ್ಲ
ಕನ್ನಡ ಸಿನಿಮಾಕ್ಕೆ ಜನ ಬರುವುದಿಲ್ಲ ಎಂದು ಬೊಬ್ಬೆ ಹೊಡೆಯುವ ಸಿನಿಮಾ ಮಂದಿ ತಾವೇ ಜನರನ್ನು ಸಿನಿಮಾ ಮಂದಿರದಿಂದ ದೂರ ಉಳಿಸುವ ಕಾರ್ಯ ಮಾಡುತ್ತಿದ್ದಾರೆ. ಕನ್ನಡ ಫಿಲ್ಮ್ ಛೇಂಬರ್ ಅಂತೂ ಸಂಧಾನ ಸಭೆಗಳನ್ನು ಮಾಡುವುದರಲ್ಲಿಯೇ ನಿರತವಾಗಿದೆ. ದೊಡ್ಡ ದೊಡ್ಡ ನಿರ್ಮಾಪಕದ ಕೃಪಾ ಕಟಾಕ್ಷದಿಂದ ನಡೆಯುವ ಅದಕ್ಕೆ ಬೆನ್ನು ಮೂಳೆ ಇದೆಯೋ ಇಲ್ಲವೋ ಎಂಬುದೇ ಅನುಮಾನ. ಹಣವಿದ್ದ ನಿರ್ಮಾಪಕರು ಒದ್ದ ಕಡೆ ಅದು ಉರುಳುತ್ತದೆ ಅಷ್ಟೆ.
ತಮಿಳುನಾಡಿನಲ್ಲಿವೆ 745 ಚಿತ್ರಮಂದಿರಗಳು
ತಮಿಳುನಾಡಿನಲ್ಲಿ 745 ಚಿತ್ರಮಂದಿರಗಳಿವೆ ಕರ್ನಾಟಕದಲ್ಲಿ ಅದರ ಅರ್ಧದಷ್ಟೂ ಚಿತ್ರಮಂದಿರಗಳು ಇಲ್ಲ. ಆದರೂ ಪರ ಭಾಷೆ ಚಿತ್ರಕ್ಕೆ ಅಷ್ಟು ಭಾರಿ ಪ್ರಮಾಣದಲ್ಲಿ ಪ್ರದರ್ಶನಗಳನ್ನು ಬಿಟ್ಟುಕೊಟ್ಟಿರುವ ಹಿಂದೆ ಇರಬಹುದಾದ ಉದ್ದೇಶವೇನು? ಉತ್ತರ ಬಹು ಸರಳ; ನಿರ್ಮಾಪಕರ, ವಿತರಕರ ಲಾಭಿ.
ವಿತರಕರ ಜಾಣ ಮೂಗತನ
ಕರ್ನಾಟಕದ ಭಾರಿ ಕುಳಗಳು ಪರಭಾಷೆ ಚಿತ್ರದ ಕರ್ನಾಟಕದ ವಿತರಣೆಯನ್ನು ತೆಗೆದುಕೊಂಡಿರುತ್ತಾರೆ. ಅವರ ಪ್ರಭಾವದಿಂದಲೇ ಹೀಗೆ ಅತಿ ಹೆಚ್ಚು ಚಿತ್ರಮಂದಿರಗಳು ಪರಭಾಷೆ ಚಿತ್ರಗಳಿಗೆ ಸಿಗುತ್ತವೆ. ಅವರದ್ದೇ ಕನ್ನಡ ಸಿನಿಮಾ ಸೋತಾಗ ಮೈಕಿನ ಮುಂದೆ 'ಜನ ಕನ್ನಡ ಸಿನಿಮಾಗಳನ್ನು ನೋಡುತ್ತಿಲ್ಲ' ಎಂದು ಬೊಬ್ಬೆ ಹೊಡೆಯುವ ಇವರು, ಇಂತಹಾ ಸಂದರ್ಭಗಳಲ್ಲಿ ಜಾಣ ಮೂಗತನ ಪ್ರದರ್ಶಿಸುತ್ತಾರೆ.
ಹಿಂದೆ ನಿಯಮವೊಂದು ಇತ್ತು
ಕೆಲವು ವರ್ಷಗಳ ಹಿಂದೆ ಒಂದು ನಿಯಮ ಮಾಡಲಾಗಿತ್ತು. ಯಾವುದೇ ಪರಭಾಷೆ ಸಿನಿಮಾವಾದರೂ ಬಿಡುಗಡೆ ಆಗಿ ಮೂರು ವಾರಗಳ ನಂತರವೇ ಕರ್ನಾಟಕದಲ್ಲಿ ಬಿಡುಗಡೆ ಮಾಡಬೇಕು ಎಂಬುದು ಆ ನಿಯಮ. ಆಗ ಕನ್ನಡ ಸಿನಿಮಾಗಳಿಗೆ ಉತ್ತಮ ಅವಕಾಶವೂ ದೊರೆಯುತ್ತಿತ್ತು. ಆದರೆ ಮತ್ತದೆ ಸ್ವಹಿತಕ್ಕಾಗಿ ನಿಯಮವನ್ನು ಮುರಿದು ಹಾಕಲಾಯಿತು.
ನಮ್ಮ ಕಾಲ ಮೇಲೆ ಕಲ್ಲು
ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳು ಸಿಗದೇ ಒದ್ದಾಡುತ್ತಿರುವ ಸಮಯದಲ್ಲಿ ಪರಭಾಷೆ ಚಿತ್ರಕ್ಕೆ ಈ ಮಾದರಿಯ ಸ್ವಾಗತ ಕೊರುವುದು ನಮ್ಮ ಕಾಲ ಮೇಲೆ ಕಲ್ಲು ಹಾಕಿಕೊಂಡತೆ ಅಷ್ಟೆ. ಕನ್ನಡ ಚಿತ್ರರಂಗವು ಒಗ್ಗಟ್ಟು ಪ್ರದರ್ಶೀಸಿ ಸ್ವಹಿತಾಸಕ್ತಿಗಳನ್ನು ಬದಿಗೆ ಸರಿಸದ ಹೊರತು ಪರಭಾಷೆ ಸಿನಿಮಾಗಳು ಕನ್ನಡ ಸಿನಿಮಾಗಳ ಮೇಲೆ ಅತಿಕ್ರಮಣ ಮಾಡುತ್ತಲೇ ಇರುತ್ತವೆ.