ಸರಳ ಸಪ್ತಪದಿಗೆ ವೀರೇಂದ್ರ ಹೆಗ್ಗಡೆ, ಸುಧಾಮೂರ್ತಿ, ಯಶ್ ರಾಯಭಾರಿ
Recommended Video
ಬೆಂಗಳೂರು, ಫೆಬ್ರವರಿ 09: ದುಂದುವೆಚ್ಚದ ಮದುವೆಗಳಿಗೆ ಕಡಿವಾಣ ಹಾಕಿ, ಸರಳ ಮತ್ತು ಸಾಮೂಹಿಕ ವಿವಾಹಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಸಪ್ತಪದಿ ಯೋಜನೆಯ ಏಪ್ರಿಲ್ 26ರಂದು ನಡೆಯಲಿದೆ.
ಸರ್ಕಾರದ ಈ ಯೋಜನೆಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಹಾಗೂ ಜನಪ್ರಿಯ ನಟ ಯಶ್ ಅವರು ರಾಯಭಾರಿಯಾಗಿದ್ದು, ಪ್ರಚಾರ ನಡೆಸಲಿದ್ದಾರೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ಬಡವ-ಬಲ್ಲಿದ ಎನ್ನದ ಯಾವುದೇ ವರ್ಗಕ್ಕೆ ಸೇರಿದವರು ಮುಜರಾಯಿ ದೇಗುಲಗಳ ಆಡಳಿತದಲ್ಲಿ ನಡಯುವ ಸಮಾರಂಭದಲ್ಲಿ ವಿವಾಹ ಬಂಧನಕ್ಕೆ ಒಳಗಾಗಲು ಇಚ್ಛಿಸುವ ಜೋಡಿಗಳು ಹೆಸರು ನೋಂದಾಯಿಸಿಕೊಳ್ಳಬಹುದು ಎಂದರು.
ಸರ್ಕಾರದಿಂದ ಸಾಮೂಹಿಕ ವಿವಾಹ; ನೋಂದಣಿ ಹೇಗೆ?
ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವವರು ದೇವಾಲಯದ ಕಚೇರಿಯಿಂದ ಅರ್ಜಿ ಪಡೆದು ಮಾರ್ಚ್ 27ರೊಳಗೆ ಸಂಬಂಧಪಟ್ಟ ದಾಖಲೆಗಳನ್ನು ನೀಡಿ ನೊಂದಾಯಿಸಿಕೊಳ್ಳಬೇಕು. 27/3/2020ರಂದು ವಧು-ವರರ ವಿವರ ನೋಂದಣಿಗೆ ಕಡೆ ದಿನ.
ಪ್ರತಿ ಜೋಡಿಗೆ ಸಿಗಲಿದೆ ಪ್ರೋತ್ಸಾಹ ಧನ
ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ವರನಿಗೆ ಪೋತ್ಸಾಹಧನವಾಗಿ (ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ) ರೂ. 5000 ಮತ್ತು ವಧುವಿಗೆ (ಹೂವಿನ ಹಾರ, ಧಾರೆ ಸೀರೆ, ರವಿಕೆ ಕಣಕ್ಕಾಗಿ) 10000 ಹಾಗೂ ವಧುವಿಗೆ ಚಿನ್ನದ ತಾಳಿ, ಚಿನ್ನದ ಗುಂಡು (ಅಂದಾಜು 8 ಗ್ರಾಂ ತೂಕ) ಇದಕ್ಕಾಗಿ 50,000 ಗಳನ್ನು ನೀಡಲಾಗುತ್ತದೆ. ಈ ಮೊತ್ತವನ್ನು ವಿವಾಹವಾದ ದಿನವೇ ಸಂಬಂಧಪಟ್ಟ ವಧು-ವರರ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಜಮೆ ಮಾಡಲಾಗುತ್ತದೆ. ವಿವಾಹಕ್ಕೆ ಆಗಮಿಸುವ ವಧು-ವರರ ಬಂಧುಗಳಿಗೆ ಊಟೋಪಚಾರ ವ್ಯವಸ್ಥೆಯನ್ನು ಹಾಗೂ ಇತರೆ ವ್ಯವಸ್ಥೆಗೆ ತಗಲುವ ವೆಚ್ಚವನ್ನು ದೇವಾಲಯಗಳ ನಿಧಿಯಿಂದ ಭರಿಸಲಾಗುತ್ತದೆ.
