ತುಮಕೂರಿನಲ್ಲಿ ಸಂತರ ಸಮಾಗಮː ಕೇಸರಿ ಕಲರವ
ತುಮಕೂರು, ನ.11 : ಭಾರತವನ್ನು, ಒಡೆಯಲು ಕೆಲ ಶಕ್ತಿಗಳು ನಿರಂತರ ಪ್ರಯತ್ನ ಮಾಡುತ್ತಿದ್ದು ಈ ಬಗ್ಗೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಮೋಹನ್ ಭಾಗವತ್ ಹೇಳಿದರು.
ತುಮಕೂರಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೃಹತ್ ಸಂತ ಸಮ್ಮೇಳನದಲ್ಲಿ ಮಾತನಾಡಿ, ಮತಾಂತರ, ಬಡತನ, ಶೋಷಿತರನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರಲು ಸತತ ಪ್ರಯತ್ನ ಮಾಡುತ್ತಿದ್ದೇವೆ. ದೇಶದಲ್ಲಿರುವ ಸಂತರು ಮತ್ತು ಶೋಷಿತರನ್ನು ಗುರುತಿಸಬೇಕು, ಜಾತಿ, ಬೇಧವಿಲ್ಲದೆ ಎಲ್ಲರನ್ನೂ ಮುಂದೆ ತರಬೇಕೆಂದು ಮನವಿ ಮಾಡಿದರು.
ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಂತರಿದ್ದಾರೆ. ಅವರು ನಮ್ಮ ಮುಂದೆ ಇದ್ದರೆ ಅವರೊಂದಿಗೆ ನಾವಿರುತ್ತೇವೆ. ದೇಶವನ್ನು ಸಂಸ್ಕಾರದತ್ತ ಕೊಂಡೊಯ್ಯಲು ಇಡೀ ದೇಶ ಒಗ್ಗೂಡಬೇಕು. ಕೆಟ್ಟ ಪದ್ಧತಿಗಳನ್ನು ಹೋಗಲಾಡಿಸಲು ಎಲ್ಲರು ಕೈ ಜೋಡಿಸಬೇಕು ಎಂದು ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಕರೆ ನೀಡಿದರು.
ಆಶೀರ್ವಚನ ನೀಡಿ ಮಾತನಾಡಿದ ಅವರು, ಮಾನವ ಜನ್ಮ ಅತಿ ಶ್ರೇಷ್ಠವಾದದು. ಭರತ ಖಂಡದಲ್ಲಿ ಹುಟ್ಟಿದ ನಾವೆಲ್ಲ ಧನ್ಯರು. ಪ್ರೀತಿ, ಸ್ನೇಹ, ಮಮಕಾರಗಳಿಂದ ಬದುಕಬೇಕು, ನೊಂದವರಿಗೆ ಧ್ವನಿಯಾಗಬೇಕು. ನಾವೆಲ್ಲ ಜೊತೆಗೂಡಿ ಈ ಎಲ್ಲ ಕೆಲಸ ಮಾಡೋಣ. ದೇಶದಲ್ಲಿರುವ ಬಡತನ ತೊಲಗಿಸಲು ನಾವು ಪಣತೊಡೋಣ ಎಂದು ಹೇಳಿದರು.
ರವಿಶಂಕರ್ ಗುರೂಜಿ, ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂಪತ್ ರಾಯ್, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಸೋಮಣ್ಣ, ಸೊಗಡು ಶಿವಣ್ಣ ಹಾಜರಿದ್ದರು. 500ಕ್ಕೂ ಹೆಚ್ಚು ಸಂತರು ಭಾಗವಹಿಸಿದ್ದರು.
ಪೂರ್ಣಕುಂಭ ಸ್ವಾಗತ
ಸಂತರ ಸಮಾವೇಶಕ್ಕೆ ಆಗಮಿಸಿದ ಸ್ವಾಮೀಜಿಗಳಿಗೆ ಪೂರ್ಣಕುಂಭ ಸ್ವಾಗತ.
ಪೇಜಾವರ ಶ್ರೀ ಆಶೀರ್ವಾದ
ಪೇಜಾವರ ಶ್ರೀ ಆಶೀರ್ವಾದ ಪಡೆದ ಆರ್ ಎಸ್ ಎಸ್ ಪ್ರಮುಖ ಮೋಹನ್ ಭಾಗವತ್.
ಸ್ವಾಮೀಜಿಗಳೊಂದಿಗೆ ಭಾಗವತ್
ಸಿದ್ಧಗಂಗಾ ಶ್ರೀ ಮತ್ತು ಆದಿಚುಂಚನಗಿರಿ ಸ್ವಾಮೀಜಿಗಳೊಂದಿಗೆ ಮೋಹನ್ ಭಾಗವತ್.
ಸಿದ್ಧಗಂಗಾ ಶ್ರೀ ಮಾತು
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ.
ಭಾಗವತರ ಭಾಷಣ
ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್.
ಹಾಜರಿದ್ದ ಗಣ್ಯರು
ವೇದಿಕೆ ಮೇಲೆ ಹಾಜರಿದ್ದ ಸ್ವಾಮೀಜಿಗಳು ಮತ್ತು ಕೇಂದ್ರ ಸಚಿವರುಗಳು.
ಜನಸ್ತೋಮ
ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ನಾಗರಿಕರು