ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಬ್ಯಾಗ್ಗಳಲ್ಲೇ ದೊರೆಯಲಿದೆ ಮರಳು
ಬೆಂಗಳೂರು, ಜುಲೈ 01: ಗ್ರಾಹಕರಿಗೆ ಸುಲಭವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಮರಳು ದೊರೆಯುವಂತೆ ನೂತನ ಮರಳು ಮಾರಾಟ ಯೋಜನೆಯನ್ನು ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಆರಂಭಿಸಲಿದೆ.
ಕೈಗೆಟುಕುವ ದರದಲ್ಲಿ ಜನಸಾಮಾನ್ಯರಿಗೆ ಮರಳು ಸಿಗುವಂತೆ ಮಾಡಲು ಈ ಹೊಸ ಯೋಜನೆ ಜಾರಿಗೆ ಬರಲಿದ್ದು, ಪ್ರಸ್ತಾವನೆ ಸಿದ್ಧವಾಗಿದೆ.
15 ದಿನದೊಳಗೆ ಕರ್ನಾಟಕದಲ್ಲಿ ಹೊಸ ಮರಳು ನೀತಿ ಜಾರಿ
ವಿಕಾಸಸೌಧದಲ್ಲಿ ಮರಳು ಗಣಿಗಾರಿಕೆ ಕುರಿತು ಜಿಲ್ಲಾಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಜೊತೆ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಬುಧವಾರ ಸಭೆ ನಡೆಸಿದ್ದು, ಇನ್ನು ಮುಂದೆ ಬ್ಯಾಗ್ಗಳ ಮೂಲಕ ಮರಳು ಮಾರಾಟ ಮಾಡುವ ನೂತನ ಯೋಜನೆ ಜಾರಿಗೆ ತರುವುದಾಗಿ ಮಾಹಿತಿ ನೀಡಿದ್ದಾರೆ.
ರಾಜ್ಯ ಪಾನೀಯ ನಿಗಮದ ಮೂಲಕ ಹೇಗೆ ಮದ್ಯ ಮಾರಾಟವಾಗುತ್ತಿದೆಯೋ ಅದೇ ರೀತಿ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಬ್ಯಾಗ್ಗಳಲ್ಲಿ ಮರಳು ಮಾರಾಟ ಮಾಡಲು ಉದ್ದೇಶಿಸಿದೆ ಎಂದು ತಿಳಿಸಿದರು.
ಮರಳು ಸಾಗಣೆ ಮಾಡುವಾಗ ಶೇ 25ರಷ್ಟು ಮರಳು ವ್ಯರ್ಥವಾಗುತ್ತಿತ್ತು. ಇದನ್ನು ತಡೆಯುವ ಉದ್ದೇಶದಿಂದ 50 ಕೆ.ಜಿ. ಬ್ಯಾಗ್, ಒಂದು ಟನ್ ಹಾಗೂ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮರಳು ಖರೀದಿಗೆ ಅವಕಾಶ ನೀಡಲಾಗುತ್ತಿದೆ.
"ಸದ್ಯಕ್ಕೆ ಪ್ರಾಯೋಗಿಕವಾಗಿ ರಾಜ್ಯದ ಐದು ಕಡೆಗಳಲ್ಲಿ ಈ ಘಟಕಗಳನ್ನು ಪ್ರಾರಂಭ ಮಾಡಲಾಗುವುದು. ಮರಳಿನ ಬ್ಯಾಗ್ಗಳನ್ನು ಸಿದ್ಧಪಡಿಸುವುದು, ಸಾಗಾಣಿಕೆ ಸೇರಿದಂತೆ ಇತರೆ ತರಬೇತಿಯನ್ನು ನೀಡಲಿದ್ದೇವೆ" ಎಂದು ಸಚಿವ ನಿರಾಣಿ ತಿಳಿಸಿದರು.
Recommended Video
ಮರಳನ್ನು ಎ, ಬಿ, ಸಿ ಶ್ರೇಣಿಗಳಾಗಿ ವರ್ಗೀಕರಿಸಿ ಮಾರಾಟ ಮಾಡಲಾಗುತ್ತದೆ. ಮೊದಲು ಯಾರ್ಡ್ಗಳಲ್ಲಿ ಇಟ್ಟು ನಂತರ ವಿತರಣೆ ಮಾಡುತ್ತೇವೆ. ವರ್ಷಪೂರ್ತಿ ಮರಳು ಸಿಗದ ಕಾರಣ ಮಾರುಕಟ್ಟೆಯಲ್ಲಿ ಮರಳಿನ ದರ ಹೆಚ್ಚಿತ್ತು. ಇದೀಗ ಬ್ಯಾಗ್ಗಳಲ್ಲಿ ಮರಳು ಸಂಗ್ರಹಿಸಿಟ್ಟರೆ ಯಾವಾಗ ಬೇಕಾದರೂ ವಿತರಿಸಬಹುದು. ಹೀಗಾಗಿ ಕಡಿಮೆ ಖರ್ಚು ತಗಲುತ್ತದೆ. 5 ಲಕ್ಷಕ್ಕಿಂತ ಕಡಿಮೆ ದರದಲ್ಲಿ ಮನೆ ಕಟ್ಟಿಸಿಕೊಳ್ಳುವವರಿಗೆ ಯಾವುದೇ ರೀತಿ ರಾಜಧನ ಕಟ್ಟಿಸಿಕೊಳ್ಳುವುದಿಲ್ಲ ಎಂದು ಹೇಳಿದರು.