ಸಂಕ್ರಾಂತಿ: ಹಂಪಿ ಪುಣ್ಯಕ್ಷೇತ್ರದಲ್ಲಿ ಐದು ದಿನ ನಿಷೇಧಾಜ್ಞೆ
ಹೊಸಪೇಟೆ, ಜ.13: ಕೊರೊನಾ ಪ್ರಕರಣಗಳು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಹಂಪಿ ಪುಣ್ಯಕ್ಷೇತ್ರದಲ್ಲಿ ಸಂಕ್ರಾಂತಿ ಸಮಯಕ್ಕೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಹಂಪಿಯಲ್ಲಿ ಜ.13ರಿಂದ 17ರವರೆಗೆ ಐದು ದಿನಗಳ ಕಾಲ ನಿಷೇಧಾಜ್ಞೆ ವಿಧಿಸಲಾಗಿದೆ. ಈ ಸಂದರ್ಭದಲ್ಲಿ ಯಾರೂ ಹಂಪಿ ಕ್ಷೇತ್ರದತ್ತ ಪ್ರವಾಸಿಗರು ಬರುವಂತಿಲ್ಲ ಎಂದು ವಿಜಯನಗರ ಜಿಲ್ಲಾಧಿಕಾರಿ ಪಿ. ಅನಿರುದ್ಧ್ ಶ್ರವಣ್ ಅವರು ಆದೇಶ ಮಾಡಿದ್ದಾರೆ.
ಸಾರ್ವಜನಿಕರ ಸುರಕ್ಷತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಕೋವಿಡ್-19 ರೂಪಾಂತರ ಓಮಿಕ್ರಾನ್ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ವಿಧಿಸಲಾಗಿದೆ. ಜ.13ರ ಬೆಳಗ್ಗೆ 6ರಿಂದ ಜ.17ರ ಬೆಳಗ್ಗೆ 6 ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಸಾವಿರಾರು ಭಕ್ತರು ಬರುತ್ತಾರೆ:
ತುಂಗಭದ್ರಾ ನದಿಯ ತಟದಲ್ಲಿರುವ ಹಂಪಿ ವಿರೂಪಾಕ್ಷ ಕ್ಷೇತ್ರಕ್ಕೆ ಪ್ರತಿ ವರ್ಷ ಸಂಕ್ರಮಣ ದಿನದಂದು ಸಾವಿರಾರು ಭಕ್ತರು ಸೇರುತ್ತಾರೆ. ನದಿಯಲ್ಲಿ ಪುಣ್ಯ ಸ್ನಾನ ಮಾಡಿ ವಿರೂಪಾಕ್ಷನ ದರ್ಶನ ಪಡೆಯಲು ವಿವಿಧ ಭಾಗಗಳ ಜನರು ಇಲ್ಲಿಗೆ ಬಂದು ಸೇರುತ್ತಾರೆ.
ಕರ್ನಾಟಕ ಅಷ್ಟೇ ಆಲ್ಲದೆ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಸಂಕ್ರಮಣದ ದಿನದಂದು ಇಲ್ಲಿ 15ರಿಂದ 20 ಸಾವಿರ ಮಂದಿ ಸೇರುತ್ತಾರೆ ಎಂದು ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದಲ್ಲಿ ಅಂದಾಜಿಸಲಾಗಿದೆ.
ಕೆಲವು ಭಕ್ತರು ಒಂದೆರಡು ದಿನ ಮುಂಚಿತವಾಗಿಯೇ ಬಂದು ವಾಸ್ತವ್ಯ ಹೂಡುವ ರೂಢಿ ಮಾಡಿಕೊಂಡಿರುತ್ತಾರೆ. ಈ ಕಾರಣದಿಂದಾಗಿ ಹಂಪಿ ಕ್ಷೇತ್ರದಲ್ಲಿ ಜನಸಂದಣಿ ಸೇರದಂತೆ ನಿಷೇಧಾಜ್ಞೆ ವಿಧಿಸಿ ಆದೇಶ ಹೊರಡಿಸಲಾಗಿದೆ.
Recommended Video