ವಿವಾಹ ನೋಂದಣಿಗಾಗಿ ಸಹಾಯವಾಣಿ
ಪ್ರತಿ ಜೋಡಿಗೆ 50, 000 ರು ನಿಂದ 65, 000 ರು ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಮುಜರಾಯಿ ಇಲಾಖೆ ಕಾರ್ಯಸೂಚಿಯಂತೆ ವಧುವರ ಜೋಡಿಗಳ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಟೋಲ್ ಫ್ರೀ ಸಹಾಯ ಸಂಖ್ಯೆ 18002456654 ಕರೆ ಮಾಡಿ ಮಾಹಿತಿ ಪಡೆದು ನೋಂದಾಯಿಸಿಕೊಳ್ಳಬಹುದು.
1/4/2020 ರಂದು ನೋಂದಾಯಿತ ವಧು ವರರ ವಿವರಗಳನ್ನು ದೇವಾಲಯಗಳಲ್ಲಿ ಪ್ರಕಟಿಸಲಾಗುತ್ತದೆ. 6/4/2020ರಂದು ವಧು-ವರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನವಾಗಿದೆ. 11/4/2020 ರಂದು ಅಂತಿಮ ವಧು-ವರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ದೇಗುಲಗಳ ಬಗ್ಗೆ ಸಚಿವರು ಹೇಳಿದ್ದೇನು?
ರಾಜ್ಯದಲ್ಲಿ 36 ಸಾವಿರ ದೇವಾಲಯಗಳು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಲಿದ್ದು, ಇವುಗಳ ಆಸ್ತಿ ಸರ್ವೆ ಕಾರ್ಯ ನಡೆಯುತ್ತಿದೆ. ಆಸ್ತಿಗಳ ಸಂಪೂರ್ಣ ಸರ್ವೆ ನಡೆದ ನಂತರ ಗಣಕೀಕರಣಗೊಳಿಸುವುದಾಗಿ ತಿಳಿಸಿದರು. ರಾಜ್ಯದಲ್ಲಿ 25 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವ 190 ದೇವಾಲಯಗಳಿವೆ. ಹಾಗೆಯೇ 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ 33 ಸಾವಿರ ದೇವಾಲಯಗಳಿವೆ ಎಂದ ಅವರು, ಸಣ್ಣ ದೇವಾಲಯಗಳ ಅರ್ಚಕರಿಗೆ ಇಂತಿಷ್ಟು ಎಂದು ತಸ್ತಿಕ್ ನಿಗದಿಪಡಿಸಲಾಗಿದೆ ಎಂದರು
ಫೆಬ್ರವರಿ 13ರಂದು ಸಪ್ತಪದಿ ರಥಕ್ಕೆ ಚಾಲನೆ
ಉಡುಪಿ ಜಿಲ್ಲೆ ಕೊಲ್ಲೂರು ಕ್ಷೇತ್ರದಿಂದ ಸರಳ ಸಪ್ತಪದಿ ಯೋಜನೆಯ ಪ್ರಚಾರಕ್ಕಾಗಿ ನಿರ್ಮಿಸಲಾಗಿರುವ ಸಪ್ತಪದಿ ರಥಕ್ಕೆ ಚಾಲನೆ ನೀಡಲಾಗುತ್ತದೆ. ಇದೇ ರೀತಿ ಆಯ್ದ 12 ದೇಗುಲಗಳಿಂದ ಫೆಬ್ರವರಿ 13ರಿಂದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ರಥ ಸಂಚರಿಸಲಿದೆ. ಏಪ್ರಿಲ್ 26ರಂದು ಅಕ್ಷಯ ತದಿಗೆ ಶುಭದಿನದಂದು ರಾಜ್ಯದ 100ಕ್ಕೂ ಅಧಿಕ ಎ ದರ್ಜೆ ದೇಗುಲಗಳಲ್ಲಿ ಸರಳ ಸಪ್ತಪದಿ ವಿವಾಹ ಕಾರ್ಯಕ್ರಮ ಜರುಗಲಿದೆ. 2ನೇ ಹಂತದ ಸಾಮೂಹಿಕ ಕಾರ್ಯಕ್ರಮ ಮೇ 27ರಂದು ನಡೆಯಲಿದೆ. ಎದರ್ಜೆ ದೇಗುಲಗಳಿಲ್ಲದ ಪ್ರದೇಶಗಳಲ್ಲಿ ಬಿ ಅಥವಾ ಸಿ ದರ್ಜೆ ಮತ್ತು ಐತಿಹಾಸಿಕ ತಾಣಗಳನ್ನು ಆಯ್ದು ವಿವಾಹ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ಸಚಿವ ಶ್ರೀನಿವಾಸ ಪೂಜರಿ ಹೇಳಿದರು.