ನಟಿ ರಾಗಿಣಿ, ಸಂಜನಾಗೆ ಸೆಪ್ಟೆಂಬರ್ 24ರ ತನಕ ಜೈಲೇ ಗತಿ
ಬೆಂಗಳೂರು, ಸೆಪ್ಟೆಂಬರ್ 21 : ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ವಿಶೇಷ ಎನ್ಡಿಪಿಎಸ್ ನ್ಯಾಯಾಲಯ ಸೆ. 24ಕ್ಕೆ ಮುಂದೂಡಿದೆ. ಇಬ್ಬರೂ ನಟಿಯರು ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಸೋಮವಾರ ಬೆಂಗಳೂರಿನ ವಿಶೇಷ ಎನ್ಡಿಪಿಎಸ್ ಕೋರ್ಟ್ನಲ್ಲಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಎರಡೂ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ಸೆ.24ಕ್ಕೆ ಮುಂದೂಡಿತು.
ಪರಪ್ಪನ ಅಗ್ರಹಾರ ಜೈಲಿಗೆ ನಟಿ ರಾಗಿಣಿ ದ್ವಿವೇದಿ
ಬೆಂಗಳೂರಿನ ಮಾದಕ ದ್ರವ್ಯ ಪೂರೈಕೆ ಜಾಲದ ಬಗ್ಗೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಬಂಧಿಸಿದ್ದರು. ಸಿಸಿಬಿ ಪೊಲೀಸರ ವಿಚಾರಣೆ ಬಳಿಕ ನಟಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಹುಭಾಷಾ ನಟಿ ಸಂಜನಾ ಗಲ್ರಾನಿಗೆ ನ್ಯಾಯಾಂಗ ಬಂಧನ
ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿಯರು ಇನ್ನೂ ಮೂರು ದಿನಗಳ ಕಾಲ ಜೈಲಿನಲ್ಲಿಯೇ ಇರಬೇಕಾಗುತ್ತದೆ. ಗುರುವಾರ ಅರ್ಜಿಯ ವಿಚಾರಣೆ ಮತ್ತೆ ನಡೆಯಲಿದ್ದು, ಜಾಮೀನು ಸಿಗಲಿದೆಯೇ? ಕಾದು ನೋಡಬೇಕಿದೆ.
ಡ್ರಗ್ಸ್ ಮಾರಾಟ: ಖ್ಯಾತ ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ
ರಾಗಿಣಿ ಪರ ವಕೀಲರ ವಾದ
ನಟಿ ರಾಗಿಣಿ ದ್ವಿವೇದಿ ಪರವಾಗಿ ವಕೀಲ ಕಲ್ಯಾಣ ಕೃಷ್ಣ ಬಂಡೂರಿ ವಾದ ಮಂಡನೆ ಮಾಡಿದರು. ಎಫ್ಐಆರ್ಗೂ ಮೊದಲೇ ಪೊಲೀಸರು ತನಿಖೆ ನಡೆಸಿದ್ದಾರೆ. ರಾಗಿಣಿ ಬಂಧನದ ವೇಳೆ ಕಾನೂನು ಪ್ರಕ್ರಿಯೆ ಪಾಲಿಸಿಲ್ಲ. ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಸಿಗರೇಟ್ ಸ್ಟ್ರಿಪ್ ಮಾತ್ರ ಸಿಕ್ಕಿದೆ. ಪೊಲೀಸರು ಕಾನೂನನ್ನು ದುರುಪಯೋಗ ಮಾಡಿಕೊಂಡು ಒಳಸಂಚು ಮಾಡಿದ್ದಾರೆ ಎಂದು ವಾದಿಸಿದರು.
ತನಿಖೆಗೆ ಸಹಕಾರ ನೀಡಿದ್ದಾರೆ
ರಾಗಿಣಿ ತನಿಖೆಗೆ ಸಹಕಾರ ನೀಡಿದ್ದಾರೆ, ಅವರ ಕುಟುಂಬದವರು ಸೈನ್ಯದಲ್ಲಿದ್ದರು. ರಾಗಿಣಿ ಕೆಲ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಜಾಮೀನು ಕೊಡಲು ಇದು ಅರ್ಹವಾದ ಪ್ರಕರಣ. ಯಾರನ್ನೋ ಹಿಡಿಯಲು ರಾಗಿಣಿಯನ್ನು ಬಲಿಪಶು ಮಾಡಿದ್ದಾರೆ ಎಂದು ವಾದ ಮಂಡನೆ ಮಾಡಿದರು.
ಜಾಮೀನು ಅರ್ಜಿಗೆ ಆಕ್ಷೇಪಣೆ
ವಿಶೇಷ ಸರ್ಕಾರಿ ಅಭಿಯೋಜಕ ರವೀಂದ್ರ ಜಾಮೀನು ಅರ್ಜಿಗೆ ಆಕ್ಷೇಪಣೆ ವ್ಯಕ್ತಪಡಿಸಿದರು. ವಿಚಾರಣೆ ಸಮಯದಲ್ಲಿ ಅವರು ಬೇರೆಯವರ ಹೆಸರು ಹೇಳಿದ್ದಾರೆ. ಅವರು ಹೆಸರಿಸಿದ ವ್ಯಕ್ತಿಗಳ ತನಿಖೆ ಬಾಕಿ ಇದೆ. ನಟಿ ಕ್ರಿಮಿನಲ್ ಹಿನ್ನಲೆಯ ವ್ಯಕ್ತಿಗಳ ಸಂಪರ್ಕ ಹೊಂದಿದ್ದಾರೆ. ಜಾಮೀನು ನೀಡಿದರೆ ಅವರನ್ನು ಎಚ್ಚರಿಸಬಹುದು ಎಂದು ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದರು.
Recommended Video
ತನಿಖೆಗೆ ಹಿನ್ನಡೆಯಾಗಲಿದೆ
ರಾಗಿಣಿ ವೈದ್ಯಕೀಯ ಪರೀಕ್ಷೆಗೆ ಸಹಕಾರ ನೀಡಿಲ್ಲ. ಮೂತ್ರಕ್ಕೆ ನೀರು ಬೆರೆಸಿ ನೀಡಿದ್ದಾರೆ. ಪ್ರಕರಣದಲ್ಲಿ ರಾಗಿಣಿಯ ನೇರವಾದ ಪಾತ್ರವಿದೆ. ಹಲವು ಡ್ರಗ್ ಪೆಡ್ಲರ್ಗಳು ನಾಪತ್ತೆಯಾಗಿದ್ದಾರೆ. ಈಗ ಜಾಮೀನು ನೀಡಿದರೆ ತನಿಖೆಗೆ ಹಿನ್ನಡೆಯಾಗಲಿದೆ. ಜಾಮೀನು ನೀಡಿದರೆ ತಲೆ ಮರೆಸಿಕೊಳ್ಳುವ ಸಾಧ್ಯತೆ ಇದೆ ಎಂದು ಆಕ್ಷೇಪಿಸಿದರು.